ಆ್ಯಪ್ನಗರ

ಭಾರತೀಯ ಕಾನ್ಸುಲೇಟ್‌ ಮೇಲೆ ದಾಳಿ

ಅಫಘಾನಿಸ್ತಾನದಲ್ಲಿರುವ ಭಾರತದ ಕಾನ್ಸುಲೇಟ್ ಕಚೇರಿ ಮೇಲೆ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದೆ.

ಏಜೆನ್ಸೀಸ್ 2 Mar 2016, 8:29 pm
ಜಲಾಲಾಬಾದ್/ನವದೆಹಲಿ: ಜಲಾಲಬಾದ್ ನಗರದಲ್ಲಿರುವ ಆಫ್ಘಾನಿಸ್ತಾನದ ಭಾರತೀಯ ದೂತಾವಾಸದ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಒಂಭತ್ತು ಮಂದಿ ಮೃತಪಟ್ಟಿದ್ದಾರೆ. ಸತ್ತವರಲ್ಲಿ ಆಫ್ಘನ್‌ನ ಭದ್ರತಾ ಸಿಬ್ಬಂದಿ ಕೂಡ ಸೇರಿದ್ದಾರೆ.
Vijaya Karnataka Web militants attack indian consulate in jalalabad
ಭಾರತೀಯ ಕಾನ್ಸುಲೇಟ್‌ ಮೇಲೆ ದಾಳಿ


ಆತ್ಮಾಹುತಿ ಬಾಂಬರ್‌ಗಳನ್ನು ಒಳಗೊಂಡಂತೆ ಅಪಾರ ಶಸ್ತ್ರಾಸ್ತ್ರಗಳೊಂದಿಗೆ ಈ ದಾಳಿ ನಡೆಸಲಾಗಿದೆ. 2007ರಿಂದ ಈಚೆಗೆ ಭಾರತೀಯ ದೂತಾವಾಸದ ಮೇಲೆ ನಡೆಸುತ್ತಿರುವ ನಾಲ್ಕನೇ ದಾಳಿ ಇದಾಗಿದೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ದಾಳಿಯಿಂದ ಭಾರತೀಯ ನಾಗರಿಕರಾರೂ ಮೃತಪಟ್ಟಿಲ್ಲ, ದೂತಾವಾಸದಲ್ಲಿದ್ದ ಎಲ್ಲ ಭಾರತೀಯರೂ ಸುರಕ್ಷಿತರಾಗಿದ್ದಾರೆ ಎಂದು ಹೊಸದಿಲ್ಲಿಯಲ್ಲಿರುವ ವಿದೇಶಾಂಗ ವ್ಯವಹಾರ ಸಚಿವಾಲಯದ ಮೂಲಗಳು ತಿಳಿಸಿವೆ. ದಾಳಿ ನಡೆಸಿದ ಆರು ಮಂದಿ ಭಯೋತ್ಪಾದಕರೂ ಮೃತಪಟ್ಟಿದ್ದಾರೆ.

ಇಬ್ಬರು ಭಯೋತ್ಪಾದಕರು ತಮ್ಮನ್ನು ಸ್ಫೋಟಿಸಿಕೊಳ್ಳುವ ಮೂಲಕ ಈ ದಾಳಿ ನಡೆಸಿದ್ದಾರೆ. ನಾಲ್ವರು ಭೋತ್ಪಾದಕರು ಆಫ್ಘನ್ ಪೊಲೀಸರ ಜತೆಗಿನ ಗುಂಡಿನ ದಾಳಿಯಲ್ಲಿ ಹತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಾಂಬ್‌ಗಳಿಂದ ಕೂಡಿದ ಕಾರನ್ನು ಉಗ್ರನೊಬ್ಬ ಭಾರತೀಯ ಉಪರಾಯಭಾರಿ ಕಚೇರಿ ಬಳಿ ತರುವ ಮೊದಲೇ ಕಾರ್ ಸ್ಫೋಟಗೊಂಡಿದ್ದು, ರಭಸಕ್ಕೆ ಸುತ್ತಲಿನ ಕನಿಷ್ಠ 8 ಕಾರುಗಳು ನುಜ್ಜುಗುಜ್ಜಾಗಿವೆ. ಉಳಿದ ಉಗ್ರರು ಸ್ಫೋಟಕಗಳ ಜಾಕೆಟ್ ತೊಟ್ಟಿದ್ದರು. ಸ್ಥಳದಲ್ಲಿ ಸ್ಫೋಟ ಹಾಗೂ ಗುಂಡಿನ ದಾಳಿಗಳು ಮುಂದುವರೆದಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಭಾರತೀಯರಿಗೆ ದಾಳಿಯಿಂದ ಹಾನಿಯಾಗಿಲ್ಲ ಎಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ. ಆದರೆ, ಸ್ಥಳದಲ್ಲಿದ್ದ ಕನಿಷ್ಠ 6 ನಾಗರಿಕರು ಗಾಯಗೊಂಡಿದ್ದಾರೆ ಎಂದು ನಂಗಾರ್‌ಹಾರ್‌ನ ಸಾರ್ವಜನಿಕ ಆರೋಗ್ಯ ಇಲಾಖೆ ತಿಳಿಸಿದೆ.

ನಂಗಾರ್‌ಹಾರ್ ಪ್ರಾಂತ್ಯದ ರಾಜಧಾನಿಯಾಗಿರುವ ಜಲಾಲಾಬಾದ್‌ನಲ್ಲಿ ಐಸಿಸ್ ಹಾಗೂ ತಾಲಿಬಾನ್ ಸಂಘಟನೆಗಳ ಹಾವಳಿ ಇದ್ದು, ಬುಧವಾರದ ದಾಳಿಗೆ ಇದುವರೆಗೂ ಯಾವುದೇ ಸಂಘಟನೆಗಳು ಹೊಣೆ ಹೊತ್ತಿಲ್ಲ.

ಜನವರಿ 3ರಂದು ಮಜರೆ ಷರೀಫ್ ನಗರದಲ್ಲಿರುವ ಭಾರತೀಯ ದೂತವಾಸದ ಮೇಲೆ ಉಗ್ರರು ದಾಳಿ ನಡೆಸಿದ್ದು, 25 ಗಂಟೆಗಳ ಗುಂಡಿನ ಚಕಮಕಿಯ ಬಳಿಕ ಎಲ್ಲ ಉಗ್ರರನ್ನೂ ಅಫಘನ್ ಪಡೆ ಹೊಡೆದುರುಳಿಸಿತ್ತು.

ಅದಾಗಿ ಕೆಲವೇ ದಿನಗಳಲ್ಲಿ ಇಲ್ಲಿನ ಪಾಕಿಸ್ತಾನಿ ರಾಯಭಾರಿ ಕಚೇರಿ ಮೇಲೆ ಐಸಿಸ್ ಉಗ್ರರು ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ