ಆ್ಯಪ್ನಗರ

ಒಳ್ಳೆ ಸುದ್ದಿ: ಈ ಹಳ್ಳಿ ಶಾಲೆಯ ಮಕ್ಕಳಲ್ಲಿದೆ ಎರಡು ಕೈಯಲ್ಲಿ ಬರೆಯುವ, 5 ಭಾಷೆಗಳಲ್ಲಿ ಮಾತನಾಡುವ ಸಾಮರ್ಥ್ಯ

ಈ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಎರಡು ಕೈಗಳಲ್ಲಿ ಬರೆಯುತ್ತಾರೆ, ಐದು ಭಾಷೆಗಳಲ್ಲಿ ವ್ಯವಹರಿಸುತ್ತಾರೆ. ಹಾಗಂತ ನಾವೇನು ಯಾವುದೋ ಇಂಟರ್‌ನ್ಯಾಷನಲ್‌ ಶಾಲೆಯ ಬಗ್ಗೆ ಹೇಳುತ್ತಿಲ್ಲ.

Vijaya Karnataka Web 18 Apr 2018, 11:48 am
ಭೂಪಾಲ್‌: ಈ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಎರಡು ಕೈಗಳಲ್ಲಿ ಬರೆಯುತ್ತಾರೆ, ಐದು ಭಾಷೆಗಳಲ್ಲಿ ವ್ಯವಹರಿಸುತ್ತಾರೆ. ಹಾಗಂತ ನಾವೇನು ಯಾವುದೋ ಇಂಟರ್‌ನ್ಯಾಷನಲ್‌ ಶಾಲೆಯ ಬಗ್ಗೆ ಹೇಳುತ್ತಿಲ್ಲ. ನಾವು ಹೇಳುತ್ತಿರುವುದು ಮಧ್ಯ ಪ್ರದೇಶದ ಸಿಂಗ್‌ರೂಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಸ್ಥಾಪಿಸಿದ ವೀಣಾ ವಂದಿನಿ ಶಾಲೆಯ ಬಗ್ಗೆ.
Vijaya Karnataka Web ಶಾಲೆ


ಈ ಶಾಲೆಯ ಸಾಧನೆ ಈಗ ವಾಟ್ಸಾಪ್‌, ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ. ಈ ಶಾಲೆಯ ಸಾಧನೆ ವಿಶ್ವಮಟ್ಟಕ್ಕೆ ತಲುಪಿದೆ. ದಕ್ಷಿಣ ಕೊರಿಯಾ, ಜರ್ಮನಿ, ಅಮೆರಿಕ ದೇಶಗಳ ಸಂಶೋಧಕರು ಈ ಶಾಲೆಗೆ ಭೇಟಿ ನೀಡುತ್ತಿದ್ದಾರೆ.

171 ಮಕ್ಕಳಿರುವ ಈ ಶಾಲೆಯಲ್ಲಿ ಎಲ್ಲಾ ಮಕ್ಕಳೂ ಎರಡು ಕೈಯಲ್ಲಿ ಬರೆಯುವ ಸಾಮರ್ಥ್ಯ ಹೊಂದಿದ್ದಾರೆ. ಹಿಂದಿ, ಇಂಗ್ಲಿಷ್‌, ಸಂಸ್ಕೃತ, ಉರ್ದು ಜತೆಗೆ ಸ್ಪಾನಿಷ್‌ ಭಾಷೆ ಕೂಡ ಇಲ್ಲಿಯ ಮಕ್ಕಳಿಗೆ ಕರಗತವಾಗಿದೆ.

ಅಷ್ಟಕ್ಕೂ ಇಲ್ಲಿ ಶಾಲೆಗ ಬರುತ್ತಿರುವುದು ಬಡವರ ಹಾಗೂ ಹಿಂದುಳಿದ ಕುಟುಂಬ ಮಕ್ಕಳು. ಅದರಲ್ಲೂ ಹೆಚ್ಚಿನ ಮಕ್ಕಳ ಪೋಷಕರಿಗೆ ಅಕ್ಷರ ಜ್ಞಾನವಿಲ್ಲ. ಇವರೇ ಅವರ ಕುಟುಂಬದಲ್ಲಿ ಓದು ಬರಹ ಕಲಿಯುತ್ತಿರುವ ಮೊದಲ ಪೀಳಿಗೆಯವರಾಗಿದ್ದಾರೆ. ಅಂಥ ಹಿನ್ನಲೆಯಲ್ಲಿರುವ ಮಕ್ಕಳು ಇಂದು ವಿಶ್ವದ ಗಮನ ಸೆಳೆದಿದ್ದಾರೆ. ಅದಕ್ಕೆ ಕಾರಣಕರ್ತರಾದವರು ಒಬ್ಬ ಮಾಜಿ ಸೈನಿಕ.

ದೇಶ ಸೇವೆ ಜತೆಗೆ ದೇಶವೇ ಮೆಚ್ಚುವಂಥ ಸಾಧನೆ ಮಾಡಿದ ಆ ಮಾಜಿ ಸೈನಿಕನ ಹೆಸರು ಬಿ. ಪಿ ಶರ್ಮಾ. ಅವರು 1999 ಜುಲೈ 8ರಂದು ಈ ಶಾಲೆಯನ್ನು ಸ್ಥಾಪಿಸಿದರು. ಆಗ ಈ ಶಾಲೆಗೆ ಸೇರಿದ ಮೊದಲನೇ ಬ್ಯಾಚ್‌ನಲ್ಲಿದ್ದ ಮಕ್ಕಳ ಸಂಖ್ಯೆ ಕೇವಲ 6.

ಶರ್ಮಾ ಈ ಶಾಲೆಯ ಕುರಿತು ಹೇಳುತ್ತಾ ' ನಾನಾಗ ಸೇನೆಯಲ್ಲಿದ್ದೆ. ರಜೆಯಲ್ಲಿ ಊರಿಗೆ ಮರಳುತ್ತಿದ್ದಾಗ ಬಸ್‌ನಲ್ಲಿ ಒಂದು ಮ್ಯಾಗ್‌ಜಿನ್‌ ಓದಿದೆ. ಅದರಲ್ಲಿ ನಮ್ಮ ಮೊದಲ ರಾಷ್ಟ್ರಪತಿ ಎರಡು ಕೈಯಲ್ಲಿ ಬರೆಯುತ್ತಿದ್ದರು ಎಂಬ ಮಾಹಿತಿ ತಿಳಿದು ತುಂಬಾ ಪ್ರಭಾವಿತನಾದೆ. ನಂತರ ನನ್ನ ಗ್ರಾಮದಲ್ಲಿ ಶಾಲೆಯನ್ನು ಪ್ರಾರಂಭಿಸಿದೆ. ಮಕ್ಕಳಲ್ಲಿ ಎರಡು ಕೈಯಲ್ಲಿ ಬರೆಯುವ ಕೌಶಲ್ಯ ಬೆಳೆಸಿದೆ. ನಮ್ಮಲ್ಲಿ 8ನೇ ತರಗತಿವರೆಗೆ ಮಾತ್ರ ಇದೆ. ನಂತರ ನಮ್ಮ ಮಕ್ಕಳು ಬೇರೆ ಶಾಲೆಗೆ ಸೇರಿದರೆ ಅಲ್ಲಿ ಅವರು ಪ್ರತಿಭಾವಂತರಾಗಿ ಗುರುತಿಸಿ ಕೊಳ್ಳುತ್ತಿದ್ದಾರೆ' ಎಂದು ಅಭಿಮಾನದಿಂದ ಹೇಳುತ್ತಾರೆ.


ಅಪರೂಪದ ಪ್ರತಿಭೆಯೊಂದಿಗೆ ಶೇ.1ರಷ್ಟು ಮಕ್ಕಳಷ್ಟೇ ಜನಿಸುತ್ತಾರೆ. ಆದರೆ ಕೌಶಲ್ಯವನ್ನು ಕಲಿತು ರೂಢಿಸಿಕೊಳ್ಳಬಹುದು ಎನ್ನುವುದಕ್ಕೆ ಈ ಶಾಲೆಯೇ ಸಾಕ್ಷಿ.

ಮೊದಲ ಬ್ಯಾಚ್‌ನ ವಿದ್ಯಾರ್ಥಿ ದಿಲೀಪ್‌ ಟೈಮ್ಸ್‌ ಬಳಗದ ಜತೆ ಮಾತನಾಡುತ್ತಾ 'ನನಗೆ ಎರಡು ಕೈಯಲ್ಲಿ ಬರೆಯಲು ಬರುತ್ತದೆ, ನಾಲ್ಕು ಭಾಷೆಗಳಲ್ಲಿ ಮಾತನಾಡಲು ಬರುತ್ತದೆ. ಇದೆಲ್ಲಾ ನನ್ನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಎಲ್ಲರಿಗಿಂತ ಮೊದಲಿಗೆ ಉತ್ತರ ಬರೆದು ಮುಗಿಸಲು ಇದರಿಂದ ಸಾಧ್ಯವಾಯಿತು'ಎನ್ನುವಾಗ ಅವರ ಕಣ್ಣುಗಳಲ್ಲಿ ಆ ಶಾಲೆಯ ಕುರಿತು ಅಭಿಮಾನ ಎದ್ದು ಕಾಣುತ್ತಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ