ಆ್ಯಪ್ನಗರ

ಕೃಷಿ ಮಸೂದೆಯಿಂದ ರೈತರ ಫೇಸ್‌ಬುಕ್ ಗ್ರೂಪ್‌ವರೆಗೆ.. ಪಚ್ಚೆ ನಂಜುಂಡಸ್ವಾಮಿ ಸಂದರ್ಶನ..

ದಿವಂಗತ ಪ್ರೊ. ಎಂ. ಡಿ. ನಂಜುಂಡಸ್ವಾಮಿ ಅವರು, ರೈತರು ಸ್ವಾವಲಂಬಿಗಳಾಗಿ ಇರಬೇಕು ಎಂದು ಬಯಸಿದ್ದರು. ರೈತರು ಸರ್ಕಾರಗಳ ಮೇಲೆ ಅವಲಂಬಿತರಾಗದೆ, ನೇರವಾಗಿ ತಾವೇ ಗ್ರಾಹಕರಿಗೆ ಮಾರಾಟ ಮಾಡಬೇಕು ಅನ್ನೋದು ಪ್ರೊ. ನಂಜುಂಡಸ್ವಾಮಿ ಅವರ ಅಭಿಮತವಾಗಿತ್ತು.

Vijaya Karnataka Web 23 Sep 2020, 6:43 pm
ಸಂಸತ್‌ನಲ್ಲಿ ಕೃಷಿ ಮಸೂದೆ ಭಾರೀ ಸದ್ದು ಮಾಡುತ್ತಿದೆ. ರಾಜ್ಯಸಭೆಯಲ್ಲಿ ವಿಪಕ್ಷಗಳ ವಿರೋಧದ ನಡುವೆಯೂ ಕೃಷಿ ಮಸೂದೆಗಳು ಅಂಗೀಕಾರಗೊಂಡಿವೆ. ರಾಜ್ಯದಲ್ಲೂ ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಸರ್ಕಾರ ಸುಗ್ರೀವಾಜ್ಞೆ ಜಾರಿ ಮಾಡಿದೆ. ಈ ಹೊತ್ತಲ್ಲಿ ದೇಶದೆಲ್ಲೆಡೆಯಂತೆ ರಾಜ್ಯದಲ್ಲೂ ರೈತ ಸಂಘಟನೆಗಳು ಪ್ರತಿಭಟನೆಯ ಹಾದಿ ಹಿಡಿದಿವೆ.
Vijaya Karnataka Web farmer leader pachhe nanjundaswamy interview from agriculture bill to farmers facebook group
ಕೃಷಿ ಮಸೂದೆಯಿಂದ ರೈತರ ಫೇಸ್‌ಬುಕ್ ಗ್ರೂಪ್‌ವರೆಗೆ.. ಪಚ್ಚೆ ನಂಜುಂಡಸ್ವಾಮಿ ಸಂದರ್ಶನ..


ಈ ಸಂದರ್ಭದಲ್ಲಿ ನಿಮ್ಮ ವಿಜಯ ಕರ್ನಾಟಕ ವೆಬ್‌ ರೈತ ಮುಖಂಡರಾದ ಪಚ್ಚೆ ನಂಜುಂಡಸ್ವಾಮಿ ಅವರನ್ನು ಸಂಪರ್ಕಿಸಿತು. ರೈತ ನಾಯಕ ಪ್ರೊ. ಎಂ. ಡಿ. ನಂಜುಂಡಸ್ವಾಮಿ ಅವರ ಪುತ್ರರಾದ ಪಚ್ಚೆ ನಂಜುಂಡಸ್ವಾಮಿ ಅವರು ವಿಜಯ ಕರ್ನಾಟಕ ವೆಬ್‌ ನಡೆಸಿದ ಆನ್‌ಲೈನ್ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃಷಿ ಮಸೂದೆಗಳ ಕುರಿತಾಗಿ ತಮ್ಮ ಅಭಿಪ್ರಾಯ ಮುಂದಿಟ್ಟಿದ್ಧಾರೆ.

Video-ಕೃಷಿ ಮಸೂದೆಯಿಂದ ರೈತರ ಫೇಸ್‌ಬುಕ್ ಗ್ರೂಪ್‌ವರೆಗೆ.. ಪಚ್ಚೆ ನಂಜುಂಡಸ್ವಾಮಿ ಸಂದರ್ಶನ..

​ಪ್ರಶ್ನೆ: ರೈತ ಮಸೂದೆಗಳಿಗೆ ನಿಮ್ಮ ನಿಲುವೇನು..?

ಉತ್ತರ: ನಾನು ರೈತ ಮಸೂದೆಯ ಪರ ಅಥವಾ ವಿರೋಧ ಎನ್ನುವ ಪದ ಬಳಕೆ ಮಾಡೋದಿಲ್ಲ. ಏಕೆಂದರೆ, ಈ ಸಂಬಂಧ ಅಧ್ಯಯನಗಳ ಅಗತ್ಯತೆ ಇದೆ. ಅದರ ಪರಿಣಾಮಗಳ ಬಗ್ಗೆ ತಿಳಿಯಲು ಸಮಯಾವಕಾಶ ಬೇಕು. ಆ ನಂತರ ಹೋರಾಟ ರೂಪಿಸಬೇಕು. ಏಕೆಂದರೆ, ಈಗ ಕೋವಿಡ್‌ ಹಾವಳಿ ಇದೆ. ಜೊತಗೆ ಅರ್ಥ ವ್ಯವಸ್ಥೆ ಕೂಡಾ ಕುಸಿದಿದೆ.

ಕೃಷಿ ಮಸೂದೆ ಜಾರಿಯಿಂದ ರೈತರು ಎಲ್ಲಿ ಬೇಕಾದ್ರೂ ತಮ್ಮ ಕೃಷಿ ಉತ್ಪನ್ನ ಮಾರಬಹುದು. ಯಾರು ಬೇಕಾದ್ರೂ ಕೃಷಿ ಉತ್ಪನ್ನ ಕೊಳ್ಳಬಹುದು. ಇಲ್ಲಿ ಗ್ರಾಹಕರೇ ಬಂದು ಖರೀದಿಸಿದರೆ ಯಾವುದೇ ಸಮಸ್ಯೆ ಇಲ್ಲ. ಆದ್ರೆ. ಇಲ್ಲಿ ದಳ್ಳಾಳಿಗಳು, ವ್ಯಾಪಾರಿಗಳು ಬರಬಹುದು. ಆಗ ಆರಂಭದಲ್ಲಿ ದಲ್ಲಾಳಿಗಳು ಹಾಗೂ ವ್ಯಾಪಾರಿಗಳು ರೈತರಿಗೆ ಹೆಚ್ಚು ಬೆಲೆ ಕೊಡ್ತಾರೆ. ನಂತರ ಗ್ರೇಡಿಂಗ್‌ ದಂಧೆ ಆರಂಭಿಸುತ್ತಾರೆ. ಗುಣಮಟ್ಟದ ಆಧಾರದ ಮೇಲೆ ಕೃಷಿ ಉತ್ಪನ್ನಗಳನ್ನು ವಿಭಜಿಸಿ ಅದಕ್ಕೆ ಕಡಿಮೆ ಬೆಲೆ ನಿಗದಿ ಮಾಡುತ್ತಾರೆ. ರೈತರಿಗೆ ವ್ಯಾಪಾರಿಗಳು ಮೋಸ ಮಾಡಬಹುದು. ಆಗ ರೈತರು ಅನಿವಾರ್ಯವಾಗಿ ಎಪಿಎಂಸಿಗಳತ್ತ ಮತ್ತೆ ತಿರುಗಿ ನೋಡಬೇಕಾಗುತ್ತೆ.

​ಹಾಗಾದ್ರೆ ಈ ಹಂತದಲ್ಲಿ ರೈತರು ಏನು ಮಾಡಬೇಕು..?

ಕಾಯ್ದೆಗಳು, ಕಾನೂನುಗಳು ರಾಜಕೀಯ ಉದ್ದೇಶಕ್ಕಾಗಿ, ವೋಟಿಗಾಗಿ ಆಗಬಾರದು. ಆ ರೀತಿ ಆದರೆ ದೇಶದ ಬೆನ್ನೆಲುಬಾದ ರೈತರಿಗೆ ಮೋಸವಾಗುತ್ತೆ. ದಿವಂಗತ ಪ್ರೊ. ಎಂ. ಡಿ. ನಂಜುಂಡಸ್ವಾಮಿ ಅವರು, ರೈತರು ಸ್ವಾವಲಂಬಿಗಳಾಗಿ ಇರಬೇಕು ಎಂದು ಬಯಸಿದ್ದರು. ರೈತರು ಸರ್ಕಾರಗಳ ಮೇಲೆ ಅವಲಂಬಿತರಾಗದೆ, ನೇರವಾಗಿ ತಾವೇ ಗ್ರಾಹಕರಿಗೆ ಮಾರಾಟ ಮಾಡಬೇಕು ಅನ್ನೋದು ಪ್ರೊ. ನಂಜುಂಡಸ್ವಾಮಿ ಅವರ ಅಭಿಮತವಾಗಿತ್ತು.

ರೈತರು ಹೊಸ ತಂತ್ರಜ್ಞಾನಗಳನ್ನು ತಮ್ಮದಾಗಿಸಿಕೊಳ್ಳಬೇಕು. ಸೋಲಾರ್ ಡ್ರೈಯರ್‌ನಂಥಾ ಹೊಸ ತಂತ್ರಜ್ಞಾನಗಳನ್ನು ಬಳಕೆ ಮಾಡಬೇಕು. ತರಕಾರಿ, ಕೃಷಿ ಉತ್ಪನ್ನಗಳ ನೀರಿನಂಶ ತೆಗೆದು, ಪ್ಯಾಕಿಂಗ್ ಮಾಡಿ ಮಾರಬಹುದು. ರೈತರೇ ತಮ್ಮ ಬೆಳೆಯನ್ನು ಮಾರಬೇಕು. ಹೈವೇನಲ್ಲೇ ರೈತರು ಮಾರಾಟ ಮಾಡಬಹುದು. ಸರ್ಕಾರಿ ಕರಾಬು ಜಮೀನುಗಳಲ್ಲಿ ದೈನಂದಿನ ಸಂತೆಯನ್ನೇ ಮಾಡಬಹುದು.

​ಎಪಿಎಂಸಿಗಳಲ್ಲಿ ರೈತರಿಗೆ ಏನು ಸಮಸ್ಯೆ ಇದೆ..?

ರೈತರು ತಮ್ಮದೇ ಸಂಘ ಕಟ್ಟಿಕೊಂಡು ಅವರೇ ಲಾಭಾಂಶ ನಿಗದಿ ಮಾಡಿಕೊಂಡು ಮಧ್ಯವರ್ತಿಗಳಿಲ್ಲದೆ ತಾವೇ ಮಾರಾಟ ಮಾಡಬೇಕಾಗಿದೆ. ಏಕೆಂದರೆ, ಎಪಿಎಂಸಿಗಳಲ್ಲಿ ಮಧ್ಯವರ್ತಿಗಳು, ದಲ್ಲಾಳಿಗಳ ಕಾಟ ಜೋರಾಗಿದೆ. ರೈತರು ಎಪಿಎಂಸಿಗಳ ದಲ್ಲಾಳಿಗಳ ಹಿಡಿತದಿಂದ ಪಾರಾದರೆ ಮಾತ್ರ ಅವರಿಗೆ ಉಳಿಗಾಲವಿದೆ.

ಗ್ರೇಡಿಂಗ್ ದಂಧೆಯಿಂದ ರೈತರು ಹೊರಬರಬೇಕಿದೆ. ರೈತರು ಬೆಳೆ ಬೆಳೆಯಲು ಆದ ಖರ್ಚು, ಲಾಭಾಂಶದ ಆಧಾರದ ಮೇಲೆ ಅವರ ಉತ್ಪನ್ನಗಳ ಬೆಲೆ ನಿಗದಿ ಆಗಬೇಕಿದೆ. ರೈತರು ಹಾಗೂ ಗ್ರಾಹಕರ ನಡುವೆ ನಿಲ್ಲುವ ಮಧ್ಯವರ್ತಿಗಳನ್ನು ಹೊಡೆದೋಡಿಸಬೇಕಿದೆ.

​‘ರೈತರಿಂದ ನೇರ ಗ್ರಾಹಕರಿಗೆ’ - ಫೇಸ್‌ಬುಕ್ ಗ್ರೂಪ್‌ನ ಆಶಯವೇನು..?

ಇದೀಗ ಫೇಸ್‌ಬುಕ್‌ನಲ್ಲಿ ರೈತರಿಂದ ನೇರ ಗ್ರಾಹಕರಿಗೆ ಎಂಬ ಫೇಸ್‌ಬುಕ್ ಗ್ರೂಪ್‌ ಭಾರೀ ಸದ್ದು ಮಾಡ್ತಿದೆ. ಈ ಗ್ರೂಪ್‌ ನಿರ್ಮಾಣಕ್ಕೆ ಹಿನ್ನೆಲೆಯೂ ಇದೆ. 15 ವರ್ಷಗಳ ಹಿಂದೆ ಚಿತ್ರನಟ ಅಶೋಕ್ ಅವರು ನೀರಾ ಹೋರಾಟದ ಸಮಯದಲ್ಲಿ ರೈತ ನಾಯಕ ಪ್ರೊ. ಎಂ. ಡಿ. ನಂಜುಂಡಸ್ವಾಮಿ ಅವರ ಮನೆಗೆ ಬಂದು ರೈತರು ಗ್ರಾಹಕರಿಗೆ ನೇರವಾಗಿ ಮಾರಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಅದು ಗಾಂಧೀಜಿಯವರ ಗ್ರಾಮ ಸ್ವರಾಜ್ ಮಾದರಿ ಎಂದು ನಂಜುಂಡಸ್ವಾಮಿ ಅವರೂ ದನಿಗೂಡಿಸಿದ್ದರು.

ಗುಜರಾತ್‌ನಲ್ಲಿ ಕುರಿಯನ್ ಅವರು ಹಾಲಿನ ಉತ್ಪನ್ನ ಬ್ರಾಂಡ್ ಅಮೂಲ್ ಸ್ಥಾಪಿಸಿ ಯಶ ಕಂಡ ರೀತಿಯಲ್ಲೇ, ನಮ್ಮ ರೈತರು ಸ್ವದೇಶಿ ಎಂಬ ಹೆಸರಿನೊಂದಿಗೆ ತಮ್ಮ ಉತ್ಪನ್ನ ಮಾಡಬೇಕು ಅನ್ನೋದು ಪ್ರೊ. ನಂಜುಂಡಸ್ವಾಮಿ ಅವರ ನಿಲುವಾಗಿತ್ತು. ಈ ವೇಳೆ ನಟ ರಜನಿಕಾಂತ್‌ ಅವರು ಸ್ವದೇಶಿ ಉತ್ಪನ್ನಕ್ಕೆ ನಮ್ಮದು ಎಂಬ ಹೆಸರಿಡುವಂತೆ ನಟ ಅಶೋಕ್ ಮೂಲಕ ಪ್ರೊ. ನಂಜುಂಡಸ್ವಾಮಿ ಅವರಿಗೆ ಸಲಹೆ ನೀಡಿದ್ದರು. ಈ ಎಲ್ಲಾ ಕನಸುಗಳನ್ನು ನನಸು ಮಾಡುವ ಹೊತ್ತಲ್ಲೇ ಪ್ರೊ. ನಂಜುಂಡಸ್ವಾಮಿ ಅವರು ಕ್ಯಾನ್ಸರ್‌ನಿಂದ ನಿಧನರಾದರು. ಇತ್ತೀಚೆಗೆ ರೇಖಾರಾಣಿ ಅಶೋಕ್ ಕಶ್ಯಪ್ ಅವರು ಈ ಆಶಯದೊಂದಿಗೆ ಫೇಸ್‌ಬುಕ್ ಗ್ರೂಪ್ ಆರಂಭಿಸಿದರು. ಇದರಲ್ಲಿ 14 ಸಾವಿರ ಸದಸ್ಯರಿದ್ದಾರೆ. ಇಲ್ಲಿ ರೈತರ ಜೊತೆಗೆ ಮಧ್ಯವರ್ತಿಗಳೂ ತಪ್ಪಾಗಿ ಸೇರಿಕೊಂಡಿರಬಹುದು. ಅವರನ್ನು ಕಂಡುಹಿಡಿಯಬೇಕಿದೆ. ರೈತರೇ ಇಲ್ಲಿ ಬೆಲೆ ನಿಗದಿ ಮಾಡಿ, ಗ್ರಾಹಕರಿಗೆ ತಲುಪಿಸಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ