ವಿಧಾನಸಭೆಯಲ್ಲಿ ಸಿ.ಟಿ.ರವಿ ಪ್ರಶ್ನೆ
ಸಿ.ಟಿ.ರವಿ ಎಂದ ಸಚಿವ ವಿನಯ್ ಕುಲಕರ್ಣಿ
ವಿಷಾದ ವ್ಯಕ್ತಪಡಿಸಿದ ಸಚಿವ ಕೃಷ್ಣಬೈರೇಗೌಡ
''ನಿನ್ನೆ ಸಂತೋಷ್, ಇಂದು ಕದಿರೇಶ್, ನಾಳೆ ಯಾರಿಗೆ ಸ್ಕೆಚ್ ಹಾಕಿದ್ದೀರಿ ಹೇಳಿ?'' ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಪ್ರಶ್ನೆಗೆ ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ ಅವರು ''ಸಿ.ಟಿ.ರವಿ,'' ಎಂದು ಕಿಚಾಯಿಸಿದ್ದು ವಿಧಾನಸಭೆಯಲ್ಲಿ ಗದ್ದಲಕ್ಕೆ ಕಾರಣವಾಗಿದ್ದು, ಕೃಷಿ ಸಚಿವ ಕೃಷ್ಣಬೈರೇಗೌಡ ಸರಕಾರದ ಪರವಾಗಿ ವಿಷಾದ ವ್ಯಕ್ತಪಡಿಸಬೇಕಾಯಿತು.
ಕದಿರೇಶ್ ಹತ್ಯೆ ಬಗ್ಗೆ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಉಪ ನಾಯಕ ಆರ್.ಅಶೋಕ್, ''ರಾಜ್ಯದಲ್ಲಿ ಕಾನೂನು -ಸುವ್ಯವಸ್ಥೆ ಹದೆಗೆಟ್ಟಿರುವುದರಿಂದ ಹಾಡಹಗಲೇ ದೇವಸ್ಥಾನದ ಎದುರು ಕೊಲೆಯಾಗುತ್ತಿದೆ,''ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಸಿ.ಟಿ.ರವಿ ''ನಿನ್ನೆ, ಸಂತೋಷ್, ಇಂದು ಕದಿರೇಶ್, ನಾಳೆ ಯಾರಿಗೆ ಸರಕಾರ ಸ್ಕೆಚ್ ಹಾಕಿದೆ?'' ಎಂದು ಪ್ರಶ್ನಿಸುತ್ತಿದ್ದಾಗ ಆಡಳಿತ ಪಕ್ಷದ ಕಡೆಯಿಂದ ಈ ಉತ್ತರ ಕೇಳಿ ಬಂತು. ಇದನ್ನು ಗ್ರಹಿಸಿದ ಬಿಜೆಪಿ ಶಾಸಕ ಕೆ.ಎನ್.ಜೀವರಾಜ್ ಆಕ್ಷೇಪ ವ್ಯಕ್ತಪಡಿಸಿದರು. ದನಿಗೂಡಿಸಿದ ರವಿ, ''ನಾವೇನು ಶಾಶ್ವತವಾಗಿ ಭೂಮಿಯಲ್ಲೇ ಇರುವುದಕ್ಕೆ ಗೂಟ ಹೊಡೆದುಕೊಂಡು ಕೂತ್ತಿಲ್ಲ, ಇಂಥ ಹೆದರಿಕೆಗೆ ಬಗ್ಗುವುದಿಲ್ಲ. ಆದರೆ, ನಿಮ್ಮ ಹೇಳಿಕೆ ಸರಕಾರದ ಜವಾಬ್ದಾರಿ ಮಟ್ಟವನ್ನು ತೋರುತ್ತದೆ,'' ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಶಾಸಕರಾದ ಜೀವರಾಜ್ ಹಾಗೂ ಲಿಂಬಾವಳಿ ಮಾತ್ರ ಸರಕಾರ ಈ ಬಗ್ಗೆ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸಚಿವರ ಹೇಳಿಕೆ ಸಮರ್ಥನೆ ಮಾಡುವಂತೆ ವರ್ತಿಸಿದರು. ನಾವು ಆಡಳಿತ ಮಾಡುವುದಕ್ಕೆ ಬಂದಿರುವುದು ನಿಮಗೆ ನಾಚಿಕೆಯಾಗಬೇಕು ಎಂದರು. ಇದಕ್ಕೆ ಲಿಂಬಾವಳಿ ವಿರೋಧ ವ್ಯಕ್ತಪಡಿಸಿದಾಗ ಇಬ್ಬರ ಮಧ್ಯೆ ಕ್ಷಣ ಕಾಲ ವಾಗ್ವಾದ ನಡೆಯಿತು. ಆದರೆ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಮುಂದಾದ ಕೃಷಿ ಸಚಿವ ಕೃಷ್ಣ ಬೈರೇಗೌಡ, ಸಚಿವರು ಆತ್ಮೀಯವಾಗಿ ಹೀಗೆ ಹೇಳಿದ್ದಾರೆ. ಈ ಬಗ್ಗೆ ಸರಕಾರ ಇದಕ್ಕೆ ವಿಷಾದ ವ್ಯಕ್ತಪಡಿಸುತ್ತದೆ ಎಂದಾಗ ಬಿಜೆಪಿ ಸದಸ್ಯರು ಶಾಂತರಾದರು.
ಹೇಳಿದ್ದು ಯಾರು?-
ಈ ಹೇಳಿಕೆ ನೀಡಿದವರು ಯಾರು ಎಂಬುದನ್ನು ಕಾಂಗ್ರೆಸ್ ಗುಟ್ಟಾಗಿಡಲು ಪ್ರಯತ್ನಿಸಿತಾದರೂ, ಕೊನೆಯಲ್ಲಿ ಜೀವರಾಜ್ ಹಾಗೂ ಸಿ.ಟಿ.ರವಿ ಮಾಧ್ಯಮ ಗ್ಯಾಲರಿ ಬಳಿ ಬಂತು ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್ ಕುಲಕರ್ಣಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು ಎಂದು ಬಹಿರಂಗಪಡಿಸಿದರು.