ಅಕ್ರಾ( ಘಾನಾ): ಘಾನಾದಲ್ಲಿರು ಕೊಫಿ ಅನ್ನಾನ್ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕೇಂದ್ರದ ಮೂಲಸೌಕರ್ಯಗಳ ವಿಸ್ತರಣೆಗೆ ಭಾರತ 67 ಕೋಟಿ ರೂ. ( 1 ಮಿಲಿಯನ್ಡಾಲರ್) ಹೆಚ್ಚುವರಿ ಅನುದಾನ ಘೋಷಿಸಿದೆ.
ಘಾನಾ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅನ್ನಾನ್ ಕೇಂದ್ರದ ಅಭಿವೃದ್ಧಿಗಾಗಿ ಈ ಘೋಷಣೆ ಮಾಡಿದ್ದಾರೆ.
ಪ್ರತಿಷ್ಠಿತ ಕೊಫಿ ಅನ್ನಾನ್ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ವಿಶ್ವಸಂಸ್ಥೆ ಮಾಜಿ ಮಹಾಕಾರ್ಯದರ್ಶಿ ಕೋಫಿ ಅನ್ನಾನ್ ಅವರು ಘಾನಾದ ಸುಪುತ್ರ ಹಾಗೂ ಭಾರತದ ಬಹುಕಾಲದ ಗೆಳೆಯ ಎಂದು ಗುಣಗಾನ ಮಾಡಿದರು.
ಭಾರತ ನೀಡಿರುವ 2.8 ದಶಲಕ್ಷ ಡಾಲರ್ ಅನುದಾನದಿಂದ ಘಾನಾ ರಾಷ್ಟ್ರೀಯರು ಮಾಹಿತಿ ತಂತ್ರಜ್ಞಾನದ ತರಬೇತಿಯ ಪ್ರಯೋಜನ ಪಡೆಯಬೇಕು ಎಂದು ಕರೆ ನೀಡಿದರು.
ತಂತ್ರಜ್ಞಾನ ಕೇಂದ್ರದ ಸಾಧನೆಯನ್ನು ಗುರುತಿಸಿ ಹೆಚ್ಚುವರಿ ಅನುದಾನ ಘೋಷಿಸಲು ಭಾರತ ಸರಕಾರ ಹರ್ಷಿಸುತ್ತಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದರು.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜೂನ್ 12ರಿಂದ ಆಫ್ರಿಕಾ ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದು, ಜೂನ್ 17ಕ್ಕೆ ಭಾರತಕ್ಕೆ ವಾಪಸ್ ಆಗಲಿದ್ದಾರೆ.