ಸೆಷನ್ ಬಿಟ್ಸ್: ಅನಾರೋಗ್ಯದ ನಡುವೆಯೂ ಡಿಕೆಶಿ ಹಾಜರಿ
ಅನಾರೋಗ್ಯದ ನಡುವೆಯೇ ಇಂಧನ ಸಚಿವ ಡಿ.ಕೆ. ಶಿವಕುಮಾರ್ ವಿಧಾನಮಂಡಲ ಕಲಾಪಕ್ಕೆ ಶುಕ್ರವಾರ ಹಾಜರಾದರು. ಸಚಿವರಿಗೆ ಡೆಂಗ್ಯೂ ಜ್ವರ ಬಂದಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.
ಬೆಳಗಾವಿ: ಅನಾರೋಗ್ಯದ ನಡುವೆಯೇ ಇಂಧನ ಸಚಿವ ಡಿ.ಕೆ. ಶಿವಕುಮಾರ್ ವಿಧಾನಮಂಡಲ ಕಲಾಪಕ್ಕೆ ಶುಕ್ರವಾರ ಹಾಜರಾದರು. ಸಚಿವರಿಗೆ ಡೆಂಗ್ಯೂ ಜ್ವರ ಬಂದಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಪ್ರಶ್ನೋತ್ತರ ಕಲಾಪದ ಆರಂಭದಲ್ಲಿ ಗೈರುಹಾಜರಾಗಿದ್ದ ಸಚಿವರು ಮಧ್ಯದಲ್ಲಿ ಸದನದಲ್ಲಿ ಕಾಣಿಸಿಕೊಂಡು ತಮ್ಮ ಇಲಾಖೆಯ ಪ್ರಶ್ನೆಗಳಿಗೂ ಉತ್ತರ ಒದಗಿಸಿದರು.
----
- ಎರಡನೇ ದಿನವೂ ಚಕ್ಕರ್
ಶುಕ್ರವಾರದ ಕಲಾಪದಲ್ಲೂ ದೊಡ್ಡ ಸಂಖ್ಯೆಯಲ್ಲೇ ಶಾಸಕರು ಗೈರು ಹಾಜರಾಗುವ ಮೂಲಕ ಕಳಸಾ-ಬಂಡೂರಿ ವಿಚಾರದಲ್ಲಿ ತಮ್ಮ ಬದ್ಧತೆ ಎಷ್ಟಿದೆ ಎನ್ನುವುದನ್ನು ಜಾಹೀರುಗೊಳಿಸಿದ್ದಾರೆ. ಗುರುವಾರ ಮಧ್ಯಾಹ್ನವೇ ಮಹದಾಯಿ ಕುರಿತ ಚರ್ಚೆ ಆರಂಭವಾಗಿದ್ದರೂ ಶಾಸಕರ ಸಂಖ್ಯೆ ಕಡಿಮೆಯಿತ್ತು. ಇದೇ ಧೋರಣೆ ಮುಂದುವರಿದಿದ್ದು, ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯದಲ್ಲಿ ಶಾಸಕರು ಗಾವುದ ದೂರ ಹೋದಂತಾಗಿದೆ. ಹಾಜರಿ ಪುಸ್ತಕದಲ್ಲಿ ಸಹಿ ಮಾಡಿದಂತೆ ವಿಧಾನಸಭೆ ಕಲಾಪಕ್ಕೆ ಶುಕ್ರವಾರ ಹಾಜರಾದವರ ಸಂಖ್ಯೆ 116. ಅಲ್ಲಿಗೆ ಬರೋಬ್ಬರಿ 69 ಮಂದಿ ಚಕ್ಕರ್ ಹೊಡೆದಂತಾಗಿದೆ. ಸದನದಲ್ಲಿದ್ದ ಹೆಚ್ಚಿನವರಿಗೂ ಚರ್ಚೆಯಲ್ಲಿ ಆಸಕ್ತಿಯಿದ್ದಂತೆ ಕಾಣಲಿಲ್ಲ. ಮಹದಾಯಿ ಸಂಬಂಧ ಜೆಡಿಎಸ್ನ ಶಿವಲಿಂಗೇಗೌಡ ಮಾತನಾಡುವಾಗ ಒಂದು ಹಂತದಲ್ಲಿ ಪ್ರಧಾನ ಪ್ರತಿಪಕ್ಷ ದ ಸಾಲಿನ ಎಲ್ಲ ಕುರ್ಚಿಗಳೂ ಖಾಲಿಯಾಗಿದ್ದವು. ಪ್ರತಿಪಕ್ಷ ದ ನಾಯಕ ಶೆಟ್ಟರ್ ಹಾಗೂ ಹಿರಿಯ ಶಾಸಕರು ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಗೆ ತೆರಳಿದ್ದರೆ ಇತರರು, ಮೊಗಸಾಲೆ ಮಾತುಕತೆಯಲ್ಲಿ ನಿರತರಾಗಿದ್ದರು. ನಂತರ ಕಾಂಗ್ರೆಸ್ನ ಸಿದ್ದುನ್ಯಾಮಗೌಡ, ಜೆಡಿಎಸ್ನ ದತ್ತ ಮಾತನಾಡುವಾಗಲೂ ಸದನದ ಒಳಗಿರುವ ಶಾಸಕರ ಸಂಖ್ಯೆ, 30 ರ ಆಸುಪಾಸಿನಲ್ಲೇ ಇತ್ತು.