ಆ್ಯಪ್ನಗರ

ಎಂಎಲ್‌ಸಿ ಮಾಡಲು 25 ಕೋಟಿ ರೂ. ಕೇಳಿದ್ದ ಕುಮಾರಸ್ವಾಮಿ: ವಿಜುಗೌಡ ಪಾಟೀಲ್

ನನಗೆ ಎಂಎಲ್‌ಸಿ ಆದರೂ ಮಾಡಬೇಕು ಎಂದು ಮತಕ್ಷೇತ್ರದ ಜನತೆ ಕುಮಾರಸ್ವಾಮಿ ಅವರಿಗೆ ಒತ್ತಡ ಹಾಕಿದಾಗ 25 ಕೋಟಿ ರೂ. ಹಣದ ಬೇಡಿಕೆಯನ್ನು ಇಟ್ಟಿದ್ದರು ಎಂದು ಬಹಿರಂಗಪಡಿಸಿದ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ.

Vijaya Karnataka Web 9 Feb 2019, 4:49 pm
ವಿಜಯಪುರ: ನನ್ನನ್ನು ಪರಿಷತ್ ಸದಸ್ಯನನ್ನಾಗಿ ಮಾಡಲು ಈ ಹಿಂದೆ ಎಚ್. ಡಿ. ಕುಮಾರಸ್ವಾಮಿ 25 ಕೋಟಿ ರೂ. ಬೇಡಿಕೆ ಇಟ್ಟಿದ್ದರು ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಆರೋಪಿಸಿದ್ದಾರೆ.
Vijaya Karnataka Web VijuGowda


ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಜೆಡಿಎಸ್ ಪಕ್ಷದಲ್ಲಿ ಇದ್ದಾಗ ಚುನಾವಣಾ ಸಂದರ್ಭದಲ್ಲಿ ನನ್ನ ಪರ ಪ್ರಚಾರಕ್ಕೆ ಕುಮಾರಸ್ವಾಮಿ ಆಗಮಿಸಲಿಲ್ಲ, ನಾನು 2 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋತೆ, ಕೊನೆಗೆ ನನಗೆ ಎಂಎಲ್‌ಸಿ ಆದರೂ ಮಾಡಬೇಕು ಎಂದು ಮತಕ್ಷೇತ್ರದ ಜನತೆ ಕುಮಾರಸ್ವಾಮಿ ಅವರಿಗೆ ಒತ್ತಡ ಹಾಕಿದಾಗ 25 ಕೋಟಿ ರೂ. ಹಣದ ಬೇಡಿಕೆಯನ್ನು ಇಟ್ಟಿದ್ದರು ಎಂದು ಬಹಿರಂಗಪಡಿಸಿದರು.

ನಾಗಠಾಣ ಮೀಸಲು ಮತಕ್ಷೇತ್ರದ ಶಾಸಕ ದೇವಾನಂದ್ ಚೌಹಾಣ್ ಅವರಿಗೆ ನಾನು ಬಿಜೆಪಿ ಸೇರುವಂತೆ ಧಮ್ಕಿ ಹಾಕಿದ್ದೇನೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ನಾನು ಅವರಿಗೆ ಧಮ್ಕಿ ಹಾಕಿದ್ದರ ಕುರಿತು ಎನಾದರೂ ದಾಖಲೆಗಳಿದ್ದರೆ ಪ್ರಸ್ತುತ ಪಡಿಸಲಿ, ಬೇಕಾದರೆ ಮುಖಾಮುಖಿ ಚರ್ಚೆಗೂ ಬರಲಿ ಅದಕ್ಕೂ ನಾನು ಸಿದ್ಧ ಎಂದು ವಿಜುಗೌಡ ಪಾಟೀಲ ಸವಾಲು ಹಾಕಿದರು.

ಸುಖಾಸುಮ್ಮನೆ ಆರೋಪ ಮಾಡುವುದು ಸೂಕ್ತವಲ್ಲ. ಕುಮಾರಸ್ವಾಮಿ ಅವರಿಗೆ ನಾನು ತುಂಬಾ ಆಪ್ತನಾಗಿದ್ದೆ, ಅವರ ಮಗ ನಿಖಿಲ್‌ ಗೌಡ ತರಹ ನನ್ನೊಂದಿಗೆ ಅವರು ಸಂಬಂಧ ಹೊಂದಿದ್ದರು. 2008 ಹಾಗೂ 2013ರ ವಿಧಾನಸಭಾ ಚುನಾವಣೆಯಲ್ಲಿ ನಾನು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದೆ, ಆದರೆ ಆ ಸಂದರ್ಭದಲ್ಲಿ ಅವರು ನನ್ನ ಪರವಾಗಿ ಚುನಾವಣಾ ಪ್ರಚಾರಕ್ಕೆ ಬರಲಿಲ್ಲ.

ಕ್ಷೇತ್ರದ ಜನತೆ ವಿಜುಗೌಡರಿಗೆ ಎಂಎಲ್‌ಸಿ ಆದರೂ ಮಾಡಿ ಎಂದು ಅವರ ಬಳಿ ಕೇಳಿಕೊಳ್ಳಲು ಹೋದಾಗ ಅವರು 25 ಕೋಟಿ ರೂ. ಬೇಡಿಕೆ ಇಟ್ಟಿದ್ದರು. 25 ಕೋಟಿ ಹಣ ಇದ್ದರೆ ನಾನೇಕೆ ರಾಜಕೀಯಕ್ಕೆ ಬರುತ್ತಿದ್ದೆ, ಯಾವುದಾದರೊಂದು ಬಿಸಿನೆಸ್ ಮಾಡಿಕೊಂಡು ಹೋಗುತ್ತಿದ್ದೆ ಎಂದರು.

ನಾನು ಬಿಜೆಪಿ ಸೇರಿದ ಬಳಿಕ ನನ್ನ ಮೇಲೆ ಆರೊಪ ಮಾಡುವುದು, ನಾನು ಆಪರೇಷನ್ ಕಮಲ ಮಾಡುತ್ತಿದ್ದೇನೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ದೇವಾನಂದ ಚೌಹಾಣ್ ಅವರಿಗೆ ನಾನು ಯಾವುದೇ ರೀತಿಯಲ್ಲಿ ಮಾತನಾಡಿಲ್ಲ, ಧಮ್ಕಿಯನ್ನೂ ಹಾಕಿಲ್ಲ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ