ಆ್ಯಪ್ನಗರ

ಅಪ್ಪ ನಿನ್ನ ಮತ್ತೇನು ಕೇಳಲ್ಲ, ಸಾಧ್ಯವಾದ್ರೆ ವಾಪಸ್‌ ಬಾ ಅಷ್ಟೇ.. ಮಿಸ್ ಯು‌‌..

ಅಪ್ಪ ಅಂದ್ರೆ ಆಕಾಶ.. ಅವರ ಬಗ್ಗೆ ಬರೆಯೋಕೆ ಪದಗಳೇ ಸಾಕಾಗಲ್ಲ.. ಅವರಿಲ್ಲದೇ ಮೂರೂವರೆ ವರ್ಷ ಆಗಿದೆ. ಅವರಿಲ್ಲದ ಜೀವನ ಎಷ್ಟು ಕಷ್ಟ ಅಂತಾ ಈಗ ಗೊತ್ತಾಗೋಕೆ ಶುರುವಾಗಿದೆ. ಅಪ್ಪನ ಬಗ್ಗೆ ಒಂದಿಷ್ಟು ಬರಿಬೇಕು ಅಂತಾ ಅನಿಸಿದಾಗ ಈ ಲೇಖನ ರೂಪುಗೊಳ್ತು..

Authored byಅವಿನಾಶ ವಗರನಾಳ | Vijaya Karnataka Web 19 Jun 2022, 1:46 pm
ಅಪ್ಪ.. ಅದೊಂದು ಪದ.. ಜೀವನದ ಅವಿಭಾಜ್ಯ ಅಂಗ.. ಆ ಪದಕ್ಕೆ ಎಷ್ಟು ಮಹತ್ವವಿದೆ ಅಂದರೆ, ಕಳೆದ ಒಂದೂವರೆ ವರ್ಷದಿಂದ ಅಪ್ಪ ಅನ್ನೋ ಪದ ಕರೆಯೋಕ್‌ ಆಗದೇ ಒದ್ದಾಡ್ತಿದ್ದೀನಿ. ಅಪ್ಪ ಅಂತಾ ಕರಿಬೇಕು, ಅವರ ಜೊತೆ ಮಾತನಾಡಬೇಕು ಅಂತಾ ಪ್ರತಿ ದಿನ, ಪ್ರತಿ ಕ್ಷಣ ಅನಿಸುತ್ತೆ. ಆದರೆ ಅದು ಸಾಧ್ಯವಾಗ್ತಿಲ್ಲ.
Vijaya Karnataka Web Fathers Day
ಸಾಧ್ಯವಾದ್ರೆ ವಾಪಸ್‌ ಬಾ.. ಮಿಸ್‌ ಯು..


ಏಕೆಂದರೆ, ಆಲ್‌ಮೊಸ್ಟ್ ಮೂರೂವರೆ ವರ್ಷ ಆಯ್ತು ಅಪ್ಪ ಜೊತೆಲಿ ಇಲ್ಲ. ಎಲ್ಲರೂ ಅವರ ಅಪ್ಪಂದಿರ ಫೋಟೋಗಳನ್ನು ಸ್ಟೇಟಸ್ ಹಾಕಿದ್ದು ನೋಡಿದಾಗ. ನಮ್ಮಪ್ಪನೂ ಜೊತೆಲಿ ಇರಬೇಕಿತ್ತು ಅನಿಸುತ್ತೆ. ಆದರೆ, ಕಾಲ ಮಿಂಚಿ ಹೋಗಿದೆ. ನನ್ನಪ್ಪನ ಬಗ್ಗೆ ಹೇಳಬೇಕು ಅಂದರೆ, ಕುಡಿತ ಬಿಟ್ರೆ He is pure Gentleman ಮತ್ತು Family man, ಮನೆಗಿಂತ ಸ್ವಲ್ಪ ಊರೇ ಜಾಸ್ತಿ ಅವರಿಗೆ. ಹಾಗಂತ ನಮಗೇನೂ ಕಡಿಮೆ ಮಾಡಿದ್ದಿಲ್ಲ. ಎಷ್ಟೇ ಕಷ್ಟ ಇದ್ರೂ ನಗ್ತಾನೇ ಇರೋರು. ಏನ್‌ ಕೇಳಿದ್ರೂ ಇಲ್ಲಾ ಎನ್ನದೆ ತಂದು ಕೊಡೋರು. ಯಾವತ್ತೂ ಅವರ ಸಮಸ್ಯೆಗಳನ್ನು ನಮ್ಮ ಮುಂದೆ ಹೇಳಿದವರಲ್ಲ.

ಇವತ್ತು ಫಾದರ್ಸ್ ಡೇ.. ಅಪ್ಪ ಜೊತೆಲಿ ಇರೋವರೆಗೂ ಒಂದಿನ ಅವರಿಗೆ ಈ ದಿನದ ವಿಷ್ ಮಾಡಿದ್ದಿಲ್ಲ. ಏಕೆಂದರೆ ಅದರ ಅವಶ್ಯಕತೆ, ಅನಿವಾರ್ಯತೆ ಯಾವತ್ತೂ ಬಂದಿದ್ದಿಲ್ಲ. ಹಳ್ಳಿಯಲ್ಲಿ ಬೆಳೆದವನಿಗೆ ಅಪ್ಪಂದರಿಗೂ ಒಂದಿನ ಇರುತ್ತೆ ಅಂತಾ ಗೊತ್ತಾಗಿದ್ದೆ ಸ್ನಾತಕೋತ್ತರ ಪದವಿಗೆ ಕಾಲಿಟ್ಟ ಮೇಲೆ. ಅಲ್ಲಿವರೆಗೂ ಫಾದರ್ಸ್‌ ಡೇ, ಮದರ್ಸ್‌ ಡೇ, ಬರ್ತ್‌ಡೇಗಳಂತಹ ಸ್ಪೇಷಲ್ ಡೇಗಳ ಬಗ್ಗೆ ಅರಿವಿದ್ದಿಲ್ಲ. ಅರಿವಿದ್ರೂ ಆಚರಣೆ ರೂಪ ಪಡೆದಿದ್ದಿಲ್ಲ. ಪಿಜಿಗೆ ಬಂದ ಮೇಲು ಕೂಡ ಸಡನ್ ಆಗಿ ಅವುಗಳನ್ನೆಲ್ಲಾ ಮೈಗತಮಾಡಿಕೊಳ್ಳೋದಕ್ಕೆ ಆಗ್ಲಿಲ್ಲ, ಈಗಲೂ ಆಗಿಲ್ಲ.

ಆದರೆ, ಕಳೆದ ವರ್ಷದಿಂದ ಫಾದರ್ಸ್‌ ಡೇಗೆ ಅಪ್ಪನ ಬಗ್ಗೆ ಬರೆಯೋಕೆ ಶುರು ಮಾಡಿದೀನಿ. ಎಲ್ಲರೂ ಹೇಳುವ ರೀತಿ ಅಪ್ಪ ಅಂದ್ರೆ ಆಕಾಶ ಮತ್ತು ಅದಕ್ಕಿಂತಲೂ ಮೇಲು. ಅವರ ಬಗ್ಗೆ ಬರೆಯೋಕೆ ಪದಗಳು ತಲೇಲಿ ಬರಲ್ಲ. ಏಕಂದ್ರೆ ಅಷ್ಟು ನಿಸ್ವಾರ್ಥ ಪ್ರೀತಿ ಅವರದ್ದು. ಅಮ್ಮನ ಪ್ರೀತಿ, ಮಮತೆ ಗುರುತಿಸೋ ಜಗತ್ತು, ಅಪ್ಪನ ಕಾಳಜಿ, ಜವಾಬ್ದಾರಿಯನ್ನು ಸ್ವಲ್ಪ ಕಡೆಗಣಿಸಿದ್ದೇ ಹೆಚ್ಚು.

ವಿಶ್ವ ಅಪ್ಪಂದಿರ ದಿನ: ಅಪ್ಪ ಎಂಬ ಆಲದ ಮರದ ನೆರಳಲ್ಲಿ ಸಾಗುತಿರಲಿ ಜೀವನ

ನಾವೂ ಮೂರು ಜನ ಮಕ್ಕಳು. ಅಣ್ಣ, ಅಕ್ಕ ಮತ್ತು ನಾನು.. ಈ ಕಾಲದಲ್ಲಿಯೂ ಸಾಮಾನ್ಯ ರೈತನಾಗಿದ್ದುಕೊಂಡು, ನಮಗೆಲ್ಲಾ ಉನ್ನತ ಶಿಕ್ಷಣದವರೆಗೂ ಓದಿಸಿದ್ದಾರೆ. ತಾವೂ ಪಟ್ಟ ಕಷ್ಟವನ್ನು ನಾವೂ ಪಡಬಾರದು ಅಂತಾ ಒಂದೊಳ್ಳೆ ಜೀವನ ಕೊಟ್ಟಿದ್ದಾರೆ. ನಾವು ಈಗ ತಿನ್ನೋ ಪ್ರತಿ ಅನ್ನದ ಅಗುಳಿನ ಮೇಲೂ ಅವರ ಬೆವರಿನ ಹನಿ ಇದೆ. ಸಾಯೋವರೆಗೂ ಇರುತ್ತೆ.

ಅಪ್ಪ ಎಷ್ಟು ಕಷ್ಟ ಪಡ್ತಿದ್ರು ಅಂತಾ ಅವರ ದೂರ ಹೋದ ಮೇಲೆ ಗೊತ್ತಾಗ್ತಿದೆ. ಒಂದು ಕುಟುಂಬ ನಿಬಾಯಿಸೋಕೆ ಏನೆಲ್ಲಾ ಸರ್ಕಸ್ ಮಾಡ್ಬೇಕು. ಅಪ್ಪ ಏನು ಮಾಡ್ತಿದ್ರು ಅಂತಾ ಈಗ ಸ್ಪಷ್ಟವಾಗಿ ಗೊತ್ತಾಗಿದೆ. ಅವರಿರೋವರೆಗೂ ಏನೇ ಕಷ್ಟ ಇದ್ರೂ ಎಲ್ಲ ಆರಾಮಾಗಿ ನಡ್ಕೊಂಡು ಹೋಗ್ತಿತ್ತು. ಈಗ ಆಗ್ತಿಲ್ಲ. ನಮ್ಮನೇಲಿ ಏನೇ ಆಗ್ಬೇಕೆಂದರೂ ಬೇರೆಯವರ ಮನೆ ಮುಂದೆ ಹೋಗಿ ನಿಲ್ಲಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

ಅಪ್ಪ ಇಲ್ಲದ್ದರಿಂದ ಸಂಬಂಧಿಕರಿಗೂ ಒಂಥರಾ ಅಹಂ ಬಂದುಬಿಟ್ಟಿದೆ. ತಂದೆ ಇಲ್ಲದವರೂ ಎಲ್ಲಿಗೆ ಹೋಗ್ತಾರೆ. ನಮ್ಮತ್ರನಾ ಬರ್ತಾರೆ ಅಂತಾ ರಿಲೇಷನ್‌ಗಳಿಗೆಲ್ಲಾ ಬಿಗುಮಾನ ಬಂದ್ಬಿಟ್ಟಿದೆ. ಅದೂ ಕಳೆದ ಒಂದೂವರೆ ವರ್ಷದಲ್ಲಿ ಸಂಪೂರ್ಣ ಅರ್ಥವಾಗಿದೆ. ಮುಂದೆ ಅವರ ಬಿಗುಮಾನ, ಅಹಂ ಇನ್ನು ಜೋರಾಗಲಿದೆ. ಆವಾಗೆಲ್ಲಾ.. ಅಪ್ಪ ಜೊತೇಲಿ ಇರಬೇಕಿತ್ತು ಅನಿಸೋದು ಖಂಡಿತ.

ತಾನು ಕಾಣದ ಸುಂದರ ಲೋಕದಲ್ಲಿ ಮಕ್ಕಳನ್ನು ತೇಲಾಡಿಸುವಾತ: ಅಪ್ಪ ಐ ಲವ್ ಯೂ

ಅಪ್ಪನ ಜೊತೆ ಬಹಳ ಅಂದ್ರೆ ಬಹಳ ನೆನಪಿವೆ, ಅವುಗಳನ್ನೆಲ್ಲಾ ಬರೀತಾ ಕೂತ್ರೆ ಇಲ್ಲಿ ಫೇಜ್‌ ಸಾಕಾಗಲ್ಲ. ಅವರಿಂದ ಹೊಡೆತ ತಿಂದಿದೀನಿ ಅದು ಹೈಸ್ಕೂಲ್‌ ಲಾಸ್ಟ್. ಆಮೇಲೆ ಏನೇ ಆದ್ರೂ ಅಮ್ಮ ಬೈತಿದ್ರೂ ಹೊರತು ಅಪ್ಪ ಏನು ಅಂತಿದ್ದಿಲ್ಲ. ಅವರ ಜೊತೆ ಕ್ರಿಕೆಟ್‌ ಆಡೋದೇ ಒಂಥರಾ ಮಜಾ. ನಮ್ಮ ಊರ ಕಡೆ ಎಲ್ಲಾ ಬೇಸಿಗೆಯಲ್ಲಿ ಭತ್ತದ ಹೊಲಗಳೇ ಕ್ರಿಕೆಟ್‌ ಮೈದಾನ ಆಗಿ ಪರಿವರ್ತನೆ ಆಗುತ್ತಿದ್ದವು. ಅಲ್ಲಿ ಅವರು ನಮ್ಮ ಕ್ರಿಕೆಟ್‌ ನೋಡೋಕಂತಾನೇ ಬರೋರು. ನಮ್‌ ಪರ ಬೆಟ್‌ ಹಾಕೋರು. ಕೊನೆಗೆ ನಮ್‌ ಜೊತೆ ಆಟನೂ ಆಡೋರು. ಅದೆಲ್ಲಾ ಈಗ ನೆನಪಷ್ಟೇ.

ಒಂದ್ಸಲ ಕ್ರಿಕೆಟ್‌ ಆಡ್ತಾ ಆಕಸ್ಮಿಕವಾಗಿ (ಆಕಸ್ಮಿಕ ಅಷ್ಟೇ) ಬ್ಯಾಟ್‌ನಿಂದ ಯಾರದೋ ತಲೆಗೆ ಹೊಡೆದಿದ್ದೆ, ಮನೆಯಲ್ಲಿ ಅಮ್ಮನ ಬೈಗುಳ ಕೇಳಿ, ಕೇಳಿ ಸಾಕಾಗಿತ್ತು. ಆದರೆ, ಅಪ್ಪ ಮಾತ್ರ ಒಂದ್ಮಾತು ಬೈದಿದ್ದು, ನೆನಪಿಲ್ಲ. ಇನ್ನು, ಬಸ್‌ ನಿಲ್ಲಿಸಿಲ್ಲ ಅಂತಾ ಬೇರೆ ಊರವರ ಜೊತೆ ದೊಡ್ಡ ಜಗಳ ಮಾಡ್ಕೊಂಡಾಗಲೂ ಅಪ್ಪನಿಂದ ಮೌನ ಬೆಂಬಲ ನನ್ನ ಕಾಯ್ತಾ ಇತ್ತು. ಇಂತಹ ಅನೇಕ ಕಿರಿಕ್‌ಗಳಲ್ಲಿ ಅಪ್ಪನ ಸೂಚ್ಯ ಸಪೋರ್ಟ್‌ ನನ್ನ ಜೊತೆ ಸದಾ ಇತ್ತು. ಮುಂದೇನೂ ಇರುತ್ತೆ.

ಸಾಂದರ್ಭಿಕ ಚಿತ್ರ


ಅವರ ಹೆಗಲ ಮೇಲೆ ಕುಳಿತು ಊರೆಲ್ಲಾ ತಿರುಗಾಡಿದ್ದು ನೆನಪಿಲ್ಲ. ಆದರೆ, ಹೀರೋ ಸೈಕಲ್, ಎಂ80 ಬೈಕ್‌, ಹೀರೋ ಹೊಂಡಾ, ಡಿಸ್ಕವರಿ, ಸ್ಪ್ಲೆಂಡರ್ ಪ್ರೋ, ಜ್ಯೂಪಿಟರ್ ಕೊನೆಗ್ ಫ್ಯಾಷನ್ ಪ್ರೋವರ್ಗೂ ಅವರ ಜೊತೆ ಸುತ್ತಾಡಿದೀನಿ. ಕೊನೆ ಕೊನೆಗೆ ಕ್ಯಾನ್ಸರ್‌ ಕಾರಣದಿಂದ ಅವರ ಜೊತೆ ನಾ ಸುತ್ತಾಡಿದ್ದಕ್ಕಿಂತ ಅವರೇ ನಮ್ಮ ಜೊತೆ ಸುತ್ತಾಡಿದ್ದು ಹೆಚ್ಚು. ಕೊನೆ ದಿನಗಳಲ್ಲಿ ಅವರ ಜೊತೆ ಇರೋಕ್‌ ಆಗಲಿಲ್ಲ ಅನ್ನೋ ಕೊರಗು ಈಗಲೂ ಕಾಡ್ತಿದೆ.

ಫೆಬ್ರವರಿ 15 ಮಧ್ಯಾಹ್ನ 2 ಗಂಟೆಗೆ ಮನೆಯಿಂದ ಕಾಲ್‌ ಬರುತ್ತೆ. ಬೆಂಗಳೂರಿಂದ ಅಕ್ಕನ ಕರೆದುಕೊಂಡು ಬಂದು ಬಿಡು. ಏನಾಗ್ತಿದೆ ಅಂತಾ ಗೊತ್ತಿಲ್ಲ. ಪದೇ ಪದೇ ಕಾಲ್‌ ಬರ್ತಿದೆ. ಬಂದ್ರಾ ಎಲ್ಲಿದೀರಿ. ಎಷ್ಟೋತ್ತು ಆಗುತ್ತೆ ಅಂತಾ. ಮನಸಲ್ಲಿ ನೂರಾರು ಯೋಚನೆ, ವ್ಯಕ್ತಪಡಿಸೋಕು ಯಾರೂ ಇದ್ದಿಲ್ಲ. ಹೋದೆ ಅಪ್ಪನನ್ನೂ ಕೊನೆ ಬಾರಿ ಕಂಡಿದ್ದು, ಅವರು ಕೊನೆಯುಸಿರೆಳೆದ ಆಸ್ಪತ್ರೆ ಬೆಡ್‌ ಮೇಲೆ. ಫೆಬ್ರವರಿ 16 ಬೆಳಗ್ಗೆ ಸುಮಾರು 8 ಗಂಟೆ ಅಪ್ಪನ ಮುಂದೆನೇ ಕೂತಿದೀನಿ. ನನ್ನ ಕೈಯಲ್ಲಿ ಅವರ ಕೈಯಿದೆ. ಕಣ್ಮುಚಿದ್ರೂ.. ಏನಾಗ್ತಿದೆ ಅಂತಾ ತಿಳಿದುಕೊಳ್ಳೊವಾಗ್ಲೆ ನನ್ನನ್ನೂ ವಾರ್ಡ್‌ನಿಂದ ಹೊರಗೆ ಕಳುಹಿಸಿದ್ರು. ಅಷ್ಟೇ..

ಅವರ ಗಡಸು ಧ್ವನಿಯಲ್ಲಿ ಅವಿ ಅಂತಾ ಕೇಳೋಕ್ ಆಗ್ತಿಲ್ಲ ಅಂತಾ ಬೇಜಾರು ಈಗಲೂ ಕಾಡ್ತಿದೆ.. ಕೊನೆಲಿ ನನ್ ಕೈಯಲ್ಲಿ ಕೈಯಿಟ್ಟು ದೂರ ಆಗಿದ್ದೂ ಯಾವತ್ತು ಮರೆಯೋಕ್ ಆಗಲ್ಲ.. ಯಾಕೋ ಗೊತ್ತಿಲ್ಲ ಅಪ್ಪ ದೂರ ಹೋಗಿದ್ದ ದಿನದಿಂದ ಇವತ್ತಿನವರ್ಗೂ ಅವರಿಗೋಸ್ಕರ ನನ್ ಕಣ್ಣಿಂದ ಒಂದನಿ ಕಣ್ಣೀರು ಹೊರಗೆ ಬಂದಿಲ್ಲ.. ಯಾರ್ಯಾರೋ ಅಳು ಅಳು ಮನಸಲ್ಲಿಟ್ಕೊಬೇಡ ಅಂತಾ ಜೋರ್ ಜೋರ್ ಹೊಡೆದರೂ ಅಳು ಬಂದಿರಲಿಲ್ಲ.. ಅದ್ಯಾಕೆ ಅಂತಾ ನಂಗಿಗ್ಲೂ ಗೊತ್ತಾಗಿಲ್ಲ. ಅಪ್ಪ ನೆನಪಾದಾಗ ಶೂನ್ಯ ಆವರಿಸುತ್ತದೆಯಷ್ಟೇ.. ಮತ್ತೆ ನಿನ್ನೇನು ಕೇಳಲ್ಲ.. ಜೊತೆಲಿ ಇದಿಯಾ ಅಂತ ನಂಗೊತ್ತು.. ಸಾಧ್ಯವಾದ್ರೆ ವಾಪಸ್ ಬಾ.. ಅಷ್ಟೇ.. ಮಿಸ್ ಯು‌‌...
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ