'ಭದ್ರಾಚಲಂ'ನಲ್ಲಿ ಸೀತಾರಾಮ
- ಭದ್ರಾಚಲಂ ದೇಗುಲ- ತೆಲಂಗಾಣ
ತೆಲಂಗಾಣದಲ್ಲಿರುವ ಈ ಭದ್ರಾಚಲಂ, ಶ್ರೀರಾಮ ಕ್ಷೇತ್ರಗಳಲ್ಲಿ ಮುಖ್ಯವಾದುದು. ಅಪ್ಪನ ಮಾತಿನಂತೆ ಕಾಡಿಗೆ ಹೋದ ಶ್ರೀರಾಮನು ಭದ್ರಾಚಲಂ ಇರುವ ದಂಡಕಾರಣ್ಯದಲ್ಲಿ ಹೆಚ್ಚು ಕಾಲ ನೆಲೆಸಿದ್ದ. ಈ ಕಾಡಿನಲ್ಲಿಯೇ ಒಂದು ಪರ್ಣಶಾಲೆ(ಗುಡಿಸಲು) ಕಟ್ಟಿಕೊಂಡು ಸಹೋದರ ಲಕ್ಷ್ಮಣ ಮತ್ತು ಸೀತೆಯೊಂದಿಗೆ ವಾಸಿಸಿದ್ದ ಎನ್ನುವ ನಂಬಿಕೆ ಭಕ್ತಜನರದು. ಇಲ್ಲಿ ವಾಸಿಸುವಾಗಲೇ ಮಾರೀಚನು ಬಂಗಾರದ ಜಿಂಕೆಯಾಗಿ ಸೀತೆಯ ಮನಸ್ಸನ್ನು ಸೆಳೆದ, ರಾವಣನು ಸೀತೆಯನ್ನು ಅಪಹರಣ ಮಾಡಿದ ಎನ್ನುವ ಕತೆಗಳೂ ಇವೆ.
ಗೋದಾವರಿ ನದಿ ದಂಡೆಯಲ್ಲಿ 17ನೇ ಶತಮಾನದಲ್ಲಿ ನಿರ್ಮಾಣವಾದ ಸೀತಾರಾಮರ ದೇಗುಲವಿದ್ದು, ಇಲ್ಲಿದ್ದ ಪರಮಭಕ್ತ ಭದ್ರನ ದೆಸೆಯಿಂದಾಗಿಯೇ ಈ ನೆಲವು 'ಭದ್ರಾಚಲ'ವಾಯಿತು. ಪ್ರಭು ಶ್ರೀರಾಮನು ತನ್ನ ಶಿರದ ಮೇಲೆ ಕೂರಬೇಕು ಎನ್ನುವುದು ಭದ್ರನ ಬಯಕೆ. ಇದಕ್ಕಾಗಿ ತಪಸ್ಸು ಮಾಡಿದಾಗ, ರಾಮನು ದರ್ಶನ ನೀಡಿದ. 'ಸೀತಾನ್ವೇಷಣೆ ಮುಗಿಸಿ ಬಂದು ನಿನ್ನ ಬಯಕೆಯನ್ನು ಈಡೇರಿಸುತ್ತೇನೆ' ಎಂದಿದ್ದ ರಾಮ, ತನ್ನ ಅವತಾರ ಮುಗಿದರೂ ಭಕ್ತನ ಬಯಕೆಯನ್ನು ಈಡೇರಿಸಲಿಲ್ಲ. ಕೊನೆಗೆ ಭಕ್ತನಿಗಾಗಿ ಭದ್ರಾಚಲಂಗೆ ಬಂದ ಮಹಾವಿಷ್ಣುವು ಮತ್ತೆ ರಾಮನಾಗಿ ದರ್ಶನ ನೀಡಿದ ಎನ್ನುವ ಕತೆಯೂ ಇದೆ.
ರಾಮಾಯಣದ ಪ್ರಸಂಗಗಳನ್ನು ಬೆಸೆಯುವ ಸ್ಥಳ ಪುರಾಣಗಳು ಈ ಭಾಗದಲ್ಲಿವೆ. ಭದ್ರಾಚಲಂಗೆ 32 ಕಿ.ಮೀ ದೂರದಲ್ಲಿ ಪರ್ಣಶಾಲಾ(ರಾಮ, ಸೀತೆ, ಲಕ್ಷ್ಮಣ ನೆಲೆಸಿದ್ದ ಗುಡಿಸಲು) ಇದೆ. ಜಟಾಯು ಪಾಕ(ರಾವಣನ ವಿರುದ್ಧ ಸೆಣಸಿ ರೆಕ್ಕೆ ಮುರಿದುಕೊಂಡಿದ್ದ ಜಟಾಯು, ಈ ವರ್ತಮಾನವನ್ನು ರಾಮನಿಗೆ ತಿಳಿಸಲು ಕಾದು ಕುಳಿತ ಸ್ಥಳ), ದುಮ್ಮಗುಡೆಮ್(ರಾಮನು ಹದಿನಾಲ್ಕು ಸಾವಿರ ರಾಕ್ಷಸರನ್ನು ಸಂಹರಿಸಿದ ಸ್ಥಳ), ಗುಂಡಾಲಾ(ಇಲ್ಲಿ ಬಿಸಿನೀರಿನ ಬುಗ್ಗೆಗಳಿದ್ದು, ತ್ರಿಮೂರ್ತಿಗಳು ಸ್ನಾನ ಮಾಡಿದ ಸ್ಥಳ) ಮತ್ತು ಶ್ರೀ ರಾಮಗಿರಿಯನ್ನು ಭಕ್ತರು ದರ್ಶಿಸುತ್ತಾರೆ.
370 ವರ್ಷಗಳ ಹಿಂದೆ ಭದ್ರಾಚಲಂಗೆ ಹೊಸ ರೂಪ ನೀಡಿದ್ದು, ದೇವಸ್ಥಾನ ನಿರ್ಮಾಣ ಮಾಡಿದ್ದು ಕಾಂಚರ್ಲ ಗೋಪಣ್ಣ. 'ಭಕ್ತ ರಾಮದಾಸು' ಎಂದೇ ಪರಿಚಿತರಾಗಿರುವ ಅವರು ರಚಿಸಿದ 'ದಾಶರಥಿ ಶತಕಂ' ಮತ್ತು ಕೀರ್ತನೆಗಳು ಜನಪ್ರಿಯವಾಗಿವೆ. ರಾಮದಾಸುವಿನ ಜೀವಿತವು ತೆಲುಗು ಚಲನಚಿತ್ರವಾಗಿಯೂ ಜನಪ್ರಿಯ.
ಎಲ್ಲಿದೆ ದೇಗುಲ?
ಬೆಂಗಳೂರಿನಿಂದ 872 ಕಿ.ಮೀ
ಹೈದರಾಬಾದ್ನಿಂದ 312 ಕಿ.ಮೀ