ವಿಜಯಪುರ: ಪತ್ರಕರ್ತ ಸುನೀಲ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಪ್ರಕರಣದ 3ನೇ ಆರೋಪಿ ವಿಜು ಬಡಗೇರ್ನನ್ನು ಬೆಂಗಳೂರು ಸಿಸಿಬಿ ಪೊಲೀಸರು ಮಹಾರಾಷ್ಟ್ರದ ಮೀರಜ್ನಲ್ಲಿ ಸೋಮವಾರ ಸಂಜೆ ಬಂಧಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಈತ ಮೀರಜ್ನ ಸಂಬಂಧಿಕರ ಮನೆಯಲ್ಲಿ ತಂಗಿರುವ ಮಾಹಿತಿ ಸಿಗುತ್ತಿದ್ದಂತೆ ತಕ್ಷಣವೇ ಕಾರ್ಯಪ್ರವೃತ್ತರಾಗಿ ಆತನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾಹಿತಿ ಪಡೆಯಲು ಜಿಲ್ಲಾ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ನಮಗೇನು ಮಾಹಿತಿ ಇಲ್ಲ ಎಂದು ತಿಳಿಸಿದರು.
ಸಿಸಿಬಿ ಅಧಿಕಾರಿಗಳು ಕಳೆದೆರಡು ದಿನಗಳಿಂದ ವಿಜಯಪುರ, ಸಿಂದಗಿ, ಇಂಡಿ ಸೇರಿದಂತೆ ನಾನಾಕಡೆಗಳಲ್ಲಿ ಹುಡುಕಾಟ ನಡೆಸಿದ್ದು, ವಿಜು ಬಡಗೇರನ ಸಂಬಂಧಿಕರು, ಆಪ್ತರು, ಸ್ನೇಹಿತರಿಂದ ಮಾಹಿತಿ ಪಡೆಯುತ್ತಿದ್ದರು. ಆದರೆ ಜಿಲ್ಲೆಯಲ್ಲಿ ಆತನ ಇರುವಿಕೆಯ ಸುಳಿವು ಸಿಕ್ಕಿರಲಿಲ್ಲ. ಇದೇ ವಿಷಯವಾಗಿ ಸಿಸಿಬಿ ಪೊಲೀಸರು ಸೋಮವಾರ ಜಿಲ್ಲೆಯ ಪತ್ರಕರ್ತರೊಬ್ಬರನ್ನು ವಿಜಯಪುರಕ್ಕೆ ಕರೆಸಿಕೊಂಡು ಮಾಹಿತಿ ಕಲೆಹಾಕಿದರು.
ಶÜಶಿಧರ ಮುಂಡೇವಾಡಿಯನ್ನು ಪೊಲೀಸರು ವಶಕ್ಕೆ ಪಡೆದ ಸುದ್ದಿ ಮಾಧ್ಯಮಗಳಲ್ಲಿ ಭಿತ್ತರಗೊಳ್ಳುತ್ತಿದ್ದಂತೆ ವಿಜು ಬಡಿಗೇರ ಸಿಂದಗಿಯಿಂದ ನಾಪತ್ತೆಯಾಗಿದ್ದ. ಆತನಿಗಾಗಿ ಸ್ಥಳೀಯ ಪೊಲೀಸರು ಹಾಗೂ ಸಿಸಿಬಿ ಅಧಿಕಾರಿಗಳು ತೀವ್ರ ಹುಡುಕಾಟ ನಡೆಸಿದ್ದರು.