ಆ್ಯಪ್ನಗರ

ಕುದುರೆಯನ್ನೇರಿ ಶಾಲೆಗೆ ಹೊರಟ ಹುಡುಗಿ ವೀಡಿಯೋ ವೈರಲ್: ಆನಂದ್‌ ಮಹೀಂದ್ರಾ ಮೆಚ್ಚುಗೆ

ಕೇರಳದ ತ್ರಿಶೂರಿನಲ್ಲಿ 10 ನೇ ತರಗತಿ ಪರೀಕ್ಷೆಗೆ ಹೋಗುವಾಗ ಬಾಲಕಿ ಕುದುರೆ ಸವಾರಿ ಮಾಡಿಕೊಂಡು ಹೋಗಿದ್ದಾಳೆ ಎಂದು ತಿಳಿದು ಬಂದಿತ್ತು. ಈ ವೀಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಮನೋಜ್‌ ಕುಮಾರ್ ಎಂಬಾತ ಶೇರ್ ಮಾಡಿಕೊಂಡಿದ್ದ. ನೆಟ್ಟಿಗನ ಆ ಟ್ವೀಟ್‌ ನೋಡಿದ ಮಹೀಂದ್ರಾ ಗ್ರೂಪ್‌ ಮುಖ್ಯಸ್ಥ ಆನಂದ್‌ ಮಹೀಂದ್ರಾ, ಬಾಲಕಿ ಕುದುರೆ ಓಡಿಸಿಕೊಂಡು ಹೋಗುತ್ತಿರುವ ವೀಡಿಯೋವನ್ನು ಮೆಚ್ಚಿಕೊಂಡಿದ್ದಾರೆ.

Vijaya Karnataka Web 9 Apr 2019, 12:25 pm
ಹೊಸದಿಲ್ಲಿ: ವಿದ್ಯಾರ್ಥಿನಿಯೊಬ್ಬಳು ಕುದುರೆಯನ್ನೇರಿ ಶಾಲೆಗೆ ಹೋದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋವನ್ನು ಸ್ವತ: ಮಹೀಂದ್ರಾ ಗ್ರೂಪ್‌ ಮುಖ್ಯಸ್ಥ ಆನಂದ್‌ ಮಹೀಂದ್ರಾ ಮೆಚ್ಚಿಕೊಂಡಿದ್ದಾರೆ.
Vijaya Karnataka Web kerala horse riding


ಅಲ್ಲದೆ, ಮನೋಜ್‌ ಕುಮಾರ್ ಎಂಬಾತನ ಆ ಟ್ವೀಟ್‌ ಅನ್ನು ಮೆಚ್ಚಿಕೊಂಡ ಆನಂದ್‌ ಮಹೀಂದ್ರಾ, ''ಬಾಲಕಿಯ ಶಿಕ್ಷಣ ವೇಗವಾಗಿ ಮುಂದೆ ಸಾಗುತ್ತಿದೆ. ಈ ವೀಡಿಯೋ ಕ್ಲಿಪ್‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈರಲ್‌ ಆಗಲು ಯೋಗ್ಯವಿದೆ. ಇದು ಕೂಡ ಇನ್‌ಕ್ರೆಡಿಬಲ್ ಇಂಡಿಯಾ'' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕೇರಳದ ತ್ರಿಶೂರಿನಲ್ಲಿ 10 ನೇ ತರಗತಿ ಪರೀಕ್ಷೆಗೆ ಹೋಗುವಾಗ ಬಾಲಕಿ ಕುದುರೆ ಸವಾರಿ ಮಾಡಿಕೊಂಡು ಹೋಗಿದ್ದಳು ಎನ್ನಲಾಗಿದ್ದು, ಆ ದೃಶ್ಯಾವಳಿಗಳನ್ನು ಸ್ಥಳೀಯರು ಸೆರೆ ಹಿಡಿದಿದ್ದರು. ಪರೀಕ್ಷಾ ಒತ್ತಡವನ್ನು ದೂರ ಮಾಡಿಕೊಂಡು ನಿರುಮ್ಮಳವಾಗಿ ಹೋಗಲು ಬಾಲಕಿ ಹೀಗೆ ಮಾಡಿದ್ದಾಳೆಂದು ಹೇಳಲಾಗುತ್ತಿದೆ. ಬಾಲಕಿಯ ಈ ಸಾಹಸಕ್ಕೆ ವ್ಯಾಪಕ ಪ್ರಶಂಸೆ ಸಹ ವ್ಯಕ್ತವಾಗುತ್ತಿದೆ.

ಇನ್ನೊಂದೆಡೆ, ಕುದುರೆ ಮೇಲಿಂದ ಕೆಳಕ್ಕೆ ಬಿದ್ದರೂ ಬಾಲಕನೊಬ್ಬ ಮತ್ತೆ ಮೇಲೆದ್ದು ರೇಸ್ ಗೆದ್ದ ವೀಡಿಯೋವೊಂದು ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ರೇಸ್‌ನಲ್ಲಿ ಎಲ್ಲರಿಗಿಂತ ಮುಂದಿದ್ದ ಬಾಲಕ, ಇದ್ದಕ್ಕಿದ್ದಂತೆ ಕುದುರೆ ಸಮೇತ ಕೆಳಕ್ಕೆ ಬೀಳುತ್ತಾನೆ. ಕುದುರೆ ಎದ್ದು ಮೊದಲಿನ ವೇಗದಲ್ಲಿ ಓಡಲು ಆರಂಭಿಸುತ್ತದೆ. ಆದರೆ ಬಾಲಕ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಬೈಕೊಂದನ್ನೇರಿ ಆತ ತನ್ನ ಕುದುರೆ ಬಳಿ ತಲುಪುತ್ತಾನೆ. ಬಳಿಕ ಬೈಕ್‌ನಿಂದ ಹಾರಿ ಕುದುರೆಯನ್ನೇರಲು ಯಶಸ್ವಿಯಾಗುತ್ತಾನೆ.

ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದಲ್ಲಿ ಕಳೆದ ತಿಂಗಳು ಬಾಲಕನ ಈ ವೀಡಿಯೋ ಸೆರೆಯಾಗಿದ್ದು. ಗ್ರಾಮ ದೇವತೆಗಳಾದ ಮಲಕಾರಿ ಸಿದ್ದೇಶ್ವರ ಮತ್ತು ಅರಣ್ಯ ಸಿದ್ಧೇಶ್ವರ ಜಾತ್ರೆ ನಿಮಿತ್ತ ಪ್ರತಿ ವರ್ಷ ಅಲ್ಲಿ ಕುದುರೆ ಸವಾರಿಯನ್ನು ನಡೆಸಲಾಗುತ್ತಿದೆ. ಈ ಬಾರಿಯ ರೇಸ್‌ನಲ್ಲಿ ಯುವಕರ ಜತೆಗೆ ಗೋಕಾಕ್ ತಾಲೂಕಿನ ವಡ್ಡರಹಳ್ಳಿ ಗ್ರಾಮದ ನಿವಾಸಿಯಾದ ಲೋಕೇಶ್ ಸತ್ತಿಗೇರಿ ಎಂಬ ಬಾಲಕ ಕೂಡ ಪಾಲ್ಗೊಂಡಿದ್ದು ಸಿನಿಮೀಯ ಶೈಲಿಯಲ್ಲಿ ರೇಸ್ ಗೆದ್ದಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ