ಆ್ಯಪ್ನಗರ

ತ್ರೀ ಎಚ್‌ಎಂ ಕೈಯಲ್ಲಿ ‘ಪರಿಹಾರ’ ಸೂತ್ರ

ವಿಜಯಪುರ : ಬರೋಬ್ಬರಿ ನಾಲ್ಕೂವರೆ ತಿಂಗಳ ನಂತರ ಜಿಲ್ಲಾ ಉಸ್ತುವಾರಿ ಸಚಿವ ಅಧ್ಯಕ್ಷತೆ ತ್ರೈಮಾಸಿಕ ಕೆಡಿಪಿ ಸಭೆ ಜೂ.29ರಂದು ನಡೆಯುತ್ತಿದ್ದು , ಭೀಕರ ಬರದಿಂದ ತತ್ತರಿಸಿದ ಜಿಲ್ಲೆಯ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆಯೇ ಎಂದು ಜನರು ಎದುರು ನೋಡುತ್ತಿದ್ದಾರೆ.

Vijaya Karnataka 29 Jun 2019, 5:00 am
ಮಂಜುನಾಥ ಕೊಣಸೂರು, ವಿಜಯಪುರ
Vijaya Karnataka Web three hms handy solution formula
ತ್ರೀ ಎಚ್‌ಎಂ ಕೈಯಲ್ಲಿ ‘ಪರಿಹಾರ’ ಸೂತ್ರ


ಬರೋಬ್ಬರಿ ನಾಲ್ಕೂವರೆ ತಿಂಗಳ ನಂತರ ಜಿಲ್ಲಾ ಉಸ್ತುವಾರಿ ಸಚಿವ ಅಧ್ಯಕ್ಷತೆ ತ್ರೈಮಾಸಿಕ ಕೆಡಿಪಿ ಸಭೆ ಜೂ.29ರಂದು ನಡೆಯುತ್ತಿದ್ದು , ಭೀಕರ ಬರದಿಂದ ತತ್ತರಿಸಿದ ಜಿಲ್ಲೆಯ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆಯೇ ಎಂದು ಜನರು ಎದುರು ನೋಡುತ್ತಿದ್ದಾರೆ.

ಲೋಕಸಭೆ ಚುನಾವಣೆ ಬಳಿಕ ನಡೆಯುತ್ತಿರುವ ಕೆಡಿಪಿ ಸಭೆಯಲ್ಲಾದರೂ ನಿಂಬೆ ರೈತರಿಗೆ ಪರಿಹಾರ, ನನೆಗುದಿಗೆ ಬಿದ್ದ ವಿಮಾನ ನಿಲ್ದಾಣ, ಸ್ಥಗಿತಗೊಂಡ ನೀರಾವರಿ ಯೋಜನೆಗಳ ಕಾಮಗಾರಿಗೆ ಮರುಚಾಲನೆ ನೀಡುವ ಕುರಿತು ದಿಟ್ಟ ನಿರ್ಧಾರ ಕೈಗೊಳ್ಳಬೇಕೆಂಬ ಬೇಡಿಕೆ ಜನರಿಟ್ಟಿದ್ದಾರೆ.

ನಿಂಬೆ ರೈತರು ಕಂಗಾಲು :

ಕಳೆದ ವರ್ಷ ಭೀಕರ ಬರದಿಂದಾಗಿ ಒಣಗುತ್ತಿದ್ದ ನಿಂಬೆ ಬೆಳೆ ಉಳಿಸಿಕೊಳ್ಳಲು ರೈತರು ಟ್ಯಾಂಕರ್‌ ನೀರು ಪೂರೈಕೆ ಮಾಡಿದ್ದರು. ಈ ರೈತರಿಗೆ ನಿಂಬೆ ಅಭಿವೃದ್ಧಿ ಮಂಡಳಿಗೆ ಬಂದ ಅನುದಾನದಲ್ಲಿ 1.50 ಕೋಟಿಯನ್ನು ಪರಿಹಾರವನ್ನಾಗಿ ವಿತರಿಸಲು ಜಿಲ್ಲಾಡಳಿತ ನಿರ್ಧರಿಸಿತ್ತು. ಕಳೆದ ಫೆ.4ರಂದು ನಡೆದ ಕೆಡಿಪಿ ಸಭೆಯಲ್ಲಿ

ನಿಂಬೆ ರೈತರಿಗೆ ಪರಿಹಾರ ವಿತರಣೆಗೆ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಲಾಗಿದೆ ಎಂದು ಅಧಿಕಾರಿಗಳು ಉತ್ತರಿಸಿದ್ದರು. ಆದರೆ ಇದುವರೆಗೆ ರೈತರಿಗೆ ಪರಿಹಾರ ವಿತರಣೆಯಾಗಿಲ್ಲ.

ಕಳೆದ ವರ್ಷದ ಮುಂಗಾರು ಬೆಳೆಹಾನಿ ಪರಿಹಾರ ತಡವಾಗಿಯಾದರೂ ಬಂದಿರುವುದು ಸಮಧಾನಕರ ಸಂಗತಿಯಾದರೂ, ಭೀಕರ ಬರದಲ್ಲಿ ನಿಂಬೆ ಗಿಡಗಳು ಒಣಗುತ್ತಿರುವುದನ್ನು ನೋಡಲಾಗದೆ ರೈತರು ನೀರು ಖರೀದಿಸಿ ಪೂರೈಸಿದ್ದರು. ಮಹಾರಾಷ್ಟ್ರ ಮಾದರಿಯಲ್ಲಿ ನಿಂಬೆ ರೈತರಿಗೆ ವಿಶೇಷ ಪ್ರಕರಣದಡಿ ಪರಿಹಾರ ಕೊಡಬೇಕೆಂದು ಶಾಸಕ ಯಶವಂತರಾಗೌಡ ಪಾಟೀಲ ಕಳೆದ ಕೆಡಿಪಿ ಸಭೆ, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಹಾಗೂ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಬರ ಅಧ್ಯಯನಕ್ಕೆ ಬಂದಾಗ ಮನವಿ ಮಾಡಿಕೊಂಡಿದ್ದರು. ಆದರೆ ನಿಂಬೆ ರೈತರಿಗೆ ವಿಶೇಷ ಪ್ಯಾಕೇಜ್‌ ಸಿಕ್ಕಿಲ್ಲ. ಹೀಗಾಗಿ ಶಾಸಕ ಯಶವಂತರಾಯಗೌಡರು ಶನಿವಾರದ ಕೆಡಿಪಿ ಸಭೆಯಲ್ಲಿ ರೈತರ ಪರ ಪ್ರಬಲ ಧ್ವನಿ ಎತ್ತುವ ಸಾಧ್ಯತೆ ಇದೆ.

ಏರ್‌ಪೋರ್ಟ್‌ಗೆ ಹಣ ಕೊಡಿ :

ನನೆಗುದಿಗೆ ಬಿದ್ದ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಬೇಕೆಂಬುದು ಜನತೆ, ಜನಪ್ರತಿನಿಧಿಗಳ ಬೇಡಿಕೆಯಾಗಿದೆ. ಆದರೆ, ರಾಜ್ಯ ಸರಕಾರ ತನ್ನ ಪಾಲಿನ 50 ಕೋಟಿ ಅನುದಾನ ಕೊಡದ ಕಾರಣ ಕಾಮಗಾರಿ ಟೇಕಾಫ್‌ ಆಗಿಲ್ಲ. ರಾಜ್ಯ ಸರಕಾರ ಕೇಂದ್ರದ ಮೇಲೆ, ಕೇಂದ್ರ ರಾಜ್ಯದತ್ತ ಬೆರಳು ತೋರಿಸುತ್ತಿವೆ. ಆದರೆ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ವಿಮಾನ ನಿಲ್ದಾಣ ಇಲ್ಲದಿರುವುದರಿಂದಲೂ ಜಿಲ್ಲೆಯ ಪ್ರವಾಸೋದ್ಯಮ, ಔದ್ಯೋಗಿಕ ಕ್ಷೇತ್ರ ಬೆಳವಣಿಗೆಯಾಗುತ್ತಿಲ್ಲ ಎಂಬ ಅಂಶ ಜನಪ್ರತಿನಿಧಿಗಳಿಗೆ ಗೊತ್ತಿದ್ದರೂ ಸುಮ್ಮನಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅದಕ್ಕಾಗಿ ವಿಮಾನ ನಿಲ್ದಾಣದ ಬಗ್ಗೆ ಕೆಡಿಪಿ ಸಭೆಯಲ್ಲಿ ನಿರ್ಣಯ ಕೈಗಳ್ಳಬೇಕೆಂಬ ಬೇಡಿಕೆ ಇದೆ.

ಬಗೆಹರಿಯದ ನೀರಿನ ಸಮಸ್ಯೆ :

ಪ್ರಸಕ್ತ ಸಾಲಿನ ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಕಳೆದ ವಾರ ಸುರಿದ ಮಳೆಯಿಂದಾಗಿ ಕುಡಿಯುವ ನೀರಿನ ಹಾಹಾಕಾರಕ್ಕೆ ಅಲ್ಪ ಮಟ್ಟದ ಪರಿಹಾರ ಸಿಕ್ಕಿದೆ. ಜೂನ್‌ ತಿಂಗಳು ಕಳೆಯುತ್ತಿದ್ದರೂ ಟ್ಯಾಂಕರ್‌ ನೀರು ಪೂರೈಕೆ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ಮಳೆ ಆಗದಿದ್ದರೆ ಮತ್ತೆ ಬರ ಆವರಿಸುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು. ಅದಕ್ಕಾಗಿ ಜಿಲ್ಲಾಡಳಿತ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕಾಗಿದೆ.

ನೀರಿನ ಸಮಸ್ಯೆಗೆ ಮುಂಜಾಗ್ರತಾ ಕ್ರಮವಾಗಿ ಕೆರೆ ತುಂಬುವ ಯೋಜನೆ, ಬಹುಹಳ್ಳಿ ಕುಡಿಯುವ ಯೋಜನೆಗಳ ಅನುಷ್ಠಾನದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಹಾಗೂ ಶಾಸಕರು ಸಮಗ್ರವಾಗಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳೇಕೆಂಬುದು ಜಿಲ್ಲೆಯ ಜನತೆಯ ಆಗ್ರಹ.

ಬಾರದ ಹಿಂಗಾರು ಪರಿಹಾರ :

ಕಳೆದ ವರ್ಷ ಭೀಕರ ಬರದಿಂದ ಮುಂಗಾರು ಹಾಗೂ ಹಿಂಗಾರು ಬೆಳೆಗಳೆರಡು ಬಾರದೆ ರೈತರು ನಷ್ಟ ಅನುಭವಿಸಿದ್ದರು. ಕಳೆದ ವಾರದಲ್ಲದೇ ಮುಂಗಾರು ಬೆಳೆ ಹಾನಿ ಪರಿಹಾರ ಬಿಡುಗಡೆಯಾಗಿದೆ. ಆದರೆ ಹಿಂಗಾರು ಪರಿಹಾರ ಯಾವಾಗ ಎಂಬ ಪ್ರಶ್ನೆ ಕೃಷಿಕರಿಂದ ವ್ಯಕ್ತವಾಗಿದೆ.

ಜಿಲ್ಲೆಯಿಂದ ಮೂವರು ಎಚ್‌ಎಂ (ಹೋಮ್‌ ಮಿನಿಸ್ಟರ್‌, ಹೆಲ್ತ್‌ ಮಿನಿಸ್ಟರ್‌ ಹಾಗೂ ಹಾರ್ಟಿಕಲ್ಚರ್‌ ಮಿನಿಸ್ಟರ್‌)ಗಳಿದ್ದು , ಈ ಮೂವರು ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಬೇಕು. ಇವರಿಗೆ ಶಾಸಕರೂ ಕೈಜೋಡಿಸಬೇಕು. ಅದಕ್ಕಾಗಿ ಕೆಡಿಪಿ ಸಭೆಗೆ ಸಚಿಯತ್ರಯರು, ಶಾಸಕರು ಭಾಗವಹಿಸಿ, ಜಿಲ್ಲೆಯ ಗಂಭೀರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಪ್ರಯತ್ನ ಮಾಡಬೇಕೆಂಬುದು ಜನತೆಯ ನಿರೀಕ್ಷೆಯಾಗಿದೆ.

----------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ