ಆ್ಯಪ್ನಗರ

ಕೊರೊನಾ ಟೈಮ್‌: ವೃದ್ಧಾಶ್ರಮಗಳಾಗಿದ್ದ ಗ್ರಾಮಗಳೀಗ ಫುಲ್‌ ಬ್ಯುಸಿ!

ಅದೃಷ್ಟವಶಾತ್ ಮಾರಕ ಕೊರೊನಾ ಸೋಂಕು ಇನ್ನೂ ಗ್ರಾಮೀಣ ಭಾಗಕ್ಕೆ ತಲುಪಿಲ್ಲ. ಆದರೂ, ಜನರಲ್ಲಿ ಈಗಾಗಲೇ ಆತಂಕ ಮನೆಮಾಡಿದೆ. ಕೊರೊನಾ ಲಾಕ್‌ಡೌನ್‌ ಹಳ್ಳಿಗಳ ಮೇಲೂ ಪರಿಣಾಮ ಬೀರಿದೆ. ಬದಲಾದ ಹಳ್ಳಿಗಳ ಸಮಗ್ರ ನೋಟ ಕುರಿತ ಲೇಖನ ಇಲ್ಲಿದೆ.

ಬಾನುಪ್ರಸಾದ ಕೆ.ಎನ್\u200c. | Vijaya Karnataka Web 9 Apr 2020, 5:37 pm
ಅದೃಷ್ಟವಶಾತ್ ಮಾರಕ ಕೊರೊನಾ ಸೋಂಕು ಇನ್ನೂ ಗ್ರಾಮೀಣ ಭಾಗಕ್ಕೆ ತಲುಪಿಲ್ಲ. ಆದರೂ, ಜನರಲ್ಲಿ ಈಗಾಗಲೇ ಆತಂಕ ಮನೆಮಾಡಿದೆ. ನಗರಗಳಿಂದ ಹಳ್ಳಿಗಳಿಗೆ ಬಂದಿರುವ ಜನರೇ ಹಳ್ಳಿಗರ ಆತಂಕಕ್ಕೆ ಪ್ರಮುಖ ಕಾರಣರಾಗಿದ್ದಾರೆ. ನಗರ ಪ್ರದೇಶದಲ್ಲಿ ಸೋಂಕಿತರೊಂದಿಗೆ ಸಂಪರ್ಕ ಹೊಂದಿ ಬಂದಿದ್ದರೆ ಏನು ಮಾಡುವುದು ಎಂಬ ಚಿಂತೆ ಹಳ್ಳಿಗರದ್ದು. ಆದರೆ, ಹಳ್ಳಿಗರು ಮನೆಯಲ್ಲೇ ಕೂರುವಂತಿಲ್ಲ. ದಿನಬೆಳಗಾದರೆ ಹಾಲು ಕರೆಯುವುದರಿಂದ ಹಿಡಿದು, ತಮ್ಮ ನಿತ್ಯ ಕಾಯಕದಲ್ಲಿ ತೊಡಗಲೇ ಬೇಕು. ಇದೀಗ ಕೊರೊನಾ ಆತಂಕದಲ್ಲೇ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗುತ್ತಿದ್ದಾರೆ ಹಳ್ಳಿಗಳ ಶ್ರಮಜೀವಿ ರೈತರು.
Vijaya Karnataka Web village


ಯುಗಾದಿ ಹಬ್ಬದ ಮುನ್ನಾದಿನ ನಗರ ಪ್ರದೇಶಗಳಿಂದ ಬಹಳಷ್ಟು ಜನರು ತಮ್ಮ ತಮ್ಮ ಊರುಗಳಿಗೆ ಬಂದಿದ್ದಾರೆ. ಅಂಥವರಿಂದ ಸೋಂಕು ಹರಡಿದರೆ ಏನು ಮಾಡುವುದು ಎಂಬ ಭಯ ಬಹುತೇಕರಲ್ಲಿ ಮನೆ ಮಾಡಿದೆ. ಹೊರಗಿನಿಂದ ಬಂದವರು ಮನೆಯಲ್ಲಿರದೆ, ಸಾಮಾನ್ಯ ಜನರಂತೆ ಒಡಾಡಿಕೊಂಡಿರುವುದು ಕೂಡ ಜನರ ಭಯ ಹೆಚ್ಚಲು ಮತ್ತೊಂದು ಕಾರಣವಾಗಿದೆ.

'ಪ್ರಧಾನಿ ನರೇಂದ್ರ ಮೋದಿಯವರು 21 ದಿನಗಳ ಕಾಲ ಮನೆಯಿಂದ ಹೊರಬರದಂತೆ ಕರೆ ನೀಡಿದ್ದೇ ತಡ, ಮುಂಬಯಿ, ಬೆಂಗಳೂರು, ಹೂದರಾಬಾದ್ ಮೊದಲಾದ ಮಹಾನಗರಗಳಲ್ಲಿದ್ದ ಹಲವಾರು ಜನತೆ ತಮ್ಮ ತಮ್ಮ ಹಳ್ಳಿಗಳಿಗೆ ದೌಡಾಯಿಸಿದ್ದಾರೆ. ಕೆಲವೊಂದು ಗ್ರಾಮಗಳಲ್ಲಿ ಸ್ವಯಂ ನಿರ್ಬಂಧದಿಂದ ಸಂಪರ್ಕ ರಸ್ತೆಗಳನ್ನೇ ಮುಚ್ಚಿದ್ದಾರೆ. ಅಲ್ಲದೆ, ಸಂಬಂಧಿಕರ ಭೇಟಿ ಮಾಡುವ ಗೋಜಿಗೂ ಹೋಗುತ್ತಿಲ್ಲ. ಪಶುಪಾಲನೆ, ರೇಷ್ಮೆ, ತೋಟಗಾರಿಕೆ ಸೇರಿದಂತೆ ಕೃಷಿ ಚಟುವಟಿಕೆಯಲ್ಲಿ ದಿನವಿಡಿ ನಿರತರಾಗಿದ್ದಾರೆ.

ಬಡವರಿಗೆ ನೆರವಾಗುವ ಮೂಲಕ ಸರ್ಕಾರದ ಜತೆ ಕೈ ಜೋಡಿಸಿ: ಮಾಜಿ ಪ್ರಧಾನಿ

ವೃದ್ಧಾಶ್ರಮಗಳಾಗಿದ್ದ ಗ್ರಾಮಗಳೀಗ ಫುಲ್‌ ಬ್ಯುಸಿ
ಹಣ ದುಡಿಯುವ ರೇಸ್‌ನಲ್ಲಿ ಬಿದ್ದು, ಯುವಕರೆಲ್ಲ ಮಹಾನಗರಗಳನ್ನು ಸೇರಿ ದಶಕಗಳೇ ಕಳೆದಿದ್ದವು. ಆದರೀಗ, ಲಾಕ್‌ಡೌನ್‌ ಪರಿಣಾಮ ಮತ್ತೆ ಹಳ್ಳಿಗಳಿಗೆ ಮರಳುವಂತಾಗಿದೆ. ಹಬ್ಬ- ಹರಿದಿನಗಳಲ್ಲಿ ಬಂದು ಹೋಗುತ್ತಿದ್ದ ಜನ ತಿಂಗಳ ಕಾಲ ಮನೆಯಲ್ಲೇ ನೆಲೆಸುವಂತಾಗಿದ. ಇದೀಗ, ಮನೆಮಂದಿಯೆಲ್ಲ ಸೇರಿ ಜಮೀನಿಗೆ ಹೋಗುತ್ತಿದ್ದಾರೆ. ಈಗಾಗಲೇ ವರ್ಷದ ಮೊದಲ ಮಳೆ ಸುರಿದಿದ್ದು, ಮುಂಗಾರು ಬಿತ್ತನೆಗೆ ಹೊಲಗಳನ್ನು ಹಸನು ಮಾಡುತ್ತಿದ್ದಾರೆ. ವರ್ಷಾನುಗಟ್ಟಲೆ ಹೊಲಗಳಿಗೆ ತೆರಳದವರೂ ಕೂಡ, ಮನೆಗಳಲ್ಲಿ ಕೂರಲಾಗದೆ ಜಮೀನುಗಳತ್ತ ಮುಖ ಮಾಡುವಂತಾಗಿದೆ. ಸ್ಟೇರಿಂಗ್‌ ಹಿಡಿಯುತ್ತಿದ್ದ ಕೈಗಳೀಗ ಕುಡುಗೋಲು ಹಿಡಿದು ಹೊಲಗಳಲ್ಲಿ ಬೆಳೆದ ಕಳೆ ಗಿಡಗಳನ್ನು ಕಡಿದು ಹಸನು ಮಾಡುತ್ತಿವೆ. ಎಷ್ಟೋ ವರ್ಷಗಳಿಂದ ಕೆಲಸ ಮಾಡದೇ ಮೃದವಾಗಿಬಿಟ್ಟದ್ದ ಕೈಗಳಲ್ಲಿ ಬೊಬ್ಬೆಗಳು ಮೂಡಿ, ಮತ್ತೆ ಹಸ್ತಗಳು ಒರಟಾಗುತ್ತಿದೆ. ಮೈಯಲ್ಲಿ ತುಂಬಿಕೊಡಿದ್ದ ಕೊಬ್ಬೆಲ್ಲವೂ ಸ್ವಲ್ಪ ಸ್ವಲ್ಪವೇ ಕರಗುತ್ತಿದೆ.

ಜನಸಾಮಾನ್ಯರ ವರ್ತನೆ ಮೇಲೆ ನಿಂತಿದೆ ಲಾಕ್‌ಡೌನ್: ಗೃಹ ಸಚಿವ ಬೊಮ್ಮಾಯಿ

ಮನೆಮನೆ ಮುಂದೆ ನಿಂತಿವೆ ಕಾರುಗಳು:
ಮಹಾನನಗರಗಳಲ್ಲಿ ಟ್ಯಾಕ್ಸಿ ಓಡಿಸುತ್ತಿದ್ದವರಿಗೆಲ್ಲ ಈಗ ರಜೆ. ಅಂದರೆ, ಟ್ಯಾಕ್ಸಿ ಚಾಲಕರಿಗೆಲ್ಲ ಇಗ ಸಂಕಷ್ಟದ ಸಮಯ. ಸಾಲ ಮಾಡಿ ಕಾರು ತೆಗೆದುಕೊಂಡು ಐಡಿ-ಬಿಟಿ ಕಂಪನಿಗಳಲ್ಲಿ ಕ್ಯಾಬ್‌ ಸೇವೆ ನೀಡುತ್ತಿರುವವರಲ್ಲಿ ಬಹುತೇಕರು ಹಳ್ಳಿಯಿಂದ ಬಂದ ಯುವಕರೇ ಆಗಿದ್ದಾರೆ. ಆದರೀಗ ಲಾಕ್‌ ಡೌನ್‌ ಕಾರಣ ಐಟಿ-ಬಿಟಿ ಸಂಸ್ಥೆಗಳೂ ಬಾಗಿಲು ಹಾಕಿಕೊಂಡಿವೆ. ಅಲ್ಲಿನ ನೌಕರರೇನೋ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಆದರೆ, ಕ್ಯಾಬ್‌ ಚಾಲಕರ ಕೈ ಖಾಲಿಯಾಗಿದೆ. ತಮ್ಮ ಕಾರುಗಳನ್ನೆಲ್ಲ ಹಳ್ಳಿಗಳಿಗೆ ತಂದು ಮನೆಗಳ ಮುಂದೆ ನಿಲ್ಲಿಸಿದ್ದಾರೆ. ಮತ್ತೆ ಲಾಕ್‌ಡೌನ್‌ ಮುಂದುವರಿದರೆ, ಕಾರ್ ಲೋನ್‌ ಹೇಗೆ ಕಟ್ಟುವುದು, ಜೀವನ ಹೇಗೆ ನಡೆಸುವುದು ಎಂಬ ಚಿಂತೆಯಲ್ಲಿದ್ದಾರೆ ಕ್ಯಾಬ್‌ ಚಾಲಕರು.

ಅಜ್ಜಿಯರ ಎಲೆ- ಅಡಿಕೆ ಚೀಲವೂ ಖಾಲಿ
ಅಲ್ಪಸ್ವಲ್ಪ ಓದಿರುವವರಿಗೆ, ಮನೆಗಳಲ್ಲಿ ಟಿವಿ ಇರುವವರಿಗೆ ಕೊರೊನಾ ಲಾಕ್‌ಡೌನ್‌ ಬಗ್ಗೆ ಗೊತ್ತೇ ಇರುತ್ತದೆ. ಆದರೆ, ಎಂಭತ್ತೋ, ತೊಂಭತ್ತೋ ವರ್ಷ ವಯಸ್ಸಾಗಿರುವ ಅಜ್ಜಿ, ತಾತಂದಿರಿಗೆ ಈ ಕೊರೊನಾ ಎಂದರೇ ಅರ್ಥವಾಗದ ವಿಷಯ. ಅವರಿಗೋ, ಎಲೆ, ಅಡಿಕೆ, ಕಡ್ಡಿಪುಡಿ, ಹೊಗೆ ಸೊಪ್ಪು ಬೇಕೇಬೇಕು. ಆದರೆ ಲಾಕ್‌ಡೌನ್‌ ಕಾರಣದಿಂದ ಇದ್ಯಾವ ವಸ್ತುಗಳೂ ಸಿಗದಂತಾಗಿವೆ. ಎಲೆ, ಅಡಿಕೆ ಹೊಗೆಸೊಪ್ಪು ತಂದುಕೊಟ್ಟಿಲ್ಲ ಎಂದು ತಮ್ಮ ಮಕ್ಕಳನ್ನು ಬೈದಿದ್ದೂ ಇದೆ. ಶತಮಾನದ ಹಿಂದಿನ ಕಾಯಿಲೆಗಳಾದ ಪ್ಲೇಗು, ಕಾಲರಾಗಳ ಉದಾಹರಣೆ ಕೊಟ್ಟು ಹೇಳಿದಾಗಲೇ ಅವರಿಗೆ ಪರಿಸ್ಥಿತಿಯ ಅರ್ಥವಾಗುವುದು.

ಹಳ್ಳಿಗರಿಗೆ ಕೋಳಿಗಳ ಹಬ್ಬ
ಕೊರೊನಾ ವೈರಸ್‌ ಜತೆಗೆ ಹಕ್ಕಿಜ್ವರದ ಭೀತಿಯೂ ಎದುರಾದ ಕಾರಣ, ಕುಕ್ಕುಟೋದ್ಯಮಕ್ಕೂ ಪೆಟ್ಟು ಬಿದ್ದಿದೆ. ಪೌಲ್ಟ್ರಿ ಫಾರಂಗಳನ್ನೇ ನೆಚ್ಚಿಕೊಂಡಿರುವವರಿಗೆ ಇದು ತುಂಬಲಾರದ ನಷ್ಟವಾಗಿದೆ. ಕೋಳಿಗಳನ್ನು ನಾಶಪಡಿಸುವಂತೆ ತಿಳಿಸುತ್ತಿದ್ದಂತೆಯೇ, ಕೋಳಿ ಸಾಕಿದವರಿಗೆ ಕೋಳಿಗಳನ್ನು ಏನು ಮಾಡಬೇಕೆಂಬ ಚಿಂತೆ ಎದುರಾಗಿತ್ತು. ಹಳ್ಳಿಹಳ್ಳಿಗಳ ಮೇಲೆ 50 ರೂಪಾಯಿ ಒಂದು ಕೋಳಿ ಎಂದು ಮಾರಿಯೇ ಬಿಟ್ಟರು. ಹಳ್ಳಿಗಳಲ್ಲಿ ಇದೇ ಒಂದು ಅವಕಾಶ ಎಂದು ಒಂದೊಂದು ಮನೆಯಲ್ಲೇ ಐದೈದು ಕೋಳಿಗಳನ್ನು ಕೊಂಡುಕೊಂಡರು. ಇನ್ನು ಇವರಿಗೆ 15 ದಿನ ತರಕಾರಿಯೇ ಬೇಡಿ.

ಬೆಳೆ ಬೆಳೆದವರಿಗೆ ಮಾರುಕಟ್ಟೆಯೇ ಇಲ್ಲ
ದೊಡ್ಡ ಉದ್ಯಮಿಗಳಿಗಷ್ಟೇ ಅಲ್ಲ, ಕುಗ್ರಾಮಗಳ ಸಣ್ಣ ರೈತರಿಗೂ ಲಾಕ್‌ಡೌನ್‌ ಬಿಸಿ ತಟ್ಟಿದೆ. ಅಷ್ಟೋ ಇಷ್ಠೋ ಉಳಿಸಿಟ್ಟುಕೊಂಡ ಬಂಡವಾಳವನ್ನೆಲ್ಲ ಹಾಕಿ ಬೆಳೆ ಬೆಳೆದ ರೈತರಿಗೆ ಈಗ ದೇವರೇ ಗತಿ ಎಂಬಂತಾಗಿದೆ. ಸಂತೆಗಳಿಲ್ಲ, ಮಾರುಕಟ್ಟೆಗಳಿಲ್ಲ, ಇದರಿಂದಾಗಿ ಬೆಳೆ ಬೆಳೆದ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಇದೀಗ ಕೃಷಿ ಉತ್ಪನ್ನಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗಿದ್ದರೂ, ತರಕಾರಿಗಳಿಗೆ ಬೇಡಿಕೆ ಕೊರತೆ ಎದುರಾಗಿದೆ.

ಸಾವಿನ ಮೆನೆಗೂ ಬಾರದ ಜನ
ಹಳ್ಳಿಗಳಲ್ಲಿ ವೃದ್ಧರು ಸಾವನ್ನಿಪ್ಪದರೆ, ಸಾವಿನ ಮನೆಗೂ ಯಾರೂ ಬರುತ್ತಿಲ್ಲ. ಹತ್ತಿರದ ಸಂಬಂಧಿಗಳ ಬಂದರೂ ಒಬ್ಬರೊನ್ನಬ್ಬರು ಅನುಮಾನದಿಂದ ನೋಡುವಂತಹ ಪರಿಸ್ಥಿತಿ ಎದುರಾಗಿದೆ. ತಿಥಿ ಕಾರ್ಯಗಳಿಗೆ ಪೂಜಾರಿಯೂ ಬರದಂತಹ ಸನ್ನಿವೇಶ ಎದುರಾಗಿದೆ.
ಲೇಖಕರ ಬಗ್ಗೆ
ಬಾನುಪ್ರಸಾದ ಕೆ.ಎನ್\u200c.
ವಿಜಯ ಕರ್ನಾಟಕ ಡಿಜಿಟಲ್\u200c ಪತ್ರಕರ್ತ. ವಿಜ್ಞಾನ ತಂತ್ರಜ್ಞಾನ, ರಾಷ್ಟ್ರೀಯ- ಅಂತಾರಾಷ್ಟ್ರೀಯ, ಸಾಹಿತ್ಯ-ಕಲೆ, ಶಿಕ್ಷಣ, ಆಸಕ್ತಿಯ ವಿಷಯಗಳು... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ