ಆ್ಯಪ್ನಗರ

ಬಯೋಮೆಟ್ರಿಕ್‌ ಅಳವಡಿಸದಿದ್ದರೆ ವೇತನಕ್ಕೆ ಕತ್ತರಿ! ಆಲ್‌ ಎಡಿಷನ್‌ಗೆ

ಇಮಾಂಬಿ ನದಾಫ್‌ ವಿಜಯಪುರ ಬಯೋಮೆಟ್ರಿಕ್‌ ಹಾಜರಾತಿ ಪಕ್ಕಾ ಇದ್ದರೆ ಮಾತ್ರ ತಿಂಗಳ ವೇತನ ಚುಕ್ತಾ.ಇಲ್ಲದಿದ್ದರೆ ಕತ್ತರಿ ಬೀಳಲಿದೆ. ಇದರಿಂದ ಚಕ್ಕರ್‌ ಹಾಕಿ ವೇತನ ಪಡೆಯುವ ಸಿಬ್ಬಂದಿ ಪೇಚಾಡುವಂತಾಗಿದೆ.!

Vijaya Karnataka 19 Feb 2019, 5:00 am
ಇಮಾಂಬಿ ನದಾಫ್‌ ವಿಜಯಪುರ
Vijaya Karnataka Web news/vijayapura/biometric
ಬಯೋಮೆಟ್ರಿಕ್‌ ಅಳವಡಿಸದಿದ್ದರೆ ವೇತನಕ್ಕೆ ಕತ್ತರಿ! ಆಲ್‌ ಎಡಿಷನ್‌ಗೆ


ಬಯೋಮೆಟ್ರಿಕ್‌ ಹಾಜರಾತಿ ಪಕ್ಕಾ ಇದ್ದರೆ ಮಾತ್ರ ತಿಂಗಳ ವೇತನ ಚುಕ್ತಾ.ಇಲ್ಲದಿದ್ದರೆ ಕತ್ತರಿ ಬೀಳಲಿದೆ. ಇದರಿಂದ ಚಕ್ಕರ್‌ ಹಾಕಿ ವೇತನ ಪಡೆಯುವ ಸಿಬ್ಬಂದಿ ಪೇಚಾಡುವಂತಾಗಿದೆ.!

ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರು ಪ್ರಸಕ್ತ ವರ್ಷದಿಂದಲೇ ರಾಜ್ಯದ ಎಲ್ಲ ಸರಕಾರಿ, ಅನುದಾನಿತ ಎಂಜನಿಯರಿಂಗ್‌, ಪಾಲಿಟೆಕ್ನಿಕ್‌ ಕಾಲೇಜ್‌ ಹಾಗೂ ಕಿರಿಯ ತಾಂತ್ರಿಕ ಶಾಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ವೆಬ್‌ ಆಧಾರಿತ ಬಯೋಮೆಟ್ರಿಕ್‌ ಉಪಕರಣ ಅಳವಡಿಸಿ, ಹಾಜರಾತಿ ವ್ಯವಸ್ಥೆ ಜಾರಿಗೊಳಿಸಬೇಕು. ಇಲ್ಲದಿದ್ದರೆ ಇಲಾಖೆ ಪ್ರಾಚಾರ್ಯ, ಸಂಬಂಧಪಟ್ಟ ಸಿಬ್ಬಂದಿಗಳ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮಜರುಗಿಸುವ ಜತೆಗೆ ವೇತನ, ಇನ್ನಿತರ ಸೌಲಭ್ಯಗಳನ್ನು ತಡೆಹಿಡಿಯಲಾಗುವುದು ಎಂದು ಆದೇಶ ಹೊರಡಿಸಿದ್ದಾರೆ.

540 ಶಾಲೆ, ಕಾಲೇಜ್‌ಗೆ ಅನ್ವಯ

ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆಯಡಿಯಲ್ಲಿ 540 ಶಿಕ್ಷಣ ಸಂಸ್ಥೆಗಳಿವೆ. ಸರಕಾರಿ 12, ಅನುದಾನಿತ 11, ಖಾಸಗಿ 165, ಅಲ್ಪಸಂಖ್ಯಾತ 15 ಎಂಜನಿಯರಿಂಗ್‌ ಕಾಲೇಜ್‌ಗಳು, ಸರಕಾರಿ 82, ಅನುದಾನಿತ 44, ಖಾಸಗಿ 196 ಪಾಲಿಟೆಕ್ನಿಕ್‌ ಕಾಲೇಜ್‌, ಸರಕಾರಿ 6, ಖಾಸಗಿ 6 ಕಿರಿಯ ತಾಂತ್ರಿಕ ಶಾಲೆಗಳಿವೆ ಹಾಗೂ ಎರಡು ತಾಂತ್ರಿಕ ವಿಶ್ವವಿದ್ಯಾಲಯಗಳಿವೆ. ಈ ಎಲ್ಲ ಶಾಲೆ, ಕಾಲೇಜ್‌ಗಳಲ್ಲಿ ಕಡ್ಡಾಯವಾಗಿ ಈ ವರ್ಷದಿಂದಲೇ ಬಯೋಮೆಟ್ರಿಕ್‌ ಮತ್ತು ಎಚ್‌ಎಂಆರ್‌ಎಸ್‌ನಲ್ಲಿ ವೈಯಕ್ತಿ ವಿವರನ್ನು ದಾಖಲಿಸಬೇಕು ಎಂದು ಸೂಚನೆ ನೀಡಿದೆ. ಈಗಾಗಲೇ ಕೆಲ ಕಾಲೇಜ್‌ಗಳು ಯಂತ್ರ ಅಳವಡಿಸಲು ಪ್ರಾರಂಭಿಸಿವೆ.

ವೇತನ ಹೆಚ್ಚಳಕ್ಕೆ ಮಾನದಂಡ!

ಈ ಹಿಂದೆ ಇಲಾಖೆ ಯಂತ್ರ ಅಳವಡಿಕೆಗೆ ಸೂಚನೆ ನೀಡಿತ್ತು. ಆದರೆ ಕಾಲೇಜ್‌ಗಳು ಆದೇಶವನ್ನು ಕಸದ ಬುಟ್ಟಿಗೆ ಹಾಕಿದ್ದವು. ಆದರೆ ಈ ಬಾರಿ ಹಾಜರಾತಿ ವ್ಯವಸ್ಥೆ ಮಾತ್ರವಲ್ಲದೆ ಸಿಬ್ಬಂದಿಯ ಹೆಸರು, ಜನ್ಮ ದಿನಾಂಕ, ಆಧಾರ್‌ ಕಾರ್ಡ್‌ ನಂಬರ್‌ ಸೇರಿದಂತೆ ಇನ್ನಿತರ ವೈಯಕ್ತಿಕ ಮಾಹಿತಿಯನ್ನು ಇಲಾಖೆಯ ಆನ್‌ಲೈನ್‌ ಪೋರ್ಟ್‌ನಲ್ಲಿ ದಾಖಲಿಸಬೇಕು. ವೇತನ ಹೆಚ್ಚಳ, ಬಡ್ತಿಗೆ ಬಯೋಮೆಟ್ರಿಕ್‌ ಮಾನದಂಡವಾಗಲಿದೆ. ಎಲ್ಲ ಸಿಬ್ಬಂದಿಗಳ ವೇತನ ಪಾವತಿಸುವ ಮುನ್ನ ಬಯೋಮೆಟ್ರಿಕ್‌ ಹಾಜರಾತಿ ದಾಖಲೆ ಪರಿಶೀಲಿಸಲು ಸಂಬಂಧಪಟ್ಟ ಪ್ರಾಚಾರ್ಯರಿಗೆ ಸೂಕ್ತ ನಿರ್ದೇಶನ ನೀಡುವುದು ದಾಖಲೆಯಂತೆ ವೇತನ ಬಿಡುಗಡೆಗೊಳಿಸಲು ಕ್ರಮಕೈಗೊಳ್ಳುವಂತೆ ತಿಳಿಸುವುದು. ಸಂಸ್ಥೆಗಳಿಗೆ ಸರಕಾರದಿಂದ ಹಣ ಬಿಡುಗಡೆಯಾಗುವ ಮುನ್ನ ಬಯೋಮೆಟ್ರಿಕ್‌ ಹಾಜರಾತಿ ದಾಖಲೆ ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಸಂಬಂಧಪಟ್ಟ ಕಾಲೇಜ್‌ಗಳಿಗೆ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದ್ದರಿಂದ ಅಳವಡಿಕೆಗೆ ಕಾಲೇಜ್‌ಗಳು ಮುಂದಾಗಿವೆ.

ಪೇಚಾಡುವ ಸಿಬ್ಬಂದಿ

ಈ ಹಿಂದೆ ಆನೆ ನಡೆದಿದ್ದೇ ದಾರಿ ಎಂಬಂತೆ ಸಿಬ್ಬಂದಿಗಳು ಬೇಕಾಬಿಟ್ಟಿಯಾಗಿ ಕಾಲೇಜ್‌ಗೆ ಬರುವುದು, ಚಕ್ಕರ್‌ ಹಾಕುವುದು ಸಾಮಾನ್ಯವಾಗಿತ್ತು. ಆದರೆ ಈಗ ಬಯೋಮೆಟ್ರಿಕ್‌ ಯಂತ್ರ ಅವುಗಳಿಗೆ ಕಡಿವಾಣ ಹಾಕಲಿದೆ. ಆದ್ದರಿಂದ ಸಿಬ್ಬಂದಿ ಸರಿಯಾದ ವೇಳೆಗೆ ಕಾಲೇಜ್‌ಗೆ ಹಾಜರಾಗಲೇಬೇಕು. ಇಲ್ಲದಿದ್ದರೆ ತಿಂಗಳ ಕೊನೆಯಲ್ಲಿ ಯಂತ್ರ ನಾವು ಯಾವಾಗ ಥಂಬ್‌ ಇಂಪ್ರೇಸ್‌ ಮಾಡಿದ್ದು, ಗೈರು ಎಷ್ಟು ಹೀಗೆ ಎಲ್ಲ ವೆಬ್‌ ಆಧಾರಿತ ಮಾಹಿತಿ ಲಭ್ಯವಾಗುತ್ತದೆ. ಇದರಿಂದ ವೇತನ, ಇನ್ನಿತರ ಸೌಲಭ್ಯಗಳಿಗೆ ಕುತ್ತು ಬರಬಹುದು ಎಂದು ಸಿಬ್ಬಂದಿ ಪೇಚಾಡುತ್ತಿದ್ದಾರೆ.

ಕೋಟ್ಸ್‌...

ನಮ್ಮ ಕಾಲೇಜ್‌ನಲ್ಲಿ ಬಯೋಮೆಟ್ರಿಕ್‌ ಯಂತ್ರ ಅಳವಡಿಸಲಾಗಿದೆ. ಕೆಲವು ಕಡೆ ಈಗ ಅಳವಡಿಸಲಾಗುತ್ತಿದೆ. ಕಾಲೇಜ್‌ಗಳಿಗೆ ಬೇಕಾಬಿಟ್ಟಿಯಾಗಿ ಬರುವ, ಚಕ್ಕರ್‌ ಹಾಕುವ ಸಿಬ್ಬಂದಿಗೆ ಬಯೋಮೆಟ್ರಿಕ್‌ ಯಂತ್ರದಿಂದ ಇಲಾಖೆ ಮೂಗುದಾರ ಹಾಕಿದೆ. ಈ ನಿರ್ಧಾರ ಉತ್ತಮವಾಗಿದೆ. ಕಡ್ಡಾಯವಾಗಿ ಎಲ್ಲ ಕಡೆ ಜಾರಿಯಾಗಬೇಕು.

ಎಸ್‌.ಎನ್‌.ಕಾವಿ, ಸರಕಾರಿ ಪಾಲಿಟೆಕ್ನಿಕ್‌ ಕಾಲೇಜ್‌, ರಿಜಿಸ್ಟಾರ್‌ ವಿಜಯಪುರ.

---

ಈ ವರ್ಷದಿಂದಲೇ ರಾಜ್ಯದ ಎಲ್ಲ ತಾಂತ್ರಿಕ ಶಿಕ್ಷಣ ಇಲಾಖೆಯಡಿಯಲ್ಲಿರುವ ಶಾಲೆ, ಕಾಲೇಜ್‌ಗಳಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್‌ ಯಂತ್ರ ಅಳವಡಿಸಬೇಕು. ಆ ದಾಖಲಾತಿ ಪರಿಶೀಲಿಸಿ ವೇತನ ಬಿಡುಗಡೆಗೊಳಿಸಲಾಗುವುದು.

ಡಿ.ವಿ.ಶ್ರೀನಿವಾಸ, ತಾಂತ್ರಿಕ ಶಿಕ್ಷಣ ಇಲಾಖೆ, ನಿರ್ದೇಶಕರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ