ಆ್ಯಪ್ನಗರ

ಟಿಂಡರ್ ಆ್ಯಪ್‌ನಲ್ಲಿ ಯುವಕ - ಯುವತಿ ನಡುವೆ ವಾಗ್ವಾದ: ರಾಷ್ಟ್ರಪತಿ ಭವನಕ್ಕೆ ಬಾಂಬ್ ಇಡ್ತೀನಿ ಎಂದ ಯುವತಿ?

ಟಿಂಡರ್ ಆ್ಯಪ್‌ನಲ್ಲಿ ಯುವತಿಯೊಬ್ಬಳ ಜತೆ ವಾಗವಾದ ಮಾಡಿದಾಗ ಆಕೆ ದಿಲ್ಲಿಗೆ ಪರಮಾಣು ದಾಳಿಯಾದಾಗ ರಾಷ್ಟ್ರಪತಿ ಭವನಕ್ಕೆ ಬಾಂಬ್ ಇಟ್ಟು ನಾಶ ಮಾಡುವ ಬೆದರಿಕೆ ಹಾಕಿದ್ದಾಳೆ ಎಂದು ಯುವಕನೊಬ್ಬ ದಿಲ್ಲಿ ಪೊಲೀಸರಿಗೆ ದೂರು ಕೊಟ್ಟಿದ್ದಾನೆ. ಇದರಿಂದ ಪೊಲೀಸರು ಹಾಗೂ ಗುಪ್ತಚರ ಇಲಾಖೆಯವರು ಸಹ ಈ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ.

Times Now 22 Feb 2019, 5:23 pm
ಹೊಸದಿಲ್ಲಿ: ಟಿಂಡರ್ ಡೇಟಿಂಗ್ ಆ್ಯಪ್‌ನಲ್ಲಿ ಹುಡುಗ - ಹುಡುಗಿ ಅನೇಕ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಇನ್ನು, ಅವರಿಬ್ಬರ ನಡುವೆ ಪ್ರೀತಿ ಮೂಡಿ ನಂತರ ಬ್ರೇಕಪ್ ಆದರಂತೂ ಯಾವ ರೀತಿ ಬೇಕಾದರೂ ಕೊನೆಯಾಗಬಹುದು. ಆದರೆ, ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಹುಡುಗ - ಹುಡುಗಿ ನಡುವಿನ ಬ್ರೇಕಪ್‌ ರಾಷ್ಟ್ರೀಯ ಬೆದರಿಕೆಯ ವಿಚಾರವಾಗಿದೆ. ಅದು ಹೇಗೆ ಅಂತೀರಾ? ಈ ಸ್ಟೋರಿ ನೋಡಿ.
Vijaya Karnataka Web tinder


ಪೂರ್ವ ದಿಲ್ಲಿಯ ಲಕ್ಷ್ಮೀ ನಗರ ಪ್ರದೇಶದ ಚಾರ್ಟಡ್ ಅಕೌಂಟೆಂಟ್‌ ಆಕಾಂಕ್ಷಿಯೊಬ್ಬ ಟಿಂಡರ್ ಆ್ಯಪ್‌ನಲ್ಲಿ ಯುವತಿಯೊಬ್ಬಳ ಜತೆ ಮಾತುಕತೆ ನಡೆಸುತ್ತಿರುವಾಗ ಶಾಕ್ ಆಗಿದ್ದಾನೆ. ಯಾಕೆಂದರೆ ಅವರಿಬ್ಬರ ಜಗಳಕ್ಕೆ ರಾಷ್ಟ್ರಪತಿ ಭವನಕ್ಕೆ ಬಾಂಬ್ ಇಡುವುದಾಗಿ ಯುವತಿ ಬೆದರಿಕೆ ಹಾಕಿದ್ದಾಳಂತೆ.

ಈ ಸಂಬಂಧ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ ಆತ ದಿಲ್ಲಿ ಪೊಲೀಸರಿಗೆ ದೂರು ನೀಡಿದ್ದಾನೆ. ಬುಧವಾರ ( ಫೆಬ್ರವರಿ 20, 2019) ರ ರಾತ್ರಿ 10.30ರ ವೇಳೆಗೆ ವ್ಯಕ್ತಿ ಈ ದೂರು ನೀಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಂತರ, ದಿಲ್ಲಿ ಪೊಲೀಸ್ ವಿಶೇಷ ದಳ, ಗುಪ್ತಚರ ಇಲಾಖೆ ಹಾಗೂ ಸ್ಥಳೀಯ ಪೊಲೀಸರು ಆತನನ್ನು ವಿಚಾರಣೆ ಮಾಡಿದ್ದಾರೆ.

ಟಿಂಡರ್ ಡೇಟಿಂಗ್ ಆ್ಯಪ್‌ನಲ್ಲಿ ತನ್ನ ಹಾಗೂ ಆ ಯುವತಿಯೊಂದಿಗೆ ವಾಗ್ವಾದ ನಡೆಯಿತು. ಆ ವೇಳೆ, ''ನಾನು ಯಾರೆಂದು ನಿನಗೆ ಗೊತ್ತಿಲ್ಲ. ದಿಲ್ಲಿಯಲ್ಲಿ ಪರಮಾಣು ದಾಳಿ ಹಾಗೂ ರಾಷ್ಟ್ರಪತಿ ಭವನಕ್ಕೆ ಬಾಂಬ್ ಇಟ್ಟು ಉಡಾಯಿಸಿದಾಗ ನಿನಗೆ ಗೊತ್ತಾಗುತ್ತದೆ'' ಎಂದು ಆಕೆ ಹೇಳಿದ್ದಾಳೆಂದು ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆಂದು ಪಿಟಿಐ ವರದಿ ಮಾಡಿದೆ.

ಇನ್ನು, ಆ ಯುವತಿ ಈ ರೀತಿ ಹೇಳುತ್ತಿದ್ದಂತೆ ದಿಲ್ಲಿಯ ಲಕ್ಷ್ಮೀ ನಗರ ಪ್ರದೇಶದ ಚಾರ್ಟಡ್ ಅಕೌಂಟೆಂಟ್‌ ಆಕಾಂಕ್ಷಿ ಪೊಲೀಸರಿಗೆ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದ್ದಾನೆ ಎನ್ನಲಾಗಿದೆ. ಆದರೆ, ಹೆಚ್ಚಿನ ವಿಚಾರಣೆ ಬಳಿಕ ತಿಳಿದು ಬಂದಿದ್ದೇನೆಂದರೆ ಆ ವ್ಯಕ್ತಿಯೇ ಒಬ್ಸೆಸೀವ್ ಕಂಪಲ್ಸೀವ್ ಡಿಸಾರ್ಡರ್‌ ( ಮಾನಸಿಕ ಕಾಯಿಲೆ) ನಿಂದ ಬಳಲುತ್ತಿದ್ದಾನೆ ಹಾಗೂ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ.

ಹೀಗಾಗಿ, ಈ ಬೆದರಿಕೆಯೇ ಸುಳ್ಳು ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಆದರೂ ಕೂಡ ಆ ಯುವತಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಟಿಂಡರ್ ಮೂಲಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ