ಆ್ಯಪ್ನಗರ

ಪ್ರವಾದಿ ವ್ಯಂಗ್ಯಚಿತ್ರ ತೋರಿಸಿದ ಫ್ರಾನ್ಸ್‌ ಶಿಕ್ಷಕನ ಶಿರಚ್ಛೇಧ, 18ರ 'ಉಗ್ರ'ನ ಹತ್ಯೆ

ಧರ್ಮಾಂಧತೆ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸುವಾಗ ಇತಿಹಾಸ ಶಿಕ್ಷಕರು ಪ್ರವಾದಿ ಮೊಹಮ್ಮದ್‌ ಹೆಸರು ಪ್ರಸ್ತಾಪಿಸಿ, ವ್ಯಂಗ್ಯಚಿತ್ರ ತೋರಿಸಿದ್ದರು. ಮರುದಿನವೇ ಆ ಶಿಕ್ಷಕರ ತಲೆ ಕತ್ತರಿಸಿ ಹತ್ಯೆಗೈಯಲಾಗಿತ್ತು

Agencies 17 Oct 2020, 8:11 pm
ಪ್ಯಾರಿಸ್‌: ಫ್ರಾನ್ಸ್‌ನಲ್ಲಿಇಸ್ಲಾಂ ಭಯೋತ್ಪಾದನೆಯ ಅಟ್ಟಹಾಸ ಮರು ಕಳಿಸಿದೆ. ಶಾಲಾ ತರಗತಿಯಲ್ಲಿ ಪಾಠ ಮಾಡುವ ವೇಳೆ ಸಂದರ್ಭಿಕವಾಗಿ ಪ್ರವಾದಿ ಮೊಹಮ್ಮದ್‌ನ ವ್ಯಂಗ್ಯಚಿತ್ರ ತೋರಿಸಿ ವಿವರಿಸಿದ್ದ ಇತಿಹಾಸ ಶಿಕ್ಷಕನ ಶಿರಚ್ಛೇಧ ಮಾಡಲಾಗಿದೆ. ಕೃತ್ಯ ಎಸಗಿದ್ದ ರಷ್ಯಾದ ಚೆಚನ್ಯಾ ಬಂಡುಕೋರ ಪ್ರದೇಶದಿಂದ ವಲಸೆ ಬಂದ 18 ವರ್ಷದ ಮುಸ್ಲಿಂ ವಿದ್ಯಾರ್ಥಿಯನ್ನು ಫ್ರಾನ್ಸ್‌ ಪೊಲೀಸರು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
Vijaya Karnataka Web France police


ನಿದರ್ಶನ ಸಮೇತ ಪಾಠ ಮಾಡುವ ಉಮೇದಿನಲ್ಲಿದ್ದ ಇತಿಹಾಸ ಶಿಕ್ಷಕ, ಧರ್ಮಾಂಧತೆ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸುವಾಗ ಪ್ರವಾದಿ ಮೊಹಮ್ಮದ್‌ ಹೆಸರು ಪ್ರಸ್ತಾಪಿಸಿ, ವ್ಯಂಗ್ಯಚಿತ್ರ ತೋರಿಸಿದ್ದರು. ಅದರ ಮರುದಿನವೇ ಆ ಶಿಕ್ಷಕರ ತಲೆಕತ್ತರಿಸಿ ಹತ್ಯೆಗೈಯಲಾಗಿತ್ತು. ಪ್ರಕರಣವನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ತ್ವರಿತ ಶೋಧ ನಡೆಸಿದ್ದ ಪೊಲೀಸರು ಪ್ಯಾರಿಸ್‌ ನಗರದ ಹೊರ ಭಾಗದಲ್ಲಿ ಬೀಡುಬಿಟ್ಟಿದ್ದ ಶಂಕಿತನನ್ನು ಗುಂಡು ಹಾರಿಸಿ ಸೆರೆ ಹಿಡಿದ್ದರು. ನಂತರ ಗಾಯದಿಂದ ಆತ ಮೃತಪಟ್ಟಿದ್ದಾನೆ. ಶಿಕ್ಷಕನ ಕೊಲೆಗೆ ಬೃಹತ್‌ ಜಾಲವೇ ಸೃಷ್ಟಿಯಾಗಿದ್ದು, ಆ ಪೈಕಿ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಪ್ಯಾರಿಸ್‌ನಿಂದ 20 ಮೈಲಿ ದೂರದಲ್ಲಿರುವ ಕನ್‌ಫ್ಲಾನ್ಸ್‌ ಸೇಂಟ್‌-ಹೊನೊರಿನ್‌ನ ಮಿಡ್ಲ್‌ಸ್ಕೂಲ್‌ ಪಕ್ಕದಲ್ಲಿಯೇ ಶಿಕ್ಷಕನ ಹತ್ಯೆ ನಡೆದಿತ್ತು. ಪಾಠ ಮುಗಿಸಿ ಹೊರ ಬಂದ ಶಿಕ್ಷಕನ ಮೇಲೆ ಮತಾಂಧ ವಿದ್ಯಾರ್ಥಿ ಚೂರಿಯಿಂದ ಏಕಾಏಕಿ ದಾಳಿ ಮಾಡಿದ್ದ. ‘ಅಲ್ಲಾಹು ಅಕ್ಬರ್‌’ ಎಂದು ಕೂಗುತ್ತಲೇ ಶಿಕ್ಷಕನ ಕತ್ತು ಕತ್ತರಿಸಿದ್ದ ಎಂದು ಮೂಲಗಳು ತಿಳಿಸಿವೆ.

"ನಮಗೆ ಇಸ್ಲಾಂ ಧರ್ಮ ಪವಿತ್ರ. ಅದನ್ನು ಹೀಯಾಳಿಸುವ ಯಾರನ್ನೂ ನಾವು ಸಹಿಸುವುದಿಲ್ಲ. ಆ ಶಿಕ್ಷಕರು ತರಗತಿಯಲ್ಲಿ ಪ್ರವಾದಿ ಮೊಹಮ್ಮದ್‌ ಬಗ್ಗೆ ಮಾತಾಡಿದ್ದು ತಪ್ಪು. ಅದರಲ್ಲೂ ಕಾರ್ಟೂನ್‌ ತೋರಿಸಿ ಅವಮಾನ ಮಾಡಿದ್ದರು. ಅದನ್ನು ನಮ್ಮಿಂದ ಸಹಿಸಿಕೊಳ್ಳಲು ಸಾಧ್ಯವಿರಲಿಲ್ಲ ಎಂದು ಬಂಧಿತ ಪೋಷಕರು ವಿಚಾರಣೆ ವೇಳೆ ತಿಳಿದರು," ಎಂದು ಪೊಲೀಸರು ಹೇಳಿದ್ದಾರೆ.

ಬಂಧಿತ ಇತರ ಆರೋಪಿಗಳ ಮೂಲವನ್ನು ಪೊಲೀಸರು ಜಾಲಾಡುತ್ತಿದ್ದಾರೆ. ಪೋಷಕರನ್ನು ಹೊರತುಪಡಿಸಿ ಉಳಿದ ಜಾಲ ಸದಸ್ಯರೆಲ್ಲರೂ ಇಸ್ಲಾಂ ಗುಂಪೊಂದರ ಸದಸ್ಯರು. ಇವರು ಉಗ್ರ ಸಂಘಟನೆಗಳ ಜೊತೆ ಹೊಂದಿರಬಹುದಾದ ನಂಟಿನ ಕುರಿತು ತನಿಖೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

'ಇದೊಂದು ಇಸ್ಲಾಮಿಕ್‌ ಭಯೋತ್ಪಾದನಾ ಕೃತ್ಯ' ಎಂದು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆನ್‌ ಮ್ಯಾಕ್ರನ್‌ ಹೇಳಿದ್ದಾರೆ. ಜೊತೆಗೆ ಉಗ್ರವಾದದ ವಿರುದ್ಧ ಒಗ್ಗಟ್ಟಿನಿಂದ ಇರುವಂತೆ ದೇಶದ ಜನತೆಗೆ ಕರೆ ನೀಡಿದ್ದಾರೆ.

2015ರಲ್ಲಿಇದೇ ರೀತಿ ಪ್ರವಾದಿ ಮೊಹಮ್ಮದ್‌ರ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕಾಗಿ ಪ್ಯಾರಿಸ್‌ನ ‘ಚಾರ್ಲಿ ಹೆಬ್ಡೊ’ ಪತ್ರಿಕಾ ಕಚೇರಿ ಮೇಲೆ ಉಗ್ರ ದಾಳಿ ನಡೆದಿತ್ತು. ಯಹೂದಿ ಸೂಪರ್‌ ಮಾರ್ಕೆಟ್‌ನಲ್ಲಿಯೂ ಬಾಂಬ್‌ ಸ್ಫೋಟಿಸಿ ಅಟ್ಟಹಾಸ ಪ್ರದರ್ಶಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ