ಆ್ಯಪ್ನಗರ

ಕೆಲ ಬ್ಯಾಂಕ್‌ಗಳಿಂದ ರೈತರಿಗೆ ಕೊಕ್ಕೆ

ಕೊರೊನಾ ಲಾಕ್‌ಡೌನ್‌ನಿಂದ ರೈತರಿಗೂ ಸಂಕಷ್ಟ ಎದುರಾಗಿದ್ದು, ಈ ಸಮಯದಲ್ಲಿಅನ್ನದಾತರ ನೆರವಿಗೆಂದು ಕೇಂದ್ರ ಸರಕಾರ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ನೆರವಿನ ಬಿಡುಗಡೆ ಮಾಡಿದೆ. ಆದರೆ ಕೆಲ ಬ್ಯಾಂಕ್‌ಗಳು ಸಾಲ ಕಟಬಾಕಿದಾರ ರೈತರಿಗೆ ಯೋಜನೆಯ ಹಣವನ್ನು ಕೊಡದೆ ತಡೆಹಿಡಿಯುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿವೆ.

Vijaya Karnataka Web 19 May 2020, 5:00 am
ಮಂಜುನಾಥ ಕೊಣಸೂರು ವಿಜಯಪುರ : ಕೊರೊನಾ ಲಾಕ್‌ಡೌನ್‌ನಿಂದ ರೈತರಿಗೂ ಸಂಕಷ್ಟ ಎದುರಾಗಿದ್ದು, ಈ ಸಮಯದಲ್ಲಿಅನ್ನದಾತರ ನೆರವಿಗೆಂದು ಕೇಂದ್ರ ಸರಕಾರ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ನೆರವಿನ ಬಿಡುಗಡೆ ಮಾಡಿದೆ. ಆದರೆ ಕೆಲ ಬ್ಯಾಂಕ್‌ಗಳು ಸಾಲ ಕಟಬಾಕಿದಾರ ರೈತರಿಗೆ ಯೋಜನೆಯ ಹಣವನ್ನು ಕೊಡದೆ ತಡೆಹಿಡಿಯುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿವೆ.
Vijaya Karnataka Web hook to farmers from some banks
ಕೆಲ ಬ್ಯಾಂಕ್‌ಗಳಿಂದ ರೈತರಿಗೆ ಕೊಕ್ಕೆ


ಲಾಕ್‌ಡೌನ್‌ನಿಂದಾಗಿ ಕೃಷಿ, ತೋಟಗಾರಿಕೆ ಉತ್ಪನ್ನಗಳು ಮಾರಾಟವಾಗದೆ ಸಂಕಷ್ಟದಲ್ಲಿರುವ ರೈತರಿಗೆ ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಕೇಂದ್ರ ಸರಕಾರ ತಲಾ ರೈತರ ಖಾತೆಗೆ 2 ಸಾವಿರ ರೂ. ಜಮಾ ಮಾಡಿದೆ. ತುರ್ತು ಅಗತ್ಯಕ್ಕೆ ಈ ಹಣವಾದರೂ ನೆರವಿಗೆ ಬಂದಿತೆಂದು ತೆಗೆಯಲು ಬ್ಯಾಂಕಿಗೆ ಹೋಗುತ್ತಿರುವ ರೈತರಿಗೆ ಶಾಕ್‌ ನೀಡಲಾಗುತ್ತಿದೆ. ನೀವು ಸಾಲ ಕಟಬಾಕಿದಾರರಿದ್ದು, ನಿಮ್ಮ ಅಟೌಂಟ್‌ ಮೇಲಿಂದಲೇ ಹೋಲ್ಡ್‌ ಆಗಿದೆ. ಹೀಗಾಗಿ ಕಿಸಾನ್‌ ಸಮ್ಮಾನ್‌ ಯೋಜನೆಯ ಹಣ ನೀಡಲು ಬಾರದು. ಸಾಲ ತುಂಬಿದರೆ ನೆರವಿನ ಹಣ ಕೊಡಲಾಗುವುದು ಎಂದು ರಾಷ್ಟ್ರೀಕೃತ ಸೇರಿದಂತೆ ಕೆಲ ಬ್ಯಾಂಕ್‌ಗಳು ವಾಪಸ್‌ ಕಳುಹಿಸುತ್ತಿವೆ ಎಂದು ನೊಂದ ರೈತರು ದೂರುತ್ತಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕೆಲವು ಗ್ರಾಮಗಳಲ್ಲಿಸಾಲ ಬಾಕಿ ಉಳಿಸಿಕೊಂಡ ರೈತರಿಗೆ ಕಿಸಾನ್‌ ಸಮ್ಮಾನ್‌ ಯೋಜನೆ ನೆರವನ್ನು ಬ್ಯಾಂಕಿನವರು ತಡೆದಿರುವ ಬಗ್ಗೆ ದೂರುಗಳಿವೆ.

ಸಾಲ ಉಳಿಸಿಕೊಂಡ ರೈತರ ಹಣದ ಜತೆಗೆ, ಜಾಮೀನು ನೀಡಿದವರಿಗೆ ಕಿಸಾನ್‌ ಸಮ್ಮಾನ್‌ ಯೋಜನೆ ಹಣವನ್ನೂ ನೀಡದೆ, ನೀವು ಜಾಮೀನು ನೀಡಿದ ರೈತರಿಂದ ಸಾಲ ತುಂಬಿಸಿದರೆ ನಿಮ್ಮ ಖಾತೆಗೆ ಜಮೆ ಆದ ಕೇಂದ್ರ ಸರಕಾರದ ನೆರವಿನ ಹಣ ಕೊಡುವುದಾಗಿ ಬ್ಯಾಂಕಿನವರು ಎಡತಾಕಿಸುತ್ತಿರುವ ಬಗ್ಗೆ ಸಿಂದಗಿ ತಾಲೂಕಿನ ಬೊಮ್ಮನಜೋಗಿ ಸೇರಿದಂತೆ ಮೂರ್ನಾಲ್ಕು ಗ್ರಾಮಗಳ ರೈತರು ಆರೋಪಿಸಿದ್ದಾರೆ.

ಸಿಂದಗಿ ತಾಲೂಕಿನ ಬೊಮ್ಮನಹಳ್ಳಿ, ಕುಮಸಗಿ, ಚಿಕ್ಕಹವಳಗ ಗ್ರಾಮಗಳ ನೂರಕ್ಕೂ ಹೆಚ್ಚು ರೈತರಿಗೆ ಕಿಸಾನ್‌ ಸಮ್ಮಾನ್‌ ಯೋಜನೆಯ ಹಣವನ್ನು ನೀಡದಿರುವ ದೂರುಗಳಿದ್ದರೆ, ಕೆಲ ಜಿಲ್ಲೆಗಳಲ್ಲಿಸಾಲ ಬಾಕಿ ಉಳಿಸಿಕೊಂಡ ರೈತರಿಗೆ ವೃದ್ಧಾಪ್ಯ ವೇತನ, ಸರಕಾರದ ಪರಿಹಾರ, ಬೆಳೆವಿಮೆ ಹಣವನ್ನು ತಡೆಹಿಡಿಯುತ್ತಿರುವ ಬಗ್ಗೆ ಆರೋಪಗಳಿವೆ.

ಸಾಲ ಎಲ್ಲಿಂದ ತುಂಬಲಿ
ಕಳೆದ ವರ್ಷ ಬೆಳೆದ ಕಬ್ಬಿನ ಹಣವವನ್ನು ಕಾರ್ಖಾನೆಯವರು ಆರೇಳು ತಿಂಗಳು ಕಳೆದರೂ ಪಾವತಿ ಮಾಡಿಲ್ಲ. ತೊಗರಿ, ಇತರೆ ಆಹಾರ ಧಾನ್ಯ ಮಾರಿದ ಹಣವೂ ಬಂದಿಲ್ಲ. ಈ ನಡುವೆ ಕೊರೊನಾದಿಂದಾಗಿ ಲಾಕ್‌ಡೌನ್‌ ಆಗಿದ್ದರಿಂದ ನಮ್ಮ ಜೀವನ ಇನ್ನಷ್ಟು ತೊಂದರೆಗೆ ಸಿಲುಕಿದೆ. ಇಂಥ ಪರಿಸ್ಥಿತಿಯಲ್ಲಿ ಸಾಲ ತುಂಬಲಾಗುತ್ತಿಲ್ಲ ಎಂದು ರೈತರು ತಮ್ಮ ಸಂಕಷ್ಟ ತೋಡಿಕೊಳ್ಳುತ್ತಾರೆ.

ಸಂಕಷ್ಟ ಸಮಯದಲ್ಲಿಕೇಂದ್ರ ಸರಕಾರದ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಜಮೆ ಮಾಡಿದ ಹಣವಾದರೂ ನೆರವಿಗೆ ಬರುತ್ತದೆಂದರೆ ಬ್ಯಾಂಕಿನವರು ಸಾಲದ ಕಾರಣಕ್ಕೆ ತಡೆಹಿಡಿದಿದ್ದಾರೆ. ಸಾಲಗಾರರಿಗೆ ಜಾಮೀನು ಹಾಕಿದವರಿಗೂ ಯೋಜನೆಯ ಹಣ ಕೊಡುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರಿಗೆ ನೆರವಿಗೆ ನಾವಿದ್ದೇವೆ ಎನ್ನುತ್ತವೆ. ಆದರೀಗ ಬ್ಯಾಂಕಿನವರು ಕಿಸಾನ್‌ ಸಮ್ಮಾನ್‌ ಯೋಜನೆಯ ತಲಾ 2 ಸಾವಿರ ರೂ.ಹಣಕ್ಕೂ ಕೊಕ್ಕೆ ಹಾಕಿದ್ದರಿಂದ ತೊಂದರೆಯಾಗುತ್ತಿದೆ ಎಂದು ನೂರಾರು ರೈತರು ಗೋಳಿಡುತ್ತಿದ್ದಾರೆ.

ಖಾತೆಯಲ್ಲಿದ್ದ ಹಣಕ್ಕೂ ಕಿರಿಕಿರಿ
ಸಾಲಗಾರ ರೈತರಿಗೆ ಕಿಸಾನ್‌ ಸಮ್ಮಾನ್‌ ಹಣವನ್ನು ತಡೆಹಿಡಿಯುತ್ತಿರುವುದು ಒಂದೆಡೆಯಾದರೆ, ಸಾಲಗಾರರಲ್ಲದ ರೈತರು ತಮ್ಮ ಖಾತೆಯಲ್ಲಿರುವ ಹಣ ಪಡೆಯಲೂ ಬ್ಯಾಂಕುಗಳು ಎಡತಾಕಿಸುತ್ತಿರುವ ಆರೋಪಗಳಿವೆ.

ನಮ್ಮ ಖಾತೆಯಲ್ಲಿ 50 ಸಾವಿರ, ಲಕ್ಷ ಜಮಾ ಇದ್ದರೂ ಹಿಂಪಡೆಯಲು ದಿನಕ್ಕೆ ಕೇವಲ 5 ಸಾವಿರ ರೂ. ಮಿತಿ ಮಾಡಿದ್ದಾರೆ. ಕೆಲ ದಿನಗಳಲ್ಲಿ ಮುಂಗಾರು ಕೃಷಿ ಆರಂಭವಾಗಲಿದ್ದು, ಗೊಬ್ಬರ, ಬಿತ್ತನೆಬೀಜ ಖರೀದಿಸಲು ಹಣ ಬೇಕಿದೆ. ಬಿತ್ತನೆಗೆ ಜಮೀನು ಹದಗೊಳಿಸುವ ಬಿಟ್ಟು ಹಣ ಪಡೆಯಲು ಬ್ಯಾಂಕಿಗೆ ಅಲೆದಾಡುವಂತಾಗಿದೆ ಎಂದು ರೈತರು ದೂರಿದ್ದಾರೆ.

ಕೊರೊನಾ ರೈತರ ಬದಕಿಗೂ ಪೆಟ್ಟು ನೀಡಿದೆ. ಇಂಥ ಸಮಯದಲ್ಲಿ ಸಾಲ ಬಾಕಿ ನೆಪ ಮಾಡಿಕೊಂಡು ಬ್ಯಾಂಕಿನವರು ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ ಹಣವನ್ನು ತಡೆಹಿಡಿಯುತ್ತಿರುವುದು ಸರಿಯಲ್ಲ. ಮಾನವೀಯತೆಯಿಂದಾದರೂ ರೈತರಿಗೆ ಯೋಜನೆಯ ಹಣ ನೀಡಿದರೆ ಅನುಕೂಲವಾಗುತ್ತದೆ.
-ಶರಣು ದೊಡ್ಡಪ್ಪ ಬೊಮ್ಮನಜೋಗಿ, ದೇವರನಾವದಗಿ ಗ್ರಾಮದ ರೈತ

ಪಿಎಂ ಸಮ್ಮಾನ್‌ ಯೋಜನೆಯ ಹಣ, ಹಾಲಿನ ಸಬ್ಸಿಡಿ, ಸ್ವಚ್ಛ ಭಾರತ್‌ ಮಿಷನ್‌ನಡಿ ನಿರ್ಮಿಸಿದ ಶೌಚಾಲಯದ ಹಣ, ಪರಿಹಾರ ಹಣವನ್ನು ಯಾವುದೇ ಬ್ಯಾಂಕ್‌ ತಡೆಹಿಡಿಯುವಂತಿಲ್ಲ. ಈ ಬಗ್ಗೆ ಎಲ್ಲಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ದೂರುಗಳು ಬಂದರೆ ಕ್ರಮ ಕೈಗೊಳ್ಳಲಾಗುವುದು.
ಸೋಮನಗೌಡ ಐನಾಪುರ, ಲೀಡ್‌ ಬ್ಯಾಂಕ್‌ ಮ್ಯಾನೇಜರ್‌, ವಿಜಯಪುರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ