ಆ್ಯಪ್ನಗರ

ವಿಜಯಪುರ: ಯುವತಿ ನಗ್ನ ಚಿತ್ರ ಹರಿಬಿಟ್ಟಿದ್ದ ಉತ್ತರಾಖಂಡ ಮೂಲದ ಆರೋಪಿ ಬಂಧನ!

ವಿಜಯಪುರದ ಯುವತಿಯೊಂದಿಗೆ ಪ್ರೀತಿಯ ನಾಟಕವಾಡಿ ಆಕೆಯ ನಗ್ನ ಪೋಟೋಗಳನ್ನು ಪಡೆದು ಪೋಟೊಗಳನ್ನು ವಾಟ್ಸಾಪ್ ಗ್ರೂಪ್ ಹಾಗೂ ಇನ್‌ಸ್ಟ್ರಾಗ್ರಾಂಗಳಲ್ಲಿ ಹರಿ ಬಿಟ್ಟಿದ್ದ ಯುವಕನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

Vijaya Karnataka Web 8 Apr 2021, 7:44 pm
ವಿಜಯಪುರ: ಗುಮ್ಮಟ ನಗರಿ ಯುವತಿಗೆ ನಂಬಿಸಿ, ಪ್ರೀತಿಸುವ ನಾಟಕವಾಡಿ, ಆಕೆಯ ನಗ್ನ ಫೋಟೋ ಪಡೆದು, ಅವುಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿದ್ದ ಉತ್ತರಾಖಂಡ ಮೂಲದ ಆರೋಪಿಯನ್ನು ಇಲ್ಲಿನ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಮೂಲತಃ ಉತ್ತರಾಖಂಡ ರಾಜ್ಯದ ಹಾಲಿ ಉತ್ತರಪ್ರದೇಶ ನಿವಾಸಿ ರಾಜೇಂದ್ರಸಿಂಗ್ ಜೀವನಸಿಂಗ್ ಬಿಸ್ಟ್ (21) ಬಂಧಿತ ಆರೋಪಿ.

ಈತ ಕಳೆದ ಕೆಲವು ದಿನಗಳ ಹಿಂದೆ ವಿಜಯಪುರದ ಯುವತಿಗೆ ನಂಬಿಸಿದ್ದ. ಬಳಿಕ ಪ್ರೀತಿಸುತ್ತಿದ್ದೇನೆ ಎಂದು ನಾಟಕವಾಡಿ, ಆಕೆ ನಗ್ನವಾಗಿದ್ದ ಫೋಟೋಗಳನ್ನು ಪಡೆದುಕೊಂಡಿದ್ದ. ಇದರೊಟ್ಟಿಗೆ ಯುವತಿಯ ಜಿ-ಮೇಲ್ ಖಾತೆ ಪಡೆದುಕೊಂಡು, ಅದರಲ್ಲಿರುವ ಸ್ಥಳೀಯರ ಮೊಬೈಲ್ ನಂಬರ್ ಗಳಿಗೆ ಯುವತಿಯ ನಗ್ನ ಪೋಟೊಗಳನ್ನು ವಾಟ್ಸಾಪ್ ಗ್ರೂಪ್ ಹಾಗೂ ಇನ್‌ಸ್ಟ್ರಾಗ್ರಾಂಗಳಲ್ಲಿ ಹರಿ ಬಿಟ್ಟಿದ್ದ ಎಂದು ನೊಂದ ಯುವತಿ ವಿಜಯಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ದೂರಿನನ್ವಯ ಸಿಇಎನ್ ಠಾಣೆ ಪೊಲೀಸರು, ಆರೋಪಿ ವಿರುದ್ಧ ಕಲಂ: 66(ಸಿ) (ಇ) ಐಟಿಆ್ಯಕ್ಟ್ 2000 ಮತ್ತು 292,420 ಐಪಿಸಿನಡಿ ಪ್ರಕರಣ ದಾಖಲಿಸಿಕೊಂಡಿದ್ದರು.

ಪ್ರಕರಣದ ಆರೋಪಿ ಬಂಧನಕ್ಕೆ ರಚಿಸಲಾಗಿದ್ದ ಸಿಇಎನ್ ಠಾಣೆ ವಿಶೇಷ ತಂಡ ಹೊಸದಿಲ್ಲಿ ಹಾಗೂ ಉತ್ತರಪ್ರದೇಶದ ಘಾಜಿಯಾಬಾದ್‌ಗೆ ತೆರಳಿ, ಆರೋಪಿಯನ್ನು ಬಂಧಿಸಿದೆ ಎಂದು ಎಸ್ಪಿ ಅನುಪಮ ಅಗರವಾಲ ತಿಳಿಸಿದ್ದಾರೆ.

ಬಳಿಕ ಆರೋಪಿಯನ್ನು ಹೊಸದಿಲ್ಲಿಯಿಂದ ಹೈದರಾಬಾದ್‌ಗೆ ವಿಮಾನದಲ್ಲಿ ಕರೆತಂದು, ಅಲ್ಲಿಂದ ವಿಜಯಪುರಕ್ಕೆ ಗುರುವಾರ ಕರೆತಂದು, ನ್ಯಾಯಾಂಗ ವಶಕ್ಕೆ ನೀಡಿದ್ದಾಗಿ ಎಸ್ಪಿ ತಿಳಿಸಿದರು.

ಬೇಕು ಎಚ್ಚರಿಕೆ
ಸಾಮಾಜಿಕ ಜಾಲ ತಾಣಗಳಲ್ಲಿ ಅಪರಿಚಿತರೊಂದಿಗೆ ಪರಿಚಯವಾಗಿ, ಮೋಸ ಹೋಗುವವರೇ ಹೆಚ್ಚು. ಹಾಗಾಗಿ ಈ ಪ್ರಕರಣದ ಮೂಲಕ ಯುವಕ-ಯುವತಿಯರು ಎಚ್ಚೆತ್ತುಕೊಳ್ಳಬೇಕೆಂದು ಸೈಬರ್ ಕ್ರೈಂ ಠಾಣೆ ಮೂಲಕ ಮನವಿ ಮಾಡಿಕೊಳ್ಳುವುದಾಗಿ ಎಸ್ಪಿ ತಿಳಿಸಿದರು.

ಸಿಇಎನ್ ಠಾಣೆ ಇನ್ಸ್ ಪೆಕ್ಟರ್ ಸುರೇಶ ಬೆಂಡೆಗುಂಬಳ, ಸಿಬ್ಬಂದಿ ಆರ್. ವಿ. ನಾಯಿಕ, ಎ. ಎಲ್. ದೊಡ್ಡಮನಿ, ಎಂ.ಎಂ. ಕುರುವಿನಶೆಟ್ಟಿ, ಪಿ. ಎಂ. ಪಾಟೀಲ, ಎಸ್. ವಿ. ಮಲಘಾಣ, ಎಸ್. ಐ. ಹೆಬ್ಬಾಳಟ್ಟಿ, ಎಂ. ಎಚ್. ಖಾನೆ, ಎಂ. ಬಿ. ಪಾಟೀಲ, ಎಸ್. ಆರ್. ಬಡಚಿ, ಐ. ಆರ್. ಪಟ್ಟಣಶೆಟ್ಟಿ, ಎಂ.ಎಂ. ಅಂಬಿಗೇರ ಡಿ. ಆರ್. ಪಾಟೀಲ, ಎಸ್. ಆರ್. ಹುಮನಾಬಾದಿ, ಕೆ. ಜೆ. ರಾಠೋಡ, ಎ. ಎಚ್. ಪಾಟೀಲ ಅವರ ಕಾರ್ಯವನ್ನು ಪ್ರಶಂಸಿಸಿದ್ದಾಗಿ ಎಸ್ಪಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ