ಆ್ಯಪ್ನಗರ

ಗಡಿಯಿಂದ ಯುದ್ಧ ವಿಮಾನ ಹಿಂದೆಗೆಯುವವರೆಗೂ ವಾಯುಪ್ರದೇಶ ತೆರೆಯಲ್ಲ: ಭಾರತಕ್ಕೆ ಪಾಕ್ ಹೇಳಿಕೆ

ಭಾರತದ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ತೆರೆಯಬೇಕಾದರೆ ಮೊದಲು ಭಾರತ ಮುಂಚೂಣಿ ಗಡಿ ಭಾಗಗಳಿಂದ ತನ್ನ ಯುದ್ಧ ವಿಮಾನಗಳ ನಿಯೋಜನೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಪಾಕಿಸ್ತಾನ ಷರತ್ತು ವಿಧಿಸಿದೆ.

PTI 12 Jul 2019, 3:01 pm
ಇಸ್ಲಾಮಾಬಾದ್: ಮುಂಚೂಣಿ ಗಡಿ ಪ್ರದೇಶಗಳಿಂದ ಭಾರತ ತನ್ನ ಯುದ್ಧ ವಿಮಾನಗಳ ನಿಯೋಜನೆಯನ್ನು ಹಿಂತೆಗೆದುಕೊಳ್ಳುವ ವರೆಗೂ ವಾಣಿಜ್ಯ ವಿಮಾನಗಳ ಹಾರಾಟಕ್ಕೆ ವಾಯುಪ್ರದೇಶವನ್ನು ತೆರೆಯುವುದಿಲ್ಲ ಎಂದು ಪಾಕಿಸ್ತಾನ ಹೇಳಿದೆ.
Vijaya Karnataka Web Indo Pak tensions


ಪಾಕಿಸ್ತಾನದ ವಿಮಾನಯಾನ ಕಾರ್ಯದರ್ಶಿ ಶಾರುಖ್ ನುಸ್ರತ್ ಸಂಸದೀಯ ಸಮಿತಿಗೆ ಈ ಮಾಹಿತಿ ನೀಡಿದರು.

ಪುಲ್ವಾಮಾ ಉಗ್ರ ದಾಳಿ ಹಿನ್ನೆಲೆಯಲ್ಲಿ ಫೆಬ್ರವರಿ 26ರಂದು ಭಾರತೀಯ ವಾಯುಪಡೆ ಯುದ್ಧ ವಿಮಾನಗಳು ಬಾಲಾಕೋಟ್‌ನಲ್ಲಿರುವ ಜೈಷೆ ಮೊಹಮ್ಮದ್ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿದ ಬಳಿಕ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಪೂರ್ಣವಾಗಿ ಮುಚ್ಚಿತ್ತು.

ಪಾಕಿಸ್ತಾನದ ನಾಗರಿಕ ವಿಮಾನಯಾನ ಖಾತೆ ಮಹಾ ನಿರ್ದೇಶಕರೂ ಆಗಿರುವ ನುಸ್ರತ್, ಸಂಸದೀಯ ಸ್ಥಾಯಿ ಸಮಿತಿಗೆ ಗುರುವಾರ ಈ ಮಾಹಿತಿ ನೀಡಿದರು. ಭಾರತೀಯ ಅಧಿಕಾರಿಗಳಿಗೆ ತಮ್ಮ ಇಲಾಖೆಯ ನಿರ್ಧಾರವನ್ನು ತಿಳಿಸಲಾಗಿದೆ ಎಂದು ಮಾಹಿತಿ ನೀಡಿರುವುದಾಗಿ ಡಾನ್ ನ್ಯೂಸ್ ವರದಿ ಮಾಡಿದೆ.

'ವಾಯುಪ್ರದೇಶವನ್ನು ತೆರೆಯುವಂತೆ ಭಾರತ ಸರಕಾರ ಕೋರಿಕೆ ಸಲ್ಲಿಸಿದೆ. ಆದರೆ, ಅದಕ್ಕೆ ಮೊದಲು ತನ್ನ ಯುದ್ಧ ವಿಮಾನಗಳನ್ನು ಗಡಿ ಪ್ರದೇಶಗಳಿಂದ ತೆರವುಗೊಳಿಸಬೇಕು ಎಂದು ಭಾರತಕ್ಕೆ ನಾವು ಒತ್ತಾಯಿಸಿದ್ದೇವೆ' ಎಂದು ನುಸ್ರತ್ ತಿಳಿಸಿದರು.

ಪಾಕ್ ವಾಯುಪ್ರದೇಶ ಬಂದ್ ಆಗಿರುವುದರಿಂದ ಭಾರತದ ವಿಮಾನಗಳು ಬದಲಿ ಮಾರ್ಗದ ಮೂಲಕ ಸುತ್ತು ಬಳಸಿ ಹಾರಾಟ ನಡೆಸುತ್ತಿವೆ ಎಂದು 'ದ ಎಕ್ಸ್‌ಪ್ರೆಸ್ ಟ್ರಿಬ್ಯೂನ್' ವರದಿ ಮಾಡಿದೆ.

ಪಾಕ್ ವಿಮಾನಗಳ ಹಾರಾಟಕ್ಕೆ ಭಾರತ ತನ್ನ ಆಗಸ ಪ್ರದೇಶವನ್ನು ತೆರೆದಿದೆ ಎಂಬ ಭಾರತದ ಹೇಳಿಕೆಯನ್ನೂ ನುಸ್ರತ್ ಅಲ್ಲಗಳೆದಿದ್ದಾರೆ.

ಪಾಕಿಸ್ತಾನದ ವಾಯುಪ್ರದೇಶದ ಮುಚ್ಚುಗಡೆಯಿಂದಾಗಿ ಭಾರತದ ವಾಯುಯಾನ ಸಂಸ್ಥೆಗಳಿಗೆ ಭಾರೀ ನಷ್ಟವಾಗುತ್ತಿದೆ. ಸುತ್ತು ಬಳಸು ಮಾರ್ಗದ ಮೂಲಕ ಹಾರಾಟಕ್ಕಾಗಿ ಭಾರತ ಇದುವರೆಗೆ 430 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚ ಮಾಡಬೇಕಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್ ಸಂಸತ್ತಿಗೆ ತಿಳಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ