ಆ್ಯಪ್ನಗರ

ಪುಲ್ವಾಮಾ ದಾಳಿ ಖಂಡಿಸುವಲ್ಲೂ ಪಾಕಿಸ್ತಾನದ ಆಪ್ತಮಿತ್ರ ಚೀನಾ ಬೂಟಾಟಿಕೆ

ಪುಲ್ವಾಮಾ ಭಯೋತ್ಪಾದಕ ದಾಳಿಯ ಒಂದು ದಿನದ ಬಳಿಕ ಸಾಕಷ್ಟು ಮೀನಾಮೇಷ ಎಣಿಸಿ, ಅಳೆದೂ ತೂಗಿದ ನಂತರ ಪಾಕಿಸ್ತಾನದ ಆಪ್ತ ಮಿತ್ರ ಚೀನಾ ಈ ಕೃತ್ಯವನ್ನು ಖಂಡಿಸಿದೆ. ಆದರೆ ದಾಳಿಯ ಸಂಚುಕೋರ ಜೈಷೆ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಅಜರ್ ಮಸೂದ್‌ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕರ ಪಟ್ಟಿಗೆ ಸೇರಿಸಬೇಕೆಂಬ ಭಾರತದ ಬೇಡಿಕೆಯನ್ನು ಬೆಂಬಲಿಸಲು ನಿರಾಕರಿಸುವ ಮೂಲಕ ಬೂಟಾಟಿಕೆ ಪ್ರದರ್ಶಿಸಿದೆ.

Vijaya Karnataka Web 15 Feb 2019, 4:40 pm
[This story originally published in TimesNownews.com on Feb 15, 2019]
Vijaya Karnataka Web Xi_Jinping-AP


ಬೀಜಿಂಗ್:
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ಪಾಕ್‌ ಬೆಂಬಲಿತ ಜೈಷೆ ಮೊಹಮ್ಮದ್ ಭಯೋತ್ಪಾದಕ ದಾಳಿಗೆ 38ಕ್ಕೂ ಹೆಚ್ಚು ಯೋಧರು ಬಲಿಯಾಗಿ ಒಂದು ದಿನದ ಬಳಿಕ ಮೀನಾಮೇಷ ಎಣಿಸಿದ ನಂತರ ಚೀನಾ ಈ ಕೃತ್ಯವನ್ನು ಖಂಡಿಸಿದೆ.

ಹಾಗಿದ್ದರೂ, ವಿಶ್ವಸಂಸ್ಥೆಯ ಜಾಗತಿಕ ಉಗ್ರರ ಪಟ್ಟಿಗೆ ಮೌಲಾನಾ ಮಸೂದ್‌ ಅಜರ್‌ನ ಸೇರ್ಪಡೆ ಮಾಡಬೇಕೆಂಬ ಭಾರತದ ಬೇಡಿಕೆ ಬೆಂಬಲಿಸಲು ಚೀನಾ ನಿರಾಕರಿಸಿದೆ.

ಗುರುವಾರ ಸಂಜೆ 3:15ರ ಸುಮಾರಿಗೆ ಪುಲ್ವಾಮಾ ಆವಂತಿಪೋರಾ ಪ್ರದೇಶದಲ್ಲಿ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ 78 ವಾಹನಗಳಿಗೆ ಬೆಂಗಾವಲಾಗಿ ಸಾಗುತ್ತಿದ್ದ ಸಿಆರ್‌ಪಿಎಫ್‌ ವಾಹನಗಳ ಮೇಲೆ ಜೈಷೆ ಮೊಹಮ್ಮದ್ ಉಗ್ರನೊಬ್ಬ ಸ್ಫೋಟಕ ತುಂಬಿದ ಟ್ರಕ್ ಡಿಕ್ಕಿ ಹೊಡೆಸಿ ದಾಳಿ ಮಾಡಿದ್ದ. ಈ ಘಟನೆಯಲ್ಲಿ 38 ಯೋಧರು ಹುತಾತ್ಮರಾಗಿದ್ದರು.

ಸ್ಫೋಟದ ತೀವ್ರತೆಗೆ ಒಂದು ಬಸ್‌ ಸಂಪೂರ್ಣ ಲೋಹದ ಮುದ್ದೆಯಾಗಿತ್ತು. ಮೃತದೇಹಗಳು ಎಲ್ಲೆಂದರಲ್ಲಿ ಚದುರಿ ಬಿದ್ದಿದ್ದವು. ಮೂವರು ನಾಪತ್ತೆಯಾಗಿದ್ದು ಇನ್ನೂ ಪತ್ತೆಯಾಗಿಲ್ಲ.

'ಆತ್ಮಹತ್ಯಾ ಉಗ್ರರ ದಾಳಿ ಕುರಿತು ವರದಿಗಳನ್ನು ಚೀನಾ ಗಮನಿಸಿದೆ. ಈ ದಾಳಿ ನಮಗೆ ತೀವ್ರ ಆಘಾತ ಉಂಟು ಮಾಡಿದೆ. ಶೋಕತಪ್ತ ಕುಟುಂಬಗಳಿಗೆ ನಮ್ಮ ಸಹಾನುಭೂತಿಯಿದ್ದು, ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದೇವೆ' ಎಂದು ಚೀನಾದ ವಿದೇಶಾಂಗ ಖಾತೆ ವಕ್ತಾರ ಗೆಂಗ್ ಶುವಾಂಗ್ ಹೇಳಿಕೆ ನೀಡಿದ್ದಾರೆ.

'ಎಲ್ಲ ಸ್ವರೂಪದ ಭಯೋತ್ಪಾದಕ ಕೃತ್ಯಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಭಯೋತ್ಪಾದನೆಯ ಪಿಡುಗನ್ನು ಮಟ್ಟಹಾಕಲು ಸಂಬಂಧಿತ ರಾಷ್ಟ್ರಗಳು ಸಮಾಲೋಚನೆ ನಡೆಸಿ ಜಂಟಿ ಕಾರ್ಯಾಚರಣೆ ರೂಪಿಸುತ್ತವೆ ಎಂದು ನಾವು ಭಾವಿಸುತ್ತೇವೆ' ಎಂದು ಗೆಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಜರ್ ಮಸೂದ್ ಕುರಿತು ಚೀನಾ ನಿಲುವೇನು ಎಂಬ ಪ್ರಶ್ನೆಗೆ, 'ಭಯೋತ್ಪಾದಕ ಪಟ್ಟಿಗೆ ಸೇರಿಸುವ ವಿಚಾರದಲ್ಲಿ, ಭದ್ರತಾ ಮಂಡಳಿಯ 1267 ಅಧಿನಿಯಮದಡಿ ಉಗ್ರ ಪಟ್ಟಿಗೆ ಸೇರ್ಪಡೆಯ ಪ್ರಕ್ರಿಯೆಗಳನ್ನು ಸ್ಪಷ್ಟವಾಗಿ ಹೇಳಲಾಗಿದೆ' ಎಂದು ಗೆಂಗ್ ಉತ್ತರಿಸಿದರು.

ಜೆಇಎಂ ಅನ್ನು ಭದ್ರತಾ ಮಂಡಳಿ ಭಯೋತ್ಪಾದಕ ಸಂಘಟನೆ ಪಟ್ಟಿಗೆ ಸೇರಿಸಿದೆ. ಸೂಕ್ತ ನಿರ್ಬಂಧಗಳ ವಿಚಾರದಲ್ಲಿ ಚೀನಾ ರಚನಾತ್ಮಕ ಪಾತ್ರ ವಹಿಸಲಿದೆ' ಎಂದು ಚೀನೀ ವಕ್ತಾರ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ