ಆ್ಯಪ್ನಗರ

ಜಾಗತಿಕ ಮುಖಭಂಗ ಅನುಭವಿಸಿದರೂ ಯುದ್ಧೋನ್ಮಾದದಿಂದ ಹೊರಬರದ ಪಾಕ್‌

ಪಾಕ್‌ ಆಕ್ರಮಿತ ಕಾಶ್ಮೀರದ ಮುಜಫ್ಫರಾವಾದ್‌ನಲ್ಲಿಶುಕ್ರವಾರ ಮಾತನಾಡಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು, ''ಕಾಶ್ಮೀರಿಗರು ಭಾರತದ ವಿರುದ್ಧ ಶಸ್ತಾ್ರಸ್ತ್ರಗಳನ್ನು ಕೈಗೆತ್ತಿಕೊಂಡು ಮುನ್ನುಗ್ಗಬೇಕು,'' ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

PTI 14 Sep 2019, 5:00 am
Vijaya Karnataka Web terror
ಇಸ್ಲಾಮಾಬಾದ್‌: ಆರ್ಥಿಕ ಬಿಕ್ಕಟ್ಟು, ಜಾಗತಿಕ ಛೀಮಾರಿ, ಉಗ್ರ ನಿಗ್ರಹ ವಿಚಾರದಲ್ಲಿಎದುರಾಗಿರುವ ಅಸಹಾಯಕತೆಗಳಿಂದ ದಿಕ್ಕೆಟ್ಟಿದ್ದರೂ ಭಾರತದ ವಿರುದ್ಧ ಸಮರ ಸಾರುವ ಯುದ್ಧೋನ್ಮಾದದಿಂದ ಮಾತ್ರ ಪಾಕಿಸ್ತಾನ ಹೊರಬಂದಿಲ್ಲ. ಜಮ್ಮು-ಕಾಶ್ಮೀರದಲ್ಲಿ370ನೇ ವಿಧಿ ರದ್ದತಿ ಹಿನ್ನೆಲೆಯಲ್ಲಿವಿಧಿಸಲಾಗಿದ್ದ ನಿರ್ಬಂಧಗಳನ್ನು ಭಾರತ ಸಂಪೂರ್ಣ ತೆಗೆದುಹಾಕಿದ ದಿನವೇ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಹಾಗೂ ಅವರ ಸಂಪುಟ ಸಹೋದ್ಯೋಗಿಗಳಿಂದ ಸಮರದ ಕಿಡಿ ಹೊತ್ತಿಸುವ ಹೇಳಿಕೆಗಳು ಹೊರಬಿದ್ದಿವೆ.

ಪಾಕ್‌ ಆಕ್ರಮಿತ ಕಾಶ್ಮೀರದ ಮುಜಫ್ಫರಾವಾದ್‌ನಲ್ಲಿಶುಕ್ರವಾರ ಮಾತನಾಡಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು, ''ಕಾಶ್ಮೀರಿಗರು ಭಾರತದ ವಿರುದ್ಧ ಶಸ್ತಾ್ರಸ್ತ್ರಗಳನ್ನು ಕೈಗೆತ್ತಿಕೊಂಡು ಮುನ್ನುಗ್ಗಬೇಕು,'' ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.''ಕಾಶ್ಮೀರದಲ್ಲಿಮಾನವೀಯ ದುರಂತ ಸೃಷ್ಟಿಯಾಗಿದೆ. ಬ್ರಿಟನ್‌ ಸಂಸತ್ತು, ಐರೋಪ್ಯ ಒಕ್ಕೂಟ ಕಾಶ್ಮೀರದಲ್ಲಿಭಾರತದಿಂದಾಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಗಮನ ಹರಿಸಬೇಕಿದೆ. ನಾನು ಕಾಶ್ಮೀರಿಗರ ರಾಯಭಾರಿಯಾಗಿ ವಿಶ್ವಾದ್ಯಂತ ಸಂಚರಿಸುವೆ,'' ಎಂದು ಖಾನ್‌ ಘೋಷಿಸಿದ್ಧಾರೆ.

ಜಮ್ಮು-ಕಾಶ್ಮೀರದಲ್ಲಿಭಾರತೀಯ ಭದ್ರತಾ ಪಡೆಗಳು ನಡೆಸುತ್ತಿರುವ ದೌರ್ಜನ್ಯಗಳಿಂದ ಬೇಸತ್ತು 20 ವರ್ಷದ ಕಾಶ್ಮೀರಿ ಯುವಕ ಪುಲ್ವಾಮ ದಾಳಿ ನಡೆಸಿದ. ಆದರೆ ನಮ್ಮ ಮೇಲೆ ಭಾರತ ಆರೋಪ ಹೊರಿಸಿತು. ದಾಳಿಗೆ ಬಂದ ಭಾರತದ ಯುದ್ಧವಿಮಾನವನ್ನು ಪಾಕ್‌ ಸೇನೆ ಹೊಡೆದುರುಳಿಸಿತು. ಯುದ್ಧ ಬೇಡ ಎಂಬ ಉದ್ದೇಶದಿಂದ ಬಂಧಿತ ವಿಂಗ್‌ ಕಮಾಂಡರ್‌ ಅಭಿನಂದನ್‌ರನ್ನು ಭಾರತಕ್ಕೆ ಹಸ್ತಾಂತರಿಸಿದೆವು. ಆದರೆ ಜಾಗತಿಕ ಒತ್ತಡಕ್ಕೆ ಪಾಕ್‌ ಮಣಿಯಿತು ಎಂದು ಮೋದಿ ಪ್ರಚಾರ ಮಾಡಿದರು ಎಂದು ಇಮ್ರಾನ್‌ ಆರೋಪಿಸಿದರು.

22ಕ್ಕೆ ಗಡಿಗೆ ಭೇಟಿ:
ತಮ್ಮ ಸಡಿಲ ಮಾತುಗಳಿಂದಲೇ ಕುಖ್ಯಾತಿ ಗಳಿಸಿರುವ ಪಾಕಿಸ್ತಾನದ ರೈಲ್ವೆ ಸಚಿವ ಶೇಖ್‌ ರಶೀದ್‌ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರ್ವಾಧಿಕಾರಿ ಹಿಟ್ಲರ್‌ಗೆ ಹೋಲಿಸಿದ್ದಲ್ಲದೇ ಉಭಯ ದೇಶಗಳ ನಡುವೆ ಯುದ್ಧ ನಡೆಯುವುದು ಖಚಿತ ಎಂದು ಸಾರಿದ್ದಾರೆ. '' ನಾನು ಸೆ. 22ಕ್ಕೆ ಅಂತಾರಾಷ್ಟ್ರೀಯ ಗಡಿಯಲ್ಲಿನ ಸ್ಥಿತಿಗತಿ ಅಧ್ಯಯನಕ್ಕೆ ಭೇಟಿ ನೀಡಲಿದ್ದೇನೆ. ಭಾರತದ ವಿರುದ್ಧ ಯುದ್ಧ ಸಾರಲು ನಮ್ಮ ಸೇನೆ ಸದಾ ಸನ್ನದ್ಧವಾಗಿದೆ, '' ಎಂದು ಹೇಳಿದ್ದಾರೆ. ಆರ್‌ಎಸ್‌ಎಸ್‌ ಮತ್ತು ಬಿಜೆಪಿಗಳ ನಿರಂಕುಶ ವಾದವನ್ನು ಜಗತ್ತಿನ ಎದುರು ಪಾಕ್‌ ಬಟಾಬಯಲುಗೊಳಿಸಿದೆ. ಕಾಶ್ಮೀರವನ್ನು ಮತ್ತೊಂದು ಪ್ಯಾಲೆಸ್ತೀನ್‌ ಆಗಲು ವಿಶ್ವ ಸಮುದಾಯ ಬಿಡಬಾರದು ಎಂದು ಅವರು ಹೇಳಿದ್ದಾರೆ.

ಯುದ್ಧ ಸ್ಥಿತಿ ನಿರ್ಮಾಣ: ''ಭಾರತ-ಪಾಕಿಸ್ತಾನ ಗಡಿಯಲ್ಲಿಯುದ್ಧದ ಸನ್ನಿವೇಶ ನಿರ್ಮಾಣವಾಗಿದೆ. ಯಾವುದೇ ಕ್ಷಣದಲ್ಲಿಆಕಸ್ಮಿಕವಾಗಿ ಸಮರ ಆರಂಭವಾಗಿಬಿಡಬಹುದು. ಯಾವುದೇ ಸ್ಥಿತಿಯನ್ನಾದರೂ ಎದುರಿಸಲು ಪಾಕ್‌ ಸಿದ್ಧವಿದೆ. ಎರಡೂ ದೇಶಗಳು ಯುದ್ಧದ ಪರಿಣಾಮವನ್ನು ಅರಿತಿವೆ ಎಂದುಕೊಳ್ಳುತ್ತೇನೆ,'' ಎಂದು ಪಾಕ್‌ ವಿದೇಶಾಂಗ ಸಚಿವ ಷಾ ಮೆಹಮೂದ್‌ ಖುರೇಷಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ