ಆ್ಯಪ್ನಗರ

ಭಾರತದ ಪ್ರಥಮ ಮಾನವ ರಹಿತ ಹಾರಾಟ ಪರೀಕ್ಷೆ ಯಶಸ್ವಿ; ಸ್ವಿಫ್ಟ್ ತಂತ್ರಜ್ಞಾನದ ಪ್ರಥಮ ಪ್ರಯೋಗ!

ಸ್ಟೆಲ್ತ್ ವಿಂಗ್ ಫ್ಲೈಯಿಂಗ್ ಟೆಸ್ಟ್ ಬೆಡ್ ಅಥವಾ ಸ್ವಿಫ್ಟ್ ಎಂಬ ಹೆಸರಿನ ಭಾರತದ ಪ್ರಥಮ ಮಾನವ ರಹಿತ ಯುದ್ಧ ವಿಮಾನದ (ಅನ್ ಮ್ಯಾನ್ಡ್ ಕಾಂಬ್ಯಾಟ್ ಏರಿಯಲ್ ವೆಹಿಕಲ್ - ಯುಸಿಎವಿ) ಯಶಸ್ವಿ ಪ್ರಥಮ ಹಾರಾಟ ಪ್ರಯೋಗ ನಡೆಸಲಾಯಿತು. ಇದು ಈ ಯೋಜನೆಯಲ್ಲಿ ಒಂದು ನೂತನ ಮೈಲಿಗಲ್ಲಾಗಿದೆ. ಕರ್ನಾಟಕದ ಚಿತ್ರದುರ್ಗದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಈ ಯೋಜನೆಯ ಅಂಗವಾಗಿ ನಿರ್ಮಾಣಗೊಂಡ ವಿಮಾನವು ತನ್ನ ಪ್ರಥಮ ಹಾರಾಟವನ್ನು ಯಶಸ್ವಿಯಾಗಿ ಜುಲೈ 1ರಂದು ಕೈಗೊಂಡಿತು.

Authored byಗಿರೀಶ್ ಲಿಂಗಣ್ಣ | Vijaya Karnataka Web 2 Jul 2022, 11:37 am
ಸ್ಟೆಲ್ತ್ ವಿಂಗ್ ಫ್ಲೈಯಿಂಗ್ ಟೆಸ್ಟ್ ಬೆಡ್ ಅಥವಾ ಸ್ವಿಫ್ಟ್ ಎಂಬ ಹೆಸರಿನ ಭಾರತದ ಪ್ರಥಮ ಮಾನವ ರಹಿತ ಯುದ್ಧ ವಿಮಾನದ (ಅನ್ ಮ್ಯಾನ್ಡ್ ಕಾಂಬ್ಯಾಟ್ ಏರಿಯಲ್ ವೆಹಿಕಲ್ - ಯುಸಿಎವಿ) ಯಶಸ್ವಿ ಪ್ರಥಮ ಹಾರಾಟ ಪ್ರಯೋಗ ನಡೆಸಲಾಯಿತು. ಇದು ಈ ಯೋಜನೆಯಲ್ಲಿ ಒಂದು ನೂತನ ಮೈಲಿಗಲ್ಲಾಗಿದೆ.
Vijaya Karnataka Web swift technology
ಸಾಂದರ್ಭಿಕ ಚಿತ್ರ


ಕರ್ನಾಟಕದ ಚಿತ್ರದುರ್ಗದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಈ ಯೋಜನೆಯ ಅಂಗವಾಗಿ ನಿರ್ಮಾಣಗೊಂಡ ವಿಮಾನವು ತನ್ನ ಪ್ರಥಮ ಹಾರಾಟವನ್ನು ಯಶಸ್ವಿಯಾಗಿ ಜುಲೈ 1ರಂದು ಕೈಗೊಂಡಿತು.

"ಈ ವಿಮಾನವು ಸಂಪೂರ್ಣ ಸ್ವಯಂಚಾಲಿತ ವಿಧಾನದಲ್ಲಿ ಯಾವ ತೊಂದರೆಯೂ ಇಲ್ಲದೆ ಯಶಸ್ವಿ ಪ್ರಥಮ ಹಾರಾಟ ಕೈಗೊಂಡಿತು. ಈ ವಿಮಾನವು ಸ್ವಯಂಚಾಲಿತ ಟೇಕಾಫ್, ವೇ ಪಾಯಿಂಟ್ ನ್ಯಾವಿಗೇಷನ್, ಹಾಗೂ ಟಚ್ ಡೌನ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದೆ. ಈ ವಿಮಾನವು ಇಂತಹ ಪ್ರಮುಖ ರಕ್ಷಣಾ ತಂತ್ರಜ್ಞಾನದಲ್ಲಿ ಸ್ವಾವಲಂಬನೆಯ ಕಡೆಗಿನ ಪ್ರಮುಖ ಹೆಜ್ಜೆಯಾಗಿದ್ದು, ಭವಿಷ್ಯದ ಪ್ರಮುಖ ತಂತ್ರಜ್ಞಾನವಾದ ಮಾನವ ರಹಿತ ವಿಮಾನ ನಿರ್ಮಾಣದ ವಿಚಾರದಲ್ಲಿ ಅತ್ಯಂತ ಮಹತ್ವದ ಘಟ್ಟವಾಗಿದೆ" ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಹೇಳಿದೆ.

ಬರ್ಮುಡಾ ಟ್ರಯಾಂಗಲ್‌ನ ನಿಗೂಢ ಬಯಲು: ವಿಮಾನ, ಹಡಗುಗಳ ವಿಲಕ್ಷಣ ನಾಪತ್ತೆಗೆ ಕಾರಣ ಇದು...
"ಇದು ಮಾನವ ರಹಿತ ವಿಮಾನ ನಿರ್ಮಾಣದ ವಿಚಾರದಲ್ಲಿ ಪ್ರಮುಖ ಸಾಧನೆಯಾಗಿದ್ದು, ಅದಕ್ಕಾಗಿ ಮುಂದಿನ ದಾರಿಯನ್ನು ಸುಗಮಗೊಳಿಸುತ್ತದೆ. ಇದು ಪ್ರಮುಖ ಸೇನಾ ತಂತ್ರಜ್ಞಾನದ ವಿಚಾರದಲ್ಲಿ 'ಆತ್ಮನಿರ್ಭರ ಭಾರತದ ನಿರ್ಮಾಣಕ್ಕಾಗಿ ಹೊಸ ಹಾದಿಯನ್ನು ತೋರುತ್ತದೆ" ಎಂದು ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಡಿಆರ್‌ಡಿಓಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸ್ವಿಫ್ಟ್ ಯೋಜನೆಗೆ ಅಗತ್ಯವುಳ್ಳ ರಿಟ್ರ್ಯಾಕ್ಟೇಬಲ್ ಲ್ಯಾಂಡಿಂಗ್ ಗೇರ್ ಸೊಲ್ಯುಷನ್ ಅನ್ನು ಡಿಆರ್‌ಡಿಓ ಸಂಸ್ಥೆಯ, ಚೆನ್ನೈನಲ್ಲಿರುವ ಕಾಂಬ್ಯಾಕ್ಟ್ ವೆಹಿಕಲ್ಸ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ ಒದಗಿಸಿದೆ.

ಡಿಆರ್‌ಡಿಓ ತನ್ನ ಹೇಳಿಕೆಯಲ್ಲಿ ತಾನು ಈಗಾಗಲೇ ಈ ಯೋಜನೆಗೆ ಅಗತ್ಯವಿರುವ ಲ್ಯಾಂಡಿಂಗ್ ಗೇರ್ ನಿರ್ಮಾಣದ ಕಾರ್ಯವನ್ನು ಪೂರ್ಣಗೊಳಿಸಿದ್ದು, ಹಾರಾಟಕ್ಕೆ ಅಗತ್ಯವಿರುವ ಉಪಕರಣಗಳ ನಿರ್ಮಾಣದಲ್ಲಿ ತೊಡಗಿದೆ ಎಂದು ಅಕ್ಟೋಬರ್ 2020ರಲ್ಲಿ ಪ್ರಕಟವಾದ ತನ್ನ ತಂತ್ರಜ್ಞಾನ ಬುಲೆಟಿನ್ ನಲ್ಲಿ ಹೇಳಿಕೆ ನೀಡಿದೆ.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರ ಈ ಸ್ಟೆಲ್ತ್ ಯುಸಿಎವಿ ಯೋಜನೆಯ ಮೂಲ ಸಂಶೋಧನೆಯ ಜೊತೆ ಜೋಡಿಸಿಕೊಂಡಿತ್ತು. ಇತ್ತೀಚೆಗೆ ಐಐಟಿ ಕಾನ್ಪುರ ಒಂದು ಉಪನ್ಯಾಸದ ವೀಡಿಯೋವನ್ನು ಅಂತರ್ಜಾಲದಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಈ ವಿಮಾನದ ಒಂದು ಮಾದರಿಯನ್ನೂ ನೋಡಬಹುದಾಗಿದೆ. ಅದು ಬಹುತೇಕ ಸ್ವಿಫ್ಟ್‌ನ ಮೂಲ ಹಾರಾಟ ಮಾದರಿಯಂತೆಯೇ ಕಾಣುತ್ತಿತ್ತು.

ಈ ವಿಡಿಯೋದಲ್ಲಿ ಒಬ್ಬರು ಐಐಟಿ ಕಾನ್ಪುರದ ಪ್ರೊಫೆಸರ್ ಸಂಸ್ಥೆಯ ಏರೋಮಾಡೆಲಿಂಗ್ ಪ್ರಯೋಗಾಲಯದಲ್ಲಿ ಉಪನ್ಯಾಸ ನೀಡುವ ಸಂದರ್ಭದಲ್ಲಿ ಅವರ ಹಿಂದೆ ಈ ವಿಮಾನವನ್ನು ಇಟ್ಟಿದ್ದು, ನೋಡುಗರು ವಿಮಾನದ ಅಂಡರ್ ಕ್ಯಾರೇಜ್ ಮತ್ತು ಲ್ಯಾಂಡಿಂಗ್ ಗೇರ್‌ಗಳನ್ನು ಗಮನಿಸಬಹುದಾಗಿದೆ.

ದೇವಾಲಯದಲ್ಲಿ ಗೋಪುರವನ್ನು ಯಾಕೆ ನಿರ್ಮಿಸಲಾಗುತ್ತದೆ ಗೊತ್ತಾ..? ಇದರ ಕಾರಣವೇನು..?
ಘಾತಕ್ ಒಂದು ಮಾನವ ರಹಿತ ವಿಮಾನವಾಗಿ ನಿರ್ಮಾಣಗೊಂಡಿದ್ದು, ಇದನ್ನು ವಿಚಕ್ಷಣಾ ಉದ್ದೇಶದಿಂದ ಮತ್ತು ಪೂರ್ವ ನಿರ್ಧಾರಿತ ಗುರಿಯ ಮೇಲೆ ಆಯುಧಗಳ ಮೂಲಕ ದಾಳಿ ಮಾಡುವ ಎರಡೂ ಉದ್ದೇಶಗಳಿಗೂ ಬಳಸಿಕೊಳ್ಳಬಹುದು. ಈ ಸಂದರ್ಭಗಳಲ್ಲಿ ವಿಮಾನವು ಶತ್ರುಗಳ ವಾಯು ಸೀಮೆಯಲ್ಲಿದ್ದಾಗಲೂ ಶತ್ರುಗಳ ಸೆನ್ಸರ್‌ಗಳ ಕಣ್ಣು ತಪ್ಪಿಸಿ ಕಾರ್ಯ ನಿರ್ವಹಿಸುತ್ತವೆ.

ಯುಸಿಎವಿ ನಿರ್ಮಾಣಕ್ಕಾಗಿ ಡಿಆರ್‌ಡಿಓದ ಡಿಫೆನ್ಸ್ ಇಲೆಕ್ಟ್ರಾನಿಕ್ಸ್ ಅಪ್ಲಿಕೇಶನ್ ಲ್ಯಾಬೋರೇಟರಿ ಹಾಗೂ ಇನ್ನಿತರ ಪ್ರಯೋಗಾಲಯಗಳು ಬೆಂಗಳೂರು ಮೂಲದ ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ (ಎಡಿಎ) ಜೊತೆಗೂಡಿ ಕಾರ್ಯ ನಿರ್ವಹಿಸುತ್ತಿವೆ.

2009ರ ಆಸುಪಾಸಿನಲ್ಲಿ, ಈ ಯೋಜನೆಯ ಕುರಿತಾದ ಪ್ರಯೋಗಗಳು ಆರಂಭಗೊಂಡವು. ಆ ಸಂದರ್ಭದಲ್ಲಿ ಈ ಯೋಜನೆಯನ್ನು ಎಯುಆರ್‌ಎ (ಅಟಾನಮಸ್ ಅನ್ ಮ್ಯಾನ್ಡ್ ರಿಸರ್ಚ್ ಏರ್ ಕ್ರಾಫ್ಟ್) ಎಂದು ಕರೆಯಲಾಗುತ್ತಿತ್ತು.

ಈ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ ಅಥವಾ ಎಎಂಸಿಎ ಒಂದು ಐದನೇ ತಲೆಮಾರಿನ ಸ್ಟೆಲ್ತ್ ಯುದ್ಧ ವಿಮಾನವಾಗಿದ್ದು, ಸಂಪೂರ್ಣವಾಗಿ ಭಾರತೀಯ ನಿರ್ಮಾಣದ ವಿಮಾನವಾಗಿದೆ.

ಮೂಲಗಳ ಪ್ರಕಾರ, ಘಾತಕ್ ಯೋಜನೆಗೆ "ಲೀಡ್ - ಇನ್ ಪ್ರಾಜೆಕ್ಟ್" ಎಂದು ಮೇ 2016ರಲ್ಲೇ ಪರವಾನಗಿ ನೀಡಲಾಗಿದ್ದು, 2017ರ ಆರಂಭದಲ್ಲಿ ಯೋಜನೆಯ ಚಾಲನೆಗೆ ಹಣಕಾಸು ವ್ಯವಸ್ಥೆ ಒದಗಿಸಲು ಆರಂಭವಾಯಿತು.

ಪ್ರಸ್ತುತ ಈ ಯೋಜನೆ ಒಂದು ರಹಸ್ಯವಾಗಿಯೇ ಇರುವುದರಿಂದ ಈ ವಿಮಾನದ ತಾಂತ್ರಿಕ ವೈಶಿಷ್ಟ್ಯಗಳ ಕುರಿತು ಮಾಹಿತಿ ಇನ್ನೂ ಲಭ್ಯವಾಗಿಲ್ಲ. ರಾಷ್ಟ್ರೀಯ ಭದ್ರತಾ ಸಲಹೆಗಾರರು ಹಾಗೂ ಪ್ರಧಾನಮಂತ್ರಿ ಕಚೇರಿ ಈ ರಹಸ್ಯ ಯೋಜನೆಯ ಸಂಪೂರ್ಣ ನಿಯಂತ್ರಣ ಹೊಂದಿದ್ದಾರೆ.

ಏನಿದು ಸ್ವಿಫ್ಟ್ ಯುಎವಿ?

ತಂತ್ರಜ್ಞಾನ ಪ್ರದರ್ಶಕ (ಟೆಕ್ನಾಲಜಿ ಡೆಮಾನ್ಸ್ಟ್ರೇಟರ್) ಸ್ವಿಫ್ಟ್ ಯುಎವಿ ಒಂದು ಘಾತಕ್ ಯುಸಿಎವಿಯ (ಅನ್ ಮ್ಯಾನ್ಡ್ ಕಾಂಬ್ಯಾಟ್ ಏರ್ ವೆಹಿಕಲ್) ಆವೃತ್ತಿಯಾಗಿದೆ. ಈ ಸ್ವಿಫ್ಟ್ ಯುಎವಿಯ ಪ್ರಾಥಮಿಕ ಗುರಿ ಎಂದರೆ ಮಾನವ ರಹಿತ ಚಾಲನೆಯಲ್ಲಿ ಅತಿವೇಗದ ಲ್ಯಾಂಡಿಂಗ್ ಹಾಗೂ ಮಾನವ ರಹಿತ ಚಾಲನೆಯಲ್ಲಿ ಸ್ಟೆಲ್ತ್ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಎಂದು ಡಿಆರ್‌ಡಿಓ ಹೇಳಿದೆ.

2020ರಲ್ಲಿ ಈ ಕುರಿತು ಮಾಹಿತಿ ನೀಡಿದ್ದ ಡಿಆರ್‌ಡಿಓ, ಈ‌ ಯೋಜನೆಗೆ ಅಗತ್ಯವಿರುವ ಹಾರಾಟ ಉಪಕರಣಗಳ ತಯಾರಿಕೆಯ ಕಾರ್ಯ ಆರಂಭವಾಗಿದ್ದು, ಯೋಜನೆಯ ಲ್ಯಾಂಡಿಂಗ್ ಗೇರ್ ನಿರ್ಮಾಣ ಕಾರ್ಯ ಸಂಪೂರ್ಣವಾಗಿದೆ ಎಂದು ತಿಳಿಸಿತ್ತು.

ಮೂಲಗಳ ಪ್ರಕಾರ, ಡಿಆರ್‌ಡಿಓದ ಚೆನ್ನೈ ಮೂಲದ ಕಾಂಬ್ಯಾಟ್ ವೆಹಿಕಲ್ಸ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ ಇತ್ತೀಚೆಗೆ ವಿಮಾನದ ಲ್ಯಾಂಡಿಂಗ್ ಗೇರ್ ವ್ಯವಸ್ಥೆಯನ್ನು ಸಾಗಾಟಗೊಳಿಸಿತ್ತು.

ನಮಗೆ ತಿಳಿದಿರಬೇಕಾದ ಮಾಹಿತಿ:

ಸ್ಟೆಲ್ತ್ ವಿಂಗ್ ಫ್ಲೈಯಿಂಗ್ ಟೆಸ್ಟ್‌ಬೆಡ್ ಎಂಬ ಹೆಸರಿನಿಂದ ಕರೆಯಲ್ಪಡುವ ಈ ತಂತ್ರಜ್ಞಾನ ಪ್ರದರ್ಶಕವನ್ನು ಭಾರತದ ಅತ್ಯಂತ ಟಾಪ್ ಸೀಕ್ರೆಟ್ ಎಂದು ಕರೆಯಲಾಗುವ ಅನ್ ಮ್ಯಾನ್ಡ್ ಕಾಂಬ್ಯಾಟ್ ಏರಿಯಲ್ ವೆಹಿಕಲ್ (ಯುಸಿಎವಿ) ಯೋಜನೆಯಡಿ ನಿರ್ಮಿಸಲಾಗಿದೆ.

ಇದನ್ನು ಒಂದು ಅತ್ಯಂತ ರಹಸ್ಯ ಯೋಜನೆ ಎಂದು ಪರಿಗಣಿಸಿರುವ ಕಾರಣ, ಈ ವಿಮಾನದ ಬಹುತೇಕ ತಾಂತ್ರಿಕ ವಿಶೇಷತೆಗಳ ಕುರಿತಾದ ಮಾಹಿತಿಗಳು ಇನ್ನೂ ಲಭ್ಯವಾಗಿಲ್ಲ. ರಾಷ್ಟ್ರೀಯ ಭದ್ರತಾ ಸಲಹೆಗಾರರು ಹಾಗೂ ಪ್ರಧಾನ ಮಂತ್ರಿಗಳ ಕಚೇರಿ ನೇರವಾಗಿ ಈ ಯೋಜನೆಯನ್ನು ನಿರ್ವಹಿಸುತ್ತಿದ್ದಾರೆ.

ಪ್ರಸ್ತುತ ನಾವು ಈ ಯೋಜನೆಯ ಕುರಿತು ತಿಳಿದುಕೊಂಡಿರುವುದೇನು? ಆರಂಭದಲ್ಲಿ ಎಯುಆರ್‌ಎ (ಅಟಾನಮಸ್ ಅನ್ ಮ್ಯಾನ್ಡ್ ರಿಸರ್ಚ್ ಏರ್‌ಕ್ರಾಫ್ಟ್) ಎಂದು ಕರೆಯಲ್ಪಡುತ್ತಿದ್ದ ಈ ಯೋಜನೆ, ಭಾರತದ ಐದನೇ ತಲೆಮಾರಿನ ಸ್ಟೆಲ್ತ್ ಫೈಟರ್ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಎಂಸಿಎ) ಯೋಜನೆಯ ಭಾಗವಾಗಿದೆ. ಈ ಯೋಜನೆಯ ಪರಿಕಲ್ಪನೆ 2009ರಲ್ಲಿ ಜಾರಿಗೆ ಬಂದಿತ್ತು.

ಬೆಂಗಳೂರು ಮೂಲದ ಎಡಿಎ ಪ್ರಸ್ತುತ ಈ ಯೋಜನೆಯ ಕುರಿತು ಡಿಫೆನ್ಸ್ ಇಲೆಕ್ಟ್ರಾನಿಕ್ಸ್ ಅಪ್ಲಿಕೇಶನ್ ಲ್ಯಾಬೋರೇಟರಿ ಹಾಗೂ ಡಿಆರ್‌ಡಿಓದ ಮತ್ತಿತರ ಪ್ರಧಾನ ವಿಭಾಗಗಳ ಜೊತೆ ಕಾರ್ಯ ನಿರ್ವಹಿಸುತ್ತಾ ಬಂದಿದೆ.

ಈ ಯೋಜನೆಯ ಕುರಿತಾಗಿ ಅಧಿಕೃತ ದಿನಾಂಕಗಳ ಲಭ್ಯತೆ ಇಲ್ಲವಾದರೂ, ಇದರ ಪ್ರಯೋಗಗಳು ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಏರೋನಾಟಿಕಲ್ ಟೆಸ್ಟ್ ರೇಂಜ್ ನಲ್ಲಿ ಎರಡು ತಿಂಗಳ ಹಿಂದೆಯೇ ಕೈಗೊಳ್ಳಲಾಯಿತು.

ಈ ಮೂಲ ಮಾದರಿಯ ಪ್ರಾಥಮಿಕ ಹಂತದ ಪರೀಕ್ಷೆಗಳು ಅಂತಿಮ ಘಾತಕ್ ಯುಎವಿ ನಿರ್ಮಾಣದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿವೆ. ಈ ಪರೀಕ್ಷೆಗಳು ಜೂನ್ 2021ರಲ್ಲಿ ಆರಂಭಗೊಂಡಿದ್ದವು. ಡಿಆರ್‌ಡಿಓದ ಅಂಗವಾದ ಏರೋನಾಟಿಕಲ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ (ಎಡಿಇ) ಈ ಮಾನವ ರಹಿತ, ಸ್ಟೆಲ್ತಿ ಘಾತಕ್ ಯುಸಿಎವಿಯನ್ನು ಪ್ರಾಥಮಿಕವಾಗಿ ಭಾರತೀಯ ವಾಯುಪಡೆಯ ಸ್ಟೆಲ್ತ್ ಬಾಂಬರ್ ಆಗಿ ತಯಾರಿಸುತ್ತಿದೆ.

ಕಾಂಬ್ಯಾಟ್ ವೆಹಿಕಲ್ಸ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ (ಸಿವಿಆರ್‌ಡಿಇ1-ಟನ್) ಸ್ವಿಫ್ಟ್ ಯೋಜನೆಗಾಗಿ ನಿರ್ಮಿಸಿದ ವೆಯ್ಟ್ ಕ್ಲಾಸ್ ರಿಟ್ರಾಕ್ಟೇಬಲ್ ಲ್ಯಾಂಡಿಂಗ್ ಗೇರ್ ಈಗಾಗಲೇ ಡೈರೆಕ್ಟರೇಟ್ ಜನರಲ್ ಆಫ್ ಏರೋನಾಟಿಕಲ್ ಕ್ವಾಲಿಟಿ ಅಶೂರೆನ್ಸ್ ಹಾಗೂ ಸೆಂಟರ್ ಫಾರ್ ಮಿಲಿಟರಿ ಏರ್ ವರ್ದಿನೆಸ್ ಆ್ಯಂಡ್ ಸರ್ಟಿಫಿಕೇಷನ್ (ಸಿಇಎಂಐಎಲ್‌ಎಸಿ) (ಡಿಜಿಎಕ್ಯುಎ) ಸಂಸ್ಥೆಗಳಿಂದ ಪ್ರಮಾಣಪತ್ರವನ್ನು ಪಡೆದುಕೊಂಡಿದೆ.

ಸ್ವಿಫ್ಟ್ ಅಂದಾಜು 13 ಅಡಿಗಳ ಉದ್ದವಿದ್ದು, ಅದರ ರೆಕ್ಕೆಯನ್ನು ಸೇರಿದಾಗ ಗಾತ್ರ 16 ಅಡಿಗಳಿಗಿಂತ ಸ್ವಲ್ಪ ಹೆಚ್ಚು ವಿಶಾಲವಾಗಿದ್ದು, 2,300 ಪೌಂಡ್ ಗಳಿಗಿಂತಲೂ ಹೆಚ್ಚಿನ ತೂಕ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ನಿವೃತ್ತ ಮೇಜರ್ ಜನರಲ್ ರಜನ್ ಕೊಚ್ಚಾರ್ ಈ ಕುರಿತು ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಾ, ಇಂದಿನ ಸನ್ನಿವೇಶದಲ್ಲಿ ಆಧುನಿಕ ಯುದ್ಧತಂತ್ರವಾದ ಸ್ಟೆಲ್ತ್ ತಂತ್ರಜ್ಞಾನ ರಕ್ಷಣಾ ಸಾಮರ್ಥ್ಯವನ್ನು ಹಲವು ಪಟ್ಟು ಹೆಚ್ಚಿಸಬಲ್ಲದಾಗಿದೆ ಎಂದಿದ್ದಾರೆ.

"ಯುದ್ಧದಲ್ಲಿ ಮೇಲುಗೈ ಸಾಧಿಸಲು ಬೇಕಾದ ಅತ್ಯಂತ ಮುಖ್ಯವಾದ ತತ್ವವೆಂದರೆ ಶತ್ರುವನ್ನು ದಾಳಿಯ ಮೂಲಕ ಆಶ್ಚರ್ಯಚಕಿತರಾಗಿಸುವುದು ಹಾಗೂ ವಂಚಿಸುವುದು. ಇದನ್ನು ನಾವು ಎಂದಿಗೂ ನೆನಪಿಟ್ಟುಕೊಳ್ಳಬೇಕು. ಆದ್ದರಿಂದ ಈ ಸ್ಟೆಲ್ತ್ ತಂತ್ರಜ್ಞಾನದ ಒಳಗೊಳ್ಳುವಿಕೆ ಇದೇ ತತ್ವದ ಭಾಗವಾಗಿದೆ. ಇದು ಭಾರತೀಯ ಸೇನಾಪಡೆಗಳ ಬಲಕ್ಕೆ ಸಾಕಷ್ಟು ಶಕ್ತಿ ತುಂಬಲಿದೆ. ಈ ಯುಸಿಎವಿ ಯೋಜನೆ ಡಿಆರ್‌ಡಿಓದ ಕಿರೀಟಕ್ಕೆ ಹೊಸದೊಂದು ಗರಿಯಾಗಿದೆ. ಡಿಆರ್‌ಡಿಓ ಈ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಪರೀಕ್ಷಿಸಿದೆ. ಮುಂದಿನ ಹಂತದಲ್ಲಿ ಈ ಯೋಜನೆಯನ್ನು ಕೃತಕ ಬುದ್ಧಿಮತ್ತೆಯೊಡನೆ ಜೋಡಿಸುವ ಗುರಿ ಹೊಂದಿದ್ದು, ಆ ಕಾರ್ಯ ಯೋಜನೆಯನ್ನು ಇನ್ನಷ್ಟು ಬಲಪಡಿಸಲಿದೆ. ಮುಂದಿನ ದಿನಗಳಲ್ಲಿ ನಾವು ಈ ಯೋಜನೆಯ ಸಾಮರ್ಥ್ಯವನ್ನು ಯುಎವಿಯಿಂದ ಐದನೇ ತಲೆಮಾರಿನ ಸ್ಟೆಲ್ತ್ ಯುದ್ಧ ವಿಮಾನವನ್ನಾಗಿಸುವ ನಿಟ್ಟಿನಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯಡಿ ಕಾರ್ಯ ನಿರ್ವಹಿಸಲಿದ್ದೇವೆ. ಭಾರತ ಖಂಡಿತವಾಗಿಯೂ ಈ ವಿಚಾರಗಳಲ್ಲಿ ತನ್ನದೇ ಆದ ಲೆಕ್ಕಾಚಾರಗಳನ್ನು ಹಾಕಿಕೊಂಡಿದೆ" ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನೊಂದೆಡೆ, ರಕ್ಷಣಾ ವಿಶ್ಲೇಷಕರಾದ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಜೆ ಎಸ್ ಸೋಧಿ ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಾ, "ಸ್ವಿಫ್ಟ್ ಯುಸಿಎವಿ ಭಾರತೀಯ ಸೇನೆಗೆ ಅತಿ ಹೆಚ್ಚು ಪ್ರಯೋಜನಕಾರಿಯಾಗಿದ್ದು, ಆಧುನಿಕ ಯುದ್ಧತಂತ್ರದಲ್ಲಿ ಇದು ಯುದ್ಧದ ಚಿತ್ರಣವನ್ನೇ ಬದಲಿಸುವ ಸಾಮರ್ಥ್ಯ ಹೊಂದಿದೆ. 2020ರಲ್ಲಿ ನಡೆದ ಅರ್ಮೇನಿಯ - ಅಜ಼ರ್ ಬೈಜಾನ್‌ಗಳ ಮಧ್ಯದ ಯುದ್ಧ ಹಾಗೂ ಪ್ರಸ್ತುತ ನಡೆಯುತ್ತಿರುವ ರಷ್ಯಾ - ಉಕ್ರೇನ್ ಯುದ್ಧಗಳಲ್ಲಿ ಡ್ರೋನ್‌ಗಳು ಅತಿಹೆಚ್ಚಾಗಿ ಹಾಗೂ ಪರಿಣಾಮಕಾರಿಯಾಗಿ ಉಪಯೋಗಿಸಲ್ಪಟ್ಟಿವೆ. ಯಾವುದೇ ಆಧುನಿಕ ಯುದ್ಧದಲ್ಲಿ ಡ್ರೋನ್‌ಗಳು ಅತ್ಯಂತ ಪರಿಣಾಮಕಾರಿ ಪಾತ್ರ ನಿರ್ವಹಿಸಲಿದ್ದು, ಸ್ವಿಫ್ಟ್ ಯುಸಿಎವಿ ಪರೀಕ್ಷಾ ಪ್ರಯೋಗದಲ್ಲಿ ಭಾರತಕ್ಕೆ ಲಭಿಸಿದ ಯಶಸ್ಸು ಪ್ರಸ್ತುತ ದಿನಗಳಲ್ಲಿ ಪಶ್ಚಿಮ ಹಾಗೂ ಪೂರ್ವದ ಗಡಿಗಳನ್ನು ಹಂಚಿಕೊಂಡಿರುವ ಎರಡು ಶತ್ರು ನೆರೆ ರಾಷ್ಟ್ರಗಳ ಜೊತೆ ಏಗಬೇಕಾಗಿರುವ ಭಾರತದ ರಕ್ಷಣಾ ವ್ಯವಸ್ಥೆಯ ಬಲವರ್ಧನೆಗೆ ಇನ್ನಷ್ಟು ಪ್ರಚೋದನೆ ನೀಡಲಿದೆ" ಎಂದಿದ್ದಾರೆ.
ಲೇಖಕರ ಬಗ್ಗೆ
ಗಿರೀಶ್ ಲಿಂಗಣ್ಣ
ನಾನು, ಗಿರೀಶ್ ಲಿಂಗಣ್ಣ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ. ಕಟ್ಟಿಂಗ್ ಟೂಲ್ ಇಂಡಸ್ಟ್ರೀಯಲ್ಲಿ 28 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದೇನೆ.\nಬೆಂಗಳೂರು ಮೂಲದ ನಾನು ಏರೋಸ್ಪೇಸ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದೇನೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಬ್ರಹ್ಮೋಸ್, ಭಾರತೀಯ ವಾಯುಸೇನೆ, ಜೆಎಸ್\u200cಡಬ್ಲ್ಯೂ ಸಹಿತ ಹಲವು ಸಂಸ್ಥೆಗಳಿಗೆ ಹೈಟೆಕ್ ಟೂಲಿಂಗ್ಸ್ ಮತ್ತು ಪ್ರಮುಖ ಕಾಂಪೊನೆಂಟ್ಸ್ ಗಳನ್ನು ಪೂರೈಸುತ್ತಿದ್ದೇವೆ.\nಸದ್ಯ, ಜರ್ಮನಿಯ ADD Engineering GmbH ಉದ್ಯಮದ ಸಹ-ಸಂಸ್ಥೆಯಾಗಿರುವ ಆಡ್ ಎಂಜಿನೀಯರಿಂಗ್ ಕಾಂಪೊನೆಂಟ್ಸ್ (ಇಂಡಿಯಾ) ಪ್ರೈ, ಲಿ.ನಲ್ಲಿ ವ್ಯವಸ್ಥಾಪಕ ನಿರ್ದೇಶಕನಾಗಿದ್ದೇನೆ. ಈ ಸಂಸ್ಥೆಯು ರಷ್ಯಾ, ಉಕ್ರೇನ್ ಮತ್ತು ಬೆಲಾರೂಸ್\u200cನಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ.\nಕೆನ್ನಾಮೆಟಲ್\u200cನ ಮಾಜಿ ನಿರ್ದೇಶಕರಾಗಿರುವ ಜರ್ಮನಿಯ ಶ್ರೀ ನಾರ್ಬರ್ಟ್ ಕ್ರೆಲ್ಲರ್, ನಾಸಾದ ಮಾಜಿ ಅಧಿಕಾರಿ ಡಾ. ವೆರ್ನರ್ ಗ್ರಿಕ್ಸಾ ಮತ್ತು ಕುಕಾ ಏರೋಸ್ಪೇಸ್ ಸಂಸ್ಥೆಯ ಮಾಜಿ ಎಂಡಿ, ರಷ್ಯಾದ ತಂತ್ರಜ್ಞ ಶ್ರೀ ಅಲೆಕ್ಸಾಂಡರ್ ಲಾಕ್ಟೇವ್ ಅವರು ನನ್ನ ಅಂತಾರಾಷ್ಟ್ರೀಯ ಪಾಲುದಾರರಾಗಿದ್ದಾರೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ