ಆ್ಯಪ್ನಗರ

ಉಗ್ರ ಪೋಷಕ ಪಾಕಿಸ್ತಾನಕ್ಕೆ ಬ್ಲ್ಯಾಕ್‌ಲಿಸ್ಟ್‌ನಿಂದ ಪಾರಾಗಲು ಕೊನೆಯ ಗಡುವು

ಒಟ್ಟು 27 ಅಂಶಗಳ ಕಾರ್ಯಸೂಚಿಯನ್ನು ನೀಡಲಾಗಿದ್ದರೂ ಆ ಪೈಕಿ ಪಾಕಿಸ್ತಾನ ಪೂರೈಸಿರುವುದು 13 ಮಾತ್ರ. ಇದರ ಜತೆಗೆ ಉಗ್ರ ನಿಗ್ರಹಕ್ಕೆ ಇನ್ನೂ 8 ಅಂಶಗಳ ಮಾರ್ಗಸೂಚಿಯನ್ನು ಎಫ್‌ಎಟಿಎಫ್‌ ಇಮ್ರಾನ್‌ ಸರಕಾರಕ್ಕೆ ನೀಡಿದ್ದು ಕಡ್ಡಾಯವಾಗಿ ಪಾಲಿಸುವಂತೆ ನಿರ್ದೇಶಿಸಿದೆ.

Agencies 21 Feb 2020, 10:35 pm
ಪ್ಯಾರಿಸ್‌: ಉಗ್ರ ಪೋಷಕ ಪಾಕಿಸ್ತಾನದ ಕಪಟ ಬುದ್ಧಿಯನ್ನು ಜಾಗತಿಕ ವೇದಿಕೆಯಲ್ಲಿ ಬಟಾಬಯಲುಗೊಳಿಸುವ ಭಾರತದ ಯತ್ನಕ್ಕೆ ಮತ್ತೊಂದು ಯಶಸ್ಸು ಸಿಕ್ಕಿದ್ದು, ಹಣಕಾಸು ಕಾರ್ಯಪಡೆ (ಎಫ್‌ಎಟಿಎಫ್‌) ಜೂನ್‌ವರೆಗೆ ಪಾಕ್‌ ಅನ್ನು ಬೂದುಪಟ್ಟಿಯಲ್ಲೇ ಮುಂದುವರಿಸಲು ನಿರ್ಧರಿಸಿದೆ.
Vijaya Karnataka Web Pakistan Imran Khan


ತನ್ನ ನೆಲದಲ್ಲಿನ ಉಗ್ರ ಸಂಘಟನೆಗಳ ನಿಗ್ರಹಕ್ಕೆ ಗಂಭೀರ ಯತ್ನ ನಡೆಸಿ, ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಸಂಪೂರ್ಣ ಅಂಕುಶ ಹಾಕಲೇಬೇಕು. ಇಲ್ಲವಾದಲ್ಲಿ ಮುಂದಿನ ಸಭೆಯಲ್ಲಿ ಕಪ್ಪುಪಟ್ಟಿಗೆ ಸೇರ್ಪಡೆಯಾಗುವುದು ಖಚಿತ ಎಂದು ಎಫ್‌ಎಟಿಎಫ್‌ ಸದಸ್ಯ ರಾಷ್ಟ್ರಗಳು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

ಪ್ಯಾರಿಸ್‌ನಲ್ಲಿ ಶುಕ್ರವಾರ ನಡೆದ ಎಫ್‌ಎಟಿಎಫ್‌ನ ಮಹತ್ವದ ಸರ್ವ ಸದಸ್ಯರ ಸಭೆಯಲ್ಲಿ ಟರ್ಕಿ ಹೊರತಾಗಿ ಯಾವುದೇ ಸದಸ್ಯ ರಾಷ್ಟ್ರಗಳು ಪಾಕಿಸ್ತಾನ ಬೆನ್ನಿಗೆ ನಿಲ್ಲಲಿಲ್ಲ. ಒಟ್ಟು 27 ಅಂಶಗಳ ಕಾರ್ಯಸೂಚಿಯನ್ನು ನೀಡಲಾಗಿದ್ದರೂ ಆ ಪೈಕಿ ಪಾಕಿಸ್ತಾನ ಪೂರೈಸಿರುವುದು 13 ಮಾತ್ರ. ಇದರ ಜತೆಗೆ ಉಗ್ರ ನಿಗ್ರಹಕ್ಕೆ ಇನ್ನೂ 8 ಅಂಶಗಳ ಮಾರ್ಗಸೂಚಿಯನ್ನು ಎಫ್‌ಎಟಿಎಫ್‌ ಇಮ್ರಾನ್‌ ಸರಕಾರಕ್ಕೆ ನೀಡಿದ್ದು ಕಡ್ಡಾಯವಾಗಿ ಪಾಲಿಸುವಂತೆ ನಿರ್ದೇಶಿಸಿದೆ. ಇಲ್ಲವಾದಲ್ಲಿ ಮುಂದಿನ ಸಭೆಯಲ್ಲಿ ಸದ್ಯ ಇರುವ ಬೂದುಪಟ್ಟಿಯಿಂದ ಕಪ್ಪುಪಟ್ಟಿಗೆ ಸೇರ್ಪಡೆ ಮಾಡಿ ಅಂತಾರಾಷ್ಟ್ರೀಯ ಹಣಕಾಸು ನೆರವು ಪಡೆಯಲು ಸಂಪೂರ್ಣ ನಿರ್ಬಂಧ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

650 ಪುಟಗಳ ಉತ್ತರ

ಉಗ್ರರ ಅಕ್ರಮ ಹಣ ವರ್ಗಾವಣೆಗೆ ಅಂಕುಶಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತಾಗಿ 150 ಪ್ರಶ್ನೆಗಳ ಪಟ್ಟಿಯನ್ನು ಪಾಕಿಸ್ತಾನಕ್ಕೆ ಎಫ್‌ಎಟಿಎಫ್‌ ನೀಡಿತ್ತು. ಇದಕ್ಕೆ 650 ಪುಟಗಳ ಉತ್ತರವನ್ನು ಪಾಕ್‌ ಜ. 8ರಂದು ಸಲ್ಲಿಸಿತ್ತು. ಈ ಉತ್ತರ ಸಮಾಧಾನಕರವಾಗಿಲ್ಲ ಎಂದು ಎಫ್‌ಎಟಿಎಫ್‌ ಅಭಿಪ್ರಾಯಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಎಫ್‌ಎಟಿಎಫ್‌ ಸರ್ವಸದಸ್ಯರ ಸಭೆಗೆ ಪೂರಕವಾಗಿ ಫೆ. 16 ರಂದು ನಡೆದ ಪೂರ್ವಭಾವಿ ಸಭೆಯಲ್ಲಿ 205 ರಾಷ್ಟ್ರಗಳ 800 ಪ್ರತಿನಿಧಿಗಳು ಭಾಗವಹಿಸಿದ್ದರು. ಈ ವೇಳೆ ಪಾಕಿಸ್ತಾನ ತನ್ನ ಉಗ್ರ ನಿಗ್ರಹ ಕ್ರಮಗಳ ಸಂಕ್ಷಿಪ್ತ ವರದಿಯನ್ನು ನೀಡಿತ್ತು. ಆದರೆ ಮಿತ್ರರಾಷ್ಟ್ರ ಚೀನಾ ಪಾಕಿಸ್ತಾನದ ಪರವಾಗಿ ಸೊಲ್ಲೆತ್ತದಿರುವುದು ಇಮ್ರಾನ್‌ ಸರಕಾರವನ್ನು ಜಾಗತಿಕ ವೇದಿಕೆಯಲ್ಲಿ ಇಕ್ಕಟ್ಟಿಗೆ ಸಿಲುಕಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ