ವಿಜಯಪುರ: ಕನ್ನಡದ ರಾಕಿಂಗ್ ಸ್ಟಾರ್ ಯಶ್ ಶನಿವಾರ ಸಂಜೆ ಐತಿಹಾಸಿಕ ಹಾಗೂ ಕೃಷ್ಣಾ ನದಿಯಿಂದ ನೀರು ತುಂಬಿಸಿದ ಮಮದಾಪುರ ಕೆರೆಗೆ ಭೇಟಿ ನೀಡಿ, ಸಸಿ ನೆಟ್ಟು ಜಿಲ್ಲೆಯಲ್ಲಿ ಕೈಗೊಂಡ ವೃಕ್ಷ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದರು. ಪರಿಸರ ಸಂರಕ್ಷಣೆಗೆ ಮುಂದಾಗುವಂತೆ ಯುವ ಜನತೆಗೆ ಕರೆ ನೀಡಿದರು.
ಸಂಜೆ 6ರ ವೇಳೆಗೆ ಮುಧೋಳದಿಂದ ಮಮದಾರಕ್ಕೆ ಆಗಮಿಸಿ ಯಶ್ ಕೃಷ್ಣಾನದಿಂದ ನೀರು ತುಂಬಿಸಿದ ಐತಿಹಾಸಿಕ ಕೆರೆಯನ್ನು ವೀಕ್ಷಿಸಿದರು. ಕೆರೆ ದಡದಲ್ಲಿ 2 ಬೇವಿನ ಸಸಿ ನೆಟ್ಟರು. ನಂತರ ಗ್ರಾಮದ ಶಾಲೆ ಆವರಣದಲ್ಲಿ ಜನತೆಯನ್ನುದ್ದೇಶಿ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಸಚಿವ ಎಂ.ಬಿ.ಪಾಟೀಲ ನೇತೃತ್ವದಲ್ಲಿ ಕೋಟಿ ವೃಕ್ಷ ಅಭಿಯಾನ ಕೈಗೊಂಡಿರುವುದು ದೇಶದಲ್ಲೇ ಮಹತ್ವದ ಕಾರ್ಯ. ಇದಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಿ ಪರಿಸರ ಸಂರಕ್ಷಣೆಗೆ ತೊಡಗಿಸಿಕೊಳ್ಳಬೇಕು. ಅದರಲ್ಲೂ ಯುವ ಜನತೆ ನೆಲ-ಜಲ, ಪರಿಸರ ರಕ್ಷಣೆಗೆ ಸಕ್ರಿಯರಾಗಬೇಕೆಂದರು.
ಉತ್ತರ ಕರ್ನಾಟದಲ್ಲಿ ಆದಿಲ್ಶಾಹಿ ಅರಸರು, ದಕ್ಷಿಣ ಕರ್ನಾಟಕದಲ್ಲಿ ಮೈಸೂರು ಅರಸರು ಈ ನಾಡಿನಲ್ಲಿ ಹಲವಾರು ಸಮಾಜ ಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಮೈಸೂರು ಒಡೆಯರು ಕನ್ನಂಬಾಡಿ ಕಟ್ಟೆಯನ್ನು ಕಟ್ಟಿ ಈ ಮೈಸೂರು ಭಾಗ ನೀರಾವರಿಗೆ ಒಳಪಡಿಸಿದರು. ಆದಿಲ್ಶಾಹಿ ಅರಸರು ಬರದ ನಾಡಿನಲ್ಲಿ ಜಲ ಕಾಂತ್ರಿಗೆ ಮುನ್ನುಡಿ ಬರೆದಿದ್ದಾರೆ ಎಂದರು.
4 ಶತಮಾನಗಳ ಹಿಂದೆಯೇ ಬೃಹತ್ ಕೆರೆಗಳನ್ನು ನಿರ್ಮಿಸಿ ವಿಜಯಪುರ ನಗರಕ್ಕೆ ಕುಡಿಯುವ ನೀರು ಒದಗಿಸುವುದು ಸೇರಿದಂತೆ ಐತಿಹಾಸಿಕ ಕಾರ್ಯಗಳನ್ನು ಮಾಡಿದ್ದಾರೆ.
ನಾವು-ನೀವೂ ಅಣ್ಣತಮ್ಮಂದಿರು
ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಜನ ನಾವು ಅಣ್ಣ ತಮ್ಮಂದಿರಂತೆ ಎಂದು ಹೇಳಿ ತಮ್ಮದೇ ಸಿನಿಮಾದ ಡೈಲಾಗ್ ಹೇಳಿ ಜನರನ್ನು ರಂಜಿಸಿದರು.
ಎಂ.ಬಿ.ಪಾಟೀಲರು ಈ ಭಾಗದಲ್ಲಿ ಮಾಡಿರುವ ಕಾರ್ಯ ನೋಡಿ ಆಶ್ಚರ್ಯವಾಗಿದೆ. ಕೋಟಿವೃಕ್ಷ ಅಭಿಯಾನದಲ್ಲಿ ಪಾಲ್ಗೊಳ್ಳಲು ನಾನು ಸಂತೋಷದಿಂದ ಒಪ್ಪಿಕೊಂಡಿದ್ದೇನೆ. ಈ ಅಭಿಯಾನ ಉಳಿದ ಕಾರ್ಯಕ್ರಮದಂತೆ ಸಾಧಾರಣ ಕಾರ್ಯಕ್ರಮ ಅಲ್ಲ, ನೀವು ದೃಢ ಮನಸ್ಸು ಮಾಡಿದರೆ ಇಡೀ ವಿಜಯಪುರ ಜಿಲ್ಲೆಯನ್ನು ಹಸಿರು ವನವನ್ನಾಗಿಸಲು ಸಾಧ್ಯ, ಈ ಭಾಗಕ್ಕೆ ಮಳೆಯ ಅವಶ್ಯಕತೆ ಇದೆ. ನೆರಳಿನ ಅವಶ್ಯಕತೆ ಇದೆ. ಇದೆಲ್ಲದಕ್ಕೂ ಗಿಡಗಳ ಅವಶ್ಯಕತೆ ಇದೆ. ಆ ಗಿಡಗಳು ಹಚ್ಚುವ ಜವಾಬ್ದಾರಿ ಎಲ್ಲರಿಗಿದೆ ಎಂದು ಸಾರ್ವಜನಿಕರಿಗೆ ಪ್ರತಿಜ್ಞಾನಾ ವಿಧಿ ಬೋಧೀಸಿದರು.
ಯುವಕರು, ಜನತೆ ಕೂಡ ರಾಕಿಂಗ್ ಸ್ಟಾರ್.... ಅಣ್ತಮ್ಮಾ..... ಎಂದು ಘೋಷಣೆ ಕೂಗಿ ಅಭಿಮಾನ ಮೆರೆದರು.
ವಿರಕ್ತಮಠದ ಅಭಿನವ ಮುರಘೇಂದ್ರ ಸ್ವಾಮೀಜಿ, ಜಿಪಂ ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ಸುನೀಲಗೌಡ ಪಾಟೀಲ, ಸಂಗಮೇಶ ಬಬಲೇಶ್ವರ, ಕೃಷ್ಣಾ ಕುಲಕರ್ಣಿ, ಮಲ್ಲಿಕಾರ್ಜುನ ಗಂಗೂರ, ಬಿ.ಎಂ.ಪಾಟೀಲ ಸೇರಿದಂತೆ ವಿವಿಧ ಗ್ರಾಮಗಳ ಅಪಾರ ಸಂಖ್ಯೆತ ಯುವಕರು ಉಪಸ್ಥಿತರಿದ್ದರು.
ರಾತ್ರಿ 8 ಗಂಟೆ ವೇಳೆಗೆ ಬಬಲೇಶ್ವರಕ್ಕೆ ಭೇಟಿ ನೀಡಿದ ಯಶ್, ಪ್ರಮುಖ ಸ್ಥಳದಲ್ಲಿ ಗಿಡ ನೆಟ್ಟು ಜನತೆಗೆ ಪರಿಸರ ಸಂರಕ್ಷಣೆಯ ಪ್ರತಿಜ್ಞಾವಿಧಿ ಬೋಧಿಸಿದರು.