ವಿಜಯಪುರ: ಅದೊಂದು ವಿರಳ, ವಿಶೇಷ ಸಮಾರಂಭ ಅದಾಗಿತ್ತು. ಅಲ್ಲಿ ವಿಶೇಷ ಸಂಭ್ರಮ ಮೂಡಿತ್ತು. ಅನಾಥ ಮಕ್ಕಳು, ಅಧಿಕಾರಿಗಳು, ನೆರೆದಿದ್ದವರೇ ಅವರಿಬ್ಬರ ಬಂಧುಗಳಾಗಿದ್ದರು. ಎಲ್ಲರೂ ಸೇರಿ ಶುಭ ಹಾರೈಸಿದರು.
ಅಂದಹಾಗೆ ಅದೊಂದು ಅಪರೂಪದ ಮದುವೆ ಸಮಾರಂಭ. ಎಚ್ಐವಿ ಸೋಂಕಿತರಿಬ್ಬರು ಸಪ್ತಪದಿ ತುಳಿದ ಮಹತ್ವದ ಕ್ಷ ಣ. ಅಷ್ಟೇಅಲ್ಲ ಅವರಿಬ್ಬರು 12ನೇ ಶತಮಾನದಲ್ಲೇ ಸಮಾನತೆ ಸಂದೇಶ ಸಾರಿದ ಬಸವನಾಡಿನಲ್ಲಿ ಅಂತರ್ಜಾತಿ ವಿವಾಹವಾದರು. ಈ ವಿಶೇಷ ಕ್ಷಣಕ್ಕೆ ಅನಾಥ ಮಕ್ಕಳು, ಜಿಲ್ಲಾಧಿಕಾರಿ, ಸಾರ್ವಜನಿಕರು ಸಾಕ್ಷಿಯಾದರು.
ವಿಶ್ವ ವಿವಾಹ ದಿನಾಚರಣೆ ನಿಮಿತ್ತ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಎನ್ಜಿಒ ಒಕ್ಕೂಟ, ಟಿ.ಪಿ.ಅಲೆಕ್ಸಾಂಡರ್ ಫೌಂಡೇಷನ್, ಇನ್ಸಾಫ್ ಸಂಸ್ಥೆ, ಆರ್ಫನೇಜ್ ಸಂಸ್ಥೆ, ರೋಟರಿ ಪರಿವಾರ, ಭೃಂಗಿಮಠ ಕಾನೂನು ಕ್ರಿಯಾತ್ಮಕ ವೇದಿಕೆ ಸಹಯೋಗದಲ್ಲಿ ಸೋಮವಾರ ವಿಜಯಪುರದ ಅನಾಥಾಶ್ರಮದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸೋಂಕಿತ ಯುವಕ-ಯುವತಿ ಬಾಳ ಸಂಗಾತಿಗಳಾದರು.
ವಿಜಯಪುರದ ಯುವತಿ(24)ಹುಟ್ಟಿನಿಂದಲೇ ಸೋಂಕಿತೆ. 9ನೇ ತರಗತಿ ಓದಿದ್ದಾರೆ. ತಂದೆತಾಯಿ ಇಬ್ಬರೂ ಎಚ್ಐವಿ ಸೋಂಕಿನಿಂದ ಐದಾರು ವರ್ಷದ ಹಿಂದೆಯೇ ಮೃತಪಟ್ಟಿದ್ದಾರೆ. ಸಾಮಾಜಿಕ ಕಾರ್ಯಕರ್ತ ಪೀಟರ್ ಅಲೆಕ್ಸಾಂಡರ್ ತಮ್ಮ ಫೌಂಡೇಷನ್ ವತಿಯಿಂದಲೇ ವರ್ಷಗಳಿಂದ ಆಶ್ರಯ ನೀಡಿದ್ದಾರೆ.
ಯುವತಿ ಎರಡು ವರ್ಷದ ಹಿಂದೆ ಬೆಂಗಳೂರಿಗೆ ಹೋಗಿ ಬೌರಿಂಗ್ ಆಸ್ಪತ್ರೆಯ ಎಆರ್ಟಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಿ ವಿಜಯಪುರಕ್ಕೆ ಮರಳಿ, ಬಾಲಾಶ್ರಮದಲ್ಲಿ ಆಶ್ರಯ ಪಡೆದಿದ್ದರು. ದಾಂಪತ್ಯ ಜೀವನದ ಕನಸು ಕಂಡಿದ್ದರೂ, ಜೋಡಿ ಸಿಕ್ಕಿರಲ್ಲಿಲ್ಲ.
ಸೋಂಕು ತಗುಲಿಸಿಕೊಂಡಿರುವ ಜಮಖಂಡಿಯ ಯುವಕ (32) ಪಿಯುಸಿ ಓದಿದ್ದಾನೆ. ತಾಯಿ ಇದ್ದಾರೆ. ಎರಡು ಮನೆ ಕೂಡ ಇವೆ. ಭದ್ರತಾ ಕಾವಲುಗಾರನಾಗಿ ಕೆಲಸ ನಿರ್ವಹಿಸುತ್ತಿದ್ದಾನೆ. ತಾನು ಕೂಡ ಮತ್ತೊಬ್ಬರ ಬದುಕಿಗೆ ನೆರವಾಗಬೇಕೆಂಬ ಮಹಾದಾಸೆಯಿಂದ ಸೋಂಕಿತ ಕನ್ಯೆಯ ಹುಡುಕಾಟ ನಡೆಸಿದ್ದ. ಹಾಸನ, ಬೆಳಗಾವಿಯಲ್ಲಿ ನಡೆದ ಸೋಂಕಿತರ ವಧುವರಾನ್ವೇಷಣೆ ಸಮಾವೇಶದಲ್ಲಿ ಪಾಲ್ಗೊಂಡಿದ್ದ. ಅಲ್ಲಿನ ಸಮಾಲೋಚಕರು ತಮ್ಮ ಸಿಬ್ಬಂದಿಯ ಮಾಹಿತಿ ನೀಡಿದ್ದರು.
ಹುಡುಗಿ ಹುಡುಕಾಟದಲ್ಲಿದ್ದ ಯುವಕ ವಿಜಯಪುರದ ಆಪ್ತ ಸಮಾಲೋಚಕ ರವಿ ಕಿತ್ತೂರ ಅವರನ್ನು ಸಂಪರ್ಕಿಸಿದಾಗ, ರವಿ ಕಿತ್ತೂರ ಅವರು ವಿಜಯಪುರದ ಹುಡುಗಿಯನ್ನು ತೋರಿಸಿದ್ದಾರೆ. ಕೊನೆಗೆ ಪರಸ್ಪರರಿಗೆ ಇಷ್ಟವಾಗಿ ವಿವಾಹ ಬಂಧನಕ್ಕೊಳಗಾದರು.
ಯುವತಿ ಪರ ಪೀಟರ್ ಅಲೆಕ್ಸಾಂಡರ್ ಪೋಷಕರಾದರೆ, ಯುವಕನ ಪರವಾಗಿ ಆತನ ತಾಯಿ ಪಾಲ್ಗೊಂಡಿದ್ದರು. ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ವಿ.ಜಿ.ಉಪಾಧ್ಯೆ ಅರ್ಚಕನ ಪಾತ್ರ ನಿರ್ವಹಿಸಿದರು. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಸಂಘ ಸಂಸ್ಥೆಯವರು ಉಪಸ್ಥಿತರಿದ್ದು ಶುಭ ಕೋರಿದರು. ಮೊದಲ ಬಾರಿಗೆ ಜಿಲ್ಲಾಡಳಿತದ ಸಾಕ್ಷಿಯಲ್ಲಿ, ಎಆರ್ಟಿ ಕೇಂದ್ರದ ಪೌರೋಹಿತ್ಯದಲ್ಲಿ ಬಾಲಾಶ್ರಮದಲ್ಲಿ ವಿವಾಹ ನಡೆಸಿದ್ದೇವೆ.
ಜಿಲ್ಲಾಸ್ಪತ್ರೆಯ ಎಆರ್ಟಿ ಕೇಂದ್ರದ ಪೌರೋಹಿತ್ಯದಲ್ಲಿ ಇದುವರೆಗೆ ಸೋಂಕಿತರ 25ನೇ ವಿವಾಹ ನಡೆಸಿದ್ದೇವೆ. ರಜತ ಮಹೋತ್ಸವದ ಸಡಗರವನ್ನು ಪರಸ್ಪರರನ್ನು ಪ್ರೀತಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ವಿಶ್ವ ವಿವಾಹ ದಿನಾಚರಣೆಯಂದೇ ನಡೆಸುತ್ತಿದ್ದೇವೆ ಎಂದು ಎಆರ್ಟಿ ಕೇಂದ್ರದ ಆಪ್ತ ಸಮಾಲೋಚಕ ರವಿ ಕಿತ್ತೂರ ಮಾಹಿತಿ ತಿಳಿಸಿದರು.
ಇದೂವರೆಗೂ 24 ಸೋಂಕಿತ ಜೋಡಿಗಳಲ್ಲಿ 8 ಜೋಡಿ ಸೋಂಕಿಲ್ಲದ ಆರೋಗ್ಯವಂತ ಮಗುವನ್ನು ಪಡೆದಿದ್ದಾರೆ. ಸಮಾಜದಲ್ಲಿ ಎಲ್ಲರಂತೆಯೇ ದಾಂಪತ್ಯ ಜೀವನವನ್ನು ಸಾಗಿಸುತ್ತಿದ್ದಾರೆ ಎಂದರು.