ಮಧ್ಯಮವರ್ಗಕ್ಕೆ ಕಳೆದ ಬಜೆಟ್ನಲ್ಲೇ ರಿಲೀಫ್: ಜೇಟ್ಲಿ
ಜೇಟ್ಲಿ ಈ ಸಲದ ಕೇಂದ್ರ ಬಜೆಟ್ನಲ್ಲಿ ಸರಕಾರ ರೈತಾಪಿ ವಲಯವನ್ನು ಓಲೈಸಲು ಆದ್ಯತೆ ನೀಡಿದ್ದು, ಮಧ್ಯಮ ವರ್ಗದ ತೆರಿಗೆದಾರರನ್ನು ಮತ್ತು ಕಾರ್ಪೊರೇಟ್ ವಲಯವನ್ನು ಕಡೆಗಳಿಸಿದೆ ಎಂಬ ...
ಈ ಸಲದ ಕೇಂದ್ರ ಬಜೆಟ್ನಲ್ಲಿ ಸರಕಾರ ರೈತಾಪಿ ವಲಯವನ್ನು ಓಲೈಸಲು ಆದ್ಯತೆ ನೀಡಿದ್ದು, ಮಧ್ಯಮ ವರ್ಗದ ತೆರಿಗೆದಾರರನ್ನು ಮತ್ತು ಕಾರ್ಪೊರೇಟ್ ವಲಯವನ್ನು ಕಡೆಗಳಿಸಿದೆ ಎಂಬ ಟೀಕೆಗಳನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಖಡಾಖಂಡಿತವಾಗಿ ತಳ್ಳಿಹಾಕಿದ್ದಾರೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಯಥಾಸ್ಥಿತಿಯಲ್ಲಿರಿಸಿದ ಕ್ರಮವನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
ವಾಸ್ತವವಾಗಿ ಇದು ಒಟ್ಟಾರೆ ಅರ್ಥವ್ಯವಸ್ಥೆಯನ್ನು ಉತ್ತೇಜಿಸುವ ಉದ್ದೇಶವನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ. ಕೇಂದ್ರ ಸರಕಾರ ಕಳೆದ ಸಲದ ಬಜೆಟ್ನಲ್ಲಿಯೇ ಸಣ್ಣ ತೆರಿಗೆದಾರರಿಗೆ ಅಗತ್ಯವಿರುವ ಸಾಕಷ್ಟು ಅನುಕೂಲಕರ ಕ್ರಮಗಳನ್ನು ತೆಗೆದುಕೊಂಡಿತ್ತು. ಭವಿಷ್ಯದಲ್ಲೂ ಹಣಕಾಸು ಪರಿಸ್ಥಿತಿಯನ್ನು ನೋಡಿಕೊಂಡು ಮತ್ತಷ್ಟು ತೆರಿಗೆ ಅನುಕೂಲಗಳನ್ನು ಮಾಡಿಕೊಡಲಾಗುವುದು ಎಂದು ಜೇಟ್ಲಿ ಭರವಸೆ ಕೊಟ್ಟಿದ್ದಾರೆ.
ಬಜೆಟ್ ಮಂಡನೆಯ ಮರುದಿನ ಶುಕ್ರವಾರ ಕಾರ್ಪೊರೇಟ್ ವಲಯದ ಪ್ರಮುಖರೊಡನೆ ಸಂವಾದ ನಡೆಸಿದ ಜೇಟ್ಲಿ, ಬಜೆಟ್ ಘೋಷಣೆಗಳನ್ನು ಬಲವಾಗಿ ಸಮರ್ಥಿಸಿದರು. ಕಳೆದ ಬಜೆಟ್ನಲ್ಲಿ ಘೋಷಿಸಿದ್ದ ನಾನಾ ಕ್ರಮಗಳನ್ನು ಪ್ರಸ್ತಾಪಿಸಿದ ಜೇಟ್ಲಿ, ಈ ಹಿಂದೆ ಸರಕಾರ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2ರಿಂದ 2.5 ಲಕ್ಷ ರೂ.ಗೆ ಏರಿಸಿತ್ತು. ಸೆಕ್ಷನ್ 80 ಸಿ ಅಡಿಯಲ್ಲಿ ಹೂಡಿಕೆ, ಉಳಿತಾಯಕ್ಕೆ 1.5 ಲಕ್ಷ ರೂ. ತನಕದ ಮೊತ್ತಕ್ಕೆ ತೆರಿಗೆ ವಿನಾಯಿತಿ ವಿಸ್ತರಿಸಲಾಗಿತ್ತು. ಗೃಹ ಸಾಲಕ್ಕೆ ಸಂಬಂಧಿಸಿ ವಾರ್ಷಿಕ 2 ಲಕ್ಷ ರೂ. ತನಕದ ಮರು ಪಾವತಿಯ ಮೇಲೆ ತೆರಿಗೆ ವಿನಾಯಿತಿ ವಿಸ್ತರಿಸಲಾಗಿತ್ತು. ವಾರ್ಷಿಕ 50 ಲಕ್ಷ ರೂ. ತನಕ ಆದಾಯ ಇರುವ ವೈದ್ಯರು, ವಕೀಲರಿಗೆ ಸರಕಾರ ತೆರಿಗೆಯನ್ನು ಸರಳಗೊಳಿಸಿದೆ ಎಂದರು.
ದೇಶದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ, ಗಡಿ ರಕ್ಷಣೆಗೆ ಮತ್ತು ಸಾಮಾಜಿಕ ಭದ್ರತೆಗೆ ಸರಕಾರಕ್ಕೆ ಆದಾಯದ ಅಗತ್ಯ ಇದೆ. ಆದಾಯ ತೆರಿಗೆದಾರರ ಸಂಖ್ಯೆಯನ್ನು ಇಳಿಸಿದರೆ, ದೇಶದ ಹಿತಾಸಕ್ತಿಯನ್ನು ಕಾಪಾಡಲು ಸಾಧ್ಯವಾಗುವುದಿಲ್ಲ. ಜನತೆ ತೆರಿಗೆ ವ್ಯಾಪ್ತಿಯ ಒಳಗೆ ಬರುವುದರಿಂದ ಸರಕಾರ ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸಬಹುದು. ತೆರಿಗೆದಾರರ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿಯೇ ಸ್ಟ್ಯಾಂಡರ್ಡ್ ಡಿಡಕ್ಷನ್ ಪದ್ಧತಿಯನ್ನು ಮತ್ತೆ ಜಾರಿಗೆ ತರಲಾಗಿದೆ. ಹಾಗೂ ಈ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ಹೆಚ್ಚಿಸುವ ಅವಕಾಶ ಕೂಡ ಬರಲಿದೆ ಎಂಬ ವಿಶ್ವಾಸ ಇದೆ ಎಂದರು. ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವುದರಿಂದ ಗ್ರಾಮೀಣ ಅರ್ಥವ್ಯವಸ್ಥೆ ಸುಧಾರಿಸಲಿದೆ. ಇದು ಕೈಗಾರಿಕೆ, ಉದ್ದಿಮೆಗಳಿಗೂ ಸಹಕಾರಿಯಾಗಲಿದೆ. ಮೂಲ ಸೌಕರ್ಯಕ್ಕೆ ನೀಡುರುವ ಉತ್ತೇಜನದಿಂದ ಉದ್ಯೋಗ ಸೃಷ್ಟಿಯಾಗಲಿದೆ ಎಂದರು. ವಿತ್ತೀಯ ಕೊರತೆ ನಿಯಂತ್ರಣದ ವಿಚಾರದಲ್ಲಿ ಕಚ್ಚಾ ತೈಲದ ದರ ನಿರ್ಣಾಯಕವಾಗುತ್ತಿದೆ. ಹೆಚ್ಚುತ್ತಿರುವ ತೈಲ ದರ ಕಳವಳಕಾರಿ ಸಂಗತಿಯೂ ಹೌದು. ಸರಕಾರ ಇದನ್ನು ನಿಕಟವಾಗಿ ಪರಿಶೀಲಿಸುತ್ತಿದೆ. ಹೀಗಿದ್ದರರೂ ಸದ್ಯಕ್ಕೆ ಸರಕಾರ ಪರಿಸ್ಥಿತಿಯನ್ನು ಸುಲಲಿತವಾಗಿ ನಿರ್ವಹಿಸುತ್ತಿದೆ ಎಂದರು.
ಹಣದುಬ್ಬರ ನಿಯಂತ್ರಣ
ಭಾರತ ಉನ್ನತ ಮಟ್ಟದ ಹಣದುಬ್ಬರದ ವರ್ತುಲದಿಂದ ಈಗ ಹೊರಬಂದಿದೆ. ಹಣದುಬ್ಬರವನ್ನು ಶೇ.4ರ ಆಸುಪಾಸಿನಲ್ಲಿ ನಿಯಂತ್ರಣಕ್ಕೆ ತರುವಲ್ಲಿ ಸರಕಾರ ಯಶಸ್ವಿಯಾಗಿದೆ ಎಂದರು. ಇತ್ತೀಚೆಗೆ ಹಣದುಬ್ಬರ ತುಸು ಏರಿಕೆಯಾಗಲು ಕಾರಣ ತರಕಾರಿಗಳ ದರ ಏರಿಕೆ, ಕಚ್ಚಾ ತೈಲ ದರ ಹೆಚ್ಚಳ ಹಾಗೂ ಕೇಂದ್ರ ಸರಕಾರಿ ಉದ್ಯೋಗಿಗಳಿಗೆ ನೀಡಿದ ಭತ್ಯೆಗಳು ಕಾರಣ. ಈ ವರ್ಷ 1 ಲಕ್ಷ ಕೋಟಿ ರೂ. ಬಂಡವಾಳ ಹಿಂತೆಗೆತ ಸಾಧ್ಯತೆ ಇದೆ ಎಂದರು.