ಆ್ಯಪ್ನಗರ

ಐರ್ಲೆಂಡ್ ಕಾಯಿದೆ ಬದಲಿಸಿದ ಕನ್ನಡತಿ ಸಾವು

ಕನ್ನಡತಿ ಸವಿತಾ ಹಾಲಪ್ಪನವರ್‌ ಪ್ರಕರಣದ ಬಳಿಕ ಎದ್ದಿದ್ದ ಕಠಿಣವಾದ ಗರ್ಭಪಾತ ನಿಷೇಧ ಕಾಯಿದೆ ವಿರುದ್ಧದ ಕೂಗಿಗೆ ಅಲ್ಲಿನ ಸರಕಾರ ಮಣಿಯಲೇಬೇಕಾಗಿದೆ. ಕಾಯಿದೆಯ ಕಠಿಣ ನಿಯಮಗಳನ್ನು ರದ್ದುಪಡಿಸುವ ಸಂಬಂಧ ನಡೆಸಿದ ಜನಮತ ಸಂಗ್ರಹದಲ್ಲಿ ಶೇ.68ರಷ್ಟು ಜನರು ಕಾನೂನು ಬದಲಾವಣೆ ಪರವಾಗಿ ಮತ ಚಲಾಯಿಸಿದ್ದಾರೆ.

Vijaya Karnataka 27 May 2018, 11:11 am
ಲಂಡನ್‌: ಕನ್ನಡತಿ ಸವಿತಾ ಹಾಲಪ್ಪನವರ್‌ ಪ್ರಕರಣದ ಬಳಿಕ ಎದ್ದಿದ್ದ ಕಠಿಣವಾದ ಗರ್ಭಪಾತ ನಿಷೇಧ ಕಾಯಿದೆ ವಿರುದ್ಧದ ಕೂಗಿಗೆ ಅಲ್ಲಿನ ಸರಕಾರ ಮಣಿಯಲೇಬೇಕಾಗಿದೆ. ಕಾಯಿದೆಯ ಕಠಿಣ ನಿಯಮಗಳನ್ನು ರದ್ದುಪಡಿಸುವ ಸಂಬಂಧ ನಡೆಸಿದ ಜನಮತ ಸಂಗ್ರಹದಲ್ಲಿ ಶೇ.68ರಷ್ಟು ಜನರು ಕಾನೂನು ಬದಲಾವಣೆ ಪರವಾಗಿ ಮತ ಚಲಾಯಿಸಿದ್ದಾರೆ.
Vijaya Karnataka Web Savita


ಶುಕ್ರವಾರ ನಡೆದ ಜನಮತ ಗಣನೆಯ ಫಲಿತಾಂಶವನ್ನು ಸರಕಾರ ಶನಿವಾರ ಪ್ರಕಟಿಸಿದೆ. ''ದೇಶದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಜನರ ಅಪೇಕ್ಷೆಯಂತೆ ಹುಟ್ಟುವ ಮಗು ಮತ್ತು ತಾಯಿಯ ಜೀವಕ್ಕೆ ಸಮಾನ ಹಕ್ಕು ನೀಡುವ ಐರಿಶ್‌ ಸಂವಿಧಾನದ ಎಂಟನೆಯ ತಿದ್ದುಪಡಿಯನ್ನು ರದ್ದುಪಡಿಸಲಾಗುವುದು,'' ಎಂದು ಐಲೆಂರ್‍ಡ್‌ ಪ್ರಧಾನಿ ಲಿಯೋ ವರಾದ್ಕರ್‌ ಘೋಷಿಸಿದ್ದಾರೆ. ಕಾಕತಾಳೀಯ ಎಂದರೆ ವರಾದ್ಕರ್‌ ಸಹ ಭಾರತ ಮೂಲದವರು. ಅವರೂ ಸಹ ಗರ್ಭಪಾತ ನಿಷೇಧದ ವಿರುದ್ಧ ಜನಾಭಿಪ್ರಾಯ ಸಂಗ್ರಹದ ಪ್ರಚಾರದಲ್ಲಿ ತೊಡಗಿದ್ದರು. ದೇಶದ ಹೊರಗೆ ನೆಲೆಸಿರುವ ಸಾವಿರಾರು ಮಂದಿ ಜನಮತದಲ್ಲಿ ಭಾಗಿಯಾಗಲು ಐರ್ಲೆಂಡ್‌ಗೆ ಆಗಮಿಸಿದ್ದರು.

ಕ್ಯಾಥೋಲಿಕ್‌ ಕ್ರಿಶ್ಚಿಯನ್ನರು ಅಧಿಕ ಸಂಖ್ಯೆಯಲ್ಲಿರುವ ಐರ್ಲೆಂಡ್‌ನಲ್ಲಿ ಗರ್ಭಪಾತ ನಿಷೇಧಿಸಲಾಗಿದ್ದು, ಕಾನೂನು ಉಲ್ಲಂಘಿಸಿದರೆ 14 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿತ್ತು. ಜೀವಕ್ಕೆ ಅಪಾಯವಿದ್ದರೂ ಕಠಿಣ ಕಾನೂನಿನ ಕಾರಣದಿಂದ ಗರ್ಭಪಾತ ಮಾಡಿಸಲು ವೈದ್ಯರು ಸಮ್ಮತಿಸದ ಕಾರಣ 2012ರಲ್ಲಿ ಬೆಳಗಾವಿಯ ದಂತ ವೈದ್ಯೆ ಸವಿತಾ ಹಾಲಪ್ಪನವರ್‌ ಮೃತಪಟ್ಟಿದ್ದರು. ಇದು ಜಗತ್ತಿನಾದ್ಯಂತ ತೀವ್ರ ಆಕ್ರೋಶ ಹುಟ್ಟುಹಾಕಿತ್ತು. ಘಟನೆಯ ನಂತರ ದೇಶದಲ್ಲಿ ಗರ್ಭಪಾತಕ್ಕೆ ಇರುವ ಕಠಿಣ ನಿಯಮಗಳನ್ನು ಸಡಿಲಿಸಬೇಕು ಎಂಬ ಒತ್ತಾಯ ಬಲಗೊಂಡಿತು. ಅದರಂತೆ ಈಗ ಸಂವಿಧಾನ ತಿದ್ದುಪಡಿಗೆ ಐರ್ಲೆಂಡ್‌ ಜನತೆ ಐತಿಹಾಸಿಕ ತೀರ್ಪು ನೀಡಿದ್ದಾರೆ.

ಐರ್ಲೆಂಡ್‌ನ ಜನರು ಜನಮತ ಸಂಗ್ರಹದ ದಿನದಂದು ನನ್ನ ಮಗಳು ಸವಿತಾಳನ್ನು ನೆನಪಿಸಿಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇವೆ. ಆಕೆಗೆ ಆದಂತೆ ಯಾವುದೇ ಕುಟುಂಬಕ್ಕೆ ಆಗಬಾರದು.
- ಅಂದಾನಪ್ಪ ಯಾಲಗಿ, ಸವಿತಾ ಹಾಲಪ್ಪನವರ್‌ ತಂದೆ

68% ಜನರು ಐರ್ಲೆಂಡ್‌ನ ಗರ್ಭಪಾತ ನಿಷೇಧ ಕಾಯಿದೆಯ ಕಠಿಣ ನಿಯಮಗಳ ಬದಲಾವಣೆ ಪರ ಮತ ಚಲಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ