ಆ್ಯಪ್ನಗರ

ಮುಳುಗುತ್ತಿರುವ ಹಡಗು ಕಾಂಗ್ರೆಸ್ಸಿನಲ್ಲಿ ಬುದ್ದಿ ಇಲ್ದ ಗುಲಾಮರು ಮಾತ್ರ ಇದ್ದಾರೆ: ಸಿಟಿ ರವಿ

ರಾಜೀವ್‌ ಗಾಂಧಿ ಕಾಲದಲ್ಲಿ ಕೇಂದ್ರದಿಂದ ರೂ. 100 ಕಳುಹಿಸಿದರೆ ಕಟ್ಟಕಡೆಯ ಮನುಷ್ಯನಿಗೆ ತಲುಪುವುದು ಕೇವಲ ರೂ. 17 ತಲುಪುತ್ತಿತ್ತು ಎಂದು ರಾಜೀವ್‌ ಗಾಂಧಿ ಹೇಳಿದ್ದರು. ಅಧಿಕಾರದಲ್ಲಿ ಇದ್ದದ್ದು ಕಾಂಗ್ರೆಸ್ಸಿಗರೇ.

Lipi 25 Oct 2021, 7:38 pm
ವಿಜಯಪುರ: ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ಮುಗಿಲುಮುಟ್ಟುತ್ತಿದೆ.
Vijaya Karnataka Web bjp leader ct ravi slams congress a sinking boat
ಮುಳುಗುತ್ತಿರುವ ಹಡಗು ಕಾಂಗ್ರೆಸ್ಸಿನಲ್ಲಿ ಬುದ್ದಿ ಇಲ್ದ ಗುಲಾಮರು ಮಾತ್ರ ಇದ್ದಾರೆ: ಸಿಟಿ ರವಿ


ಕಾಂಗ್ರೆಸ್ ಮತ್ತು ಸಿದ್ಧರಾಮಯ್ಯ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರ ಜಿಲ್ಲೆ ಸಿಂದಗಿಯಲ್ಲಿ ಬೈ ಎಲೆಕ್ಷನ್ ಪ್ರಚಾರದ ಅಂಗವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಸಮೀಪ ದೃಷ್ಠಿ ಚೆನ್ನಾಗಿದೆ ಎಂದುಕೊಳ್ಳುತ್ತೇನೆ. ಹೊಸದಿಲ್ಲಿಯಲ್ಲಿ ಏನು ನಡೆಯುತ್ತಿದೆ ಎಂಬುದು ಕಾಣುತ್ತಿಲ್ಲವಾ? ಹೊಸದಿಲ್ಲಿಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಕನ್ನಡಕ ಹಾಕಿ ನೋಡಬೇಕಾ? ದಿಲ್ಲಿಯಲ್ಲಿಯೂ ಅದೇ ಕುಟುಂಬ ರಾಜಕಾರಣವೇ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಮುಳಗುತ್ತಿರುವ ಹಡಗು. ಮುಳುಗುತ್ತಿರುವ ಹಡಗನ್ನು ಬುದ್ದಿವಂತರೆಲ್ಲ ಬಿಡುತ್ತಿದ್ದಾರೆ. ಸಿದ್ಧರಾಮಯ್ಯ ಅವರಿಗೆ ಬುದ್ಧಿ ಇದೆ ಎಂದು ಭಾವಿಸುತ್ತೇನೆ. ಬುದ್ದಿ ಇರುವವರು ಯಾರೂ ಮುಳಗುವ ಹಡಗಿನಲ್ಲಿ ಇರಲ್ಲ. ಇನ್ನು ಮುಂದಿನದು ನಿಮಗೆ ಬಿಟ್ಟಿದ್ದು. ಅದರ ಜೊತೆ ಸೇರಿ ಮುಳಗುತ್ತೀರೋ ಅಥವಾ ಲೈಫ್ ಜಾಕೆಟ್ ತೆಗೆದುಕೊಂಡು ಹೊರಗೆ ಬರುತ್ತೀರೋ ನಿಮಗೆ ಬಿಟ್ಟಿದ್ದು ಎಂದು ವ್ಯಂಗ್ಯವಾಡಿದರು.

ಜ್ಯೋತಿರಾದಿತ್ಯ ಸಿಂಧ್ಯ, ರಿಟಾ ಬಹುಗುಣ, ಜಿತೇಂದ್ರ ಸಿಂಗ್ ಹೀಗೆ ಸಾಲು ಸಾಲು ಜನ ಹೆಚ್ಚು ಕಡಿಮೆ 400ಕ್ಕೂ ಹೆಚ್ಚು ಶಾಸಕರು, ಮಾಜಿ ಶಾಸಕರು, ಸಂಸದರು, ಮಾಜಿ ಸಂಸದರು ಹೀಗೆ ಪಕ್ಷದ ಪ್ರುಮಖ ಜವಾಬ್ದಾರಿ ಹೊತ್ತಿದ್ದವರು ಕಾಂಗ್ರೆಸ್ ಬಿಟ್ಟು ಹೋಗುತ್ತಿದ್ದಾರೆ. ಯಾರಿಗೂ ಕಾಂಗ್ರೆಸ್ ಮೇಲೆ ವಿಶ್ವಾಸವಿಲ್ಲ. ಒಂದು ಮೂರ್ಖರು ಇಲ್ಲವೇ ಗುಲಾಮರು ಇರುತ್ತಾರೆ. ಒಂದು ಕುಟುಂಬದ ಗುಲಾಮಗಿರಿಗೆ, ತಮ್ಮನ್ನು ತಾವು ಮಾರಿಕೊಂಡವರು ಮಾತ್ರ ಇರುತ್ತಾರೆ ಅಥವಾ ಮೂರ್ಖರು ಮಾತ್ರ ಇರುತ್ತಾರೆ. ಪ್ರಜಾಪ್ರಭುತ್ವಕ್ಕೂ ಕಾಂಗ್ರೆಸ್ಸಿಗೂ ಏನೂ ಸಂಬಂಧವಿಲ್ಲ ಎಂದು ಕಿಡಿಕಾರಿದರು.

ರಾಜೀವ್‌ ಗಾಂಧಿ ಕಾಲದಲ್ಲಿ ಕೇಂದ್ರದಿಂದ ರೂ. 100 ಕಳುಹಿಸಿದರೆ ಕಟ್ಟಕಡೆಯ ಮನುಷ್ಯನಿಗೆ ತಲುಪುವುದು ಕೇವಲ ರೂ. 17 ತಲುಪುತ್ತಿತ್ತು ಎಂದು ರಾಜೀವ್‌ ಗಾಂಧಿ ಹೇಳಿದ್ದರು. ಅಂದು ಪಂಚಾಯಿತಿಯಿಂದ ಪಾರ್ಲಿಮಂಟ್‌ವರೆಗೂ ಅಧಿಕಾರದಲ್ಲಿ ಇದ್ದದ್ದು ಕಾಂಗ್ರೆಸ್ಸಿಗರೇ. ಅದಕ್ಕೆ ರಾಜೀವ ಗಾಂಧಿ ಅದನ್ನು ನಿಲ್ಲಿಸುವ ಪ್ರಯತ್ನ ಮಾಡಿರಲಿಲ್ಲ. ಈಗ ಸುಮಾರು 300ಕ್ಕೂ ಹೆಚ್ಚು ಯೋಜನೆಗಳ ಪ್ರತಿಯೊಂದು ಪೈಸ ಕಟ್ಟಕಡೆಯ ಮನುಷ್ಯನಿಗೆ ತಲುಪುತ್ತದೆ. ಮಧ್ಯವರ್ತಿಗಳ ಹಾವಳಿಯಿಲ್ಲ. ಈಗ ಇಚ್ಛಾಶಕ್ತಿ ಇರುವ ಪ್ರಧಾನ ಮಂತ್ರಿ ಇದ್ದಾರೆ ಎಂದು ಸಿಟಿ ರವಿ ಹೇಳಿದರು.

ಹಾಸ್ಯಾಸ್ಪದ ಸಂಗತಿ ಎಂದರೆ ತಮ್ಮನ್ನು ತಾವೇ ಅಧ್ಯಕ್ಷೆ ಎಂದು ಡಿಕ್ಲೇರ್ ಮಾಡಿಕೊಳ್ಳುವ ಉದಾಹರಣೆ ಡೆಮಾಕ್ರಸಿಯಲ್ಲಿ ಇಲ್ಲ. ಇತ್ತೀಚೆಗೆ ಕಾಂಗ್ರೆಸ್ಸಿನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮನ್ನು ತಾವೇ ಅಧ್ಯಕ್ಷೆ ಎಂದು ಹೇಳಿಕೊಂಡಿದ್ದು ಪ್ರಜಾಪ್ರಭುತ್ವದ ವ್ಯಂಗ್ಯ ಎಂದು ಆರೋಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ