ಮುದ್ದೇಬಿಹಾಳ (ವಿಜಯಪುರ): ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂದ ತುಮಕೂರು ಪೊಲೀಸರನ್ನು ಯಾಮಾರಿಸಿ, ಕಾರನ್ನು ಹೊಲವೊಂದರಲ್ಲಿ ಬಿಟ್ಟು ಶಂಕಿತ ಅಪರಾಧಿಗಳು ಪರಾರಿಯಾದ ಘಟನೆ ತಾಳಿಕೋಟೆ ಸಮೀಪದ ಇಣಚಗಲ್ ಗ್ರಾಮದ ಬಳಿ ಗುರುವಾರ ಬೆಳಗಿನ ಜಾವ ನಡೆದಿದೆ.
ಬುಧವಾರ ಮಧ್ಯರಾತ್ರಿ ಇನ್ನೋವಾ ಕಾರಿನಲ್ಲಿ ಬಂದಿದ್ದ ತುಮಕೂರು ಪೊಲೀಸರು, ಮುದ್ದೇಬಿಹಾಳ ಮೂಲಕ ತಾಳಿಕೋಟೆ ಕಡೆಗೆ ಇಂಡಿಕಾ ಕಾರು (ಕೆಎ 01 ಎಎಫ್ 9657) ಸಾಗಿದ ಮಾಹಿತಿ ಪಡೆದು ಅದನ್ನು ಬೆನ್ನಟ್ಟಿದರು. ತಮ್ಮ ಜತೆಗೆ ಸ್ಥಳೀಯ ಠಾಣೆ ಪೊಲೀಸರನ್ನೂ ಕರೆದೊಯ್ದರು.
ಮಾರ್ಗಮಧ್ಯದ ಕುಂಟೋಜಿ ಗ್ರಾಮದ ಯುವಕನೊಬ್ಬನಿಗೆ ಮಾಹಿತಿ ನೀಡಿದ ಸ್ಥಳೀಯ ಪೊಲೀಸರು, ಇಂಡಿಕಾ ಕಾರು ಬಂದರೆ ತಡೆಯಲು ತಿಳಿಸಿದ್ದರು. ಅದರಂತೆ ಗ್ರಾಮದ ಯುವಕರು ಮುಖ್ಯರಸ್ತೆಗೆ ಅಡ್ಡಲಾಗಿ ಕಲ್ಲು, ಕಟ್ಟಿಗೆ ಇಟ್ಟು ಕಾರಿಗಾಗಿ ಕಾಯುತ್ತಿದ್ದರು. ಗ್ರಾಮದೊಳಕ್ಕೆ ಬಂದ ಶಂಕಿತರನ್ನು ಹೊಂದಿದ್ದ ಕಾರಿನ ಚಾಲಕ ರಸ್ತೆ ಅಡ್ಡಲಾಗಿ ಕಲ್ಲು, ಕಟ್ಟಿಗೆ ಇಟ್ಟಿದ್ದನ್ನು ನೋಡಿ ಕಾರಿನ ವೇಗ ತಗ್ಗಿಸಿ ಯುವಕರನ್ನು ವಿಚಾರಿಸುತ್ತಿದ್ದರು. ಈ ವೇಳೆ ಹಿಂದಿನಿಂದ ಇನ್ನೋವಾ ಕಾರಿನಲ್ಲಿ ಬಂದ ಪೊಲೀಸರು ದೂರದಿಂದಲೇ 'ಕಾರನ್ನು ತಡೆಯಿರಿ' ಎಂದು ಕಿರಚಾಡಿದ್ದಾರೆ.
ಇಂಡಿಕಾ ಕಾರು ಎಸ್ಕೇಪ್
ಇದರಿಂದ ಸಂಶಯಗೊಂಡ ಕಾರು ಚಾಲಕ ಸಿನಿಮೀಯ ರೀತಿಯಲ್ಲಿ ಕಾರನ್ನು ತಾಳಿಕೋಟೆ ಕಡೆಗೆ ಚಲಾಯಿಸಿಕೊಂಡು ಹೋಗಿದ್ದಾನೆ. ಹಿಂದಿನಿಂದ ಬಂದ ಕಾರು ರಸ್ತೆ ಅಡೆ-ತಡೆ ತೆರವುಗೊಳಿಸಿ ಮಾರ್ಗ ಮಾಡಿಕೊಳ್ಳುವಷ್ಟರಲ್ಲೇ ಕಾರು ನಾಪತ್ತೆಯಾಗಿದೆ.
ಸ್ವಲ್ಪ ದೂರದಲ್ಲಿರುವ ಹೊಕ್ರಾಣಿ ಗ್ರಾಮದಲ್ಲಿ ಕಾರು ಹೋಗಿರಬಹುದೆಂದು ಭಾವಿಸಿದ ಪೊಲೀಸರು, ಹೊಕ್ರಾಣಿಗೆ ಹೋದರೂ ಪ್ರಯೋಜನವಾಗಿಲ್ಲ. ನಂತರ ಪಕ್ಕದೂರು ಇಣಚಗಲ್ಗೆ ತೆರಳಿ ಅಲ್ಲಿನ ಜನರನ್ನು ಎಬ್ಬಿಸಿ ಇಂಡಿಕಾ ಕಾರಿನ ಕುರಿತು ವಿಚಾರಿಸಿದರೂ ಸುಳಿವು ಸಿಕ್ಕಿಲ್ಲ. ಈ ಹೊತ್ತಿಗಾಗಲೇ ರಾತ್ರಿ ಕಳೆದಿದೆ. ಬೆಳಕಾದ ಮೇಲೆ ದೂರದ ಜಮೀನೊಂದರಲ್ಲಿ ಬೆಂಗಳೂರು ಮೂಲದ ಕಾರು ನಿಂತಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಸ್ಥಳಕ್ಕೆ ಹೋಗಿ ನೋಡಲಾಗಿ ಖಾಲಿ ಕಾರು ನಿಂತಿತ್ತು. ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ.
----
ಮಾಹಿತಿಗೆ ನಕಾರ
ಕಾರು ಹಿಡಿಯಲು ಯತ್ನಿಸಿದ್ದು ನಿಜ. ಆದರೆ ಹೆಚ್ಚಿನ ಮಾಹಿತಿ ತುಮಕೂರು ಪೊಲೀಸರಿಗೆ ಗೊತ್ತು. ನಮಗೇನೂ ಗೊತ್ತಿಲ್ಲ ಎಂದಷ್ಟೇ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.