ಆ್ಯಪ್ನಗರ

ಸಮಸ್ಯೆ ಎದುರಿಸುವ ಬದಲು ಜೀವನಕ್ಕೆ ಕೊನೆ ಹಾಡುವುದು ಸರಿಯೇ?

ಕ್ಷುಲ್ಲಕ ಕಾರಣಗಳಿಂದ ಖಿನ್ನತೆಗೊಳಗಾಗಿ ಅನೇಕರು ತಮ್ಮ ಅತ್ಯಮೂಲ್ಯ ಜೀವವನ್ನು ಅಂತ್ಯಗೊಳಿಸಿಕೊಳ್ಳುತ್ತಿದ್ದಾರೆ. ಆದರೆ ಸಮಸ್ಯೆ ಎದುರಿಸುವ ಪ್ರಯತ್ನವನ್ನೇ ಮಾಡದೆ ಜೀವನವನ್ನು ಕೊನೆಗೊಳಿಸಿಕೊಳ್ಳುವುದು ಸರಿಯೇ? ಯೋಚಿಸಬೇಕಲ್ಲವೆ?

Vijaya Karnataka Web 15 Jul 2020, 4:43 pm
ಅರುಣ್ ಕಿರಿಮಂಜೇಶ್ವರ
Vijaya Karnataka Web Life


ಪರಿಣಿತ ಸೈಕಲ್ ಸವಾರನೊಬ್ಬನ್ನನ್ನು ಗಮನಿಸಿದರೆ ಆತ ಹಾಡಾಡುತ್ತಾ, ಸಹಚರ ಸ್ನೇಹಿತನೊಡನೆ ಮಾತನಾಡುತ್ತಾ, ಪ್ರಕೃತಿಯ ರಮಣೀಯತೆಯನ್ನು ಸವಿಯುತ್ತಾ, ಎದುರಾಗುವ ವಾಹನಗಳ ಮತ್ತು ಜನಜಂಗುಳಿಯ ನಡುವೆ ಸಲಿಸಾಗಿ ಜಾಗ ಮಾಡಿಕೊಳ್ಳುತ್ತಾ ಎಲ್ಲೂ ನಿಲ್ಲದೆ ಮುನ್ನುಗ್ಗುವನು. ಈ ಎಲ್ಲಾ ಚಟುವಟಿಕೆಗಳ ನಡುವೆ ಅನಿರೀಕ್ಷಿತ ಅಡೆತಡೆಗಳು ಮುಂದಾದಾಗ ಬ್ರೇಕ್ ಹಾಕುವುದೂ ಅಷ್ಟೇ ಸಲೀಸಾಗಿಯೇ ಇರುತ್ತದೆ. ಈ ಒಂದು ಸಂದರ್ಭ ಜೀವನದ ಪಾಠವನ್ನೂ ತಿಳಿ ಹೇಳುತ್ತದೆ.

ಇಲ್ಲಿ ಸೈಕಲ್ ಸವಾರನಿಗೆ ಎದುರಾಗುವ ಅಡೆತಡೆಗಳು ಜೀವನದಲ್ಲೆದುರಾಗುವ ತೊಂದರೆಗಳು. ಬ್ರೇಕ್ ಹಾಕುವ ಸಂದರ್ಭ, ಬದುಕಿನ ಹಾದಿಯಲ್ಲಿ ಕಾಣಸಿಗುವ ಅನಿರೀಕ್ಷಿತ ತಿರುವುಗಳು. ಹಾಗೇ ಇಲ್ಲಿ ಸೈಕಲ್ ಸವಾರ ಕಲಿಸುವ ಪಾಠವೇ, ಬದುಕೆಂಬ ಪಯಣದಲ್ಲಿ ಮಿಂಚಿನಂತೆಯೋ, ಸುದೀರ್ಘ ಮಳೆಯಂತೆಯೋ ಬಂದಪ್ಪಳಿಸುವ ಸವಾಲುಗಳಿಗೆಲ್ಲ ಖಂಡಿತವಾಗಿಯೂ ಅಂತ್ಯವಿದೆ. ಆದರೆ ನಿಂತಲ್ಲೇ ನಿಂತರೆ ಅಥವಾ ಕಾಯುತ್ತಾ ಕುಳಿತರೆ ಸಮಸ್ಯೆ ಬಗೆಹರಿಯದು. ಬದಲಾಗಿ ಕಷ್ಟವಾದರೂ, ಪರಿಸ್ಥಿತಿಯನ್ನು ಎದುರಿಸುವ ಸಾಮರ್ಥ್ಯವನ್ನಿರಿಸಿಕೊಂಡು ಮುನ್ನುಗ್ಗುವ ಛಾತಿಯಿರಬೇಕಷ್ಟೆ.

ಪ್ರಸ್ತುತ ಸಂದರ್ಭದಲ್ಲಿ ಕೊರೊನಾ ವೈರಸ್‌ಗೆ ಹೆದರಿ, ಕೆಲಸ ಕಳೆದುಕೊಂಡು ಆದಾಯವಿಲ್ಲದೆ ಉದ್ಭವವಾಗಿರುವ ಆತಂಕದಿಂದ, ಮುಂದಿನ ಜೀವನದ ಗತಿಯೇನೆಂಬ ಚಿಂತೆಯ ಚಿತೆಯಲ್ಲಿ ಸಿಲುಕಿ, ಕೆಲಸ ಸಿಗಲಾರದು ಮತ್ತು ಇನ್ನೂ ಹಲವಾರು ಗಂಭೀರ ಹಾಗೂ ಕ್ಷುಲ್ಲಕ ಕಾರಣಗಳಿಂದ ಖಿನ್ನತೆಗೊಳಗಾಗಿ ಅನೇಕರು ತಮ್ಮ ಅತ್ಯಮೂಲ್ಯ ಜೀವವನ್ನು ಅಂತ್ಯಗೊಳಿಸಿಕೊಳ್ಳುತ್ತಿದ್ದಾರೆ. ಆದರೆ ಸಮಸ್ಯೆ ಎದುರಿಸುವ ಪ್ರಯತ್ನವನ್ನೇ ಮಾಡದೆ ಜೀವನವನ್ನು ಕೊನೆಗೊಳಿಸಿಕೊಳ್ಳುವುದು ಸರಿಯೇ? ಯೋಚಿಸಬೇಕಲ್ಲವೆ?ಸಮಸ್ಯೆ ಎದುರಿಸುವ ಬದಲು ಜೀವನಕ್ಕೆ ಕೊನೆ ಹಾಡುವುದು ಸರಿಯೇ?

ಕೊರೊನಾದಿಂದ ಜೀವನ ಮುಗಿದು ಹೋಗಿಲ್ಲ.. ಆತ್ಮಹತ್ಯಾ ಮನೋಭಾವಕ್ಕೆ ಮನಃಶಾಸ್ತ್ರಜ್ಞರ ಮದ್ದು

ನಮಗೆದುರಾದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೆನ್ನುವ ಹಂಬಲ ನಮಗಿದ್ದರೆ, ನಮ್ಮ ಏಳ್ಗೆಗೆ ನಾವೇ ಶಿಲ್ಪಿಗಳಾಗಬೇಕೆಂದಿದ್ದರೆ, ನಾವು ನಡೆದು ಬಂದ ಹಾದಿಯನ್ನೊಮ್ಮೆ ಸಿಂಹಾವಲೋಕನ ಮಾಡಿಕೊಳ್ಳಬೇಕು. ಯಾವ ಹೆಜ್ಜೆಯಿಂದ, ಎಲ್ಲಿ ಎಡವಿದೆವೆನ್ನುವುದನ್ನು ಗುರಿತಿಸಿ ಮತ್ತೆ ಸರಿ ದಾರಿಯೆಡೆಗೆ ಸಾಗುವ ಮನಸ್ಸು ಮಾಡಿ, ಧೈರ್ಯದಿಂದ ಮುನ್ನಡೆಯಬೇಕು. ಇದನ್ನು ಮಾಡದೇ ಇದ್ದರೆ ಪ್ರತಿಯೊಬ್ಬನು ತನಗೆ ತಾನೇ ಶತ್ರುವಾಗುತ್ತಾನೆ, ಏನೇ ಬರಲಿ ಸಮಸ್ಯೆಗಳನ್ನೆದುರಿಸುವೆ ಎಂಬ ಉತ್ಸಾಹ ನಮ್ಮ ಮಿತ್ರನಾಗುತ್ತಾನೆ.

ಆತ್ಮಹತ್ಯೆ ಮಹಾ ಪಾಪ.. ಸಕಾರಾತ್ಮಕ ಚಿಂತನೆ ದಾರಿದೀಪ..!!

ಇಂತಹ ಸಂದಿಗ್ಧದ ಪರಿಸ್ಥಿತಿಯಲ್ಲಿ ಅದೃಷ್ಟದ ಲೆಕ್ಕಚಾರ ಹಾಕುತ್ತಾ, ಎಲ್ಲಾ ವಿಧಿಯ ಲೀಲೆ, ನಮ್ಮ ಹಣೆಯಲ್ಲಿ ಬರೆದಿದಿಷ್ಟೆ ಎಂದು ತಲೆ ಮೇಲೆ ಕೈ ಹೊತ್ತು ಕುಳಿತರೆ ಸಮಸ್ಯೆಗೆ ಪರಿಹಾರ ದೊರೆತಂತಾಯಿತೆ? ಖಂಡಿತವಾಗಿಯೂ ಇಲ್ಲ. ಏಕೆಂದರೆ ಇಂತಹ ಅರ್ಥಹೀನ ನಂಬಿಕೆಯನ್ನಿಟ್ಟು ಸಾಧನೆಗೈದವರ್ಯಾರು ಇಲ್ಲ. ಸಾಧನೆಗೈದವರೆಲ್ಲರೂ ತಾವು ಯಾವುದಕ್ಕಾಗಿ ಹಾತೊರೆದಿದ್ದರೊ ಅದಕ್ಕಾಗಿ ಹೋರಾಡಿದ್ದಾರೆ, ಹಾಗಾಗಿ ಜೀವನವೆಂಬ ಹೋರಾಟದಲ್ಲಿ ಜಯಶಾಲಿಗಳಾಗಿದ್ದಾರೆ. ಸೋಮಾರಿಯಾಗಿ ಕುಳಿತವನು ಏನನ್ನು ಸಾಧಿಸಿಲ್ಲ.

ಪರೀಕ್ಷೆಯಲ್ಲಿ ಫೇಲ್ ಆದರೆ ಕುಗ್ಗಬೇಕಿಲ್ಲ: ಆತ್ಮಹತ್ಯೆಯೊಂದೇ ಪರಿಹಾರವಲ್ಲ!

ಆದ್ದರಿಂದ ಕಷ್ಟ-ಸುಖ, ಸೋಲು-ಗೆಲುವು, ಅಪಮಾನ-ಸಮ್ಮಾನ ಮುಂತಾದವೆಲ್ಲವೂ ಜೀವನವೆಂಬ ನಾಣ್ಯದ ಎರಡು ಮುಖಗಳು. ಒಮ್ಮೆ ಚಿಮ್ಮಿದಾಗ ನೋವು, ಸೋಲುಗಳನ್ನು ಕಂಡು ಮಂಕಾಗಿ ಕೂತರೆ ಜೀವನ ಬೇಧಿಸಲಾಗದ ಚಕ್ರವ್ಯೂಹವೇ. ಸೋಲನ್ನು ಗೆಲುವಾಗಿ, ನೋವನ್ನು ನಲಿವಾಗಿ ಪರಿವರ್ತಿಸಬೇಕಾದರೆ, ಅಂದುಕೊಂಡದನ್ನು ಸಾಧಿಸುವವರೆಗೂ ಚಿಮ್ಮುವ ಪ್ರಯತ್ನವನ್ನು ಮಾಡಲೇಬೇಕಲ್ಲವೇ. ಪ್ರಯತ್ನವನ್ನೇ ಮಾಡದೆ ಕೈಕಟ್ಟಿ ಕುಳಿತರೆ ಯಾರೂ ನಮಗೆ ಸಹಾಯ ಮಾಡಲಾರರು. ಅದಕ್ಕೆ ಹಿರಿಯರು ಯಾರು ತನ್ನನ್ನು ತಾನು ರಕ್ಷಿಸಿಕೊಳ್ಳಲಾರನೋ, ಅವನನ್ನು ರಕ್ಷಿಸಲು ಯಾರೂ ಇರಲಾರರು. ದೇವರು ಕೂಡ. ಎಂದು ಹೇಳಿರುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ