ಆ್ಯಪ್ನಗರ

CM Bommai: ಪಂಚ ನದಿಗಳ ಬೀಡು ವಿಜಯಪುರಕ್ಕೆ ಸಿಎಂ ಬೊಮ್ಮಾಯಿ ಪಂಚ ಕೊಡುಗೆ!

CM Bommai: ಕೃಷ್ಣಾ ಮೇಲ್ದಂಡೆ 3 ನೇ ಹಂತದ ನೋಟಿಫಿಕೇಷನ್‌ಗೆ ಅನುಮತಿ ದೊರಕುವ ವಿಶ್ವಾಸವಿದೆ. ಅನುಮತಿ ಸಿಗುತ್ತಿದ್ದಂತೆಯೇ ನೀರು ಸದ್ಬಳಕೆಗೆ ರಾಜ್ಯ ಸರಕಾರ ಸಂಪೂರ್ಣ ಬದ್ಧವಾಗಿದ್ದು, ಮಾರ್ಚ್ ಮಾಸಾಂತ್ಯದವರೆಗೆ 10 ಸಾವಿರ ಕೋಟಿ ರೂ. ತೊಡಗಿಸಿ ಪುನರ್ವಸತಿ ಹಾಗೂ ಪುನರ್ನಿರ್ಮಾಣ ಕಾರ್ಯ, ಪರಿಹಾರ ಒದಗಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ವಿಜಯಪುರ ಜಿಲ್ಲೆ ಕರ್ನಾಟಕ ರಾಜ್ಯಕ್ಕೆ ತಿಲಕವಿದ್ದಂತೆ, ಇದು ಪಂಚ ನದಿಗಳ ಬೀಡು ಎಂದು ವಿಜಯಪುರದ ಮಹತ್ವವನ್ನು ಸಿಎಂ ಬೊಮ್ಮಾಯಿ ಕೊಂಡಾಡಿದ್ದಾರೆ.

Edited byದಿಲೀಪ್ ಡಿ. ಆರ್. | Vijaya Karnataka 30 Sep 2022, 7:06 pm

ಹೈಲೈಟ್ಸ್‌:

  • ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸ್ತು
  • ಸಿದ್ದೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಲೋಕಾರ್ಪಣೆ
  • ವಿಜಯಪುರಕ್ಕೆ ಸರ್ಕಾರಿ ಮೆಡಿಕಲ್‌ ಕಾಲೇಜ್‌
  • 3 ತಿಂಗಳಲ್ಲಿ ಟೆಕ್ಸ್‌ಟೈಲ್‌ ಪಾರ್ಕ್
  • ಪ್ರವಾಸೋದ್ಯಮ ಉತ್ತೇಜನಕ್ಕೆ ಒತ್ತು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web bommai
ಪಂಚ ನದಿಗಳ ಬೀಡು ವಿಜಯಪುರಕ್ಕೆ ಸಿಎಂ ಬೊಮ್ಮಾಯಿ ಪಂಚ ಕೊಡುಗೆ!
ವಿಜಯಪುರ: ಖಾಸಗಿ ಸಹಭಾಗಿತ್ವದಲ್ಲಿ ನಗರದಲ್ಲಿ ಸರಕಾರಿ ವೈದ್ಯಕೀಯ ಕಾಲೇಜ್‌ ಮಂಜೂರು ಮಾಡುವುದರೊಟ್ಟಿಗೆ, ಯುಕೆಪಿ 3ನೇ ಹಂತದ ಆರ್‌ ಆ್ಯಂಡ್‌ ಆರ್‌ ಕಾಮಗಾರಿಗಳಿಗೆ 10 ಸಾವಿರ ಕೋಟಿ ರೂ. ಅನುದಾನ ಸೇರಿದಂತೆ ಪಂಚ ನದಿಗಳ ಬೀಡು ವಿಜಯಪುರಕ್ಕೆ ಐದು ಮಹತ್ವದ ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ವಿಜಯಪುರ ನಗರದ ಹೊರವಲಯದ ಎಸ್‌. ಹೈಪರ್‌ ಮಾರ್ಟ್‌ ಬಳಿ ತಲೆಯೆತ್ತಿರುವ ಶ್ರೀ ಸಿದ್ದೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಲೋಕಾರ್ಪಣೆ ಹಾಗೂ ವಿಜಯಪುರ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

CM Bommai at Alamatti Dam - ಅಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸುವುದು ನಮ್ಮ ಗುರಿ: ಸಿಎಂ ಬೊಮ್ಮಾಯಿ
ವಿಜಯಪುರ ಜಿಲ್ಲೆ ಕರ್ನಾಟಕ ರಾಜ್ಯಕ್ಕೆ ತಿಲಕವಿದ್ದಂತೆ ಎಂದು ವಿಜಯಪುರದ ಮಹತ್ವವನ್ನು ಕೊಂಡಾಡಿದ ಸಿಎಂ, ಇದು ಪಂಚ ನದಿಗಳ ಬೀಡು. ಅಣ್ಣ ಬಸವಣ್ಣನವರಿಗೆ ಜನ್ಮ ನೀಡಿದ ಹಾಗೂ ಈಗಿನ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಂಥ ಪುಣ್ಯ ಪುರುಷರಿಗೆ ಜನ್ಮ ನೀಡಿದ ಪುಣ್ಯ ಭೂಮಿ ಎಂದು ಮುಕ್ತ ಕಂಠದಿಂದ ಬಣ್ಣಿಸಿದರು.

ಯತ್ನಾಳರಿಗೆ ವರುಣನ ಆಶೀರ್ವಾದ: ಇಷ್ಟು ಹೇಳಿ ಸಿಎಂ ಭಾಷಣ ಆರಂಭಿಸುತ್ತಿದ್ದಂತೆಯೇ ವರುಣನ ಆರ್ಭಟ ಜೋರಾಯಿತು. ಮಳೆ ಬರುತ್ತಿರುವುದು ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಆಶೀರ್ವಾದವಿದ್ದಂತೆ ಎಂದಾಗ ಜನರು ಕೇಕೆ ಹಾಕಿದರು.

ಯುಕೆಪಿ 3ನೇ ಹಂತಕ್ಕೆ 10 ಸಾವಿರ ಕೋಟಿ ರೂ.: ಕೃಷ್ಣಾ ಮೇಲ್ದಂಡೆ 3ನೇ ಹಂತದ ನೋಟಿಫಿಕೇಷನ್‌ಗೆ ಅನುಮತಿ ದೊರಕುವ ವಿಶ್ವಾಸವಿದೆ. ಅನುಮತಿ ಸಿಗುತ್ತಿದ್ದಂತೆಯೇ ನೀರು ಸದ್ಬಳಕೆಗೆ ರಾಜ್ಯ ಸರಕಾರ ಸಂಪೂರ್ಣ ಬದ್ಧವಾಗಿದ್ದು, ಮಾರ್ಚ್ ಮಾಸಾಂತ್ಯದವರೆಗೆ 10 ಸಾವಿರ ಕೋಟಿ ರೂ. ತೊಡಗಿಸಿ ಪುನರ್ವಸತಿ ಹಾಗೂ ಪುನರ್ನಿರ್ಮಾಣ ಕಾರ್ಯ, ಪರಿಹಾರ ಒದಗಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.

ರಫ್ತು ಗುಣಮಟ್ಟದ ದ್ರಾಕ್ಷಿ ಉತ್ಪಾದಿಸುವ ಬೆಳೆಗಾರರಿಗೆ ಶೀತಲೀಕರಣ ಘಟಕಕ್ಕೆ 35 ಕೋಟಿ ರೂ. ಅನುದಾನದ ಜೊತೆಗೆ ಅದಕ್ಕೆ 100 ಕೋಟಿ ರೂ. ತಗುಲಿದರೂ ಆ ಅನುದಾನ ನೀಡಲು ಸರಕಾರ ಬದ್ಧವಾಗಿದೆ ಎಂದರು.

ಸಿದ್ದರಾಮಯ್ಯ ಇನ್ನೆಂದೂ ಮುಖ್ಯಮಂತ್ರಿ ಆಗೋದಿಲ್ಲ: ಸಚಿವ ಗೋವಿಂದ ಕಾರಜೋಳ ಭವಿಷ್ಯ
ಟೆಕ್ಸಟೈಲ್‌ ಪಾರ್ಕ್ ನಿರ್ಮಾಣ: ಕೈಗಾರಿಕೆಗಳು ಸ್ಥಾಪಿಸುವ ಮೂಲಕ ನಿರುದ್ಯೋಗಿಗಳ ಕೈಗೆ ಉದ್ಯೋಗ ನೀಡಬೇಕೆಂಬುದು ನಮ್ಮ ಸರಕಾರದ ಆಶಯವಾಗಿದೆ. ಹಾಗಾಗಿ ರಾಜ್ಯದ ಜವಳಿ ನೀತಿಯಡಿ ಮೂರು ತಿಂಗಳಲ್ಲಿ ಅನುದಾನ ನೀಡಿ ವಿಜಯಪುರ, ಕಲಬುರಗಿ ಜಿಲ್ಲೆಗಳಲ್ಲಿ ಟೆಕ್ಸಟೈಲ್‌ ಪಾರ್ಕ್ ನಿರ್ಮಿಸಲಾಗುವುದು ಎಂದರು. 1 ಸಾವಿರ ಎಕರೆಯಲ್ಲಿ 25 ಸಾವಿರ ಯುವಕರಿಗೆ ಉದ್ಯೋಗ ದೊರಕಿಸುವ ಯೋಜನೆಯನ್ನು ಈ ಜಿಲ್ಲೆಗೆ ನೀಡುವುದಾಗಿ ಸಿಎಂ ತಿಳಿಸಿದರು.

ಜನವರಿಯಲ್ಲಿ ಏರ್‌ಫೋರ್ಟ್‌: ವಿಜಯಪುರ ಜಿಲ್ಲೆಯ ಜನತೆಯ ಬಹು ದಿನಗಳ ಕನಸು ನನಸಾಗುತ್ತಿದೆ. ಜನವರಿ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿ, ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡುವ ಸಂಕಲ್ಪ ಮಾಡಿರುವೆ. ಈ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯನ್ನು ಬಲವರ್ಧನೆಗೊಳಿಸುವುದಾಗಿ ಸಿಎಂ ತಿಳಿಸಿದರು.

ನುಡಿದಂತೆ ನಡೆದ ಸರಕಾರ: ನಮ್ಮ ಸರಕಾರ ನುಡಿದಂತೆ ನಡೆಯುವ ಸರಕಾರ, ಮೊದಲಿನ ಸರಕಾರಗಳು ದೇತೂ... ದಿಲಾತು... ದಿಲಾತು.... ಇನ್ನೂ ಸ್ವಲ್ಪ ದಿನ ಹೋದರೆ ದೇನೆ ವಾಲೇ ಕೂ ದಿಖಾತು.... ಎಂದು ಹೇಳುತ್ತಾ ಕಾಲಹರಣ ಮಾಡುತ್ತಿದ್ದವು. ಆದರೆ, ನಮ್ಮ ಸರಕಾರ ನೀಡಿದ ವಾಗ್ದಾನದಂತೆ ನಡೆದುಕೊಳ್ಳುತ್ತಿದೆ. ನಮ್ಮ ಸರಕಾರದ ಜನ ಕಲ್ಯಾಣದ ಕಾರ್ಯಗಳಿಗೆ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಆಶೀರ್ವದಿಸಿ, ಹರಸಬೇಕೆಂದು ಬೊಮ್ಮಾಯಿ ಮನವಿ ಮಾಡಿದರು.


ದೇವರು ಮೆಚ್ಚುವ ಕೆಲಸ: ಶ್ರೀಸಿದ್ದೇಶ್ವರ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿದ ಯತ್ನಾಳ ಅವರ ಕಾರ್ಯ ವೈಖರಿಯನ್ನು ಪ್ರಶಂಸಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ತನ್ಮೂಲಕ ಯತ್ನಾಳರು ದೇವರು ಮೆಚ್ಚುವ ಕೆಲಸ ಮಾಡಿದ್ದಾರೆ ಎಂದು ಬಣ್ಣಿಸಿದರು.

ಅವರ ಈ ಶ್ರೇಷ್ಠ ಕಾರ್ಯ ನನಗೂ ಅನುಕರಣೀಯವಾಗಿದ್ದು, ನಾನು ನಮ್ಮ ಜಿಲ್ಲೆಯಲ್ಲಿರುವ ಟ್ರಸ್ಟ್‌ನಡಿ ಇಂಥ ಕಾರ್ಯಕ್ಕೆ ಕೈ ಹಾಕುವೆ. ನಡೆದಾಡುವ ದೇವರು ಖ್ಯಾತಿಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಹೆಸರನ್ನು ಈ ಆಸ್ಪತ್ರೆಗೆ ಇರಿಸಿರುವುದು ಅರ್ಥಪೂರ್ಣವಾಗಿದೆ. ಅವರ ಹೆಸರು ಹೇಳಿದರೆ ಅರ್ಧ ರೋಗ ನಿವಾರಣೆಯಾಗುತ್ತದೆ ಎಂದರು.

ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಲೋಕೋಪಯೋಗಿ ಇಲಾಖೆ ಸಚಿವ ಸಿ. ಸಿ. ಪಾಟೀಲ, ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ, ವೀರಣ್ಣ ಚರಂತಿಮಠ, ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಅಪ್ಪುಗೌಡ ಪಾಟೀಲ ಮನಗೂಳಿ, ಜಿಪಂ ಸಿಇಒ ರಾಹುಲ್‌ ಶಿಂಧೆ, ಎಸ್ಪಿ ಎಚ್‌. ಡಿ. ಆನಂದ ಕುಮಾರ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮವರ ಸ್ವಾಗತಿಸಿದರು. ಎಚ್‌. ಎ. ಮಮದಾಪುರ, ರಾಜಶೇಖರ ದೈವಾಡಿ ಹಾಗೂ ಹಿರೇಮಠ ನಿರೂಪಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಇತ್ತೀಚಿಗೆ ನಿಧನರಾದ ದಿ. ಉಮೇಶ ಕತ್ತಿಗೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಮೌನ ಆಚರಿಸಲಾಯಿತು. ಜೊತೆಗೆ ವೇದಿಕೆಯಲ್ಲಿರುವ ಗಣ್ಯರಿಗೆ ಪೌರ ಸನ್ಮಾನ, ಆಭಾ ಕಾರ್ಡ್‌ ವಿತರಣೆ ಮತ್ತಿತರ ಕಾರ್ಯಕ್ರಮಗಳು ನಡೆದವು.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ