ಆ್ಯಪ್ನಗರ

Who Is Anil Chauhan: ಯಾರಿದು ಅನಿಲ್ ಚೌಹಾಣ್? ದೇಶದ ನೂತನ ಸಿಡಿಎಸ್ ಕುರಿತು ಮಾಹಿತಿ

Who is new CDS Anil Chauhan: ಭಾರತದ ನೂತನ ಹಾಗೂ ಎರಡನೇ ಸೇನಾ ಸಿಬ್ಬಂದಿ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರು ಸೇನೆಯ ಮೂರೂ ಅಂಗಗಳ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಅವರ ಕುರಿತಾದ ಆಸಕ್ತಿಕರ ಮಾಹಿತಿ ಇಲ್ಲಿದೆ.

Edited byಅಮಿತ್ ಎಂ.ಎಸ್ | TIMESOFINDIA.COM 29 Sep 2022, 3:26 pm

ಹೈಲೈಟ್ಸ್‌:

  • ದೇಶದ ಎರಡನೇ ಸೇನಾ ಸಿಬ್ಬಂದಿ ಮುಖ್ಯಸ್ಥರ ನೇಮಕ
  • ನೂತನ ಸಿಡಿಎಸ್ ಆಗಿ ನೇಮಕವಾದ ಅನಿಲ್ ಚೌಹಾಣ್
  • ಉತ್ತರಾಖಂಡದ ಹಳ್ಳಿಯವರಾದ ನಿವೃತ್ತ ಲೆ. ಜನರಲ್
  • ಸೇನೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಅಧಿಕಾರಿ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Govt appoints Lt Gen Anil Chauhan (Retd) as new Chief of Defence Staff
ಹೊಸದಿಲ್ಲಿ: ದೇಶದ ಅತ್ಯುನ್ನತ ಸೇನಾ ಹುದ್ದೆಯಾದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಸ್ಥಾನಕ್ಕೆ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಸೇನೆ, ನೌಕಾಪಡೆ ಮತ್ತು ವಾಯುಪಡೆಗಳನ್ನು ಒಂದೆಡೆ ನಿಯಂತ್ರಿಸುವ ಉದ್ದೇಶ ಹೊಂದಿರುವ ಈ ಹುದ್ದೆ, ದೇಶದ ಒಟ್ಟಾರೆ ಸೇನಾ ಶಕ್ತಿಯನ್ನು ತನ್ನ ಬಳಿ ಇರಿಸಿಕೊಳ್ಳುತ್ತದೆ.
ಭಾರತದ ಮೊದಲ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರು ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟು 9 ತಿಂಗಳ ಬಳಿಕ ಈ ನೇಮಕ ನಡೆದಿದೆ. ಅಲ್ಲಿಯವರೆಗೂ ಸಿಡಿಎಸ್ ಹುದ್ದೆ ಖಾಲಿ ಇತ್ತು. ಈ ಸ್ಥಾನಕ್ಕೆ ಸೇನೆಯ ಅನೇಕ ಹಿರಿಯ ಅಧಿಕಾರಿಗಳ ಹೆಸರು ಕೇಳಿಬಂದಿದ್ದವು. ಆದರೆ ನಿವೃತ್ತ ಅಧಿಕಾರಿಯನ್ನು ಕೇಂದ್ರ ಸರ್ಕಾರ ನೇಮಿಸಿದೆ.

Anil Chauhan: ಬಿಪಿನ್ ರಾವತ್ ನಿಧನದಿಂದ ತೆರವಾಗಿದ್ದ ಹುದ್ದೆ: ಲೆ. ಜನರಲ್ ಅನಿಲ್ ಚೌಹಾಣ್ ನೂತನ ಸಿಡಿಎಸ್

ಯಾರಿದು ಅನಿಲ್ ಚೌಹಾಣ್?
ಸೇನೆಯಲ್ಲಿ ಸುಮಾರು 40 ವರ್ಷಗಳ ಅನುಭವ ಹೊಂದಿರುವ ಲೆ. ಜನರಲ್ ಅನಿಲ್ ಚೌಹಾಣ್, ಅನೇಕ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಸಿಬ್ಬಂದಿ ನೇಮಕಾತಿ ಮುಂತಾದ ಪ್ರಮುಖ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಉಗ್ರರ ಹಾವಳಿ ವಿರುದ್ಧದ ಕಾರ್ಯಾಚರಣೆಗಳಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ.

ಎರಡನೇ ಸಿಡಿಎಸ್
ದೇಶದ ಎರಡನೇ ಸಿಡಿಎಸ್ ಎನಿಸಿಕೊಂಡಿರುವ ಲೆ. ಜನರಲ್ ಅನಿಲ್ ಚೌಹಾಣ್ ಅವರು ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ಗ್ವಾನಾ ಎಂಬ ಗ್ರಾಮದವರು, ದೇಶದ ಮೊದಲ ಸಿಡಿಎಸ್ ದಿವಂಗತ ಬಿಪಿನ್ ರಾವತ್ ಅವರೂ ಉತ್ತರಾಖಂಡದವರು ಎನ್ನುವುದು ಗಮನಾರ್ಹ. 1961ರ ಮೇ 18ರಂದು ಜನಿಸಿದ ಅನಿಲ್ ಚೌಹಾಣ್ ಅವರು, 1981ರಲ್ಲಿ ಭಾರತೀಯ ಸೇನೆಯ 11 ಗೋರ್ಖಾ ರೈಫಲ್ಸ್ ಮೂಲಕ ಸೇನಾ ಸೇವೆಗೆ ಪ್ರವೇಶಿಸಿದರು.
ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ಹುದ್ದೆ ಮಾನದಂಡದಲ್ಲಿ ಬದಲಾವಣೆ: ರಾವತ್ ಸ್ಥಾನಕ್ಕೆ ಶೀಘ್ರ ನೇಮಕ?

ಸೇನೆಯಲ್ಲಿ ಅಧಿಕಾರ
ಅನಿಲ್ ಅವರು ಓದಿದ್ದು ಕೋಲ್ಕತಾದ ಕೇಂದ್ರೀಯ ವಿದ್ಯಾಲಯದಲ್ಲಿ. ಅವರು ಡೆಹರಾಡೂನ್‌ನ ಭಾರತೀಯ ಸೇನಾ ಅಕಾಡೆಮಿ ಮತ್ತು ಖಡಕ್ವಾಸ್ಲಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ವಿದ್ಯಾರ್ಥಿಯಾಗಿದ್ದರು.

ಮೇಜರ್ ಜನರಲ್ ಶ್ರೇಯಾಂಕ ಪಡೆದ ಅವರು ನಾರ್ದರ್ನ್ ಕಮಾಂಡ್‌ನಲ್ಲಿ ಬಹಳ ಸೂಕ್ಷ್ಮವಾದ ಬಾರಾಮುಲ್ಲಾ ಪ್ರದೇಶದಲ್ಲಿ ಒಂದು ಇನ್‌ಫೆಂಟ್ರಿ ವಿಭಾಗದ ನೇತೃತ್ವ ವಹಿಸಿದ್ದರು.

ಲೆಫ್ಟಿನೆಂಟ್ ಜನರಲ್ ಆಗಿ ಅವರು ಈಶಾನ್ಯದಲ್ಲಿ ಸೇನಾ ತಂಡವೊಂದನ್ನು ನಡೆಸಿದ್ದರು. 2019ರ ಸೆಪ್ಟೆಂಬರ್‌ನಲ್ಲಿ ಈಸ್ಟರ್ನ್ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಹುದ್ದೆಗೇರಿದರು. 2021ರ ಮೇ ತಿಂಗಳಲ್ಲಿ ನಿವೃತ್ತರಾಗುವವರೆಗೂ ಅವರು ಈ ಹುದ್ದೆಯಲ್ಲಿ ಮುಂದುವರಿದಿದ್ದರು.
Chopper Crash : ಸಿಡಿಎಸ್‌ ಬಿಪಿನ್‌ ರಾವತ್ ನಿಧನದಿಂದ ಭಾರತದ ಸೇನೆಗಳ ಏಕೀಕರಣಕ್ಕೆ ಪೆಟ್ಟು!

ಕಮಾಂಡ್ ನೇಮಕಾತಿಗಳ ಜತೆ ಅವರು, ಸೇನಾ ಕಾರ್ಯಾಚರಣೆಗಳ ಪ್ರಧಾನ ನಿರ್ದೇಶಕರ ಹುದ್ದೆ ಸೇರಿದಂತೆ ಪ್ರಮುಖ ಸಿಬ್ಬಂದಿ ನೇಮಕಾತಿಗಳಲ್ಲಿಯೂ ಭಾಗಿಯಾಗಿದ್ದರು. ಚೌಹಾಣ್ ಅವರು ಅಂಗೋಲಾದಲ್ಲಿ ವಿಶ್ವಸಂಸ್ಥೆಯ ಯೋಜನೆಯಲ್ಲಿ ಕೂಡ ಸೇವೆ ಸಲ್ಲಿಸಿದ್ದರು.

2021ರ ಮೇ 31ರಂದು ಅವರು ಭಾರತೀಯ ಸೇನೆಯಿಂದ ನಿವೃತ್ತರಾದರು. ಸೇನೆಯಿಂದ ನಿವೃತ್ತರಾದ ಬಳಿಕವೂ ಅವರು ರಾಷ್ಟ್ರೀಯ ಭದ್ರತೆ ಮತ್ತು ಕಾರ್ಯತಂತ್ರ ವಿಷಯಗಳಲ್ಲಿ ಕೊಡುಗೆಯನ್ನು ಮುಂದುವರಿಸಿದ್ದರು.

ಸೇನೆಗೆ ನೀಡಿರುವ ಮಹತ್ತರ ಸೇವೆಗಾಗಿ ಅವರಿಗೆ ಪರಮ ವಿಶಿಷ್ಟ್ ಸೇವಾ ಪದಕ, ಉತ್ತಮ್ ಯುದ್ಧ್ ಸೇವಾ ಪದಕ, ಅತಿ ವಿಶಿಷ್ಟ್ ಸೇವಾ ಪದಕ, ಸೇನಾ ಪದಕ ಮತ್ತು ವಿಶಿಷ್ಟ್ ಸೇವಾ ಪದಕಗಳು ದೊರೆತಿವೆ.
ಸಿಡಿಎಸ್‌ ಸಂಭವನೀಯರ ಪಟ್ಟಿ ಶೀಘ್ರದಲ್ಲಿಯೇ ರಕ್ಷಣಾ ಸಚಿವರಿಗೆ ಸಲ್ಲಿಕೆ, ಮುಂಚೂಣಿಯಲ್ಲಿ ನರವಾಣೆ

ವೈಯಕ್ತಿಕ ಜೀವನಲೆ. ಜನರಲ್ ಅನಿಲ್ ಚೌಹಾಣ್ ಅವರು ಕಲಾವಿದೆ ಅನುಪಮಾ ಅವರನ್ನು ಮದುವೆಯಾಗಿದ್ದಾರೆ. ಈ ದಂಪತಿಗೆ ಪ್ರಗ್ಯಾ ಚೌಹಾಣ್ ಎಂಬ ಮಗಳಿದ್ದಾರೆ. ಕಲೆಯ ಬಗ್ಗೆ ಬಹಳ ಆಸಕ್ತಿ ಹೊಂದಿರುವ ಅನಿಲ್ ಅವರಿಗೆ ಟಿಬೆಟಿಯನ್ ಕಲೆಗಳ ಬಗ್ಗೆ ಒಲವಿದೆ. ಸೇನೆಯಲ್ಲಿನ ತಮ್ಮ ಕೆಲಸದ ನಡುವೆ ಅವರು ಎರಡು ಪುಸ್ತಕಗಳನ್ನು ಬರೆದಿದ್ದಾರೆ. 'ಆಫ್ಟರ್‌ಮಥ್ ಆಫ್ ಎ ನ್ಯೂಕ್ಲಿಯರ್ ಅಟ್ಯಾಕ್' ಮತ್ತು '11 ಗೋರ್ಖಾ ರೈಫಲ್ಸ್ ರೆಜಿಮೆಂಟ್ ಸೆಂಟರ್' ಎಂಬುದು ಪ್ರಕಟಿತ ಕೃತಿಗಳಾಗಿವೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ