ಕೊಚ್ಚಿ: ಯೆಮನ್ನಲ್ಲಿ ಐಸಿಸ್ ಉಗ್ರರಿಂದ ಬಿಡುಗಡೆಯಾಗಿರುವ ಕೇರಳ ಪಾದ್ರಿ ಟಾಮ್ ಉಳುನ್ನಾಲಿಲ್, ಸೆರೆಯಲ್ಲಿದ್ದ ಹದಿನೆಂಟು ತಿಂಗಳ ಅವಧಿಯಲ್ಲಿ ಉಗ್ರರು ಒಮ್ಮೆಯೂ ತಮಗೆ ದೈಹಿಕ ಹಿಂಸೆ ನೀಡಲಿಲ್ಲ ಎಂದಿದ್ದಾರೆ.
ಟಾಮ್ ಅವರ ಬಿಡುಗಡೆಗೆ ವಿಮೋಚನಾ ಶುಲ್ಕ ಕೋರುವ ಸಲುವಾಗಿ ಈ ಹಿಂದೆ ಐಸಿಸ್, ಅವರಿಗೆ ದಂಡಿಸುತ್ತಿರುವ ವಿಡಿಯೋವೊಂದನ್ನು ಬಿಡುಗಡೆ ಮಾಡಿತ್ತು. ಆದರೆ, ಇದು ಕೃತಕವಾಗಿ ಸೃಷ್ಟಿಸಿದ್ದೇ ಹೊರತು, 'ದೇವರ ದಯೆಯಿಂದ' ಉಗ್ರರು ತಮ್ಮನ್ನು ಮುಟ್ಟಿಲ್ಲ ಎಂದು ಖುದ್ದು ಉಳುನ್ನಾಲಿಲ್ ಶನಿವಾರ ಹೇಳಿದ್ದಾರೆ. ಪಾದ್ರಿಯ ಬಿಡುಗಡೆಗೆ ಯಾವುದೇ ಹಣ ನೀಡಲಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
ಯೆಮನ್ನ ಆಡೆನ್ನಲ್ಲಿ ಮದರ್ ಥೆರೇಸಾ ಮಿಷನರಿಯ ವೃದ್ಧಾಶ್ರಮದಿಂದ ಟಾಮ್ರನ್ನು 2016ರ ಮಾರ್ಚ್ನಲ್ಲಿ ಅಪಹರಿಸಲಾಗಿತ್ತು. ಈ ಸಂದರ್ಭದಲ್ಲಿ ನಾಲ್ವರು ಸಿಸ್ಟರ್ಗಳ ಕೊಲೆ ಮಾಡಲಾಗಿತ್ತು.
''ದೇವರು ನನ್ನ ವಿಷಯದಲ್ಲಿ ಬಹಳಷ್ಟು ಕೃಪೆ ತೋರಿದ್ದಾನೆ. ನನ್ನತ್ತ ಯಾವುದೇ ಗನ್ ಕೂಡಾ ತಿರುಗಿಲ್ಲ,'' ಎಂದು ಉಳುನ್ನಾಲಿಲ್ ತಿಳಿಸಿದ್ದಾರೆ.
==============
''ನಾನು ಭಾರತೀಯ ಎನ್ನುತ್ತಲೇ, ನನ್ನನ್ನು ಬೇರೆ ಕೊಠಡಿಗೆ ಕರೆದೊಯ್ದರು, ಉಳಿದವರನ್ನು ಕೊಂದರು,'' ಎನ್ನುವ ಅವರಿಗೆ ತಮ್ಮನ್ನು ಎಲ್ಲೆಲ್ಲಿ ಇರಿಸಲಾಗಿತ್ತು, ಯಾರು ಅಪಹರಿಸಿದವರು ಎಂಬ ಬಗ್ಗೆ ಯಾವ ಮಾಹಿತಿಯೂ ಇಲ್ಲವಂತೆ. ಏಕೆಂದರೆ ಪಾದ್ರಿಯ ಎದುರು ಉಗ್ರರು ಮುಸುಕುಧಾರಿಗಳಾಗಿರುತ್ತಿದ್ದರು.
ಇನ್ನು ಸಮಯಕ್ಕೆ ಸರಿಯಾಗಿ ತಮಗೆ ಡಯಾಬಿಟೀಸ್ ಮಾತ್ರೆಗಳನ್ನು ಉಗ್ರರು ನೀಡುತ್ತಿದ್ದರು. ತಮ್ಮ ಮೂಲ ಅಗತ್ಯಗಳ ಕುರಿತು ಚೆನ್ನಾಗಿಯೇ ಕಾಳಜಿ ವಹಿಸುತ್ತಿದ್ದರು ಎಂದು ಪಾದ್ರಿ ಹೇಳಿದ್ದಾರೆ.
ಈ 18 ತಿಂಗಳ ಅವಧಿಯಲ್ಲಿ ಅವರು ಸುಮಾರು 30 ಕೆ.ಜೆ.ತೂಕ ಇಳಿದಿದ್ದಾರೆ.
''ನಮ್ಮ ಬಳಿ ಅವರು ಯಾವುದೇ ಹಣ ಕೇಳಿಲ್ಲ, ಅವರು ಹಣ ಕೇಳಿದರೆಂದು ನಮಗೂ ಯಾರೂ ಹೇಳಿಲ್ಲ. ಈ ಬಗ್ಗೆ ನಮಗೆ ಏನೂ ತಿಳಿದಿಲ್ಲ'' ಎನ್ನುತ್ತಾರೆ ಉಳುನ್ನಲಿಲ್ರ ಸಾಲೆಸಿಯನ್ ವರ್ಗದ ಮುಖ್ಯಸ್ಥ ಡಾನ್ ಎ.ಎಫ್.ಆರ್ಟೈಮ್.
ಪಾದ್ರಿ ಬಿಡುಗಡೆ ಹಿಂದಿನ ಕಾರ್ಯತಂತ್ರಗಳೇನು ಎಂಬುದರ ಕುರಿತು ಸ್ಪಷ್ಟತೆ ಇಲ್ಲವಾದರೂ, ಇದಕ್ಕಾಗಿ ವ್ಯಾಟಿಕನ್ ಚರ್ಚ್ ಒಮನ್ ರಾಜನಿಗೆ ಧನ್ಯವಾದ ಹೇಳಿದೆ. ಉಳುನ್ನಲಿಲ್ ಭಾರತದ ನಾಯಕರಿಗೆ ಧನ್ಯವಾದ ಹೇಳಿದ್ದಾರೆ.
ISIS Terrorists trated me well: Fr Tom Uzhunnalil on days in captivity