ಆ್ಯಪ್ನಗರ

ಖರ್ಚಾದರೂ ಕೋಟಿ, ಹಾಸ್ಟೆಲ್‌ಗಳಲ್ಲಿ ಕಳಪೆ ಊಟವೇ ಗತಿ!

ಹಾಸ್ಟೆಲ್‌ಗಳಲ್ಲಿ ಊಟ ಎಂಬುದರ ಬೆನ್ನುಹತ್ತಿದ ವಿಕ ತಂಡಕ್ಕೂ ಇಂತಹದ್ದೇ ಅನುಭವಗಳು ದೊರೆತವು. ಕೊಪ್ಪಳದ ಪದವಿ ವಿದ್ಯಾರ್ಥಿ ಹೇಳಿದಂತೆ ಬೆಂಗಳೂರು, ಮೈಸೂರು, ಶಿವಮೊಗ್ಗದಂತ ಭಾಗದಲ್ಲಿ ಹಾಸ್ಟೆಲ್‌ಗಳಲ್ಲಿನ ಮೆನು ಸ್ವಲ್ಪ ಸುಧಾರಣೆ ಕಂಡಿದೆ. ಆದರೆ, ಇದಕ್ಕೆ ಹೊಂದಿಕೊಂಡಂತಿರುವ ಸಮಸ್ಯೆಗಳು ಮಾತ್ರ ದಶಕಗಳೇ ಉರುಳಿದರೂ ಬಗೆಹರಿದಿಲ್ಲ !

Vijaya Karnataka Web 29 Nov 2018, 5:00 am
ಹಾಸ್ಟೆಲ್‌ ಮಕ್ಕಳು ನಿಜಕ್ಕೂ ವಿಷಕಂಠರೇ, ಅಲ್ಲಿನ ಊಟವನ್ನು ಅರಗಿಸಿಕೊಂಡು ಬದುಕಿದ್ದಾರೆ !
Vijaya Karnataka Web food


- ಕೊಪ್ಪಳ ಜಿಲ್ಲೆಯ ಹಾಸ್ಟೆಲ್‌ ವಿದ್ಯಾರ್ಥಿಯೊಬ್ಬನ ನೋವಿನ ನುಡಿ ಇದು. ''ಬೇಯದ ಅನ್ನ, ಬಿಸಿನೀರಿನಂತಹ ಸಾರು, ಕೊಳೆತ ಕಾಯಿಪಲ್ಲೆ, ಬೇಳೆ ಇಲ್ಲದ ಸಾಂಬಾರು.. ಎಂಬ ಮಾತನ್ನು ಆಡಿದರೆ, ಇದೆಲ್ಲವೂ ದಶಕಗಳ ಹಿಂದಿನ ಹಾಸ್ಟೆಲ್‌ಗಳ ಮಾತು. ಈಗ ಸುಧಾರಿಸಿರಬಹುದು. ಆದರೆ ಪರಿಸ್ಥಿತಿ ಭಿನ್ನವಾಗಿಲ್ಲ . ಎಲ್ಲೋ ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ಹಾಸ್ಟೆಲ್‌ ಸ್ಥಿತಿ ಸುಧಾರಣೆ ಕಂಡಿರಬಹುದು. ಆದರೆ, ನಮ್ಮ ಹೈದ್ರಾಬಾದ್‌ ಕರ್ನಾಟಕ, ಉತ್ತರ ಕರ್ನಾಟಕ ಭಾಗದ ಹಾಸ್ಟೆಲ್‌ಗಳ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ,'' ಎಂದು ವಿಜಯ ಕರ್ನಾಟಕಕ್ಕೆ ನೋವಿನ ಕಥೆಯನ್ನು ವಿವರಿಸಿದ.

ಹಾಸ್ಟೆಲ್‌ಗಳಲ್ಲಿ ಊಟ ಎಂಬುದರ ಬೆನ್ನುಹತ್ತಿದ ವಿಕ ತಂಡಕ್ಕೂ ಇಂತಹದ್ದೇ ಅನುಭವಗಳು ದೊರೆತವು. ಕೊಪ್ಪಳದ ಪದವಿ ವಿದ್ಯಾರ್ಥಿ ಹೇಳಿದಂತೆ ಬೆಂಗಳೂರು, ಮೈಸೂರು, ಶಿವಮೊಗ್ಗದಂತ ಭಾಗದಲ್ಲಿ ಹಾಸ್ಟೆಲ್‌ಗಳಲ್ಲಿನ ಮೆನು ಸ್ವಲ್ಪ ಸುಧಾರಣೆ ಕಂಡಿದೆ. ಆದರೆ, ಇದಕ್ಕೆ ಹೊಂದಿಕೊಂಡಂತಿರುವ ಸಮಸ್ಯೆಗಳು ಮಾತ್ರ ದಶಕಗಳೇ ಉರುಳಿದರೂ ಬಗೆಹರಿದಿಲ್ಲ !

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಅಲ್ಪಸಂಖ್ಯಾತರ ಇಲಾಖೆ ನಡೆಸುವ ಹಾಸ್ಟೆಲ್‌ಗಳಲ್ಲಿ ನಿತ್ಯವೂ ಯಾವ್ಯಾವ ರೀತಿಯ ಊಟ,ಉಪಾಹಾರವನ್ನು ವಿದ್ಯಾರ್ಥಿಗಳಿಗೆ ಸರಬರಾಜು ಮಾಡಬೇಕು ಎಂಬುದಕ್ಕೆ ಸರಕಾರ ನಿಯಮವನ್ನೇ ರೂಪಿಸಿದೆ. ಎಲ್ಲ ಕಡೆಯೂ ಊಟದ ಮೆನುವನ್ನು ಅಚ್ಚು ಹಾಕಿಸಿ ಹಾಸ್ಟೆಲ್‌ ಗೋಡೆಗಳಿಗೆ ಅಂಟಿಸಬೇಕು ಎಂಬ ಫರ್ಮಾನೂ ಇದೆ. ಆದರೆ, ರಾಜ್ಯದ ಬಹುತೇಕ ಹಾಸ್ಟೆಲ್‌ಗಳಲ್ಲಿ ಮೆನುಗಳೇ ಕಂಡುಬರುವುದಿಲ್ಲ. ಕೆಲವೆಡೆ ಗೋಡೆಯಲ್ಲಿದ್ದರೂ, ಉಣ್ಣುವ ತಟ್ಟೆಯಲ್ಲಿ ಕಾಣಸಿಗುವುದಿಲ್ಲ .

ಒಳ್ಳೆಯ ಅನ್ನಕ್ಕಾಗಿ ಪ್ರತಿಭಟನೆ
ಅನ್ನದಲ್ಲಿ ಹುಳು, ಕೊಳೆತ ಕಾಯಿಪಲ್ಲೆ , ನೀರಿನಂತಹ ಸಾಂಬಾರು ಬಡಿಸುವುದನ್ನು ಖಂಡಿಸಿ ಕೊಪ್ಪಳ ಜಿಲ್ಲೆ ವಿದ್ಯಾರ್ಥಿಗಳು ಹಾಸ್ಟೆಲ್‌ ಮೇಲ್ವಿಚಾರಕರ ವಿರುದ್ಧ ಪ್ರತಿಭಟನೆ ನಡೆಸುವುದು ಮಾಮೂಲಿ. ''ನಿಯಮದಂತೆ ಊಟ ನೀಡಿ ಎಂದು ಕೇಳಿದರೆ, ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದೆ. ಸರಕಾರ ನೀಡುವ ಹಣದಲ್ಲಿ ಅಷ್ಟೆಲ್ಲಾ ನೀಡಲು ಅಸಾಧ್ಯಎನ್ನುತ್ತಾರೆ. ಅನೇಕ ಬಾರಿ ನಮ್ಮ ಪ್ರತಿಭಟನೆಗೆ ಹೆದರಿ, ತಿಂಗಳಿಗೊಮ್ಮೆ ಮಾಂಸದೂಟ, ಮೊಟ್ಟೆ ವಿತರಿಸುತ್ತಾರೆ, ಇದಕ್ಕೆ ಯಾರನ್ನು ದೂರುವುದು,'' ಎಂಬುದು ವಿದ್ಯಾರ್ಥಿಗಳ ಪ್ರಶ್ನೆ.

ಕಿಚನ್‌ಗಳು ಅನ್‌ಕ್ಲೀನ್‌
ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಬಹುತೇಕ ಹಾಸ್ಟೆಲ್‌ಗಳಲ್ಲಿ ಅಡುಗೆ ಮಾಡುವುದಕ್ಕೆ ಸರಿಯಾದ ಸ್ಥಳವೇ ಇರುವುದಿಲ್ಲ. ಇರುವ ಚಿಕ್ಕ ಕೋಣೆಯೂ ಕ್ಲೀನ್‌ ಇರುವುದಿಲ್ಲ. ಸ್ವಚ್ಛ ಮಾಡಲು ಸಿಬ್ಬಂದಿ ಇರುವುದಿಲ್ಲ. ಯಾಕೆ ಹೀಗೆ ಎಂದು ಕೇಳಿದರೆ, ಬಹಳಷ್ಟು ಹಾಸ್ಟೆಲ್‌ ಸಿಬ್ಬಂದಿ ಅಡುಗೆ ಮನೆ ಸ್ವಚ್ಛ ಮಾಡುವುದು ನಮ್ಮ ಕೆಲಸವಲ್ಲ ಎಂದು ಮೂಗು ಮುರಿಯುತ್ತಾರೆ. ಮೆಟ್ರಿಕ್‌ ಪೂರ್ವ ಹಾಸ್ಟೆಲ್‌ಗಳಲ್ಲಂತೂ ಅಡುಗೆ ಮನೆ, ಶೌಚಾಲಯ ಪಕ್ಕ ಪಕ್ಕವೇ ಇರುತ್ತವೆ. ಒಂದರ ವಾಸನೆ, ಮತ್ತೊಂದಕ್ಕೆ ವಿನಿಮಯವಾಗುತ್ತಿರುತ್ತದೆ. ಚಿಕ್ಕ ಮಕ್ಕಳು ಪ್ರತಿಭಟಿಸುವ ಧೈರ್ಯ ಮಾಡುವುದಿಲ್ಲ. ಅಸಹನೀಯ ಪರಿಸರದಲ್ಲಿಯೇ ಊಟ ಸಿದ್ಧವಾಗುತ್ತದೆ!

ನೋ ನಾನ್‌ವೆಜ್‌
ಕಲುಬುರಗಿ ಜಿಲ್ಲೆಯ ಹಾಸ್ಟೆಲ್‌ಗಳಲ್ಲಿ 15 ದಿನಕ್ಕೊಮ್ಮೆ ಮಾಂಸಹಾರ(ಕೋಳಿ-ಕುರಿ ಬಾಡೂಟ) ನೀಡಬೇಕು ಎಂಬುದು ನಿಯಮ. ಸಸ್ಯಾಹಾರಿಗಳಿಗೆ ಸಿಹಿ ನೀಡಲಾಗುತ್ತದೆ. ಇದಲ್ಲದೆ, ದಿನಬಿಟ್ಟು ದಿನ ಬಾಳೆ ಹಣ್ಣು, ಮೊಟ್ಟೆ(ತತ್ತಿ) ನೀಡಲಾಗುತ್ತದೆ. ಈ ಎಲ್ಲವನ್ನೂ ನೀಡಲು ಸರಕಾರ ನೀಡುತ್ತಿರುವ ಹಣ ಸಾಕಾಗುವುದಿಲ್ಲ ಎಂದು, ಬಹಳಷ್ಟು ಕಡೆ ಘೋಷಿತ ಆಹಾರವನ್ನು ನೀಡುವುದೇ ಇಲ್ಲ. ಊಟಕ್ಕೆ ಹಣ ಹೆಚ್ಚು ಮಾಡಿರುವ ಆದೇಶ ಪ್ರಕಟವಾಗಿದೆ. ಆದರೆ ದುಡ್ಡೇ ಬರುತ್ತಿಲ್ಲ ಎಂಬುದು ಕೆಲವು ಅಧಿಕಾರಿಗಳ ವಾದ.

ತಡವಾದರೆ ಊಟವಿಲ್ಲ
ಯಾದಗಿರಿ ಜಿಲ್ಲೆಯ ಬಹುತೇಕ ಹಾಸ್ಟೆಲ್‌ಗಳಲ್ಲಿ ತಡವಾಗಿ ಬಂದ್ರೆ ಊಟವೇ ಸಿಗುವುದಿಲ್ಲ. ಸಿಕ್ಕರೂ ಅನ್ನ-ತಿಳಿ ಸಾಂಬಾರ್‌ ಮಾತ್ರ. ರೊಟ್ಟಿ, ಚಪಾತಿ ಕೇಳುವಂತಿಲ್ಲ. ಬೇಗ ಊಟ ಮಾಡಿದವರಿಗೆ ಮಾತ್ರ ಪೌಷ್ಟಿಕಾಂಶ ಊಟ. ಇಂತಹ ಕ್ರಮಗಳಿಂದ ಬೇಸತ್ತು ವಿದ್ಯಾರ್ಥಿಗಳು ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದ್ದಾರೆ.

ಸಿಲಿಂಡರ್‌ ಭೀತಿ
ಜಿಲ್ಲಾ ಕೇಂದ್ರಗಳಿಂದ ದೂರವಿರುವ ತಾಲೂಕು ಇಲ್ಲವೇ ಗ್ರಾಮೀಣ ಪ್ರದೇಶದಲ್ಲಿರುವ ಹಾಸ್ಟೆಲ್‌ಗಳಲ್ಲಿ ಸಿಲಿಂಡರ್‌ ಸಿಡಿಯುವ ಭೀತಿ ಇರುತ್ತೆ. ಅನಿಲದ ಪೈಪ್‌ ಹಾಳಾದರೂ ಅದನ್ನು ಸಕಾಲದಲ್ಲಿ ಸರಿಪಡಿಸುವ ಯತ್ನವೇ ನಡೆದಿರುವುದಿಲ್ಲ. ರಿಪೇರಿಯೇ ದೊಡ್ಡ ಸವಾಲು. ಗ್ರಾಮೀಣ ಪ್ರದೇಶದಲ್ಲಿ ಕೆಲವು ಕಡೆ ಸಿಲಿಂಡರ್‌ ಇರುವುದೇ ಇಲ್ಲ.

ಚರ್ಮರೋಗದ ಆತಂಕ
ಹೈದ್ರಾಬಾದ್‌ ಕರ್ನಾಟಕದ ಬಹುತೇಕ ಕಡೆ ಫುಡ್‌ ಪಾಯಿಸನ್‌ ಸಮಸ್ಯೆ ವರದಿಯಾಗುತ್ತಲೇ ಇರುತ್ತೆ. ಕಳಪೆ ಆಹಾರ ಸಾಮಗ್ರಿಗಳಿಂದ ತಯಾರಾದ ಪೌಷ್ಟಿಕಾಂಶವಿಲ್ಲದ ಊಟ ಸೇವಿಸುವ ಮಕ್ಕಳಿಗೆ ಚರ್ಮರೋಗದ ಆತಂಕವಿದೆ. ಆಗಾಗ ಮಕ್ಕಳು ಚರ್ಮರೋಗಕ್ಕೆ ತುತ್ತಾಗಿ ಮನೆಗೆ ಹೋಗಿ ಬರುತ್ತಿರುತ್ತಾರೆ. ಆದರೆ, ಅವರಿಗೆ ಚರ್ಮದ ಕಾಯಿಲೆಗೆ ಹಾಸ್ಟೆಲ್‌ ಊಟವೇ ಕಾರಣ ಎಂಬುದರ ಅರಿವು ಇರುವುದಿಲ್ಲ. ಇದ್ದರೂ ಪ್ರಶ್ನಿಸುವ ಧೈರ್ಯ ಮಾಡುವುದಿಲ್ಲ. ಇದೆಲ್ಲವನ್ನೂ ಉಂಡು ಅವರು ನಂಜುಂಡರಾಗಿದ್ದಾರೆ ಎಂಬುದೇ ಸೋಜಿಗ !

ಕುಡಿಯಲು ಶುದ್ಧ ನೀರಿಲ್ಲ
ಚಿಕ್ಕಬಳ್ಳಾಪುರದ ಕೆಧಿಲಧಿವು ಹಾಸ್ಟೆಲ್‌ಗಧಿಳಲ್ಲಿ ಶುದ್ಧ ಕುಧಿಡಿಧಿಯುವ ನೀಧಿರಿನ ಘಧಿಟಧಿಕಧಿಗಧಿಳಿದ್ದ ಕುಧಿಡಿಧಿಯಲು ಶುದ್ಧ ನೀರೂ ದೊಧಿರೆಧಿಯುಧಿತ್ತಿಧಿಲ್ಲ ಎಂಬ ದೂಧಿರುಧಿಗಳು ಕೇಧಿಳಿಧಿಬಂದಿಧಿವೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ಭಾಗದ ತಾಲೂಕುಗಳ ವಸತಿ ನಿಲಯಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಆದರೆ, ಬಹುತೇಕ ವಸತಿ ನಿಲಯಗಳಲ್ಲಿ ಫಿಲ್ಟರ್‌ ವ್ಯವಸ್ಥೆಗಳು ಇವೆ. ಗುಣಮಟ್ಟದ ಊಟ, ಉಪಾಹಾರಕ್ಕಾಗಿ ಇಲ್ಲಿನ ವಿದ್ಯಾರ್ಥಿಗಳೂ ಆಗಾಗ ಪ್ರತಿಭಟನೆ ನಡೆಸುತ್ತಾರೆ. ಚಾಮರಾಜನಗರ ಜಿಲ್ಲೆಯಲ್ಲೂ ಕುಡಿಯುವ ನೀರಿನ ಸಮಸ್ಯೆ ಇದೆ. ಕಲುಬುರಗಿ, ಬೀದರ್‌, ಯಾದಗಿರಿಯಂತಹ ಜಿಲ್ಲೆಗಳಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ಭೀಕರವಾಗಿದೆ.

ಊಟದ ಮೆನು ಹೇಗಿದೆ ಗೊತ್ತೆ ?
ಬೆಳಗ್ಗೆ ತಿಂಡಿ, ಮಧ್ಯಾಹ್ನ-ರಾತ್ರಿ ಭೋಜನ ಹಾಗೂ ಸಂಜೆ ಲಘು ಉಪಹಾರ ನೀಡಲು ದಿನಕ್ಕೊಂದು ಮೆನು ಸಿದ್ಧ ಮಾಡಿಟ್ಟುಕೊಳ್ಳಲಾಗಿದೆ. ವಾರಕ್ಕೊಮ್ಮೆ ಸಿಹಿ ಊಟ, ತಿಂಗಳಿಗೆ 2 ಬಾರಿ ಮಾಂಸದ ಊಟ (ಕರಾವಳಿ-ಮಲೆನಾಡಿನಲ್ಲಿ ಮೀನೂಟ ಹಾಗೂ ಇತರೆಡೆ ಚಿಕನ್‌) ಪೂರೈಸುವ ಸೂಚನೆಯಿದೆ. ಹಾಗೆಯೇ ವಾರಕ್ಕೆ 3 ದಿನ ಮೊಟ್ಟೆ ಮತ್ತು ಬಾಳೆಹಣ್ಣು ಕೊಡಬೇಕಾಗುತ್ತದೆ. ಆದರೆ, ಇಂತಹ ಭರ್ಜರಿ ಊಟ ಕೊಡುವುದು ಒತ್ತಟ್ಟಿಗಿರಲಿ. ಕಡೆಪಕ್ಷ ಪೌಷ್ಟಿಕಾಂಶವುಳ್ಳ ಗುಣಮಟ್ಟದ ಆಹಾರವನ್ನಾದರೂ ನೀಡಲಿ ಎಂದು ವಿದ್ಯಾರ್ಥಿಗಳು ಗೋಗರೆಯುವಂತಾಗಿದೆ.

ಯಾರಿಗೆ ಎಷ್ಟು ಊಟದ ವೆಚ್ಚ
* ಪ್ರತಿ ವಿದ್ಯಾರ್ಥಿಗೆ ಮಾಸಿಕ ಊಟದ ವೆಚ್ಚ ಮೆಟ್ರಿಕ್‌ ಪೂರ್ವ 1,500 ರೂ.
* ಪ್ರತಿ ವಿದ್ಯಾರ್ಥಿಗೆ ಮಾಸಿಕ ಊಟದ ವೆಚ್ಚ ಮೆಟ್ರಿಕ್‌ ನಂತರ 1,600 ರೂ.
* 50 ವಿದ್ಯಾರ್ಥಿಗಳಿರುವ ಹಾಸ್ಟೆಲ್‌ ಪಾತ್ರೆಗಳ ಕಲಾಯಕ್ಕೆ ವಾರ್ಷಿಕ 600 ರೂ.
* 50 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಪಾತ್ರೆಗಳ ಕಲಾಯಕ್ಕೆ ವಾರ್ಷಿಕ 1 ಸಾವಿರ ರೂ.

ವಿಕ ತಂಡದ ಶೋಧನೆ
* ಹಾಸ್ಟೆಲ್‌ಗಳಲ್ಲಿ ಕಡಿಮೆ ಬೆಲೆಯ ಹಾಗೂ ಕೊಳೆಯುವ ಹಂತಕ್ಕೆ ಬಂದಿರುವ ಕಾಯಿಪಲ್ಲೆ ಖರೀದಿಸುವುದು ಸಾಮಾನ್ಯವಾಗಿದೆ. ಅನ್ನ, ಸಾಂಬಾರಿನಲ್ಲಿ ಬಾಲಹುಳು, ನುಸಿ ಹಾಗೂ ಹರಳು ಇರುವುದು ಸಾಮಾನ್ಯವಾಗಿದೆ.

* ಹಾಸ್ಟೆಲ್‌ಗಳಲ್ಲಿ ಅಡುಗೆ ತಯಾರಿಸುವ ವೇಳೆ ಸ್ವಚ್ಛತೆಗೆ ಆದ್ಯತೆ ನೀಡುವುದಿಲ್ಲ. ಅಡುಗೆದಾರರು ಕಾಯಿಪಲ್ಲೆ ಕತ್ತರಿಸುವ ವೇಳೆ ಹುಳು ತೆಗೆಯುವುದಿಲ್ಲ. ಅಕ್ಕಿ ಸ್ವಚ್ಛಗೊಳಿಸುವುದಿಲ್ಲ. ಅಡುಗೆಯವರು ಬಹುತೇಕ ಸ್ಥಳೀಯರಾಗಿದ್ದು, ಬೇರೆಡೆಯಿಂದ ಬಂದ ವಿದ್ಯಾರ್ಥಿಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ.

* ಆಹಾರ ಗುತ್ತಿಗೆದಾರರಿಗೆ ಜನಪ್ರತಿನಿಧಿಗಳ ಕೃಪಾಶೀರ್ವಾದವಿರುತ್ತದೆ. ಹಾಸ್ಟೆಲ್‌ ಸಿಬ್ಬಂದಿ ಟೆಂಡರ್‌ದಾರರಿಗೆ ಆಹಾರ ಧಾನ್ಯ ಸಕಾಲಕ್ಕೆ ಪೂರೈಸುವಂತೆ ಹೆಚ್ಚಿನ ಒತ್ತಡ ಹೇರಿದರೆ ಜನಪ್ರತಿನಿಧಿಗಳಿಂದ ಕರೆಗಳು ಬರುತ್ತವೆ. ಆದ್ದರಿಂದ ಅವರು ಸರಬರಾಜು ಮಾಡಿದಾಗಲೇ ಮಕ್ಕಳಿಗೆ ಆಹಾರ ಪೂರೈಸುವ ವ್ಯವಸ್ಥೆ ಇದೆ. ಅಲ್ಲಿಯವರೆಗೆ ಬೇರೊಂದು ಹಾಸ್ಟೆಲ್‌ನಿಂದ ಧಾನ್ಯಗಳನ್ನು ಪಡೆದು ಮಕ್ಕಳಿಗೆ ಆಹಾರ ಪೂರೈಸಬೇಕು.

* ಅಡುಗೆ ಅನಿಲ ಮೊದಲು 400 ರೂ.ದಿಂದ 500 ರೂ.ಗೆ ಸಿಗುತ್ತಿತ್ತು. ಆದರೆ ಇತ್ತೀಚೆಗೆ ಬೆಲೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪೂರ್ಣ ಮೊತ್ತ ಪಾವತಿಸಬೇಕಾಗಿದೆ. ಸಿಲಿಂಡರ್‌ ಸಬ್ಸಿಡಿ ಮೊತ್ತ ಜಮಾ ಆಗದ ಹಿನ್ನೆಲೆಯಲ್ಲಿ ಊಟದ ವೆಚ್ಚವೂ ಹೆಚ್ಚಾಗಿದೆ. ಮೊಟ್ಟೆ, ಬಾಳೆಹಣ್ಣು , ಮಾಂಸ ಸೇರಿದಂತೆ ಇತರೆ ಪದಾರ್ಥಗಳಿಗೆ ಹೊಡೆತ ಬೀಳುತ್ತಿದೆ.

* ಹಾಸ್ಟೆಲ್‌ ವಿದ್ಯಾರ್ಥಿಗಳು ತಮ್ಮ ಸ್ನೇಹಿತರನ್ನು ಕರೆತರುತ್ತಾರೆ. ಇದರಿಂದ ಕೊನೆಗೆ ಬರುವ ವಿದ್ಯಾರ್ಥಿಗಳಿಗೆ ಊಟ ಸಿಗುವುದಿಲ್ಲ. ಕೆಲವೊಮ್ಮೆ ರುಚಿರಹಿತ ಊಟ ಮಾಡಬೇಕಾಗುತ್ತದೆ. ಅಂದರೆ ಸಾಂಬಾರಿಗೆ ನೀರು ಬೆರೆಸಲಾಗುತ್ತದೆ. ಈ ಸನ್ನಿವೇಶ ಕಾಲೇಜು ಹಾಸ್ಟೆಲ್‌ಗಳಲ್ಲಿ ಹೆಚ್ಚಾಗಿರುತ್ತದೆ.

* ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಆಹಾರದ ಬೇಡಿಕೆಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಆದರೆ ವರ್ಷಾಂತ್ಯದ ವೇಳೆಗೆ ಒತ್ತಡದಿಂದ ಸರಾಸರಿ 1 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಅನಧಿಕೃತ ಸೇರ್ಪಡೆಯಾಗುತ್ತದೆ. ವಿದ್ಯಾರ್ಥಿಗಳಿಗೆ ಹೊರೆಯಾಗಿ ಪರಿಣಮಿಸುತ್ತದೆ.

* ಸಿಬ್ಬಂದಿ ಕೊರತೆಯಿಂದ ಒಬ್ಬ ಮೇಲ್ವಿಚಾರಕನಿಗೆ ಮೂರ್ನಾಲ್ಕು ಹಾಸ್ಟೆಲ್‌ ಜವಾಬ್ದಾರಿ ವಹಿಸಿದೆ. ಇದರಿಂದ ಅಡುಗೆದಾರರ ಮೇಲೆ ನಿಗಾ ವಹಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿಯೂ ಮೋಸ ನಡೆಯುವ ಸಾಧ್ಯತೆ ಇದ್ದು, ವಿದ್ಯಾರ್ಥಿಗಳು ಕಳಪೆ ಆಹಾರ ಸೇವಿಸಬೇಕಾಗುತ್ತದೆ.

*ಗೋಧಿ ಪೂರೈಕೆ ಸ್ಥಗಿತಗೊಂಡಿದೆ. ಒಬ್ಬ ವಿದ್ಯಾರ್ಥಿಗೆ 10 ಕೆಜಿ ಅಕ್ಕಿ ಬೇಕು. ಆದರೆ ಸರಾಸರಿ 4.50 ಕೆ.ಜಿ ಅಕ್ಕಿ ಪೂರೈಕೆಯಾಗಿದೆ. ಕಡಿಮೆ ಆಗುವ ಅಕ್ಕಿ ಹಾಗೂ ಗೋಧಿಯನ್ನು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಖರೀದಿಸಬೇಕಾಗಿದೆ. ಇದರಿಂದ ಮಕ್ಕಳಿಗೆ ಮತ್ತೊಂದು ಆಹಾರದಲ್ಲಿ ಕೊರತೆ ಮಾಡಿ ನಿರ್ವಹಿಸಬೇಕು.


ದಾಳಿ ಮರೆತು ಅಡ್ಜೆಸ್ಟ್‌ ಆದರೂ !
ಮೂರು ಇಲಾಖೆಯ ರಾಜ್ಯಮಟ್ಟದ ಅಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳು ಹಾಸ್ಟೆಲ್‌ಗಳಿಗೆ ಕಾಲಕಾಲಕ್ಕೆ ಭೇಟಿ ನೀಡಿ ಅಲ್ಲಿನ ಮೂಲಸೌಕರ್ಯ ಹಾಗೂ ಆಹಾರದ ಗುಣಮಟ್ಟದ ಬಗ್ಗೆ ಪರಿಶೀಲಿಸುವುದನ್ನೇ ಮರೆತಿದ್ದಾರೆ. ಮೇಲಧಿಕಾರಿಗಳೂ ಹಠಾತ್‌ ದಾಳಿ ನಡೆಸಿ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿಲ್ಲ. ಒಂದೊಮ್ಮೆ ಅನಿರೀಕ್ಷಿತ ಭೇಟಿ ನೀಡಿದರೂ ನಂತರ ಅದು 'ಅಡ್ಜೆಸ್ಟ್‌ಮೆಂಟ್‌ ವ್ಯವಹಾರ'ದಲ್ಲಿ ಕೊನೆಗೊಳ್ಳುವಂತಾಗಿದೆ.


ಊಟಕ್ಕೆ ಕೋಟಿ ಕೋಟಿ ರೂ. ಜತೆಗೆ,ಹುಳಹುಪ್ಪಟ ಉಚಿತ !
ಪರಿಶಿಷ್ಟ ಜಾತಿ : 1,55,930
ಪರಿಶಿಷ್ಟ ಪಂಗಡ: 18,761
ಹಿಂದುಳಿದ ವರ್ಗ: 1,85,671
ಅಲ್ಪಸಂಖ್ಯಾತರು: 17,775
ಒಟ್ಟು: 3,78,137

* ಪ್ರತಿ ವಿದ್ಯಾರ್ಥಿಗೆ ಮಾಸಿಕ ಸರಾಸರಿ 1500 ರೂ.ಗಳನ್ನು ಊಟದ ವೆಚ್ಚ ಎಂದು ಸರಕಾರ ನೀಡುತ್ತೆ. ಅಂದರೆ ಮಾಸಿಕ 56.72 ಕೋಟಿ ರೂ. ವಹಿವಾಟನ್ನು ಭೋಜನ ಪ್ರಕ್ರಿಯೆ ಒಳಗೊಂಡಿದೆ. ವಾರ್ಷಿಕ ಊಟಕ್ಕೆಂದು ಸರಕಾರ 680 ಕೋಟಿ ರೂ.ಗೂ ಹೆಚ್ಚು ಹಣ ವಿನಿಯೋಗಿಸುತ್ತೆ. ಇಷ್ಟೊಂದು ಹಣ ಖರ್ಚಾದರೂ ಕಳಪೆ ಊಟ ಮಾತ್ರ ಹಾಸ್ಟೆಲ್‌ಗಳಲ್ಲಿ ನಿತ್ಯದ ಗೋಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ