ಆ್ಯಪ್ನಗರ

ವಿಜಯಪುರ: ಗಮನ ಬೇರೆಡೆ ಸೆಳೆದು ಕಾರಿನಲ್ಲಿದ್ದ 10 ಲಕ್ಷ ರೂ. ಹಣ ಎಗರಿಸಿದ ಕಳ್ಳರು

ಕಾರಿನ ಎಂಜಿನ್‌ನಲ್ಲಿ ಆಯಿಲ್ ಸೋರಿಕೆಯಾಗುತ್ತಿದೆ ಎಂದು ನಿಂಗರಾಜ್ ನಾಶಿ ಅವರ ಗಮನ ಸೆಳೆದಿದ್ದಾರೆ. ಆಗ ಆಯಿಲ್ ಸೋರಿಕೆಯಾಗುವುದನ್ನು ನೋಡಲು ಕಾರಿನಿಂದಿಳಿದಿದ್ದೇ ತಡ. 10 ಲಕ್ಷ ರೂಪಾಯಿ ಎಗರಿಸಿ ಪರಾರಿಯಾಗಿದ್ದಾರೆ

Vijaya Karnataka Web 3 Feb 2022, 8:18 pm
ವಿಜಯಪುರ: ವ್ಯಕ್ತಿಯ ಗಮನ ಬೇರಡೆ ಸೆಳೆದು 10 ಲಕ್ಷ ರೂಪಾಯಿ ನಗದು ಎಗರಿಸಿ ಪರಾರಿಯಾದ ಘಟನೆ ಇಲ್ಲಿನ ಆಶ್ರಮ ರಸ್ತೆಯಲ್ಲಿರುವ ಎಕ್ಸಿಸ್ ಬ್ಯಾಂಕ್ ಬಳಿ ಗುರುವಾರ ನಡೆದಿದೆ.
Vijaya Karnataka Web ಪೊಲೀಸ್‌
ಪೊಲೀಸ್‌


ವಿಜಯಪುರದ ನಿಂಗರಾಜ್ ನಾಶಿ ಹಣ ಕಳೆದುಕೊಂಡ ನತದೃಷ್ಟ. ಇವರು ಎಕ್ಸಿಸ್ ಬ್ಯಾಂಕ್‌ನಿಂದ 10 ಲಕ್ಷ ರೂಪಾಯಿ ಡ್ರಾ ಮಾಡಿ ಕಾರಿನಲ್ಲಿಟ್ಟುಕೊಂಡು ಹೊರಟಿದ್ದರು.

ಆಗ ರಸ್ತೆ ಪಕ್ಕದಲ್ಲಿ ನಿಂತಿದ್ದ ಆಗುಂತಕರು, ಕಾರಿನ ಎಂಜಿನ್‌ನಲ್ಲಿ ಆಯಿಲ್ ಸೋರಿಕೆಯಾಗುತ್ತಿದೆ ಎಂದು ನಿಂಗರಾಜ್ ನಾಶಿ ಅವರ ಗಮನ ಸೆಳೆದಿದ್ದಾರೆ. ಆಗ ಆಯಿಲ್ ಸೋರಿಕೆಯಾಗುವುದನ್ನು ನೋಡಲು ಕಾರಿನಿಂದಿಳಿದಿದ್ದೇ ತಡ. ನಿಂಗರಾಜ್ ನಾಶಿ ಕಾರಿನ ಸೀಟ್‌ನಲ್ಲಿಟ್ಟಿದ್ದ 10 ಲಕ್ಷ ರೂಪಾಯಿ ಎಗರಿಸಿ ಪರಾರಿಯಾಗಿದ್ದಾರೆ ಎಂದು ಎಪಿಎಂಸಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಹನುಂತ ಚಿಂಚಲಿ ಎಂಬ ಗುತ್ತಿಗೆದಾರ ಬಳಿ ಮ್ಯಾನೇಜರ್ ಆಗಿ ನಿಂಗರಾಜ ನಾಶಿ ಕೆಲಸ ಮಾಡುತ್ತಿದ್ದರು. ವಾಸ್ತವದಲ್ಲಿ ಈ ಹಣ ಗುತ್ತಿಗೆದಾರ ಹನುಮಂತ ಚಿಂಚಲಿಗೆ ಸೇರಿದೆ.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ಪರಿಶೀಲಿಸಿದ್ದಾರೆ. ಈ ಕುರಿತು ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಕೊಲೆಗೈದ ಆರೋಪಿಗಳಿಬ್ಬರ ಬಂಧನ

ಜೀಪ್ ಹಾಯಿಸಿ ಮಹಿಳೆ ಕೊಲೆಗೈದು ತಲೆಮರೆಸಿಕೊಂಡಿದ್ದ ಆರೋಪಿಗಳಿಬ್ಬರನ್ನು ಬಂಧಿಸಿರುವ ವಿಜಯಪುರ ಗ್ರಾಮಾಂತರ ಠಾಣೆ ಸಿಪಿಐ ಸಂಗಮೇಶ ಪಾಲಭಾವಿ ನೇತೃತ್ವದ ತಂಡ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಮೂಲತಃ ಸಿದ್ಧನಾಥ ಗ್ರಾಮದ ಹಾಲಿ ಕನಮಡಿ ನಿವಾಸಿ ಸಾಗರ ಕೊಂಡಿಬಾ ಖತಾರ (20) ಹಾಗೂ ಮಾರುತಿ ಮಾಳಪ್ಪ ಥೋರತ್ (21) ಬಂಧಿತ ಆರೋಪಿಗಳು ಎಂದು ಎಸ್ಪಿ ಎಚ್.ಡಿ.ಆನಂದಕುಮಾರ ತಿಳಿಸಿದ್ದಾರೆ.

ಕಬ್ಬು ಕಟಾವು ಮಾಡಲು ಬಂಧಿತ ಆರೋಪಿಗಳು, ಕೊಲೆಗೀಡಾದ ಮಹಿಳೆಯ ಗಂಡ ಘೊಣಸಗಿ ಗ್ರಾಮದ ಸೋಮಲಿಂಗ ಮಾಳಪ್ಪ ಮೋಗದರೆ ಎಂಬಾತನಿಂದ 45 ಲಕ್ಷ ರೂ. ಮುಂಗಡ ಪಡೆದಿದ್ದರು. ಆದರೆ ಕಬ್ಬು ಕಟಾವಿಗೆ ಗ್ಯಾಂಗ್ ಬರಲಿಲ್ಲ. ಇದರಿಂದಾಗಿ ಸಿಟ್ಟಾದ ಫಿರ್ಯಾದಿ ಸೋಮಲಿಂಗ ಹಾಗೂ ಆತನ ಪತ್ನಿ ಹಣ ಪಡೆದುಕೊಂಡು ಕೆಲಸಕ್ಕೆ ಸರಿಯಾಗಿ ಬನ್ನಿ ಎಂದು ಬುದ್ದಿವಾದ ಹೇಳಿದ್ದರು.

ಇದರಿಂದ ಇವರ ಮೇಲೆ ಸಿಟ್ಟಾದ ಆರೋಪಿಗಳು, ಬೊಲೆರೋ ವಾಹನ ಸಮೇತ ಮಹಿಳೆ ವಾಸಿಸುವ ಜೋಪಡಿಗೆ ಡಿಕ್ಕಿ ಹೊಡೆಸಿ, ಚೆಲ್ಲಾ-ಪಿಲ್ಲಿ ಮಾಡಿದ್ದರು. ಅಲ್ಲದೇ ಮಹಿಳೆಯ ಬೆನ್ನಟ್ಟಿ, ಆಕೆಗೂ ಜೀಪ್ ಹಾಯಿಸಿ ಕೊಲೆ ಮಾಡಿದ ಕುರಿತು ತಿಕೋಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಸವಲಾಗಿ ಸ್ವೀಕರಿಸಿದ ಸಿಪಿಐ ಸಂಗಮೇಶ ಪಾಲಭಾವಿ ನೇತೃತ್ವದ ತಂಡ, ತಲೆಮರೆಸಿಕೊಂಡಿದ್ದ ಆರೋಪಿಗಳಿಗೆ ಜಾಲಾಡಿ, ಕೊನೆಗೆ ಕನಮಡಿ ಬಳಿ ಅವರನ್ನು ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಿದಾಗ, ಜೀಪ್ ಹಾಯಿಸಿ ಮಹಿಳೆ ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ