ಆ್ಯಪ್ನಗರ

ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಲಿ: ಪಾಕ್ ಪ್ರಧಾನಿ ಇಮ್ರಾನ್ ಖಾನ್

ಮೋದಿ ಅವರು ನಿಜಕ್ಕೂ ಬಲಿಷ್ಠ ನಾಯಕರಾಗಿದ್ದು, ಬಿಜೆಪಿ ನೇತೃತ್ವದ ಪ್ರಧಾನಿಯಾಗಿ ಅವರು ಪುನರಾಯ್ಕೆಯಾದರೆ ಕಾಶ್ಮೀರ ವಿವಾದವೂ ಸೇರಿದಂತೆ ಭಾರತ-ಪಾಕ್ ನಡುವಣ ಹಲವು ಸಮಸ್ಯೆಗಳು ಸುಲಭವಾಗಿ ಇತ್ಯರ್ಥವಾಗಬಹುದು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

Vijaya Karnataka Web 10 Apr 2019, 3:54 pm
ಇಸ್ಲಾಮಾಬಾದ್: 2019ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನು ಕೆಲವೇ ಗಂಟೆಗಳು ಉಳಿದಿದ್ದು, ಈ ಹೊತ್ತಿನಲ್ಲಿ ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿಯಾಗಲಿ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹಾರೈಸಿದ್ದಾರೆ.
Vijaya Karnataka Web Imran Khan


ಮೋದಿ ಅವರು ನಿಜಕ್ಕೂ ಬಲಿಷ್ಠ ನಾಯಕರಾಗಿದ್ದು, ಬಿಜೆಪಿ ನೇತೃತ್ವದ ಪ್ರಧಾನಿಯಾಗಿ ಅವರು ಪುನರಾಯ್ಕೆಯಾದರೆ ಕಾಶ್ಮೀರ ವಿವಾದವೂ ಸೇರಿದಂತೆ ಭಾರತ-ಪಾಕ್ ನಡುವಣ ಹಲವು ಸಮಸ್ಯೆಗಳು ಸುಲಭವಾಗಿ ಇತ್ಯರ್ಥವಾಗಬಹುದು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಪಾಕಿಸ್ತಾನದ ಜತೆ ಕಾಶ್ಮೀರ ವಿಚಾರವಾಗಿ ಮಾತುಕತೆ ನಡೆಸಲಾರದು. ಅದಕ್ಕೆ ವಿರೋಧದ ಭೀತಿಯಿದೆ. ಆದರೆ ಪ್ರಧಾನಿ ಮೋದಿ ಅವರಿಗೆ ದಿಟ್ಟತನದ ನಿರ್ಧಾರ ಕೈಗೊಳ್ಳುವ ಶಕ್ತಿಯಿದೆ ಎಂದು ಇಮ್ರಾನ್ ಹೇಳಿದ್ದಾರೆ.

ಬಲಪಂಥೀಯ ಪಕ್ಷ ಬಿಜೆಪಿ ಎರಡನೇ ಅವಧಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದೀರ್ಘಕಾಲದ ಕಾಶ್ಮೀರ ಸಮಸ್ಯೆ ಇತ್ಯರ್ಥವಾಗುವ ಸಾಧ್ಯತೆ ಹೆಚ್ಚಿದೆ' ಎಂದು ಇಮ್ರಾನ್ ಹೇಳಿರುವುದಾಗಿ ರಾಯ್ಟರ್ಸ್ ವರದಿ ಮಾಡಿದೆ.

ಮೋದಿ ಆಡಳಿತದಲ್ಲಿ ಮುಸ್ಲಿಮರ ಮೇಲೆ ನಿರಂತರ ದಾಳಿಗಳಾಗುತ್ತಿವೆ; ಆದರೂ ಕಾಶ್ಮೀರ ವಿವಾದ ಇತ್ಯರ್ಥಕ್ಕಾಗಿ ಬಿಜೆಪಿ ಸರಕಾರದ ಜತೆ ಅರ್ಥಪೂರ್ಣ ಮಾತುಕತೆ ನಡೆಸಲು ಪಾಕಿಸ್ತಾನ ಸಿದ್ಧವಿದೆ ಎಂದು ಇಮ್ರಾನ್ ತಿಳಿಸಿದ್ದಾರೆ.

ತಾವು ಭಾರತದಲ್ಲಿ ಕ್ಷೇಮವಾಗಿಯೇ ಇದ್ದೇವೆ ಎಂದು ಭಾರತದ ಮುಸ್ಲಿಂ ಸ್ನೇಹಿತರು ಹೇಳುತ್ತಿದ್ದಾರೆ. ಆದರೂ ತೀವ್ರ ಸ್ವರೂಪದ ಹಿಂದೂ ರಾಷ್ಟ್ರವಾದ ತಲೆ ಎತ್ತುವ ಸಾಧ್ಯತೆ ಬಗ್ಗೆ ಅವರು ಚಿಂತಿತರಾಗಿದ್ದಾರೆ ಎಂದು ಮಾಜಿ ಕ್ರಿಕೆಟಿಗ, ಹಾಲಿ ಪ್ರಧಾನಿ ನುಡಿದಿದ್ದಾರೆ.

ಮೋದಿ ಪರ ಇಮ್ರಾನ್ ಬ್ಯಾಟಿಂಗ್: ಪ್ರತಿಪಕ್ಷಗಳ ಲೇವಡಿ


ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಮೋದಿ ನಡುವೆ ಬಹಳಷ್ಟು ಸಾಮ್ಯತೆ ಇದೆ ಎಂದ ಇಮ್ರಾನ್, ಅವರ ಪ್ರಚಾರಗಳು 'ಭಯ ಮತ್ತು ರಾಷ್ಟ್ರೀಯತೆಯ ಭಾವನೆಗಳನ್ನು' ಆಧರಿಸಿವೆ ಎಂದು ಪಾಕ್ ಪ್ರಧಾನಿ ಅಭಿಪ್ರಾಯ ಪಟ್ಟರು.

ಬಿಜೆಪ ಪ್ರಣಾಳಿಕೆ ಕುರಿತು ಪ್ರತಿಕ್ರಿಯಿಸಿದ ಇಮ್ರಾನ್, ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಆತಂಕ ಹುಟ್ಟಿಸಿದ್ದರೂ ಅದೊಂದು ಚುನಾವಣಾ ತಂತ್ರವಷ್ಟೇ ಆಗಿರಬಹುದು ಎಂದು ಹೇಳಿದರು.

ಇಮ್ರಾನ್ ಸಂದರ್ಶನ ಪ್ರಕಟವಾದ ಬಳಿಕ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಓಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭಯೋತ್ಪಾದನೆ ವಿಚಾರ ಪ್ರಸ್ತಾಪಿಸುತ್ತ, ದೇಶದಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲ ಉಗ್ರಗಾಮಿ ಸಂಘಟನೆ ಹಾಗೂ ಜಾಲಗಳನ್ನು ಮಿಲಿಟರಿ ಬೆಂಬಲದೊಂದಿಗೆ ಹತ್ತಿಕ್ಕಲು ಪಾಕ್ ಸರಕಾರ ಸಂಪೂರ್ಣ ಬದ್ಧವಾಗಿದೆ ಎಂದು ಇಮ್ರಾನ್ ಭರವಸೆ ನೀಡಿದರು.

ಕಾಶ್ಮೀರ ಒಂದು ರಾಜಕೀಯ ಹೋರಟವಾಗಿದ್ದು, ಮಿಲಿಟರಿ ವಿಧಾನಗಳಿಂದ ಬಗೆಹರಿಸಲು ಸಾಧ್ಯವಿಲ್ಲ. ಪಾಕಿಸ್ತಾನದ ಕಡೆಯಿಂದ ಕಾಶ್ಮೀರ ಕಣಿವೆಗೆ ಉಗ್ರರು ನುಸುಳಿ ಭಯೋತ್ಪಾದಕ ಕೃತ್ಯಗಳನ್ನು ತೀವ್ರಗೊಳಿಸಿದ ಬಳಿಕವೇ ಭಾರತೀಯ ಸೇನೆ ಉಗ್ರವಾದ ಹತ್ತಿಕ್ಕುವ ಕಾರ್ಯಾಚರಣೆ ಆರಂಭಿಸಿತು ಎಂಬುದನ್ನು ಇಮ್ರಾನ್ ಒಪ್ಪಿಕೊಂಡರು.

1947ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಬಳಿಕ ಭಾರತ ಮತ್ತು ಪಾಕಿಸ್ತಾನ ಕಾಶ್ಮೀರಕ್ಕಾಗಿಯೇ ನಾಲ್ಕು ಯುದ್ಧಗಳನ್ನು ನಡೆಸಿವೆ. ಕಾಶ್ಮೀರದ ಪುಲ್ವಾಮಾದಲ್ಲಿ ಆತ್ಮಹತ್ಯಾ ಉಗ್ರರು ದಾಳಿ ನಡೆಸಿ 40 ಮಂದಿ ಸಿಆರ್‌ಪಿಎಫ್‌ ಯೋಧರನ್ನು ಹತ್ಯೆ ಮಾಡಿದ ಬಳಿಕ ಎರಡು ಅಣ್ವಸ್ತ್ರ ಸಜ್ಜಿತ ದೇಶಗಳ ನಡುವೆ ತೀವ್ರ ಉದ್ವಿಗ್ನತೆ ತಲೆದೋರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ