Please enable javascript.ಮುಂಬಯಿ ದಾಳಿ: ಪಾಕ್‌ಗೆ ಪ್ರಮುಖ ದಾಖಲೆ ಹಸ್ತಾಂತರ - ಮುಂಬಯಿ ದಾಳಿ: ಪಾಕ್‌ಗೆ ಪ್ರಮುಖ ದಾಖಲೆ ಹಸ್ತಾಂತರ - Vijay Karnataka

ಮುಂಬಯಿ ದಾಳಿ: ಪಾಕ್‌ಗೆ ಪ್ರಮುಖ ದಾಖಲೆ ಹಸ್ತಾಂತರ

ಏಜೆನ್ಸೀಸ್ 28 Oct 2013, 4:06 am
Subscribe

ಮುಂಬಯಿ ದಾಳಿ ಸಂಬಂಧ ಭಾರತ ಐದು ಪ್ರಮುಖ ದಾಖಲೆಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ.

ಮುಂಬಯಿ ದಾಳಿ: ಪಾಕ್‌ಗೆ ಪ್ರಮುಖ ದಾಖಲೆ ಹಸ್ತಾಂತರ
ಹೊಸದಿಲ್ಲಿ : ಮುಂಬಯಿ ದಾಳಿ ಸಂಬಂಧ ಭಾರತ ಐದು ಪ್ರಮುಖ ದಾಖಲೆಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ.

ಲಷ್ಕರೆ ತಯ್ಬಾ ಕಮಾಂಡರ್ ಝಾಕಿರ್ ರೆಹಮಾನ್ ಲಖ್ವಿ ಸೇರಿದಂತೆ ಪ್ರಕರಣದ ಏಳು ಆರೋಪಿಗಳ ವಿಚಾರಣೆ ನಡೆಸಿರುವ ಪಾಕಿಸ್ತಾನಕ್ಕೆ ಭಾರತ ಸುಮಾರು 600 ಪುಟಗಳ ದಾಖಲೆಯನ್ನು ಒಪ್ಪಿಸಿದೆ.

26/11ರ ದಾಳಿ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರತಿ, ದಾಳಿ ವೇಳೆ ಹತರಾದ 9 ಉಗ್ರರ ಶವ ಪರೀಕ್ಷೆ ನಡೆಸಿದ ವೈದ್ಯರ ಹಾಗೂ ಪ್ರಕರಣದ ತನಿಖೆ ನಡೆಸಿ ಸಾಕ್ಷಿಗಳ ವಿಚಾರಣೆ ನಡೆಸಿದ ಮುಖ್ಯ ತನಿಖಾಧಿಕಾರಿಯ ಅಧಿಕೃತ ಹೇಳಿಕೆಯ ಪತ್ರವನ್ನು ದಾಖಲೆ ಒಳಗೊಂಡಿದೆ.

ಪಾಕಿಸ್ತಾನದ ನ್ಯಾಯಾಂಗ ಆಯೋಗ ಕಳೆದ ತಿಂಗಳು ಮುಂಬಯಿಗೆ ಭೇಟಿ ನೀಡಿದ್ದ ವೇಳೆ ನೀಡಲಾಗಿದ್ದ ಮಾಹಿತಿ ವಿವರಗಳು ಹಾಗೂ ಉಗ್ರರಿಂದ ವಶಪಡಿಸಿಕೊಂಡಿದ್ದ ವಸ್ತುಗಳ ವಿವರವನ್ನೂ ದಾಖಲೆ ಒಳಗೊಂಡಿದೆ.

26/11 ಪ್ರಕರಣ ಸಂಬಂಧ ಸಾಕ್ಷ್ಯಾಧಾರಗಳ ಅವಶ್ಯಕತೆ ಇದೆ ಎಂಬ ಪಾಕ್ ಧೋರಣೆಯನ್ನು ಭಾರತ ಕಟುವಾಗಿ ಟೀಕಿಸಿತ್ತು. ಮುಂಬಯಿ ದಾಳಿಗೆ ಸಂಬಂಧಿಸಿದ ಶೇ.99ರಷ್ಟು ಸಾಕ್ಷ್ಯಾಧಾರಗಳು ಪಾಕಿಸ್ತಾನದ ಬಳಿ ಲಭ್ಯವಿದೆ. ಅದನ್ನು ಸಮರ್ಪಕವಾಗಿ ನ್ಯಾಯಾಲಯದ ಮುಂದೆ ಮಂಡಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ಆ ದೇಶದ ಹೊಣೆ ಎಂದು ಭಾರತ ಶನಿವಾರ ಗುಡುಗಿತ್ತು.

ಹೆಡ್ಲಿಗೆ ಮುಂಚೆಯೇ ತಿಳಿದಿತ್ತಾ?

ಮುಂಬಯಿ ದಾಳಿ ಕುರಿತು ಪಾಕ್-ಅಮೆರಿಕ ಮೂಲದ ಭಯೋತ್ಪಾದಕ ಡೇವಿಡ್ ಹೆಡ್ಲಿಗೆ ಮುಂಚೆಯೇ ಮಾಹಿತಿ ಇತ್ತೇ ಎಂಬ ವಿಷಯ ಈಗ ಚರ್ಚೆಗೆ ಗ್ರಾಸವಾಗಿದೆ.

ಡೆನ್ಮಾರ್ಕ್ ಮೂಲದ ಪತ್ರಕರ್ತರೊಬ್ಬರು ಬರೆದಿರುವ ಪುಸ್ತಕದಲ್ಲಿ ಈ ಕುರಿತ ಮಾಹಿತಿ ಲಭ್ಯವಾಗಿದೆ. ಹೆಡ್ಲಿ ತನ್ನ ಹಳೆಯ ಸಹಪಾಟಿಗಳಿಗೆ ಕಳುಹಿಸಿರುವ ಇ-ಮೇಲ್‌ನಲ್ಲಿ ಮುಂಬಯಿ ದಾಳಿ ಕುರಿತ ಮಾಹಿತಿ ಇದೆ. ಆದರೆ, ದಾಳಿಯಲ್ಲಿ ಆತನ ಪಾತ್ರ ಸ್ಪಷ್ಟವಾಗಿಲ್ಲ. ಈವೆರೆಗೂ ಬಹಿರಂಗವಾಗಿರದ ಕೆಲವು ಅಂಶಗಳು ಹೆಡ್ಲಿಗೆ ಗೊತ್ತಿದೆ ಎಂದು ಕಾರ‌್ರೆ ಸೊರೆನ್ಸೆನ್ ತಮ್ಮ ಪುಸ್ತಕದಲ್ಲಿ ತಿಳಿಸಿದ್ದಾರೆ.

ಅಫ್ಘಾನಿಸ್ಥಾನದಲ್ಲಿ ನೇಟೊ ಪಡೆಗಳು ನಡೆಸುತ್ತಿರುವ ದಾಳಿ ಹಾಗೂ ಕಾಶ್ಮೀರದಲ್ಲಿ ಭಾರತೀಯ ಯೋಧರು ನಡೆಸುತ್ತಿರುವ ಕಾರ್ಯಾಚರಣೆಗೆ ಪ್ರತಿಯಾಗಿ ಮುಂಬಯಿ ದಾಳಿ ನಡೆಸಲಾಗಿದೆ ಎಂದು ಹೇಡ್ಲಿ ಇ-ಮೇಲ್‌ನಲ್ಲಿ ತಿಳಿಸಿದ್ದ ಎನ್ನಲಾಗಿದೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ