ವಿಜಯಪುರ: ಮರಾಠಾ ಸಮಾಜವನ್ನು ಪ್ರವರ್ಗ 2 ಎಗೆ ಸೇರ್ಪಡೆ ಮಾಡಬೇಕು. ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಸ್ಮಾರಕ ಸ್ಥಾಪನೆ ಹಾಗೂ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಜೀಜಾಮಾತಾ ಅಧ್ಯಯನ ಪೀಠ ಸ್ಥಾಪಿಸಬೇಕೆಂಬಿತ್ಯಾದಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮರಾಠಾ ಸಮಾಜ ಬಾಂಧವರು ಇಲ್ಲಿನ ಶಿವಾಜಿ ವೃತ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಪ್ರತಿಕೃತಿ ದಹಿಸಿ, ಬೊಬ್ಬೆ ಹಾಕುವ ಮೂಲಕ ಪ್ರತಿಭಟನೆ ನಡೆಸಿದರು.
ಕರ್ನಾಟಕದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮರಾಠಾ ಸಮಾಜವು ಶೈಕ್ಷ ಣಿಕ, ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ. ಈ ಸಮಾಜವನ್ನು 2ಎಗೆ ಸೇರ್ಪಡೆಗೊಳಿಸಬೇಕೆಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಮಾಜ ಬಾಂಧವರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ 2017ರ ಫೆ. 6ರಂದು ಮನವಿ ಸಲ್ಲಿಸಿದ್ದೇವೆ. ಆದಾಗ್ಯೂ ಇವರಿಬ್ಬರೂ ಸಮಾಜ ಬಾಂಧವರ ಮನವಿಗೆ ಕ್ಯಾರೆ ಎಂದಿಲ್ಲ ಎಂದು ಸಮಾಜ ಬಾಂಧವರು ಆಕ್ರೋಶ ವ್ಯಕ್ತಪಡಿಸಿದರು.
ಮರಾಠಾ ಸಮಾಜದ ಇವೆಲ್ಲ ಬೇಡಿಕೆಗಳ ಈಡೇರಿಕೆಗೆ ಮೇಲಿಂದ ಮೇಲೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸಚಿವ ಎಂ.ಬಿ. ಪಾಟೀಲ ಸರಕಾರದಲ್ಲಿ ಪ್ರಭಾವಿಯಾಗಿದ್ದರೂ, ನಮ್ಮ ಸಮಾಜದ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೇಲಾಗಿ ಸರಕಾರದ ಮಟ್ಟದಲ್ಲಿಯೂ ಚರ್ಚಿಸಿಲ್ಲ ಎಂದು ಮುಖಂಡರು ಆರೋಪಿಸಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಬಬಲೇಶ್ವರ ಮತಕ್ಷೇತ್ರದಲ್ಲಿ ಸಮಾಜದ ಬಾಂಧವರು ಸಚಿವರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂಬ ಎಚ್ಚರಿಕೆ ನೀಡಿದರು.
ಫೆ.16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ನಲ್ಲಿ ನಮ್ಮ ಸಮಾಜಕ್ಕೆ ಅನುದಾನ ಮೀಸಲಿಡದೇ ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಹಾಗಾಗಿ ಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯ ಸರಕಾರಕ್ಕೆ ಸಮಾಜ ಬಾಂಧವರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ ಅವರು, ಮುಂಬರುವ ದಿನಗಳಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯ ರಾಹುಲ ಜಾಧವ, ಪ್ರಭಾಕರ ಭೋಸಲೆ, ತಾನಾಜಿ ಜಾಧವ, ಶಂಕರ ಕನಸೆ, ವಿಜಯ ಚೌಹಾಣ್, ಭೀಮಾಶಂಕರ ಶಿವಳಕರ, ಮೋಹನ ಕೋರವಾರ, ಚಂದ್ರಕಾಂತ ಪವಾರ, ಅರವಿಂದ ಜಾಧವ, ಸುರೇಶ ಸಂಕಪಾಳ, ವಿಜಯ ಪವಾರ, ರಾಜು ಮೋರೆ, ಸಂಜಯ ಜಾಧವ, ಕಿಶೋರ ದೋಕಡೆ, ಅನೀಲ ಗಾಯಕವಾಡ, ಲಕ್ಷ ್ಮಣ ಜಾಧವ, ದಿಲೀಪ ಚೌಹಾಣ್, ಜ್ಯೋತಿಬಾ ಕನಸೆ, ಗಜಾನಂದ ಚೌಹಾಣ್, ಉಮೇಶ ಚೌಹಾಣ್, ಸತೀಶ ಡೋಬಳೆ, ಹರಿಬಾ ಮೋರೆ, ಸಂಬಾಜಿ ಮಾನೆ, ಉದಯ ಸಾಳುಂಕೆ, ಅನೀಲ ಚೌಹಾಣ್, ಸದಾಶಿವ ಕದಂ, ಸಾಗರ ದೇಶಮುಖ, ವಿಕಾಸ ಚೌಹಾಣ್, ಮಹಾದೇವ ಪವಾರ, ಮೋಹನ ತಾಟೆ ಮತ್ತಿತರರಿದ್ದರು.