ಆ್ಯಪ್ನಗರ

ನೇಪಾಳದಿಂದ ವಿವಾದಿತ ನಕಾಶೆ ಮಸೂದೆ ಮಂಡನೆ; ಚೀನಾ ಕುಮ್ಮಕ್ಕಿನಿಂದ ಭಾರತ ವಿರೋಧಿ ನಡೆ

ಚೀನಾ ಒತ್ತಡಕ್ಕೆ ಮಣಿದು ಭಾರತದ ಪ್ರದೇಶಗಳನ್ನು ತನ್ನ ನಕಾಶೆಗೆ ಸೇರಿಸಿಕೊಂಡಿರುವ ನೇಪಾಳ ಸಂಸತ್‌ನ ಒಪ್ಪಿಗೆ ಪಡೆಯಲು ಭಾನುವಾರ ವಿಧೇಯಕ ಮಂಡಿಸಿದೆ. ಭಾರತ ಮತ್ತು ನೇಪಾಳದ ನಡುವಿನ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಹಳಸುವ ಸಾಧ್ಯತೆ ಇದೆ.

Vijaya Karnataka Web 31 May 2020, 10:29 pm
ಕಠ್ಮಂಡು: ಚೀನಾ ಒತ್ತಡಕ್ಕೆ ಮಣಿದು ಭಾರತದ ಪ್ರದೇಶಗಳನ್ನು ತನ್ನ ನಕಾಶೆಗೆ ಸೇರಿಸಿಕೊಂಡಿರುವ ನೇಪಾಳ ಸರಕಾರವು ಇದಕ್ಕೆ ಸಂಸತ್‌ನ ಒಪ್ಪಿಗೆ ಪಡೆಯಲು ಭಾನುವಾರ ವಿಧೇಯಕ ಮಂಡಿಸಿದೆ.
Vijaya Karnataka Web ಕೆ.ಪಿ.ಶರ್ಮಾ ಓಲಿ
ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ


ಕೆಲ ದಿನಗಳ ಹಿಂದೆಯೇ ರಾಜಕೀಯ ಮತ್ತು ಆಡಳಿತಾತ್ಮಕ ಬಳಕೆಯ ನಕಾಶೆ ಬದಲಾವಣೆಗೆ ಸಂಬಂಧಿತ ಸಂವಿಧಾನ ತಿದ್ದುಪಡಿ ವಿಧೇಯಕ ಮಂಡನೆಗೆ ಕೆ.ಪಿ. ಶರ್ಮಾ ಓಲಿ ನೇತೃತ್ವದ ಸರಕಾರ ಯತ್ನಿಸಿತ್ತಾದರೂ ಪ್ರತಿಪಕ್ಷಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಸಾಧ್ಯವಾಗಿರಲಿಲ್ಲ. ಈಗ ಪ್ರತಿಪಕ್ಷಗಳ ನಾಯಕರ ಮನವೊಲಿಸಿ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಪ್ರಮುಖ ಪ್ರತಿಪಕ್ಷವಾದ ನೇಪಾಳಿ ಕಾಂಗ್ರೆಸ್‌ ವಿಧೇಯಕದ ಪರವಾಗಿ ನಿಲ್ಲುವ ಭರವಸೆ ನೀಡಿದೆ.

ಭಾರತ ತನ್ನ ಗಡಿಯಲ್ಲಿ ಹೊಂದಿರುವ ಲಿಪುಲೇಖ್‌, ಕಾಲಾಪಾನಿ ಮತ್ತು ಲಿಂಪಿಯಾಧುರ ಪ್ರದೇಶಗಳನ್ನು ನೇಪಾಳ ಈಗ ತನ್ನ ನಕಾಶೆಗೆ ಸೇರಿಸಿಕೊಂಡಿದೆ. ಈ ನಡೆಯು ಭಾರತ-ನೇಪಾಳದ ರಾಜತಾಂತ್ರಿಕ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ನಿಚ್ಚಳವಾಗಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ. ಆದರೂ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಸರಕಾರವು ಹಠಕ್ಕೆ ಬಿದ್ದು ಸಂವಿಧಾನ ತಿದ್ದುಪಡಿಗೆ ಮುಂದಾಗಿದೆ.

ಮೇ 8ರಿಂದಲೇ ಕ್ಯಾತೆ
ಉತ್ತರಾಖಂಡದ ಧಾರ್ಛುಲಾ ಮತ್ತು ಲಿಪುಲೇಖ್‌ ಪಾಸ್‌ ನಡುವೆ ಸಂಪರ್ಕ ಕಲ್ಪಿಸುವ 80 ಕಿ.ಮೀ. ಉದ್ದದ ರಸ್ತೆಯನ್ನು ಮೇ 8ರಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಉದ್ಘಾಟಿಸಿದರು. ಇದರಿಂದ ಚೀನಾದ ಕಣ್ಣು ಕೆಂಪಾಯಿತು. ಗಡಿಯಲ್ಲಿ ಭಾರತ ಮೂಲಸೌಕರ್ಯ ಅಭಿವೃದ್ಧಿಯಿಂದ ತನ್ನ ಮೇಲೆ ಆಕ್ರಮಣಕ್ಕೆ ಸಿದ್ಧಮಾಡಿಕೊಳ್ಳುತ್ತಿದೆ ಎಂಬ ಆತಂಕದಲ್ಲಿ ಬಿದ್ದ ಚೀನಾ ಸರಕಾರ ನೇಪಾಳಕ್ಕೆ ಕ್ಯಾತೆ ತೆಗೆಯಲು ಕುಮ್ಮಕ್ಕು ನೀಡಿತು.

ಭಾರತಕ್ಕೆ ಕಾಲಾಪಾನಿ ಏಕೆ ಮಹತ್ವ..? ಇಂಡೋ-ನೇಪಾಳ ಗಡಿಯ ವಿವಾದಿತ ಸ್ಥಳದ ಸುತ್ತ..!

ಅದರಂತೆ , ಹೊಸ ರಸ್ತೆ ನೇಪಾಳದ ಪ್ರಾಂತ್ಯದಲ್ಲಿದೆ ಎಂದು ಆರೋಪಿಸಿ ನೇಪಾಳ ವಿದೇಶಾಂಗ ಸಚಿವ ಪ್ರದೀಪ್‌ ಕುಮಾರ್‌ ಗ್ಯಾವಾಲಿ ಅವರು ಭಾರತದ ರಾಯಭಾರಿ ವಿನಯ್‌ ಮೋಹನ್‌ ಕ್ವಾತ್ರಾಗೆ ಸಮನ್ಸ್‌ ನೀಡಿದರು. ನಂತರ ಓಲಿ ಅವರು, ''ನೇಪಾಳದಲ್ಲಿ ಕೊರೊನಾ ಹೆಚ್ಚಲು ಭಾರತ ಕಾರಣ. ಗಡಿಯಲ್ಲಿ ಸೂಕ್ತ ತಪಾಸಣೆ ಇಲ್ಲದೆ ಆ ದೇಶದಿಂದ ಜನ ನಮ್ಮ ದೇಶಕ್ಕೆ ಸಲೀಸಾಗಿ ಪ್ರವೇಶಿಸುವುದರಿಂದ ನಮಗೆ ತೊಂದರೆಯಾಗುತ್ತಿದೆ,'' ಎಂದು ಆರೋಪಿಸಿದ್ದರು.

ಹೊಸ ನಕಾಶೆಗೆ ಭಾರತದ ಪ್ರದೇಶಗಳ ಸೇರ್ಪಡೆ ಯತ್ನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಈ ನಡೆಯನ್ನು ಈಗಾಗಲೇ ಖಂಡಿಸಿದ್ದೇವೆ. ನೆರೆ ರಾಷ್ಟ್ರಗಳಿಗೆ ಗೌರವ ನೀಡುವ ನಮ್ಮ ನೀತಿಗೆ ಅನುಗುಣವಾಗಿ ನೇಪಾಳ ಸರಕಾರದೊಂದಿಗೆ ಈ ಕುರಿತು ಶಾಂತಿಯುತ ಮಾತುಕತೆಗೆ ಮುಕ್ತ ಮನಸ್ಸು ಹೊಂದಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್‌ ಶ್ರೀವಾಸ್ತವ ಹೇಳಿದ್ದಾರೆ.

ಮುಂದೇನು?
* ಸಂಸತ್‌ನಲ್ಲಿ ಚರ್ಚೆ ಬಳಿಕ ವಿಧೇಯಕವನ್ನು ಮತಕ್ಕೆ ಹಾಕಲಾಗುತ್ತದೆ.
* ವಿಧೇಯಕಕ್ಕೆ ಅನುಮೋದನೆ ಸಿಕ್ಕಲ್ಲಿ ಅಧ್ಯಕ್ಷೆ ಬಿಧ್ಯಾ ದೇವಿ ಭಂಡಾರಿ ಅವರ ಅಂಕಿತಕ್ಕೆ ಕಳುಹಿಸಲಾಗುತ್ತದೆ.
* ಅವರ ಅಂಕಿತ ಹಾಕಿದ ಬಳಿಕ ಮೂರು ಪ್ರದೇಶಗಳು ಅಧಿಕೃತವಾಗಿ ನೇಪಾಳ ನಕಾಶೆಗೆ ಸೇರಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ