ಆ್ಯಪ್ನಗರ

'ಪಾಕಿಸ್ತಾನ್ ಜಿಂದಾಬಾದ್' ಎನ್ನುವ ಮುನ್ನ ಈ ಅಂಶಗಳು ಗಮನದಲ್ಲಿರಲಿ..!

ಸಿಎಎ ಸೇರಿದಂತೆ ಹಲವು ವಿಚಾರಗಳಿಗೆ ಶಿಕ್ಷಣ ಸಂಸ್ಥೆಗಳೇ ಹೋರಾಟದ ಕೇಂದ್ರಗಳಾಗುತ್ತಿರುವ ಇಂದಿನ ದಿನಗಳಲ್ಲಿ ಶಿಕ್ಷಕರ ಮಾತಿಗಿಂತಾ 'ಸಂಘಟನಾ ಚತುರ'​ರ ಮಾತುಗಳಿಗೇ ವಿದ್ಯಾರ್ಥಿಗಳು ಮರುಳಾಗುತ್ತಿರುವುದು ವಿಷಾದನೀಯ.

ದಿಲೀಪ್ ಡಿ. ಆರ್. | Vijaya Karnataka Web 21 Feb 2020, 3:11 pm
'ಪಾಕಿಸ್ತಾನ ಜಿಂದಾಬಾದ್' ಎಂದು ರಾಜಾರೋಷವಾಗಿ ಹೇಳಿ, ವೀರೋಚಿತವಾಗಿ ಬಂಧನಕ್ಕೊಳಗಾದೆ ಎಂದು ಬೀಗುತ್ತಿರುವ ಯುವ ಜನರು, ಅವರಿಗೆ ಬೆಂಬಲವಾಗಿ ನಿಂತ ಸಂಘಟನೆಗಳು ಹಾಗೂ ಒಳಗೊಳಗೇ ಖುಷಿ ಪಡುತ್ತಿರುವ ಕಿಡಿಗೇಡಿಗಳು ತಿಳಿದುಕೊಳ್ಳಲೇಬೇಕಾದ ವಿಷಯಗಳು ಸಾಕಷ್ಟಿವೆ.
Vijaya Karnataka Web amulya
'ಪಾಕಿಸ್ತಾನ್ ಜಿಂದಾಬಾದ್' ಎನ್ನುವ ಮುನ್ನ ಈ ಅಂಶಗಳು ಗಮನದಲ್ಲಿರಲಿ..!


ಪಾಕಿಸ್ತಾನ ಭಾರತದ ಸಾಂಪ್ರದಾಯಿಕ ಎದುರಾಳಿ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಭಾರತ-ಪಾಕ್ ನಡುವೆ ಈವರೆಗೆ ನಡೆದ ಯುದ್ಧಗಳು, ಆ ಯುದ್ಧಗಳಲ್ಲಿ ನಾವು ಅನುಭವಿಸಿದ ನಷ್ಟ, ವೀರ ಯೋಧರ ಅಮೂಲ್ಯ ಜೀವ ಹಾನಿಗೆ ಲೆಕ್ಕವುಂಟೇ? ಪ್ರತ್ಯಕ್ಷ ಸಮರಗಳ ಕಥೆಯೇ ಹೀಗಾದ್ರೆ, ಇನ್ನು ಪರೋಕ್ಷ ಸಮರಗಳ ಕಥೆ ಹೇಳೋದೇ ಬೇಡ.

ಭಾರತಕ್ಕೆ ಕಳ್ಳನೋಟು, ಮಾದಕ ದ್ರವ್ಯಗಳನ್ನು ಸಾಗಿಸಿ ದೇಶದ ಆರ್ಥಿಕತೆ, ಆರೋಗ್ಯದ ಮೇಲೆ ಏಟು ಕೊಡ್ತಿರುವ ಪಾಕಿಸ್ತಾನ, ಭಯೋತ್ಪಾದನೆಯೆಂಬ ಅಸ್ತ್ರ ಪ್ರಯೋಗಿಸಿ ಭಾರತವನ್ನು ನಡುಗಿಸುತ್ತಿರುವುದನ್ನು ಮರೆಯಲು ಸಾಧ್ಯವೇ..? ಜಮ್ಮು-ಕಾಶ್ಮೀರ, ಪಂಜಾಬ್ ಗಡಿಯಲ್ಲಿನ ಭಯೋತ್ಪಾದಕ ಕೃತ್ಯಗಳು ಒಂದೆಡೆಯಾದ್ರೆ, ದಿಲ್ಲಿಯಿಂದ ಹಿಡಿದು ಬೆಂಗಳೂರಿನವರೆಗೆ ನಡೆದ ಭಯೋತ್ಪಾದಕ ಕೃತ್ಯಗಳು, ಬಾಂಬ್ ಸ್ಫೋಟಗಳು ಒಂದೆಡಲ್ಲ.

‘ಕೀರ್ತಿ ಶನಿ’ ಹಿಂದೆ ಬಿದ್ದವರು ಉಳಿವುದುಂಟೇ..? ‘ಅಮೂಲ್ಯ’ ಯುವ ಭವಿಷ್ಯ ಎತ್ತ ಸಾಗ್ತಿದೆ..?

ಇಷ್ಟೆಲ್ಲಾ ಅನಾಹುತಗಳಿಗೆ ಕಾರಣವಾದ ಪಾಕಿಸ್ತಾನ, ಭಯೋತ್ಪಾದನೆಯೆಂಬ ಸೆರಗಿನ ಕೆಂಡದಿಂದ ತನ್ನನ್ನು ತಾನೇ ಸುಟ್ಟುಕೊಳ್ತಿದೆ. ಇದೀಗ ಆಗ್ತಿರೋದೇನು..? ಜಾಗತಿಕ ಆರ್ಥಿಕ ಕಾರ್ಯಪಡೆಗೆ ಹೆದರಿ ಭಯೋತ್ಪಾದಕರನ್ನು ಮಟ್ಟ ಹಾಕುವ ನಾಟಕ ಆಡ್ತಿರುವ ಪಾಕಿಸ್ತಾನ, ತೆರೆಮರೆಯಲ್ಲಿ ರೋಹಿಂಗ್ಯಾ ಮುಸ್ಲಿಂ ನಿರಾಶ್ರಿತರನ್ನು ಬಳಸಿಕೊಂಡು ನೇಪಾಳ ಗಡಿಯಲ್ಲಿ ಭಯೋತ್ಪಾದನೆಯ ಬೀಜಾಂಕುರ ಮಾಡಲು ಹೊರಟಿದೆ.

ಇಲ್ಲಿ ರಾಜಾರೋಷವಾಗಿ ಮಾತನಾಡೋರು ಅಲ್ಲಿ ಹೋದ್ರೆ ಬದುಕ್ತಾರಾ..?

ಫ್ರೀಡಂ ಪಾರ್ಕ್‌ನಲ್ಲಿ, ಟೌನ್‌ ಹಾಲ್ ಸರ್ಕಲ್‌ನಲ್ಲಿ, ಕಾಲೇಜು ಕ್ಯಾಂಪಸ್‌ಗಳಲ್ಲಿ, ಹಾಸ್ಟೆಲ್‌ಗಳಲ್ಲಿ ಪಾಕ್ ಪ್ರೇಮ ಮೆರೆಯುತ್ತಿರುವ ಯುವ ಜನಾಂಗ ಒಮ್ಮೆಯಾದ್ರೂ ಪಾಕಿಸ್ತಾನಕ್ಕೆ ಹೋಗಿ ಬರಲಿ. ಕತ್ತೆಗಳನ್ನು ಮಾರುವಂಥಾ ಹೀನಾಯ ಸ್ಥಿತಿಗೆ ತಲುಪಿರುವ ಪಾಕಿಸ್ತಾನದ ಆರ್ಥಿಕತೆಯನ್ನು ಕಂಡು ಬರಲಿ. ಉದ್ಯೋಗವಿಲ್ಲದ ಯುವಕರು ಬಲೂಚಿಸ್ತಾನ, ಪಾಕ್ ಆಕ್ರಮಿತ ಕಾಶ್ಮೀರಗಳಲ್ಲಿ ಭಯೋತ್ಪಾದನೆಯನ್ನೇ ಉದ್ಯೋಗ ಮಾಡಿಕೊಂಡಿರೋದನ್ನು ನೋಡಿ ಬರಲಿ. ಕುಟುಂಬ ವರ್ಗಕ್ಕೆ ಒಂದಷ್ಟು ಹಣ ಸಿಗುತ್ತೆ ಅನ್ನೋ ಕಾರಣಕ್ಕೆ ಜಿಹಾದಿಗಳಾಗಿ ಗುಂಡಿಗೆ ಬಲಿಯಾಗುವ ಉಗ್ರರ ಕುಟುಂಬಗಳ ಗೋಳು ಕೇಳಲಿ.

ಅಮೂಲ್ಯ ವಿರುದ್ಧ ವ್ಯಾಪಕ ಆಕ್ರೋಶ, ಕೊಡಗಿನಲ್ಲಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ

ಶಾಂತಿ ಪ್ರಿಯ ಭಾರತದ ನೆಲದಲ್ಲಿ ನಿಂತು ಪಾಕಿಸ್ತಾನ್ ಜಿಂದಾಬಾದ್ ಎಂದವರಿಗೆ ಜೈಲು ಭಾಗ್ಯ. ಅದೇ ಪಾಕಿಸ್ತಾನ ನೆಲದಲ್ಲಿ ನಿಂತು ಹಿಂದೂಸ್ತಾನ್ ಜಿಂದಾಬಾದ್ ಎಂದರೆ ಅವರ ದೇಹವೇ ಗುಂಡಿನ ಮೊರೆತಕ್ಕೆ ಜರಡಿಯಂತಾಗಿಬಿಡುತ್ತೆ ಅನ್ನೋದನ್ನು ಅಲ್ಲಿಗೇ ಹೋಗಿ ಕಂಡು ಬರಲಿ. ಮತೀಯ ಮೂಲಭೂತವಾದಿಗಳನ್ನು ಅಸ್ಪೃಶ್ಯರಂತೆ ಕಾಣುವ, ದೂರ ಇಡುವ ಭಾರತವೆಲ್ಲಿ, ಇಸ್ಲಾಂ ಮೂಲಭೂತಕ್ಕೆ ಎಂದೋ ಶರಣಾಗಿಬಿಟ್ಟಿರುವ ಪಾಕಿಸ್ತಾನವೆಲ್ಲಿ..?

ಧಾರ್ಮಿಕ ಮೂಲಭೂತವಾದಿಗಳು, ಕರ್ಮಠತನ ಪ್ರತಿಪಾದಿಸುವವರು ಎಲ್ಲಾ ಧರ್ಮಗಳಲ್ಲೂ ಇದ್ಧಾರೆ. ಆದ್ರೆ, ಭಾರತದಂಥಾ ರಾಷ್ಟ್ರ ಧಾರ್ಮಿಕ ಸಹಿಷ್ಣುತೆ, ಜಾತ್ಯತೀತ ತತ್ವ ಸಾರುವ ಸಂವಿಧಾನ ಹೊಂದಿರೋದು, ಅದನ್ನು ಪಾಲಿಸುತ್ತಿರೋದು ನಮ್ಮ ಬಹುತ್ವದ ಹೆಗ್ಗಳಿಕೆ ಅನ್ನೋದನ್ನು ಇಂದಿನ ಕಾಲೇಜುಗಳು ಪಾಕ್ ಪ್ರಿಯರಿಗೆ ಹೇಳಿಕೊಡಬೇಕಿದೆ. ಶಿಕ್ಷಣ ಸಂಸ್ಥೆಗಳೇ ಹೋರಾಟದ ಕೇಂದ್ರಗಳಾಗುತ್ತಿರುವ ಇಂದಿನ ದಿನಗಳಲ್ಲಿ ಶಿಕ್ಷಕರ ಮಾತಿಗಿಂತಾ 'ಸಂಘಟನಾ ಚತುರ'ರ ಮಾತುಗಳಿಗೇ ವಿದ್ಯಾರ್ಥಿಗಳು ಮರುಳಾಗುತ್ತಿರುವುದು ವಿಷಾದನೀಯ. ಅಂತಿಮವಾಗಿ ಸಿಎಎ ವಿರೋಧಿ ಹೋರಾಟದ ಹೆಸರಲ್ಲಿ ಅರೆಬೆಂದ ಕ್ರಾಂತಿಕಾರಿಗಳನ್ನು ಸೃಷ್ಟಿಸುತ್ತಿರುವ ಸೋಕಾಲ್ಡ್‌ ಬುದ್ದಿಜೀವಿಗಳು ಹಾಗೂ ಚಿಂತಕರು ಯುವಕರ ಭವಿಷ್ಯವನ್ನೇ ಹಾಳುಗೆಡವುತ್ತಿದ್ಧಾರೆ ಅಂದ್ರೆ ತಪ್ಪಾಗಲಾರದು. ಪ್ರಜಾಪ್ರಭುತ್ವವಾದಿ ನೆಲೆಗಟ್ಟಿನಲ್ಲಿ ನಡೆಯಬೇಕಾದ ಹೋರಾಟವೊಂದು ಹೀಗೆ ಮತೀಯವಾದಿ ನೆಲೆಗಟ್ಟಿನಲ್ಲಿ ಹಾದಿ ತಪ್ಪುತ್ತಿರೋದು ಪ್ರಚಲಿತ ಸತ್ಯ. ಆಳುವ ವರ್ಗ ಬಯಸುತ್ತಿರೋದು ಇದೇನಾ..?

‘ಆಕೆಗೆ ತನ್ನ ತಪ್ಪಿನ ಅರಿವಾಗುವಂತಹ ಶಿಕ್ಷೆ ನೀಡಬೇಕು’-ಅಮೂಲ್ಯ ವರ್ತನೆಗೆ ಸಿದ್ದರಾಮಯ್ಯ ಖಂಡನೆ
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ