ರವಿಚಂದ್ರ ಮಲ್ಲೇದ ಸಿಂದಗಿ: ಉತ್ತರ ಕರ್ನಾಟಕದ ಅಚ್ಚ ಜವಾರಿ ಭಾಷ್ಯಾ ಉಣಬಡಿಸುತ್ತ, ಎಲ್ಲರನ್ನ ನಗಿಸ್ಕೊಂತ ಈ ಭಾಗದ ಸಭ್ಯ ಸಂಸ್ಕೃತಿ, ಹಿರಿಮೆ, ಇತಿಹಾಸವನ್ನು ಮನೆಮನೆಗೂ ಪರಿಚಯಿಸುತ್ತಿರುವ ಕಾರ್ಯ ಸಣ್ಣದಲ್ಲ.
ಜಿಲ್ಲೆಯ ರಂಗಸಜ್ಜಿಕೆಯಲ್ಲಿ ತಾಲೂಕಿನ ಆಲಮೇಲದ ರಂಗಕರ್ಮಿ ಗಂಗಾಧರಪ್ಪ ಉಪ್ಪಿನ ಹೆಸರು ಅಜರಾಮರ. ಇವರ ಮೊಮ್ಮಗ ಸಂತೋಷ ಉಪ್ಪಿನ ಈಗ ಕಿರುತೆರೆ, ಹಿರಿತೆರೆ ನಟ. ಎಂಜಿನಿಯರಿಂಗ್ ಓದಿದರೂ ರಂಗಭೂಮಿಯಲ್ಲಿ ಅದಮ್ಯ ಆಸಕ್ತಿ.
ಅಂತೆಯೇ ಹೆಸರಾಂತ ದೆಹಲಿಯ ರಾಷ್ಟ್ರೀಯ ರಂಗ ಕಲಾಶಾಲೆ, ಕಿನ್ನರ ಮೇಳ ರಂಗ ಶಿಕ್ಷಣ ಕೇಂದ್ರದಲ್ಲಿ ನಟನೆ ಹಾಗೂ ಪರದೆ ಹಿಂದಿನ ಕಲೆಯಲ್ಲಿ ಸಂತೋಷ ಪರಿಣತಿ ಸಾಧಿಸಿದರು. ಇವರ ಅತೀವ ರಂಗಾಸಕ್ತಿ, ಮಾತಿನ ಧಾಟಿ, ಉತ್ತರ ಕರ್ನಾಟಕದ ಜವಾರಿ ಭಾಷೆಗೆ ಮನಸೋತ ರಂಗನಿರ್ದೇಶಕರಿಂದ ವಿಪುಲ ಅವಕಾಶಗಳು ಒದಗಿ ಬಂದವು.
'ಪ್ರತಿಬಿಂಬ'ದಿಂದ ಕಿರುತೆರೆಗೆ..:
ಉಪ್ಪಿನ ಸತ್ಯಾಗ್ರಹ, ಟಿಪ್ಪು ಸುಲ್ತಾನ್, ಸೂರ್ಯಬಂದ, ಚಾಣಕ್ಯ, ಮ್ಯಾಕ್ಬೆತ್, ಬೆಂಕಿ, ರಾಕ್ಷಸ ಸೇರಿದಂತೆ ಶಿವರಾತ್ರಿ ನಾಟಕದಲ್ಲಿನ ಅಭಿನಯ ಸಂತೋಷ್ರ ರಂಗಕಲೆಯ ಪರಿಪಕ್ವತೆಯನ್ನು ಸಾಕ್ಷೀಕರಿಸಿವೆ. ಅಂತೆಯೇ ಇವರ ಕ್ರಿಯಾಶೀಲತೆ, ಪಾತ್ರಗಳಲ್ಲಿನ ತಲ್ಲೀನತೆ, ತೂಕ ತಪ್ಪದ ಅಮೋಘ ಅಭಿನಯವನ್ನು ಗುರುತಿಸಿದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ, ಪ್ರತಿಬಿಂಬ ಧಾರಾವಾಹಿ ಮೂಲಕ ಕಿರುತೆರೆಗೆ ಪರಿಚಯಿಸಿದರು.
30 ಧಾರಾವಾಹಿಗಳು:
ಕಿರುತೆರೆಗೆ ಕಾಲಿಟ್ಟ ಸಂತೋಷ್ ಮಾಯಾಮೃಗ, ಚಂದ್ರಬಿಂಬ, ಕಿನ್ನರಿ, ಸುಮತಿ, ಪ್ರೇಮ ಪಿಶಾಚಿ, ಮಹಾನವಮಿ, ಸೌಭಾಗ್ಯವತಿ, ಸೀತೆ, ಆರುಂಧತಿ, ಆಕಾಶ ದೀಪ, ಅಣ್ಣತಂಗಿ, ಸಿಐಡಿ ಕರ್ನಾಟಕ, ಅಕ್ಕ.. ಸೇರಿದಂತೆ 30ಕ್ಕೂ ಹೆಚ್ಚು ಧಾರಾವಾಹಿ ನಟಿಸಿದ್ದಾರೆ. ವಿಶೇಷ, ವಿಭಿನ್ನ ಹಾಗೂ ಹಾಸ್ಯಮಯ ಪಾತ್ರಗಳನ್ನು ಮಾಡುವ ಮೂಲಕ ಕಿರಿವಯಸ್ಸಲ್ಲೇ ಉತ್ತರ ಕರ್ನಾಟಕದ ಪ್ರತಿಮನೆಗೂ ಪರಿಚಿತರಾಗಿದ್ದಾರೆ. ಹೀಗಾಗಿ ಇವರನ್ನು 'ಉತ್ತರ ಕರ್ನಾಟಕದ ಕಿರುತೆರೆ ಕೊಂಡಿ' ಎಂದೇ ಹೇಳಬಹುದು.
---
ಡಿ.1ರ ಗಿರಣಿ ಮಹಾದೇವ
ಗ್ರಾಮ ವಾಸ್ತವ್ಯದ ಪರಿಕಲ್ಪನೆಯ 'ಡಿ.1' ಹೆಸರಿನ ಸಿನೆಮಾದಲ್ಲಿ ಗಿರಣಿ ಮಹಾದೇವಪ್ಪನ ಇವರ ಪಾತ್ರ ಸವಾಲಿನದ್ದು. ಸರಕಾರ ಹಾಗೂ ಆಡಳಿತದ ಮುಖ್ಯಸ್ಥರು ತಮ್ಮ ಸಾಧನೆ, ಸಾಮಾಜಿಕ ಕಳಕಳಿಯನ್ನು ಹೇಗೆ ನಿರೂಪಿಸಿ ಮತ್ತೆ ಮಾಯವಾಗುತ್ತಾರೆ ಎಂಬುದನ್ನು ಅದ್ಭುತವಾಗಿ ಸಾಕ್ಷೀಕರಿಸಿದ್ದಾರೆ. ಈ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಿತ್ರ ಹಾಗೂ ಅತ್ಯುತ್ತಮ ಚಿತ್ರಕಥೆ ಎಂಬ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ದೊರಕಿಸಿದ್ದು ಇವರ ಅಮೋಘ ಅಭಿನಯಕ್ಕೆ ಎಂದರೆ ತಪ್ಪಲ್ಲ.
---
ಓಂಕಾರ್ರಾವ್ ಪಾತ್ರ
ಕಳೆದ ಜು.9 ರಿಂದ ಖಾಸಗಿ ವಾಹಿನಿಯಲ್ಲಿ ಮೂಡಿಬರುತ್ತಿರುವ ಸ್ವಪ್ನಾ ಕೃಷ್ಣಾ ನಿರ್ದೇಶನದ ಗಂಗಾ ಧಾರಾವಾಹಿಯಲ್ಲಿ ಕನ್ನಡ ಕಟ್ಟಾಳು ಓಂಕಾರ್ರಾವ್ ಪಾತ್ರದಲ್ಲಿರುವ ಸಂತೋಷ್ ಅವರ ಭಾಷಾ ಶೈಲಿ, ಪಂಚಿಂಗ್ ಡೈಲಾಗ್, ಕನ್ನಡ ಸಂಸ್ಕೃತಿ, ಇತಿಹಾಸ ಸಾರುತ್ತ ಕನ್ನಡ ಉಳಿವಿಗೆ ನಡೆಸುವ ಹೋರಾಟ ಮನಸೆಳೆಯುವಂತಿದೆ. ಉತ್ತರ ಕರ್ನಾಟಕದ ನೂರಾರು ಕಲಾವಿದರಿಂದ ಸಿದ್ಧವಾದ 'ಗಂಗಾ' ಧಾರಾವಾಹಿ ಅಚ್ಚ ಜವಾರಿ ಭಾಷ್ಯಾ ಸೊಗಡು ಉಣಬಡಿಸುತ್ತಿದೆ. ಈ ತಂಡಕ್ಕೆ ಒಂದು ಸಲಾಂ ಹೇಳೋಣ.