ಆ್ಯಪ್ನಗರ

ಸೇವಾ ಭದ್ರತೆ ನೀಡಿ, ಕಾಯಂಗೊಳಿಸಿ

ವಿಜಯಪುರ : ಗುತ್ತಿಗೆ ಪದ್ಧತಿಯಡಿ ಜೀತದಾಳಿನಂತೆ ದುಡಿಸಿಕೊಳ್ಳುತ್ತಿರುವ ಆರೋಗ್ಯ ಇಲಾಖೆ ಗುತ್ತಿಗೆ ನೌಕರರಿಗೆ ಹರಿಯಾಣ ಸರಕಾರದ ಮಾದರಿಯಲ್ಲೇ ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ವೇದಿಕೆಯವರು ಮಹಾ ಒಕ್ಕೂಟದ ಸಹಯೋಗದಲ್ಲಿ ಗುರುವಾರ ನಗರದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ, ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.

Vijaya Karnataka 26 Oct 2018, 5:00 am
ವಿಜಯಪುರ : ಗುತ್ತಿಗೆ ಪದ್ಧತಿಯಡಿ ಜೀತದಾಳಿನಂತೆ ದುಡಿಸಿಕೊಳ್ಳುತ್ತಿರುವ ಆರೋಗ್ಯ ಇಲಾಖೆ ಗುತ್ತಿಗೆ ನೌಕರರಿಗೆ ಹರಿಯಾಣ ಸರಕಾರದ ಮಾದರಿಯಲ್ಲೇ ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ವೇದಿಕೆಯವರು ಮಹಾ ಒಕ್ಕೂಟದ ಸಹಯೋಗದಲ್ಲಿ ಗುರುವಾರ ನಗರದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ, ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
Vijaya Karnataka Web provide service security and validate
ಸೇವಾ ಭದ್ರತೆ ನೀಡಿ, ಕಾಯಂಗೊಳಿಸಿ


ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮೆರವಣಿಗೆ ಮೂಲಕ ಹೊರಟ ಗುತ್ತಿಗೆ ನೌಕರರು, ಗಾಂಧಿವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ, ರಾಜ್ಯ ಸರಕಾರದ ವಿರುದ್ಧ ಘೊಷಣೆ ಕೂಗಿದರು. ನಂತರ ಬಸವೇಶ್ವರ, ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದ ಮೂಲಕ ಡಿಸಿ ಕಚೇರಿ ತಲುಪಿದರು.

ಕಾಯಂಗೊಳಿಸಿ:

ಜಿಲ್ಲಾ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸಂಘದ ಉಪಾಧ್ಯಕ್ಷ ರವಿ ಕಿತ್ತೂರ ಮಾತನಾಡಿ, ಹಲವು ವರ್ಷಗಳಿಂದ ಆರೋಗ್ಯ ಇಲಾಖೆಗೆ ತಲೆ ನೋವಾದ ಎಚ್‌ಐವಿ ಏಡ್ಸ್‌, ಕ್ಷಯ, ಎಚ್‌1ಎನ್‌1, ಡೆಂಗೆ ಮತ್ತಿತರ ರೋಗಳನ್ನು ಈ ಗುತ್ತಿಗೆ ನೌಕರರು ಇಲಾಖೆ ನೆರವಿಗೆ ಬಂದು, ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ಆರೋಗ್ಯ ಇಲಾಖೆಯನ್ನು ಬಲಪಡಿಸಿದ್ದಾರೆ. ಆದರೆ ಅದೇ ಇಲಾಖೆ ಹಲವು ವರ್ಷಗಳಿಂದ ನಮ್ಮನ್ನೆಲ್ಲ ಜೀತದಾಳುಗಳಂತೆ ನೋಡುತ್ತಿರುವುದು ನೋವಿನ ಸಂಗತಿ. ಆದ್ದರಿಂದ ನಮ್ಮನ್ನು ಕಾಯಂಗೊಳಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಸೇವಾವಧಿಯ ಅರ್ಧದಷ್ಟು ಕಾಲ ಗುತ್ತಿಗೆ ನೌಕರರಾಗಿ ದುಡಿದಿದ್ದೇವೆ. ಇದ್ದಕ್ಕಿದ್ದಂತೆ ಇಲಾಖೆಗೆ ಸಂಬಂಧವಿಲ್ಲದಂತೆ ಹೊರದೂಡುವ ಮೂಲಕ ಸರಕಾರ ನಮ್ಮನ್ನು ಅಮಾನವೀಯತೆಯಿಂದ ನೋಡಿಕೊಳ್ಳುತ್ತದೆ. ಕೆಲಸದ ವೇಳೆ ತಾರತಮ್ಯ, ಸಂಬಳದ ಅನಿಶ್ಚಿತತೆ, 3 ತಿಂಗಳ ಬಾಂಡ್‌, ವರ್ಷಕ್ಕೊಂದು ದಿನ ಬ್ರೇಕ್‌ ಹೀಗೆ ಬರೀ ಅತಂತ್ರದಲ್ಲೇ ಕಾಲ ಕಳೆಯುತ್ತಿರುವ ನಮ್ಮ ಮೇಲೆ ಸರಕಾರ ತೂಗುಗತ್ತಿ ಬೀಸುವುದನ್ನು ತಕ್ಷಣ ನಿಲ್ಲಿಸಿ, ಕಾಯಂಗೊಳಿಸಿ, ಸೇವಾ ಭದ್ರತೆ ಕಲ್ಪಿಸಬೇಕು. ಇಲಾಖೆಯಲ್ಲಿ ಕಾಯಂ ನೌಕರರಿಗಿಂತ ಗುತ್ತಿಗೆ ನೌಕರರೇ ಹೆಚ್ಚಿನ ಸಂಖ್ಯೆಯಲ್ಲಿದ್ದೇವೆ. 6 ತಿಂಗಳಿಗೊಮ್ಮೆ ಒಪ್ಪಂದದ ಕರಾರು ಪತ್ರ ಬರೆಸಿಕೊಳ್ಳುವ ಮೂಲಕ ಇಲಾಖೆ ನಮ್ಮನ್ನು ಕೀಳಾಗಿ ಕಾಣುತ್ತಿದೆ. ಈ ಗುತ್ತಿಗೆ ಪದ್ಧತಿ ಕಿತ್ತುಹಾಕಿ, ನಮ್ಮ ಸೇವಾವಧಿ ಪರಿಗಣಿಸಿ ಕಾಯಂಗೊಳಿಸಿ ಎಂದು ಒತ್ತಾಯಿಸಿದರು.

ಹರಿಯಾಣ ಮಾದರಿಯಲ್ಲೇ ವೇತನ ಭತ್ಯೆನೀಡಿ:

ವಿಭಾಗೀಯ ಸಂಚಾಲಕ ಶ್ರೀನಾಥ ಪೂಜಾರಿ ಮಾತನಾಡಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಗುತ್ತಿಗೆ ನೌಕರರಿಗೆ ನಿವೃತ್ತಿಯ ವಯಸ್ಸಿನವರೆಗೆ ಸೇವಾ ಭದ್ರತೆ ಕಲ್ಪಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಹರಿಯಾಣ ಸರಕಾರದ ಮಾದರಿಯಲ್ಲೇ ವೇತನ ಭತ್ಯೆ ನೀಡಬೇಕು. ಸರಕಾರಿ ನೌಕರರಿಗೆ ನೀಡುವ ಜ್ಯೋತಿ ಸಂಜೀವಿನಿ, ವೈದ್ಯಕೀಯ ಯೋಜನೆ, ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಗುತ್ತಿಗೆ ನೌಕರರಿಗೆ ಇಲ್ಲವಾಗಿದೆ. ಅದನ್ನು ಜಾರಿ ಮಾಡಬೇಕು. ಗುತ್ತಿಗೆ ನೌಕರರಿಗೆ ಸರಕಾರಿ ನೇಮಕಾತಿಗಳಲ್ಲಿ ವಯಸ್ಸಿನ ಮಿತಿ ವಿಸ್ತರಿಸಬೇಕು. ಸೇವಾ ಅನುಭವಕ್ಕೆ ತಕ್ಕಂತೆ ಸೇವಾಂಕ ನೀಡಬೇಕು ಎಂದು ಆಗ್ರಹಿಸಿದರು.

ನಂತರ ಜಿಲ್ಲಾಧಿಕಾರಿ ಡಾ.ಎಸ್‌.ಬಿ.ಶೆಟ್ಟೆಣ್ಣವರ್‌ ಅವರ ಮೂಲಕ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಅಧ್ಯಕ್ಷ ಮನೋಹರ ಎಸ್‌.ಪಾಟೀಲ, ಪ್ರಧಾನ ಕಾರ್ಯದರ್ಶಿ ರಾಜು ಬೋರಗಿ, ಡಾ. ಪ್ರಸನ್ನಕುಮಾರ ಹಂಪನಗೌಡ, ಮನೋಜಕುಮಾರ ಕೊಂಡಗೂಳಿ, ಸಂಜೀವ್‌ ಅಷ್ಟಪುತ್ರೆ, ವಾಮನೆ, ಶ್ರೀಕಾಂತ ಶೀಲವಂತ, ಪಪ್ಪು ಕೊಂಡಗೂಳಿ, ಧರೆಪ್ಪ ಕಡಬಿ, ಬಾಬುರಾವ ತಳವಾರ, ಭೀಮಾಶಂಕರ ಜಮಾದಾರ, ತೌಸೀಫ್‌ ಕೆರೂರ, ರಫೀಕ್‌ ಬಡೇಘರ, ರಾಜು ಭೋಸಲೆ, ಕೆಂಚಪ್ಪ ಮುರಾರಿ, ರಾಧಾ ಕವಲಗಿ, ಸುಜಾತಾ ಹುಗ್ಗಿ, ಗುರುರಾಜ ಜಾಗೀರದಾರ, ಡಾ.ದೀಪಮಾಲಾ ಪಾಟೀಲ, ಜಾಗೃತಿ ಸಂಘ, ನವಸ್ಫೂರ್ತಿ ಸಂಘ, ಸಂಕಲ್ಪ ಸಂಸ್ಥೆ, ಜಿಲ್ಲಾ ದಲಿತ ಸಂಘಟನೆಗಳು, ಕರ್ನಾಟಕ ರಕ್ಷ ಣಾ ವೇದಿಕೆ, ಸ್ಲಂ ಅಭಿವೃದ್ಧಿ ಸಮಿತಿ, ಅನೌಪಚಾರಿಕ ಶಿಕ್ಷ ಣ ಸಂಸ್ಥೆ ಸೇರಿದಂತೆ ಮುಂತಾದ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ