ವಿಜಯಪುರ: ಒಂದ್ಕಡೆ ಕೊರೆಯುವ ಚಳಿ ಲೆಕ್ಕಿಸದೇ ದೇವಿಯ ದರ್ಶನಕ್ಕೆ ಹೋಗ್ತಿರೋ ಭಕ್ತರು.. ಇನ್ನೊಂದ್ಕಡೆ ಮಾರ್ಗದುದ್ದಕ್ಕೂ ಕೇಸರಿ ಧ್ವಜ, ಕೇಸರಿ ಶಾಲು, ತಲೆಗೆ ರುಮಾಲು ಸುತ್ತಿಕೊಂಡು ಹೋಗ್ತಿರೋ ಜನರು.. ಈ ದೃಶ್ಯಗಳು ಕಂಡು ಬಂದಿದ್ದು, ಮಹಾರಾಷ್ಟ್ರದ ತುಳಜಾಪುರದ ತುಳಜಾ ಭವಾನಿ ದೇವಸ್ಥಾನದ ಬಳಿ.. ಮಹಾರಾಷ್ಟ್ರದಲ್ಲಿ ನೆಲೆಸಿದ್ದರೂ ಈ ದೇವಿಗೆ ಕರ್ನಾಟಕದ ಭಕ್ತರೇ ಹೆಚ್ಚಿನ ಆರಾಧಕರು..
ವಿಜಯದಶಮಿಯಂದು ಕುಕ್ಕುರ ರಕ್ಕಸನ ಜೊತೆಗಿನ ಯುದ್ದದಲ್ಲಿ ಜಯ ಸಾಧಿಸಿದ ಬಳಿಕ ವಿಶ್ರಾಂತಿಗೆ ಜಾರುವ ದೇವಿ, ಐದು ದಿನಗಳ ಬಳಿಕ ನಿದ್ರೆಯಿಂದ ಎಚ್ಚರಗೊಳ್ಳುತ್ತಾಳೆ ಎಂಬ ಪ್ರತೀತಿ ಇದೆ. ಈ ಹಿನ್ನೆಲೆ ದೇವಿಗೆ ವಿಶೇಷ ಅಭಿಷೇಕ ನಡೆಯುತ್ತೆ. ಈ ಅಭಿಷೇಕದಲ್ಲಿ ಭಾಗವಹಿಸಲು ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಸೇರಿ ನಾನಾ ರಾಜ್ಯಗಳಿಂದ ಭಕ್ತರು ಪಾದಯಾತ್ರೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ.
ದಸರಾ ನಿಮಿತ್ತ ಒಂಬತ್ತು ದಿನಗಳ ಕಾಲ ದೇವಿಯ ಒಂಬತ್ತು ಬಗೆಯ ಅವತಾರಗಳಲ್ಲಿ ಪೂಜಿಸಿದ ಬಳಿಕ ತುಳಜಾಪುರದ ಭವಾನಿ ಮಾತೆಯ ದರ್ಶನಕ್ಕೆ ಭಕ್ತರು ಪಾದಯಾತ್ರೆ ಹೊರಟಿದ್ದಾರೆ. ಮಾರ್ಗದುದ್ದಕ್ಕೂ ಕೇಸರಿ ಧ್ವಜ, ಕೇಸರಿ ಶಾಲು, ತಲೆಗೆ ರುಮಾಲು, ಪಲ್ಲಕ್ಕಿ ಹೊತ್ತು, ಕೈಯಲ್ಲಿ ತರಹೇವಾರಿ ಸಂಗೀತ ಸಲಕರಣೆಗಳನ್ನು ಹಿಡಿದು ಹೊರಡುವ ಭಕ್ತರು, ಆಯಿ ರಾಧಾ ಉಧೇ.. ಉಧೇ.. ಉಧೇ... ಎಂದು ಜೈಕಾರ ಹಾಕುತ್ತಿರುವ ದೃಶ್ಯಗಳು ಗಮನ ಸೆಳೆಯುತ್ತಿವೆ.
ಮಹಾರಾಷ್ಟ್ರದ ಸೋಲಾಪುರದ ರೂಪಾ ಭವಾನಿ ಮಂದಿರದಿಂದ ಸಾಗುವ ಪಾದಯಾತ್ರಿಕರಿಗೆ ಮಾರ್ಗ ಮಧ್ಯೆ ನಾನಾ ಗ್ರಾಮಸ್ಥರು, ಭಕ್ತಾದಿಗಳು ಪ್ರಸಾದ, ನೀರು, ಹಣ್ಣು ಹಂಪಲು ವಿತರಿಸುತ್ತಾರೆ. ಈಗ ಭವಾನಿ ಅಭಿಷೇಕ್ ನೆರವೇರಿದೆ. ತುಳಜಾಭವಾನಿ ದೇವಸ್ಥಾನ ಸುತ್ತಲೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಪಾದಯಾತ್ರಿಕರ ಸುರಕ್ಷತೆಗೆ ಮಹಾರಾಷ್ಟ್ರ ಸರಕಾರ ಬಿಗಿ ಪೊಲೀಸ್ ಬಂದೋಬಸ್ತ್ ಸೇರಿದಂತೆ ಇತರ ವ್ಯವಸ್ಥೆ ಮಾಡಿದೆ. ಹೀಗಾಗಿ ಸಂತಸದಿಂದ, ಭಕ್ತಿಯಿಂದ ಪಾದಯಾತ್ರೆ ಮಾಡುತ್ತಿದ್ದೇವೆ ಎನ್ನುತ್ತಾರೆ ಕುಂದಾನಗರಿ ಬೆಳಗಾವಿಯ ಭಕ್ತರು.