ಆ್ಯಪ್ನಗರ

ಮೊಸಳೆಗೆ ಮಹಿಳೆ ಬಲಿ

ಎಮ್ಮೆಗಳಿಗೆ ನೀರು ಕುಡಿಸಲು ದಡಕ್ಕೆ ತೆರಳಿದ್ದ ಮಹಿಳೆ ಮೊಸಳೆಗೆ ಬಲಿಯಾದ ಘಟನೆ ಅಯ್ಯನಗುಡಿ ಬಳಿಯ ಕೃಷ್ಣಾ ಹಿನ್ನೀರು ಪ್ರದೇಶದಲ್ಲಿ ಮಂಗಳವಾರ ನಡೆದಿದೆ.

Vijaya Karnataka Web 18 Apr 2018, 10:58 am
ನಾಲತವಾಡ (ವಿಜಯಪುರ) : ಎಮ್ಮೆಗಳಿಗೆ ನೀರು ಕುಡಿಸಲು ದಡಕ್ಕೆ ತೆರಳಿದ್ದ ಮಹಿಳೆ ಮೊಸಳೆಗೆ ಬಲಿಯಾದ ಘಟನೆ ಸಮೀಪದ ಅಯ್ಯನಗುಡಿ ಬಳಿಯ ಕೃಷ್ಣಾ ಹಿನ್ನೀರು ಪ್ರದೇಶದಲ್ಲಿ ಮಂಗಳವಾರ ನಡೆದಿದೆ. ಕಾನಿಕೇರಿ ಗ್ರಾಮದ ಗೌರಮ್ಮ ನಾಡಗೌಡ(35) ಮೊಸಳೆಗೆ ಆಹಾರವಾದ ಮಹಿಳೆ.
Vijaya Karnataka Web crocodile


ಘಟನೆ ವಿವರ:


ಎಮ್ಮೆ ಮೇಯಿಸಿದ ನಂತರ ಮಧ್ಯಾಹ್ನ 2 ಗಂಟೆ ವೇಳೆಗೆ ಗೌರಮ್ಮ ನದಿ ದಡದತ್ತ ತೆರಳಿ ನೀರು ಕುಡಿಸಲು ಹೋಗಿದ್ದಾಳೆ. ಅವಳ ಪಕ್ಕದಲ್ಲೇ ಮೊಸಳೆ ಇತ್ತು ಎನ್ನಲಾಗುತ್ತಿದ್ದು, ಇದನ್ನು ನೋಡದೇ ಆಕೆ ಹೋಗುತ್ತಿರುವಾಗ ಪತಿ ಹಾಗೂ ಮಕ್ಕಳು ಹೋಗಬೇಡ ಎಂದು ಅಂಗಲಾಚಿದ್ದಾರೆ. ಆದರೆ ಹುಡುಗಾಟ ಮಾಡುತ್ತಿದ್ದಾರೆ ಎಂದುಕೊಂಡು ಮೊಸಳೆ ಇದ್ದ ಸ್ಥಳದಲ್ಲೇ ಎಮ್ಮೆಗಳಿಗೆ ನೀರು ಕುಡಿಸುತ್ತ ನಿಂತಿದ್ದಾಳೆ. ಆಗ ಏಕಾಏಕಿ ದಾಳಿ ಮಾಡಿ ಮೊಸಳೆ ನದಿಯೊಳಗೆ ಹೊತ್ತೊಯ್ದಿದೆ.

ಮುದ್ದೇಬಿಹಾಳದ ಅಗ್ನಿ ಶಾಮಕ ದಳದ ಪ್ರಭಾರ ಠಾಣಾಧಿಕಾರಿ ರಾಜೇಂದ್ರ ಪೋಜ್ದಾರ್‌ ನೇತೃತ್ವದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಮೀನುಗಾರರ ಬೋಟ್‌ ಸಹಾಯದಿಂದ 2 ತಾಸು ನದಿಯಲ್ಲಿ ಶೋಧ ನಡೆಸಿ ಮಹಿಳೆಯ ಶವ ಹೊರ ತೆಗೆದರು.

ಆಕ್ರಂದನ:

ಪತಿಯೊಂದಿಗೆ ಮನೆಯ ಅರ್ಧ ಜವಾಬ್ದಾರಿ ಹೊತ್ತು ಸದಾ ಸಾಥ್‌ ನೀಡುತ್ತಿದ್ದ ಪತ್ನಿಯನ್ನು ಕಳೆದುಕೊಂಡ ಪತಿ ರಮೇಶ ಹಾಗೂ ಇಬ್ಬರು ಪುತ್ರರು, ಪುತ್ರಿಯ ಆಕ್ರಂದನ ದಡದಲ್ಲಿ ಮುಗಿಲು ಮುಟ್ಟಿತ್ತು. ಘಟನೆಗೆ ಸಂಭಂದಿಸಿದಂತೆ ಮುದ್ದೇಬಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸೈ ಗೋವಿಂದಗೌಡ ಪಾಟೀಲ ತಿಳಿಸಿದ್ದಾರೆ.

ಆಕ್ರೋಶ:

ನದಿ ತೀರದಲ್ಲಿ ಮೇಲಿಂದ ಮೇಲೆ ಇಂಥ ಘಟನೆಗಳು ನಡೆಯುತ್ತಲೇ ಇವೆ. ನೀರು ಕುಡಿಯಲು ಹೋದ ವೇಳೆ ಜಾನುವಾರುಗಳು ಮೊಸಳೆಗಳಿಗೆ ಬಲಿಯಾಗುತ್ತಿವೆ. ನಾಲತವಾಡ ಹೆಸ್ಕಾಂನವರು ಸಮಯಕ್ಕೆ ಸರಿಯಾಗಿ ವಿದ್ಯುತ್‌ ಕಲ್ಪಿಸುತ್ತಿಲ್ಲ. ಇತ್ತ ಅರಣ್ಯ ಇಲಾಖೆಯವರು ಮೊಸಳೆ ಪತ್ತೆ ಹಚ್ಚುತ್ತಿಲ್ಲ . ಹೀಗಾಗಿ ನದಿ ದಡದಲ್ಲಿ ನೀರು ಕುಡಿಸಲು ಹೋದಾಗ ಜೀವ ಹಾನಿಯಾಗುತ್ತಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದರು.

ದೌಡು:


ನಾಲತವಾಡ ಪಪಂ ಅಧ್ಯಕ್ಷ ಪೃಥ್ವಿರಾಜ್‌ ನಾಡಗೌಡ್ರ, ತಹಸೀಲ್ದಾರ್‌ ಮಂಜುಳಾ ನಾಯಕ್‌, ಅರಣ್ಯಾಧಿಕಾರಿ ಪೋಳ್‌, ಪಿಎಸೈ ಗೊವಿಂದಗೌಡ ಪಾಟೀಲ, ಎಎಸ್‌ಐ ಎಸ್‌.ಬಿ.ನ್ಯಾಮಣ್ಣನವರು ಸೇರಿದಂತೆ ಹಲವರು ಆಗಮಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ