ಆ್ಯಪ್ನಗರ

ಬಸನಗೌಡ ಪಾಟೀಲ್ ಯತ್ನಾಳ್‌ ಗಂಡಸ್ತನ ಪ್ರಶ್ನಿಸಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ

ಬಿಜೆಪಿ ಶಾಸಕ ಯತ್ನಾಳ್‌ ಹಾಗೂ ಮಾಜಿ ಸಚಿವ ಅಪ್ಪು ಪಟ್ಟಣ ಶೆಟ್ಟಿ ನಡುವೆ ವಾಕ್ಸಮರ ಜೋರಾಗಿದೆ. ಯತ್ನಾಳ್‌ ಅಪ್ಪು ಪಟ್ಟಣಶೆಟ್ಟಿಯನ್ನು ಬೀದಿ ನಾಯಿಗೆ ಹೋಲಿಸಿದ ಬೆನ್ನಲ್ಲೇ ಯತ್ನಾಳ್‌ರ ಗಂಡಸ್ತನವನ್ನೇ ಅಪ್ಪು ಪಟ್ಟಣಶೆಟ್ಟಿ ಪ್ರಶ್ನಿಸಿದ್ದಾರೆ.

Vijaya Karnataka Web 16 Oct 2019, 5:25 pm
ವಿಜಯಪುರ: ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹಾಗೂ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ನಡುವಿನ ಮುಸುಕಿನ ಗುದ್ದಾಟ ಇದೀಗ ಬಹಿರಂಗವಾಗಿ ಸ್ಫೋಟಗೊಂಡಿದೆ. ಇಬ್ಬರೂ ಪರಸ್ಪರ ಹೇಳಿಕೆ ನೀಡುವ ಮೂಲಕ ಕೆಸರೆರಚಾಟ ಮುಂದುವರಿಸಿದ್ದಾರೆ.
Vijaya Karnataka Web basangouda patil yatnal


ತಮ್ಮ ವಿರುದ್ಧ ಟೀಕೆ ಮಾಡಿದ್ದ ಅಪ್ಪು ಪಟ್ಟಣಶೆಟ್ಟಿ ಅವರನ್ನು ಬೀದಿ ನಾಯಿಗೆ ಹೋಲಿಸಿದ್ದ ಯತ್ನಾಳ್‌ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಅಪ್ಪು ಪಟ್ಟಣಶೆಟ್ಟಿ ಬುಧವಾರ ಯತ್ನಾಳ ಗಂಡಸ್ತನ ಪ್ರಶ್ನಿಸುವ ಮೂಲಕ ಇಬ್ಬರ ನಡುವಿನ ಶೀತಲ ಸಮರ ಸಾರ್ವಜನಿಕರಿಗೆ ಮನರಂಜನೆಯಾಗಿ ಮಾರ್ಪಟ್ಟಿದೆ.

ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮಂಗಳವಾರ ಸುದ್ದಿಗೋಷ್ಠಿಯುದ್ಧಕ್ಕೂ ಯತ್ನಾಳ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬಳಿಕ ಮಾಧ್ಯಮಗಳು ಯತ್ನಾಳ್‌ ರವರ ಪ್ರತಿಕ್ರಿಯೆ ಕೇಳಿದಾಗ, ಅಪ್ಪು ಪಟ್ಟಣಶೆಟ್ಟಿ ಅವರನ್ನು ಬೀದಿನಾಯಿಗೆ ಹೋಲಿಸಿದ ಯತ್ನಾಳ್‌ ಅಂಥವರಿಗೆಲ್ಲ ಉತ್ತರ ನೀಡಲ್ಲ ಎಂದಿದ್ದರು.

ಇದರಿಂದಾಗಿ ಬುಧವಾರ ಯತ್ನಾಳ್‌ ವಿರುದ್ಧ ಕೆಂಡಾಮಂಡಲರಾದ ಅಪ್ಪು ಪಟ್ಟಣಶೆಟ್ಟಿ ಅವರು, ಯತ್ನಾಳ್‌ ಅವರಿಗೆ ಧೈರ್ಯ, ತಾಕತ್ತು, ಧಮ್ ಹಾಗೂ ಗಂಡಸ್ತನ ಇದ್ದರೆ, ನನ್ನ ವಿರುದ್ಧ ಸುದ್ದಿಗೋಷ್ಠಿ ನಡೆಸುವ ಮೂಲಕ ನಾನು ಮಾಡಿದ ಆರೋಪಗಳಿಗೆ ಯತ್ನಾಳ ಉತ್ತರ ನೀಡಲಿ ಎಂದು ಸವಾಲು ಹಾಕಿದರು.

ಯತ್ನಾಳ್‌ ಮಾನಸಿಕ ಅಸ್ವಸ್ಥ: ವಿಜಯಪುರ
ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾನಸಿಕ ಪರಿಸ್ಥಿತಿ ಸರಿಯಿಲ್ಲ. ಹೀಗಾಗಿ ಮಾನಸಿಕ ಅಸ್ವಸ್ಥರಂತೆ ಹೇಳಿಕೆ ನೀಡಿದ್ದಾರೆ. ನಾನು ಇಲ್ಲಿಗೆ ಬಿಡಲ್ಲ. ಯತ್ನಾಳ್‌ ಅವರ ಹಿಂದುತ್ವ ಎಂಥದ್ದು. ಅವರು ಬಿಜೆಪಿಯಲ್ಲಿ ಇದ್ದಾಗ ಏನೆಲ್ಲ ಮಾಡಿದ್ದಾರೆ ಎಂಬುದನ್ನು ಬಹಿರಂಗಗೊಳಿಸುವುದಾಗಿ ತಿಳಿಸಿದ ಅವರು, ಇದು ನನ್ನ ಹಾಗೂ ಯತ್ನಾಳ್‌ ನಡುವಿನ ವೈಯಕ್ತಿಕ ಸಮರ ಎಂದೂ ಅಪ್ಪು ಪಟ್ಟಣಶೆಟ್ಟಿ ಸಾರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ