ಆ್ಯಪ್ನಗರ

ಇದು ವಿಶ್ವದ ರೋಚಕ ಸತ್ಯ: ಜಲಾಂತರ್ಗಾಮಿ ಸೈನಿಕರಿಗೆ ಕೊರೊನಾ ಗೊತ್ತೇ ಇಲ್ಲ!

ಇದು ನಿಜಕ್ಕೂ ರೋಚಕ ಹಾಗೂ ಕುತೂಹಲಕಾರಿ ಸಂಗತಿ ಎಂಬುದರಲ್ಲಿ ಎರಡು ಮಾತಿಲ್ಲ. ಜಗತ್ತಿನ ಬಹುತೇಕ ದೇಶಗಳ ನೌಕಾಸೇನೆಯ ಸಬ್‌ಮರೀನ್(ಜಲಾಂತರ್ಗಾಮಿ)ನಲ್ಲಿ ಕೆಲಸ ಮಾಡುವ ಯೋಧರಿಗೆ ಮಾರಕ ಕೊರೊನಾ ವೈರಸ್ ಕುರಿತು ಮಾಹಿತಿಯೇ ಇಲ್ಲ. ಕೊರೊನಾ ಹರಡುವುದಕ್ಕೂ ಮೊದಲು ಸಾಗರಾಳದಲ್ಲಿ ಕರ್ತವ್ಯಕ್ಕೆ ತೆರಳಿರುವ ಸಿಬ್ಬಂದಿಗೆ ಈ ಕುರಿತು ಮಾಹಿತಿ ನೀಡಲಾಗಿಲ್ಲ.

Vijaya Karnataka Web 2 Apr 2020, 5:16 pm
ಪ್ಯಾರಿಸ್: ಇಡೀ ಜಗತ್ತು ಮಾರಕ ಕೊರೊನಾ ವೈರಸ್‌ನಿಂದ ತತ್ತರಿಸಿ ಹೋಗಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಸಾವಿನ ಸಂಖ್ಯೆ ಕಂಡು ವಿಶ್ವ ನಲುಗಿ ಹೋಗಿದೆ. ಈ ಕೊರೊನಾ ಎಂಬ ಶನಿ ತೊಲಗಿದರೆ ಸಾಕು ಎಂದು ದಿನವೂ ದೇವರಲ್ಲಿ ಪ್ರಾರ್ಥಿಸುವ ಕೋಟ್ಯಂತ ಕೈಗಳನ್ನು ನಾವು ನೋಡಬಹುದಾಗಿದೆ.
Vijaya Karnataka Web submarine
ಸಾಂದರ್ಭಿಕ ಚಿತ್ರ


ಆದರೆ ಇದಕ್ಕೆ ವ್ಯತಿರಿಕ್ತವಾಗಿ ಜಗತ್ತಿನ ಬಹುತೇಕ ದೇಶಗಳ ನೌಕಾಸೇನೆಯ ಸಬ್‌ಮರೀನ್(ಜಲಾಂತರ್ಗಾಮಿ)ನಲ್ಲಿ ಕೆಲಸ ಮಾಡುವ ಯೋಧರಿಗೆ ಮಾರಕ ಕೊರೊನಾ ವೈರಸ್ ಕುರಿತು ಯಾವುದೇ ಮಾಹಿತಿ ಇಲ್ಲ.

ಹೌದು, ಇದು ಆಶ್ವರ್ಯವಾದರೂ ಸತ್ಯ. ಜಗತ್ತಿನಾದ್ಯಂತ ಕೊರೊನಾ ವೈರಸ್ ಪಸರಿಸುವುದಕ್ಕೂ ಮೊದಲು ಸಬ್‌ಮರೀನ್ ಮೂಲಕ ಸಾಗರಾಳದಲ್ಲಿ ಕರ್ತವ್ಯಕ್ಕೆ ತರಳಿರುವ ಸಿಬ್ಬಂದಿಗೆ ಕೊರೊನಾ ವೈರಸ್ ಕುರಿತು ಮಾಹಿತಿ ನೀಡಲಾಗಿಲ್ಲ.

ಸಬ್‌ಮರೀನ್‌ನಲ್ಲಿ ಯೋಧರು ಒಮ್ಮೆ ಕರ್ತವ್ಯಕ್ಕೆ ಒಮ್ಮೆ ಕರ್ತವ್ಯಕ್ಕೆ ತೆರಳಿದರೆ ಕನಿಷ್ಟ ಮೂರು ಅಥವಾ ನಾಲ್ಕು ತಿಂಗಳು ಸಾಗರಾಳದಲ್ಲಿ ಗಸ್ತು ತಿರುಗುತ್ತಾರೆ. ಈ ವೇಳೆ ಭೂಮಿಯ ಮೇಲೆ ಏನಾದರೂ ಅನಾಹುತ ಸಂಭವಿಸಿದರೆ ಯೋಧರ ಮನೋಬಲ ಕುಗ್ಗದಿರಲಿ ಎಂದು ಆ ಸುದ್ದಿಯನ್ನು ಅವರಿಗೆ ಹೇಳದಿರುವ ನಿಯಮವನ್ನು ಬಹುತೇಕ ದೇಶಗಳ ನೌಕಾಸೇನೆ ಪಾಲಿಸಿಕೊಂಡು ಬರುತ್ತವೆ.

ಅದರಂತೆ ಸದ್ಯ ಸಾಗರಾಳದಲ್ಲಿರುವ ಫ್ರಾನ್ಸ್‌ನ ಪರಮಾಣು ಶಸ್ತ್ರಸಜ್ಜಿತ ಸಬ್‌ಮರೀನ್‌ಗಳ ಸಿಬ್ಬಂದಿಗೆ, ತಮ್ಮ ದೇಶವೂ ಸೇರಿದಂತೆ ಇಡೀ ಜಗತ್ತು ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಸಂಗತಿ ಗೊತ್ತೇ ಇಲ್ಲ ಎನ್ನಲಾಗಿದೆ. ಕಳೆದ ಫೆಬ್ರವರಿಯಲ್ಲಿ ಸಾಗರದಾಳಕ್ಕೆಇಳಿದ ಸಬ್‌ಮರೀನ್ ಸಿಬ್ಬಂದಿ ಇದೇ ಏಪ್ರಿಲ್‌ನಲ್ಲಿ ಮತ್ತೆ ಮರಳಲಿದೆ.

ಅಮೆರಿಕದ ಯುದ್ಧ ಹಡಗಿನಲ್ಲಿ ಕೊರೊನಾ: ಕಾಪಾಡುವಂತೆ ಕ್ಯಾಪ್ಟನ್ ಪತ್ರ!

ಈ ಕುರಿತು ಮಾಹಿತಿ ನೀಡಿರುವ ಫ್ರಾನ್ಸ್ ನೌಕಾ ಪಡೆಯ ನಿವೃತ್ತ ಅಡ್ಮಿರಲ್ ಡೊಮಿನಿಕ್ ಸಲ್ಲೆಸ್, ಜಲಾಂತರ್ಗಾಮಿಯಲ್ಲಿ ಕರ್ತವ್ಯ ನಿರತ ನಮ್ಮ ಯೋಧರಿಗೆ ಕೊರೊನಾ ವೈರಸ್ ಕುರಿತು ಕಿಂಚಿತ್ತೂ ಮಾಹಿತಿ ಇರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒಂದು ವೇಳೆ ಸಬ್‌ಮರೀನ್‌ನಲ್ಲಿ ಕರ್ತವ್ಯ ನಿರತ ಯೋಧನ ಸಂಬಂಧಿಕರೇ ಕೊರೊನಾ ವೈರಸ್‌ಗೆ ಬಲಿಯಾಗಿದ್ದರೂ ಆ ಸುದ್ದಿಯನ್ನು ತಲುಪಿಸಲಾಗಿರುವುದಿಲ್ಲ. ಇದರಿಂದ ಜಲಾಂತರ್ಗಾಮಿಯಲ್ಲಿರುವ ಎಲ್ಲಾ ಯೋಧರ ಮನೋಬಲ ಕುಗ್ಗುವ ಸಾಧ್ಯತೆ ಹೆಚ್ಚು ಎಂದು ಡೊಮಿನಿಕ್ ಸಲ್ಲೆಸ್ ಹೇಳಿದ್ದಾರೆ.

ಖುದ್ದು ಡೊಮಿನಿಕ್ ಸಲ್ಲೆಸ್ ಈ ಹಿಂದೆ ಸಬ್‌ಮರೀನ್‌ನಲ್ಲಿ ಕರ್ತವ್ಯ ನಿರತರಾಗಿದ್ದಾಗ ಅವರ ತಂದೆ ತೀರಿ ಹೋಗಿದ್ದರು. ಆದರೆ ಫ್ರಾನ್ಸ್ ನೌಕಾಸೇನೆ ಈ ದು:ಖಕರ ಸಂಗತಿಯನ್ನು ಡೊಮಿನಿಕ್ ಸಲ್ಲೆಸ್ ಅವರಿಗೆ ತಿಳಿಸಿರಲೇ ಇಲ್ಲ. ಕರ್ತವ್ಯದಿಂದ ಮರಳಿದ ಮೇಲೆಯೇ ಅವರಿಗೆ ತಮ್ಮ ತಂದೆ ತೀರಿ ಹೋದ ಸಂಗತಿ ಗೊತ್ತಾಗಿತ್ತು.

ಒಟ್ಟಿನಲ್ಲಿ ಭೂಮಿಯ ಮೇಲಿನ ಸದ್ಯದ ಪರಿಸ್ಥಿತಿಯ ಅರಿವಿರದೇ ಕರ್ತವ್ಯ ನಿರತರಾಗಿರುವ ಜಗತ್ತಿನ ಎಲ್ಲಾ ಧೀರ ಜಲಾಂತರ್ಗಾಮಿ ಯೋಧರ ಕುಟುಂಬ ಸುರಕ್ಷಿತವಾಗಿರಲಿ ಎಂದು ನಾವೆಲ್ಲರೂ ಹಾರೈಸೋಣ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ