ಆ್ಯಪ್ನಗರ

ಮತ್ತೆ ಉಗ್ರರ ಛೂ ಬಿಡಲು ಮುಂದಾದ ಪಾಕ್: ರಹಸ್ಯವಾಗಿ ಮಸೂದ್ ಅಜರ್‌ ಬಿಡುಗಡೆ

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪದೇ ಪದೇ ಮುಖಭಂಗಕ್ಕೆ ಒಳಗಾದ ಪಾಕಿಸ್ತಾನ ಹಳೇಚಾಳಿಯಂತೆ ಉಗ್ರರನ್ನು ಛೂ ಬಿಡುವ ಮೂಲಕ ಭಾರತದಲ್ಲಿ ರಕ್ತಪಾತ ನಡೆಸಲು ಮುಂದಾಗಿದೆ. ಇದಕ್ಕಾಗಿ ಬಂಧಿತ ಉಗ್ರ ಮಸೂದ್ ಅಜರ್‌ನನ್ನು ರಹಸ್ಯವಾಗಿ ಬಿಡುಗಡೆ ಮಾಡಿದೆ. ಅಲ್ಲದೆ ಭಾರತದ ಗಡಿಯುದ್ದಕ್ಕೂ ಸೇನಾಪಡೆ ನಿಯೋಜನೆ ಹೆಚ್ಚಿಸಿದೆ.

Times Now 9 Sep 2019, 10:59 am
ಇಸ್ಲಾಮಾಬಾದ್: ಜೈಷೆ ಮೊಹಮ್ಮದ್ ಮುಖ್ಯಸ್ಥ, ಮೋಸ್ಟ್ ವಾಂಟೆಡ್‌ ಭಯೋತ್ಪಾದಕ ಮಸೂದ್ ಅಜರ್‌ನನ್ನು ಪಾಕಿಸ್ತಾನ ಮತ್ತೆ ಬಿಡುಗಡೆ ಮಾಡಿದ್ದು, ರಾಜಸ್ಥಾನ-ಕಾಶ್ಮೀರ ವಲಯದಲ್ಲಿ ಉಗ್ರ ಕೃತ್ಯಗಳಿಗೆ ಕುಮ್ಮಕ್ಕು ನೀಡಲು ಛೂ ಬಿಟ್ಟಿದೆ.
Vijaya Karnataka Web Masood Azar


ಅಲ್ಲದೆ ರಾಜಸ್ಥಾನದ ಗಡಿ ಭಾಗಗಳು ಹಾಗೂ ಸಿಯಾಲ್ಕೋಟ್-ಜಮ್ಮು ಸೆಕ್ಟರ್‌ ಗಡಿಗಳ ಉದ್ದಕ್ಕೂ ದೊಡ್ಡ ಪ್ರಮಾಣದಲ್ಲಿ ಸೇನಾಪಡೆಗಳನ್ನು ನಿಯೋಜಿಸುತ್ತಿದೆ.

ಭಾರತದಲ್ಲಿ ಮತ್ತೆ ಭಯೋತ್ಪಾದಕ ದಾಳಿಗಳನ್ನು ನಡೆಸಲು ಪಾಕ್ ಹವಣಿಸುತ್ತಿದೆ ಎಂದು ಬೇಹುಗಾರಿಕೆ ಸಂಸ್ಥೆ ಮೂಲಗಳು ಮುನ್ನೆಚ್ಚರಿಕೆ ನೀಡಿವೆ. ಈ ಗಡಿ ಭಾಗಗಳಲ್ಲಿ ಭಾರತೀಯ ರಕ್ಷಣಾ ಪಡೆಗಳನ್ನು ಹೈ ಅಲರ್ಟ್‌ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಟೈಮ್ಸ್‌ ನೌ ಚಾನೆಲ್ ವರದಿ ಮಾಡಿದೆ.

ಅಜರ್‌ನನ್ನು ಭಾರತ 'ಭಯೋತ್ಪಾದಕ' ಎಂದು ಘೋಷಿಸಿದ್ದು, ಕೆಲವು ತಿಂಗಳುಗಳ ಹಿಂದೆ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಪಾಕಿಸ್ತಾನ ಆತನನ್ನು ಬಂಧಿಸಿತ್ತು. ಉಗ್ರರ ಜಾಲಗಳಿಗೆ ಹಣಕಾಸು ನೆರವು ನಿರ್ಬಂಧಿಸುವ ಅಂತಾರಾಷ್ಟ್ರೀಯ ಸಂಸ್ಥೆ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್‌ಫೋರ್ಸ್‌ (ಎಫ್‌ಎಟಿಎಫ್‌) ತನ್ನನ್ನು ಕಪ್ಪು ಪಟ್ಟಿಗೆ ಸೇರಿಸಬಹುದು ಎಂಬ ಭೀತಿಯಿಂದ ಪಾಕ್ ಅಜರ್‌ನನ್ನು ಬಂಧಿಸಿತ್ತು. ಸ್ವಲ್ಪ ಸಮಯದ ಬಳಿಕ ಮತ್ತೆ ಬಿಡುಗಡೆಯನ್ನೂ ಮಾಡಿತ್ತು. ಒತ್ತಡ ತೀವ್ರವಾದಾಗೆಲ್ಲ ಉಗ್ರರನ್ನು ಬಂಧಿಸಿ ಮತ್ತೆ ಬಿಡುಗಡೆ ಮಾಡುವ ಚಾಳಿಯನ್ನು ಪಾಕ್ ಮುಂದುವರಿಸಿದೆ.

ಕಳೆದ ತಿಂಗಳು ಏಷ್ಯಾ ಪೆಸಿಫಿಕ್ ವಲಯದ ಎಫ್‌ಎಟಿಎಫ್‌ ಪಾಕಿಸ್ತಾನವನ್ನು ಕಪ್ಪು ಕಟ್ಟಿಗೆ ಸೇರಿಸಿತ್ತು.

ಭಾರತ ಸರಕಾರ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಹಿನ್ನೆಲೆಯಲ್ಲಿ ಪಾಕ್‌ ಮತ್ತೆ ಯುದ್ಧೋನ್ಮಾದ ಪ್ರದರ್ಶಿಸುತ್ತಿದೆ. ಭಾರತ 370ನೇ ವಿಧಿ ರದ್ದತಿಯನ್ನು ಹಿಂಪಡೆಯದಿದ್ದಲ್ಲಿ ಪೂರ್ಣ ಪ್ರಮಾಣದ ಯುದ್ಧವೇ ನಡೆಯಬಹುದು ಎಂದು ಪಾಕ್ ಪ್ರಧಾನ್‌ ಇಮ್ರಾನ್ ಖಾನ್ ಶುಕ್ರವಾರ ಮತ್ತೆ ಬೆದರಿಕೆ ಹಾಕಿದ್ದರು.

ಕಾಶ್ಮೀರ ವಿಷಯವನ್ನು ಪದೇ ಪದೇ ಅಂತಾರಾಷ್ಟ್ರೀಯಗೊಳಿಸಲು ಹವಣಿಸಿ ಪಾಕಿಸ್ತಾನ ಮತ್ತೆ ಮತ್ತೆ ಮುಖಭಂಗಕ್ಕೆ ಒಳಗಾಗುತ್ತಿದೆ. ಹೀಗಾಗಿ ಹತಾಶೆಗೊಂಡಿರುವ ಪಾಕ್ ಯುದ್ಧದ ಮಾತಾಡುತ್ತಿದೆ. ಕೊನೆಗೆ ಉಗ್ರರನ್ನು ಛೂ ಬಿಟ್ಟಾದರೂ ಭಾರತದಲ್ಲಿ ರಕ್ತಪಾತ ನಡೆಸುವ ಹುನ್ನಾರ ನಡೆಸುತ್ತಿದೆ.

ಕಾಶ್ಮೀರದ ಕುರಿತು ಭಾರತದ ಕ್ರಮದ ಹಿನ್ನೆಲೆಯಲ್ಲಿ ಪಾಕ್‌ ಸೇನೆ ಯಾವುದೇ ಸನ್ನಿವೇಶ ಎದುರಿಸುವುದಕ್ಕೂ ಸಜ್ಜಾಗಿದೆ ಎಂದು ಪಾಕ್ ಸೇನಾ ಮುಖ್ಯಸ್ಥ ಜನರಲ್ ಖಮರ್‌ ಜಾವೇದ್ ಬಾಜ್ವಾ ಬೆದರಿಕೆ ಹಾಕಿದ್ದಾರೆ.

'ನಮ್ಮ ಕಾಶ್ಮೀರಿ ಸೋದರರಿಗಾಗಿ ಕೊನೆಯ ಉಸಿರಿರುವ ವರೆಗೂ ಹೋರಾಡುತ್ತೇವೆ. ನಮ್ಮ ಸೇನೆಯ ಕೊನೆಯ ಯೋಧನ ಉಸಿರು ಅಡಗುವ ವರೆಗೂ ಯುದ್ಧ ಮಾಡುತ್ತೇವೆ' ಎಂದು ಬಾಜ್ವಾ ಹೇಳಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ