ಆ್ಯಪ್ನಗರ

ಬಿಳಿ ಕುದುರೆಗೆ ಕಪ್ಪು ಬಣ್ಣ ಬಳಿದು 18 ಲಕ್ಷ ರೂ.ಗೆ ಮಾರಾಟ ಮಾಡಿದ ವಂಚಕರು

ಕುದುರೆಗೆ ಹೆಚ್ಚು ಬೆಲೆ ಸಿಗಲಿ ಎಂದು ಬಿಳಿ ಕುದುರೆಗೆ ಕಪ್ಪು ಬಣ್ಣ ಬಳಿದು 18 ಲಕ್ಷ ರೂ. ಗೆ ಮಾರಾಟ ಮಾಡಿರುವ ವಿಲಕ್ಷಣ ಘಟನೆ ಪಂಜಾಬ್‌ನಲ್ಲಿ ನಡೆದಿದೆ. ಕಪ್ಪು ಬಣ್ಣದ ಕುದುರೆ ಬಹಳ ಅಪರೂಪ. ಹೀಗಾಗಿ, ಅದಕ್ಕೆ ಹೆಚ್ಚು ಬೆಲೆ ಇದೆ ಎಂದು ಬಿಳಿ ಕುದುರೆಗೆ ಕಪ್ಪು ಬಣ್ಣ ಬಳಿದು ಮಾರಾಟ ಮಾಡಲಾಗಿದೆ.

TIMESOFINDIA.COM 25 Oct 2018, 1:09 pm
ಬತಿಂಡಾ: ಫರೀದ್‌ಕೋಟ್‌ ಮೂಲದ ಕುದುರೆ ಸಾಕಣೆಗಾರ ಹಾಗೂ ಜಿಲ್ಲಾ ಸರಕಾರಿ ವಕೀಲರಾಗಿ ನಿವೃತ್ತಿಯಾಗಿರುವ ವ್ಯಕ್ತಿಯೊಬ್ಬರಿಗೆ ವಂಚಕರ ತಂಡ . ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ. ಕುದುರೆಯೊಂದಕ್ಕೆ ಕಪ್ಪು ಬಣ್ಣ ಬಳಿದು ಅದನ್ನು 17 ಲಕ್ಷ 50 ಸಾವಿರ ರೂ.ಗೆ ಮಾರಾಟ ಮಾಡಿದ್ದಾರೆ.
Vijaya Karnataka Web horse sale


ಕುದುರೆಗಳಲ್ಲಿ ಕಪ್ಪು ಕುದುರೆ ಅತಿ ಅಪರೂಪವಾಗಿದ್ದು, ಮಾರ್ವಾರಿ ತಳಿಯ ಕಪ್ಪು ಕುದುರೆಗೆ ಇತರೆ ಬಣ್ಣದ ಕುದುರೆಗಳಿಗಿಂತ ಹೆಚ್ಚು ಬೆಲೆಯಿದೆ. ಹೀಗಾಗಿ, ಫರೀದ್‌ಕೋಟ್‌ ಮೂಲದ ಕುದುರೆ ಸಾಕಣೆದಾರ ಕರಣ್‌ಬೀರ್‌ ಇಂದರ್ ಸಿಂಗ್ ಸೆಖೋನ್ ಆ ಕುದುರೆಯನ್ನು ಕೊಂಡುಕೊಂಡಿದ್ದಾರೆ. ಅಲ್ಲದೆ, ಅವರ ಕುಟುಂಬ ಸಹ ಕುದುರೆ ವ್ಯಾಪಾರದಲ್ಲಿ ತೊಡಗಿದೆ. ಆದರೆ, ಕೆಲವೇ ದಿನಗಳಲ್ಲಿ ಕಪ್ಪು ಕುದುರೆಯ ಮೇಲೆ ಬಿಳಿ ಚುಕ್ಕಿಗಳು ಕಂಡುಬಂದ ನಂತರ, ಆ ಕುದುರೆಯ ಅಸಲಿ ಬಂಡವಾಳ ಬಯಲಿಗೆ ಬಂದಿದೆ. ಜತೆಗೆ, ಕೆಲವೇ ದಿನಗಳಲ್ಲಿ ಅದು ಸಂಪೂರ್ಣ ಬಿಳಿಯ ಬಣ್ಣದ ಕುದುರೆಯಾಗಿ ಬದಲಾಗಿದೆ. ನಂತರ, ಪ್ರಕರಣದ ತನಿಖೆ ನಡೆಸಿದ ಪೊಲೀಸರು 8 ಜನರ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ಆದರೆ, ಸದ್ಯಕ್ಕೆ ಯಾರನ್ನೂ ಬಂಧಿಸಿಲ್ಲ.

ಇನ್ನು, ಘಟನೆ ಬಗ್ಗೆ ಮಾಹಿತಿ ನೀಡಿದ ವಂಚನೆಗೊಳಗಾದ ಸೆಖೋನ್‌, ''ನಾನು 2017ರ ನವೆಂಬರ್‌ನಲ್ಲಿ ಕುದುರೆ ವ್ಯಾಪಾರಗಾರರಾದ ಮೇವಾ ಸಿಂಗ್ ಎಂಬುವರ ಬಳಿ ಕಪ್ಪು ಕುದುರೆಯನ್ನು ಕೊಂಡುಕೊಂಡೆ. ರಾಜಸ್ಥಾನದ ಪ್ರಖ್ಯಾತ ತಳಿಗೆ ಸೇರಿದ ಕಪ್ಪು ಕುದುರೆ ಎಂದು ಅವರು ಹೇಳಿಕೊಂಡಿದ್ದರು. ಅಲ್ಲದೆ, ಕುದುರೆಗೆ 24 ಲಕ್ಷ ರೂ. ಗೆ ಡಿಮ್ಯಾಂಡ್‌ ಮಾಡಿದ್ದರು. ಬಳಿಕ, 17 ಲಕ್ಷ 50 ಸಾವಿರ ರೂ.ಗೆ ಮಾರಾಟ ಮಾಡಲು ಒಪ್ಪಿಕೊಂಡಿದ್ದರು. ನಾನು ಪೂರ್ತಿ ಹಣ ನೀಡಿ ಆ ಕುದುರೆಯನ್ನು ಕೊಂಡುಕೊಂಡಿದ್ದೆ. ಬಳಿಕ, ಕೆಲವೇ ದಿನಗಳಲ್ಲಿ ಕುದುರೆ ಮೇಲೆ ಬಿಳಿಯ ಚುಕ್ಕಿಗಳು ಕಾಣತೊಡಗಿದವು. ನಂತರ, ಸಂಪೂರ್ಣ ಬಿಳಿಯ ಬಣ್ಣಕ್ಕೆ ಬದಲಾಯಿತು. ಬಳಿಕ, ಅದಕ್ಕೆ ಕಪ್ಪು ಬಣ್ಣ ಬಳಿದಿರುವುದು ಬಯಲಾಯ್ತು'' ಎಂದು ಮಾಹಿತಿ ನೀಡಿದ್ದಾರೆ.

ಅಲ್ಲದೆ, ''ಘಟನೆಯ ಬಳಿಕ ನಾನು ಮಾರಾಟಗಾರರನ್ನು ಈ ಬಗ್ಗೆ ಪ್ರಶ್ನಿಸಿದಾಗ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ. ನಂತರ, ಅವರು ಪಂಜಾಬ್‌ನ ಬತಿಂಡಾ, ಜಗ್ರಾನ್‌ ಹಾಗೂ ಲುಧಿಯಾನಾದಲ್ಲಿ ಇದೇ ರೀತಿ ಹಲವರನ್ನು ವಂಚಿಸಿರುವುದು ಬಯಲಾಯ್ತು. ಹೀಗಾಗಿ, ನಾವು ಪೊಲೀಸರಿಗೆ ದೂರು ನೀಡಿದೆವು'' ಎಂದು ಸೆಖೋನ್ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಫರೀದ್‌ಕೋಟ್ ನಗರ ಪೊಲೀಸ್ ಠಾಣೆಯ ಅಧಿಕಾರಿ ಇಕ್ಬಾಲ್‌ ಸಿಂಗ್ ಮಾಹಿತಿ ನೀಡಿದ್ದು, ''ಆರೋಪಿಗಳ ವಿರುದ್ಧ ಸೆಕ್ಷನ್ 420 ಹಾಗೂ 120b ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ'' ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ