ವಿಜಯಪುರ: ಜಿಲ್ಲೆಯ ಪಡಿತರ ಚೀಟಿಗಳಿಗೆ ಆಧಾರ ಸಂಖ್ಯೆ ನೋಂದಣಿ ಮಾಡಿಕೊಳ್ಳಲು ಕೊನೆಯ ಅವಕಾಶ ನೀಡಲಾಗಿದ್ದು, ಇದೇ ತಿಂಗಳು ಸೆ.30ರೊಳಗಾಗಿ ಆಧಾರ ಕಾರ್ಡ್ ನೊಂದಣಿ ಮಾಡಿಸದ ಪಡಿತರದಾರರಿಗೆ ಮುಂದಿನ ದಿನಗಳಲ್ಲಿ ಆಹಾರ ಧಾನ್ಯ ವಿತರಣೆ ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ತಿಳಿಸಿದ್ದಾರೆ.
ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಪಡಿತರ ಪದಾರ್ಥಗಳ ಸಂಭವನೀಯ ಮಾರ್ಗಾಂತರವನ್ನು ತಪ್ಪಿಸುವ ದೃಷ್ಟಿಯಿಂದ ಹಾಲಿಯಿರುವ ಎಲ್ಲ ಎಪಿಎಲ್ ಹಾಗೂ ಬಿಪಿಎಲ್ ಪಡಿತರ ಚೀಟಿದಾರರ ಕುಟುಂಬದ ಸದಸ್ಯರುಗಳು ಹೊಂದಿರುವ ಆಧಾರ ಸಂಖ್ಯೆಯನ್ನು ನಮೂದಿಸುವ ಕಾರ್ಯ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿರುವ 3,74, 969 ಬಿಪಿಎಲ್ ಪಡಿತರ ಚೀಟಿಗಳಲ್ಲಿರುವ 15,82,020 ಸದಸ್ಯರ ಪೈಕಿ ಇದುವರೆಗೆ 10,34,974 ಸದಸ್ಯರ ಆಧಾರ ಸಂಖ್ಯೆಗಳು ಮಾತ್ರ ನೋಂದಣಿಯಾಗಿರುತ್ತದೆ. ಇನ್ನುಳಿದ 5,47,046 ಸದಸ್ಯರ ಆಧಾರ ಸಂಖ್ಯೆಗಳು ನೋಂದಣಿಯಾಗಿರುವುದಿಲ್ಲ. ಯಾವ ಸದಸ್ಯರು ಆಧಾರ ಕಾರ್ಡನ್ನು ನೋಂದಣಿ ಮಾಡುವುದಿಲ್ಲವೋ ಅಂತಹ ಸದಸ್ಯರಿಗೆ ಆಹಾರ ಧಾನ್ಯಗಳ ಹಂಚಿಕೆಯು ಮುಂಬರುವ ದಿನಗಳಲ್ಲಿ ಕಡಿತಗೊಳ್ಳಲಿದೆ ಎಂದವರು ತಿಳಿಸಿದ್ದಾರೆ.
ಆಧಾರ ಸಂಖ್ಯೆಯನ್ನು ನೋಂದಣಿ ಮಾಡಿಸದೇ ಇರುವ ಪಡಿತರ ಚೀಟಿದಾರರು ಹಾಗೂ ಅಪೂರ್ಣವಾಗಿ ನಮೂದಿಸಿರುವ ಪಡಿತರ ಚೀಟಿದಾರರು ಸಂಬಂಧಿಸಿದ ನ್ಯಾಯಬೆಲೆ ಅಂಗಡಿಕಾರರಿಗೆ ಆಧಾರ ಸಂಖ್ಯೆ ಒದಗಿಸಿ ನೋಂದಣಿ ಮಾಡಿಸಲು ಇದು ಕೊನೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಕುಮಾರ ತಿಳಿಸಿದ್ದಾರೆ.