ಆ್ಯಪ್ನಗರ

CM Ibrahim - ಯತ್ನಾಳ ಹಿಂದುತ್ವ ಬಿಟ್ಟು ಬಸವ ತತ್ವ ಪಾಲಿಸಿದರೆ ಸಿಎಂ ಆಗುತ್ತಾರೆ, ಕೇಶವ ತತ್ವ ಇಂಪೋರ್ಟೆಡ್, ಬಸವತತ್ವ ಲೋಕಲ್ :ಸಿಎಂ ಇಬ್ರಾಹಿಂ

ಯತ್ನಾಳ ಮೇಲೆ ನನಗೆ ಭಾರಿ ಪ್ರೀತಿಯಿದೆ. ಯಾವಾಗ ಯತ್ನಾಳ ಹಿಂದುತ್ವ ಬಿಟ್ಟು ಬಸವ ತತ್ವಕ್ಕೆ ಬರುತ್ತಾರೋ ಅಂದು ಅವರು ಈ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ. ಬಸವ ತತ್ವದಲ್ಲಿ ಆ ಶಕ್ತಿ ಇದೆ. ಕೇಶವ ತತ್ವ ಇಂಪೋರ್ಟೆಡ್. ಬಸವ ತತ್ವ ಲೋಕಲ್. ಇಂಪೋರ್ಟೆಡ್ ಬೇಡ. ಲೋಕಲ್ ಆಗಿರಿ ಎಂದಿದ್ದಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ.

Edited byGanesh | Vijaya Karnataka Web 27 Nov 2022, 7:02 pm
ವಿಜಯಪುರ: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಿಂದುತ್ವ ಬಿಟ್ಟು ಬಸವ ತತ್ವ ಪಾಲಿಸಿದರೆ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ. ಎಂ. ಇಬ್ರಾಹಿಂ ಸಲಹೆ ನೀಡಿದ್ದಾರೆ.
Vijaya Karnataka Web Ibrahim
ಸಿಎಂ ಇಬ್ರಾಹಿಂ ಸುದ್ದಿಗೋಷ್ಠಿ


ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 10 ವರ್ಷಗಳ ಹಿಂದೆಯೇ ಯತ್ನಾಳ ಅವರಿಗೆ ಭವಿಷ್ಯ ನುಡಿದಿದ್ದೆ. ನೀವು ಮುಂದೆ ಮುಖ್ಯಮಂತ್ರಿಯಾಗುವ ಸರಕು ಎಂದು ಹೇಳಿದ್ದೆ. ಚಿಲ್ಲರೆಯಾಗಲು ಹೋಗಬೇಡಿ ಎಂದು ಕಿವಿಮಾತು ಹೇಳಿರುವುದಾಗಿ ಅವರು ತಿಳಿಸಿದರು.

ಕೇಶವ ತತ್ವ ಇಂಪೋರ್ಟೆಡ್ ಬಸವ ತತ್ವ ಲೋಕಲ್


ಯತ್ನಾಳ ಮೇಲೆ ನನಗೆ ಭಾರಿ ಪ್ರೀತಿಯಿದೆ. ಯಾವಾಗ ಯತ್ನಾಳ ಹಿಂದುತ್ವ ಬಿಟ್ಟು ಬಸವ ತತ್ವಕ್ಕೆ ಬರುತ್ತಾರೋ ಅಂದು ಅವರು ಈ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ. ಬಸವ ತತ್ವದಲ್ಲಿ ಆ ಶಕ್ತಿ ಇದೆ. ಸಮಗಾರ ಹರಳಯ್ಯ, ಮಾದಾರ ಚನ್ನಯ್ಯ, ಅಂವ ನಮ್ಮ ಅಣ್ಣಯ್ಯ ಓ ಎಂದು ಕರೆಯಿರಿ. ಕೂಡಲ ಸಂಗಮನಾಥ ಎಂದು ಏನು ಬಸವಣ್ಣನವರು ಹೇಳಿದ್ದರೋ ಆ ಭೂಮಿಯಲ್ಲಿ ನೀವು ಹುಟ್ಟಿದ್ದೀರಿ. ಯತ್ನಾಳ ಅವರೇ ಬಸವತತ್ವ ಎತ್ತಿ ಹಿಡಿಯಿರಿ. ಕೇಶವ ತತ್ವ ಇಂಪೋರ್ಟೆಡ್. ಬಸವ ತತ್ವ ಲೋಕಲ್. ಇಂಪೋರ್ಟೆಡ್ ಬೇಡ. ಲೋಕಲ್ ಆಗಿರಿ. ಹೀಗಾಗಿ ಯತ್ನಾಳ ಮೇಲೆ ನನಗೆ ಆವತ್ತೂ ಪ್ರೀತಿ ಇತ್ತು. ಇವತ್ತೂ ಪ್ರೀತಿ ಇದೆ ಎಂದು ಸಿ. ಎಂ. ಇಬ್ರಾಹಿಂ ಹೇಳಿದರು.

ಲಾಲಕೃಷ್ಣ ಅಡ್ವಾಣಿ ನನ್ನ ಜೈಲುಮೇಟ್


ಇದೇ ವೇಳೆ, ಮಾಜಿ ಉಪಪ್ರಧಾನಿ ಎಲ್. ಕೆ. ಅಡ್ವಾಣಿ ಕುರಿತು ಮಾತನಾಡಿದ ಅವರು, ಲಾಲಕೃಷ್ಣ ಅಡ್ವಾಣಿ ನನ್ನ ಜೈಲುಮೇಟ್. ಯಾವಾಗಲೂ ಅವರ ಮನೆಗೆ ಹೋಗುತ್ತಿರುತ್ತೇನೆ. ಜಗನ್ನಾಥರಾವ ಜೋಶಿ ಅವರು ಈಗ ಇಲ್ಲ. ಆದರೂ, ನರಗುಂದಕ್ಕೆ ಹೋದಾಗ ಅವರ ಮನೆಗೆ ನಾನು ಹೋಗುತ್ತಿರುತ್ತೇನೆ. ಇದು ನಮ್ಮಲ್ಲಿರುವ ವಿಶ್ವಾಸ, ನಾವು ಬೆಳೆದು ಬಂದಿರುವ ಸಂಸ್ಕೃತಿಯ ಪ್ರತೀಕವಾಗಿದೆ. ಹೆತ್ತ ಸೂತಕ 10 ದಿನಕ್ಕೆ ತೀರುವುದು. ಸತ್ತ ಸೂತಕ 11ನೇ ದಿನಕ್ಕೆ ತೀರುವುದು. ಹೃದಯ ಎಂಬ ಸೂತಕ ಜನ್ಮಜನ್ಮಾನಂತರದ ಬಂಧನವಯ್ಯ ಎಂದು ಜೆಡಿಎಸ್ ರಾಜ್ಯಾಧ್ಯ್ಕಕ್ಷ ಹೇಳಿದರು.

ನನಗೆ ಮತ್ತು ಜನರಿಗೆ ಇರುವುದು ಋಣದ ಸೂತಕ. ಅದು ಜನ್ಮಜನ್ಮಾಂತರಕ್ಕೆ ಮುಂದುವರೆದುಕೊಂಡು ಹೋಗುತ್ತದೆ. ಅದು ಸುಲಭವಾಗಿ ಹೋಗುವಂಥದ್ದಲ್ಲ. ರಾಜಕಾರಣ ಇವತ್ತು ಇರಬಹುದು. ಹೋಗಬಹುದು. ಅಧಿಕಾರ ಇವತ್ತು ಇರಬಹುದು. ನಾಳೆ ಹೋಗಬಹುದು. ಆದರೆ, ಮನುಷ್ಯನ ಹೆಸರು, ಆತ ಮಾಡಿರುವ ಕಾರ್ಯಗಳು ಶಾಶ್ವತವಾಗಿ ಉಳಿಯಬೇಕು. ಅದೇ ನಮ್ಮ ನಾಡಿನ ಸಂಸ್ಕೃತಿ. ನಮ್ಮ ದೇಶದ ಸಂಸ್ಕೃತಿ ಎಂದು ಅವರು ಹೇಳಿದರು.

ಕಾಂಗ್ರೆಸ್ ಕಾರ್ಯಕ್ರಮದಲ್ಲಿ ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ ವಂದೇ ಮಾತರಂ ಹಾಡನ್ನು ಅರ್ಧಕ್ಕೆ ನಿಲ್ಲಿಸಲು ಹೇಳಿದ್ದಾರೆ ಎಂಬ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅದರ ಬಗ್ಗೆ ನನಗೆ ಗೊತ್ತಿಲ್ಲ. ಅದು ತಪ್ಪು. ವಂದೇ ಮಾತರಂ ರಾಷ್ಟ್ರಗೀತೆ. ವಂದೇ ಮಾತರಂ ನಲ್ಲಿಯೂ ಎರಡು ಇವೆ. ಒಂದು ವಂದೆ ಮಾತರಂ ಅರ್ಧಕ್ಕೆ ನಿಲ್ಲುತ್ತೆ. ಇನ್ನೋಂದು ವಂದೇ ಮಾತರಂ ಪೂರ್ಣವಾಗುತ್ತೆ. ನಾವು ಕಾಂಟ್ರೋವರ್ಸಿಗೆ ಹೋಗುವುದಿಲ್ಲ. ಸತೀಶ ಜಾರಕಿಹೊಳಿ ಯಾವ ರೀತಿ ಕಾಂಟ್ರೋವರ್ಸಿ ಮಾಡಿದರಲ್ಲ. ನಾವು ಹಾಗೆ ಮಾಡುವುದಿಲ್ಲ ಎಂದು ಅವರು ಹೇಳಿದರು.

ಜೆಡಿಎಸ್ ಬಡವರ ಪಕ್ಷ


ಜೆಡಿಎಸ್ ಬಡಪಕ್ಷವಾಗಿದೆ ಎಂದು ತಿಳಿಸಿದ ಸಿ. ಎಂ. ಇಬ್ರಾಹಿಂ, ಜೆಡಿಎಸ್ ನಲ್ಲಿ ನಾಯಕರಾಗಿ ರೂಪುಗೊಂಡ ನಂತರ ಹಲವರು ಬೇರೆ ಪಕ್ಷಗಳಿಗೆ ಸೇರ್ಪಡೆಯಾಗುತ್ತಾರೆ ಎಂಬ ವಿಚಾರದ ಕುರಿತು ಹಾಸ್ಯವಾಗಿ ಪ್ರತಿಕ್ರಿಯೆ ನೀಡಿದರು. ಕನ್ಯಾ ಚೆನ್ನಾಗಿದ್ದು ಬಡವರ ಹುಡುಗಿ ಇದ್ದರೆ ನೋಡುವವರು ತುಂಬಾ ಜನಾ ಇರುತ್ತಾರೆ. ಚುಡಾಯಿಸುವವರು ಸಹ ತುಂಬಾ ಜನ ಇರ್ತಾರೆ. ಬಡತನ, ಬಡವನ ಮನೆಯಲ್ಲಿ ಕುರೂಪಿ ಹೆಣ್ಣು ಕೊಡಬೇಡಾ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುವೆ. ನಮ್ಮಲ್ಲೇ ಕೈ ಹಾಕಿ ನೋಡುತ್ತಾ ಎಂದು ಇತರ ಪಕ್ಷಗಳಿಗೆ ಅವರು ಟಾಂಗ್ ನೀಡಿದರು.

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ನವರು ಹೋಲ್ ಸೇಲ್ ಆಗಿ ಬಿಜೆಪಿಗೆ ಹೋದರು. ಗೋವಾದಲ್ಲಿ ಎಂಟು ಜನರು ಹೋಲ್ ಸೇಲ್ ಆಗಿ ಬಿಜೆಪಿಗೆ ಹೋದರು. ದೊಡ್ಡವರು ಏನು ತಪ್ಪು ಮಾಡಿದರೂ ತಪ್ಪಲ್ಲ. ನಾವು ಸಣ್ಣ ಪಾರ್ಟಿಯವರು. ನಮ್ಮತ್ರ ದುಡ್ಡಿಲ್ಲ. ನಮ್ಮದು ಬಡವರ ಸಣ್ಣ ಪಾರ್ಟಿ. ಕಾಂಗ್ರೆಸ್ಸಿನವರು ದೊಡ್ಡವರು. ದೊಡ್ಡವರು ಹೆಂಡ ಕುಡಿದರೂ ಶೋಕಿಗೆ ಕುಡೀತಾರೆ ಅಂತಾರೆ. ಬಡವ ಕುಡಿದರೆ ಪೋಲಿ ನನ್ಮಗಾ ಕುಡಿತಾನೆ ಅಂತಾರೆ. ಕಾಲಾಯ ತಸ್ಮೈ ನಮಃ ಎಂದು ಅವರು ವ್ಯಂಗ್ಯವಾಡಿದರು.

ಜೆಡಿಎಸ್ ಪಟ್ಟಿ ಸಿದ್ಧ, ರೇವಣ್ಣ ತಿಳಿಸ್ತಾರೆ


2023ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಸಿದ್ಧವಾಗಿದೆ. ಚುನಾವಣೆಗೆ ಸ್ಪರ್ದಿಸುವ ಅಭ್ಯರ್ಥಿಗಳ ಮೊದಲ ಪಟ್ಟಿ ರೆಡಿ ಇದೆ. 70 ರಿಂದ 80 ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಮೊದಲ ಪಟ್ಟಿ ಬಿಡುಗಡೆ ಕುರಿತು ನಮ್ಮ ಗುರುಗಳಾದ ರೇವಣ್ಣನವರು ಹೇಳಿಕೆ ನೀಡಲಿದ್ದಾರೆ ಎಂದು ಇದೇ ವೇಳೆ ಸಿ. ಎಂ.ಇಬ್ರಾಹಿಂ ಸ್ಪಷ್ಟಪಡಿಸಿದರು.
ಲೇಖಕರ ಬಗ್ಗೆ
Ganesh

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ